ಚಂದ್ರಗುಪ್ತ ಮೌರ್ಯ
From Wikipedia, the free encyclopedia
ಚಂದ್ರಗುಪ್ತ ಮೌರ್ಯ ( ಈತನನ್ನು ಚಂದ್ರಗುಪ್ತ ಎಂದಷ್ಟೇ ಕರೆಯುವದೂ ಉಂಟು) ಹುಟ್ಟಿದ್ದು ಕ್ರಿ.ಪೂ. ೩೪೦ ರಲ್ಲಿ. ಆಳಿದ್ದು ಕ್ರಿಸ್ತಪೂರ್ವ ೩೨೦-೨೯೮ ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ಭಾರತದ ಮೊದಲ ನಿಜವಾದ ಸಾಮ್ರಾಟ್ ಎಂದು ಪರಿಗಣಿಸುತ್ತಾರೆ.
ಚಂದ್ರಗುಪ್ತ ಮೌರ್ಯ | |
---|---|
ಮೌರ್ಯ ವಂಶದ ಚಕ್ರವರ್ತಿ | |
ತನ್ನ ಆಪ್ತ ಸಲಹೆಗಾರರೊಂದಿಗೆ ಚಂದ್ರಗುಪ್ತ | |
ರಾಜ್ಯಭಾರ | ಕ್ರಿ.ಪೂ. ೩೨೨ - ಕ್ರಿ.ಪೂ. ೨೯೮ |
ಹುಟ್ಟು | ಕ್ರಿ.ಪೂ. ೩೪೦ |
ಸಾವು | ಕ್ರಿ.ಪೂ. ೨೯೮ |
ಉತ್ತರಾಧಿಕಾರಿ | ಬಿಂದುಸಾರ |
ಸಂತತಿ | ಮೌರ್ಯ ವಂಶ |
ತಾಯಿ | ಮುರ |
ಚಂದ್ರಗುಪ್ತ ಮೌರ್ಯ | |
---|---|
ಚಂದ್ರಗುಪ್ತ ಮೌರ್ಯನನ್ನು ಚಿತ್ರಿಸುವ ಒಂದು ಪ್ರತಿಮೆ, ಲಕ್ಷ್ಮೀನಾರಾಯಣ ದೇವಾಲಯ | |
ಮೊದಲ ಮೌರ್ಯ ಸಾಮ್ರಾಟ | |
ಆಳ್ವಿಕೆ | c. 321 – c. 297 BCE[1][2] |
ಉತ್ತರಾಧಿಕಾರಿ | ಬಿಂದುಸಾರ (ಮಗ) |
ಗಂಡ/ಹೆಂಡತಿ | ದುರ್ಧರಾ ಮತ್ತು ಸೆಲ್ಯೂಕಸ ನಿಕೇಟರ್ನ ಒಬ್ಬ ಮಗಳು |
ಸಂತಾನ | |
ಬಿಂದುಸಾರ | |
ತಾಯಿ | ಮುರ |
ಜನನ | ತಿಳಿದಿಲ್ಲ ತಿಳಿದಿಲ್ಲ |
ಮರಣ | ಕ್ರಿ.ಪೂ. 297[2] ಶ್ರವಣಬೆಳಗೊಳ, ಕರ್ನಾಟಕ (ಜೈನ ಪುರಾಣ)[3] |
ಧರ್ಮ | ಹಿಂದೂ ಅಥವಾ ಜೈನ ಧರ್ಮ[4] |
ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು. ಚಂದ್ರಗುಪ್ತನ ವಿಜಯದ ನಂತರ ಮೌರ್ಯ ಸಾಮ್ರಾಜ್ಯವು ಪೂರ್ವದಲ್ಲಿ ಬೆಂಗಾಲ್ ಮತ್ತು ಆಸ್ಸಾಮದಿಂದ ಪಶ್ಚಿಮದಲ್ಲಿ ಅಫ್ಘಾನಿಸ್ಥಾನ ಮತ್ತು ಬಲೂಚಿಸ್ಥಾನ ದವರೆಗೂ , ಉತ್ತರದಲ್ಲಿ ವಾಯುವ್ಯ ಕಾಶ್ಮೀರ ಮತ್ತು ಈಶಾನ್ಯನೇಪಾಳದಿಂದ ದಕ್ಷಿಣದಲ್ಲಿ ಡೆಕ್ಕನ್ ಪ್ರಸ್ಥಭೂಮಿಯವರೆಗೂ ಹಬ್ಬಿತ್ತು.
