ವೆಂಕಟೇಶ್ವರ ದೇವಸ್ಥಾನ
From Wikipedia, the free encyclopedia
ವೆಂಕಟೇಶ್ವರ ದೇವಸ್ಥಾನವು ಭಾರತದ ಆಂಧ್ರಪ್ರದೇಶ ರಾಜ್ಯದ ತಿರುಪತಿ ಜಿಲ್ಲೆಯ ತಿರುಮಲ ಪಟ್ಟಣದಲ್ಲಿರುವ ಒಂದು ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ವಿಷ್ಣುವಿನ ರೂಪನಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ಅವನು ಕಲಿಯುಗದ ಪರೀಕ್ಷೆಗಳು ಮತ್ತು ತೊಂದರೆಗಳಿಂದ ಮಾನವಕುಲವನ್ನು ರಕ್ಷಿಸಲು ಭೂಮಿಯ ಮೇಲೆ ಕಾಣಿಸಿಕೊಂಡನು ಎಂದು ನಂಬಲಾಗಿದೆ. ಆದ್ದರಿಂದ ಈ ಸ್ಥಳವು ಕಲಿಯುಗ ವೈಕುಂಠ ಎಂಬ ಹೆಸರನ್ನೂ ಪಡೆದುಕೊಂಡಿದೆ ಮತ್ತು ಇಲ್ಲಿನ ಭಗವಂತನನ್ನು ಕಲಿಯುಗ ಪ್ರತ್ಯಕ್ಷ ದೈವಂ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವನ್ನು ತಿರುಮಲ ದೇವಸ್ಥಾನ, ತಿರುಪತಿ ದೇವಸ್ಥಾನ ಮತ್ತು ತಿರುಪತಿ ಬಾಲಾಜಿ ದೇವಸ್ಥಾನದಂತಹ ಇತರ ಹೆಸರುಗಳಿಂದ ಕರೆಯಲಾಗುತ್ತದೆ. ವೆಂಕಟೇಶ್ವರನನ್ನು ಇತರ ಹಲವು ಹೆಸರುಗಳಿಂದ ಕರೆಯಲಾಗುತ್ತದೆ: ಬಾಲಾಜಿ, ಗೋವಿಂದ ಮತ್ತು ಶ್ರೀನಿವಾಸ.[1] ಆಂಧ್ರಪ್ರದೇಶ ಸರ್ಕಾರದ ನಿಯಂತ್ರಣದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ದೇವಾಲಯವನ್ನು ನಡೆಸುತ್ತಿದೆ. ಟಿಟಿಡಿಯ ಮುಖ್ಯಸ್ಥರನ್ನು ಆಂಧ್ರ ಪ್ರದೇಶ ಸರ್ಕಾರ ನೇಮಿಸುತ್ತದೆ. ಈ ದೇಗುಲದಿಂದ ಬರುವ ಆದಾಯವನ್ನು ಆಂಧ್ರಪ್ರದೇಶ ಸರ್ಕಾರ ಬಳಸುತ್ತದೆ.[2][3]
ತಿರುಮಲ ಬೆಟ್ಟಗಳು ಶೇಷಾಚಲಂ ಬೆಟ್ಟಗಳ ಶ್ರೇಣಿಯ ಭಾಗವಾಗಿವೆ. ಬೆಟ್ಟಗಳು ಏಳು ಶಿಖರಗಳನ್ನು ಒಳಗೊಂಡಿದ್ದು, ಆದಿಶೇಷನ ಏಳು ತಲೆಗಳನ್ನು ಪ್ರತಿನಿಧಿಸುತ್ತದೆ. ಈ ದೇವಾಲಯವು ವೆಂಕಟಾದ್ರಿ ಏಳನೇ ಶಿಖರದಲ್ಲಿದೆ. ಇದು ಶ್ರೀ ಸ್ವಾಮಿ ಪುಷ್ಕರಿಣಿ ಎಂಬ ಪವಿತ್ರ ನೀರಿನ ಕಲ್ಯಾಣಿಯ ದಕ್ಷಿಣ ದಂಡೆಯಲ್ಲಿದೆ. ಆದ್ದರಿಂದ ದೇವಾಲಯವನ್ನು "ಏಳು ಬೆಟ್ಟಗಳ ದೇವಾಲಯ" ಎಂದೂ ಕರೆಯಲಾಗುತ್ತದೆ.[4]
ಈ ದೇವಾಲಯವನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಕ್ರಿ.ಶ. 300 ದಿಂದ ಪ್ರಾರಂಭವಾಗುವ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.[5] ಗರ್ಭಗೃಹವನ್ನು ಆನಂದ ನಿಲಯ ಎಂದು ಕರೆಯಲಾಗುತ್ತದೆ. ಪ್ರಧಾನ ದೇವತೆಯಾದ ವೆಂಕಟೇಶ್ವರನು ನಿಂತಿರುವ ಭಂಗಿಯಲ್ಲಿದ್ದಾನೆ ಮತ್ತು ಗರ್ಭಗೃಹದಲ್ಲಿ ಪೂರ್ವಕ್ಕೆ ಮುಖಮಾಡಿದ್ದಾನೆ. ದೇವಾಲಯವು ಪೂಜೆಯ ವೈಖಾನಸ ಆಗಮ ಸಂಪ್ರದಾಯವನ್ನು ಅನುಸರಿಸುತ್ತದೆ. ಈ ದೇವಾಲಯವು ಎಂಟು ವಿಷ್ಣು ಸ್ವಯಂಭೂ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಇದನ್ನು 75 ನೇ ದಿವ್ಯ ದೇಶವೆಂದು ಪಟ್ಟಿ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಯಾತ್ರಿಕರ ದಟ್ಟಣೆಯನ್ನು ನಿರ್ವಹಿಸಲು ಎರಡು ಆಧುನಿಕ ಸರತಿ ಸಂಕೀರ್ಣ ಕಟ್ಟಡಗಳು, ಯಾತ್ರಾರ್ಥಿಗಳಿಗೆ ಉಚಿತ ಊಟಕ್ಕಾಗಿ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದಂ ಸಂಕೀರ್ಣ, ಕೇಶಮುಂಡನ ಕಟ್ಟಡಗಳು ಮತ್ತು ಹಲವಾರು ಯಾತ್ರಿ ವಸತಿ ನಿಲಯಗಳಿವೆ.
ಸ್ವೀಕರಿಸಿದ ದೇಣಿಗೆ ಮತ್ತು ಸಂಪತ್ತಿನ ದೃಷ್ಟಿಯಿಂದ ಇದು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.[6][7][8]
ತಿರುಮಲದಲ್ಲಿ ಭಗವಂತ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳಿವೆ . ಒಂದು ದಂತಕಥೆಯ ಪ್ರಕಾರ, ದೇವಾಲಯವು ವೆಂಕಟೇಶ್ವರನ ಮೂರ್ತಿಯನ್ನು ಹೊಂದಿದೆ. ಇದು ಪ್ರಸ್ತುತ ಕಲಿಯುಗದ ಸಂಪೂರ್ಣ ಅವಧಿಯವರೆಗೆ ಇಲ್ಲಿಯೇ ಇರುತ್ತದೆ ಎಂದು ನಂಬಲಾಗಿದೆ.[9][10][11]