ಕೇವಲ ಇಪ್ಪತ್ತು ವರ್ಷದವನಿರುವಗಲೇ ಅಲೆಕ್ಸಾಂಡರನ ಸೈನ್ಯವನ್ನು ಸೋಲಿಸಿ ನಂದ ಸಾಮ್ರಾಜ್ಯವನ್ನು ಗೆದ್ದಿದ್ದು ,ಸೆಲ್ಯೂಕಸ್ ನಿಕೇಟರ್ ನನ್ನು ಸೋಲಿಸಿದ್ದು ಮತ್ತು ದಕ್ಷಿಣ ಏಶಿಯಾದಾದ್ಯಂತ ಕೇಂದ್ರೀಕೃತ ಆಳಿಕೆಯನ್ನು ನೆಲೆಗೊಳಿಸಿದ್ದು - ಈ ಘಟನೆಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥವು ಆಗಿವೆ . ಎರಡು ಸಾವಿರ ವರ್ಷಗಳನಂತರವೂ ಚಂದ್ರಗುಪ್ತ ಮತ್ತು ಅಶೋಕ ನೂ ಸೇರಿದಂತೆ ಅವನ ನಂತರ ಬಂದ ರಾಜರ ಸಾಧನೆಗಳು ದಕ್ಷಿಣ ಏಶಿಯ ಮತ್ತು ಜಾಗತಿಕ ಇತಿಹಾಸದ ಅಧ್ಯಯನದ ವಸ್ತುಗಳಾಗಿವೆ.
ಚಂದ್ರಗುಪ್ತನು ಪೂರ್ವ ಭಾರತದ ಮಗಧದ ನಂದ ವಂಶಕ್ಕೆ ಸೇರಿದ ಒಬ್ಬ ರಾಜನಿಗೆ ಮುರಾ ಎಂಬ ದಾಸಿಯಲ್ಲಿ ಹುಟ್ಟಿದ ಕಾನೂನುಬಾಹಿರ ಮಗು ಎಂಬ ಅಭಿಪ್ರಾಯವನ್ನು ಅನೇಕ ಭಾರತೀಯ ಇತಿಹಾಸಕಾರರು ಹೊಂದಿರುವರಾದರೂ ಚಂದ್ರಗುಪ್ತನನ್ನು ನವಿಲು (ಸಂಸ್ಕೃತದಲ್ಲಿ 'ಮಯೂರ') ಸಾಕುವವರು ಸಲಹಿದ ಕಾರಣಕ್ಕಾಗಿ ಮೌರ್ಯ ಎಂಬ ಹೆಸರು ಬಂದಿತು ಎಂದು ನಂತರದ ಸಾಹಿತ್ಯಿಕ ಪರಂಪರೆಗಳು ಸೂಚಿಸುತ್ತವೆ. ಮೋರಿಯ(ಮೌರ್ಯ) ಶಬ್ದಕ್ಕೂ ಮೋರಾ ( ಅಥವಾ ಮಯೂರ) ಶಬ್ದಕ್ಕೂ ಇರಬಹುದಾದ ಸಂಬಂಧವನ್ನು ಬೌದ್ಧ ಮತ್ತು ಜೈನ ಧರ್ಮಗಳೆರಡರ ಪರಂಪರೆಗಳೂ ಹೇಳುತ್ತವೆ. ನೇಪಾಳ ಮತ್ತು ಉತ್ತರಪ್ರದೇಶಗಳ ನಡುವೆ ಇದ್ದ ಹಳೇಯ ಕಾಲದ ಪಿಪ್ಪಲಿವನ ಎಂಬ ಸಣ್ಣ ಗಣರಾಜ್ಯದ ಮೋರಿಯ ಎಂಬ ಕ್ಷತ್ರಿಯಯೋಧರ ಕುಲಕ್ಕೆ ಚಂದ್ರಗುಪ್ತನು ಸೇರಿದವನೆಂದು ಹೇಳುವ ಸಾಹಿತ್ಯಪರಂಪರೆಗಳೂ ಇವೆ. ಇದೇ ರೀತಿ ಇನ್ನೂ ಹಲವು ಸಿದ್ಧಾಂತ ಗಳು ಅವನು ಇಂದಿನ ಪಾಕಿಸ್ತಾನದಲ್ಲಿರುವ ಗಾಂಧಾರ ಅಥವಾ ಕಾಂಭೋಜಕ್ಕೂ ಸಂಬಂಧಪಟ್ಟವನು ಎಂದು ಹೇಳುತ್ತವೆ.