From Wikipedia, the free encyclopedia
ಮಾನ್ವಿ ಅಥವಾ ಮಾನುವೆ ಭಾರತದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ನಗರ. ಇದು ಮಾನ್ವಿ ತಾಲೂಕಿನ ಪುರಸಭೆ ಕೇಂದ್ರವಾಗಿದೆ. ದೇಶದಾದ್ಯಂತ ಟಾಪ್ ೧೦ ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಮಾನ್ವಿ ಪೊಲೀಸ್ ಠಾಣೆ ಐದನೇ ಸ್ಥಾನದಲ್ಲಿದೆ.
ಮಾನ್ವಿ
ಭತ್ತದ ನಾಡು ಮತ್ತು ದಾಸರ ಬೀಡು | |
---|---|
ನಗರ | |
Coordinates: 15.9833°N 77.05°E[೧] | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ರಾಯಚೂರು |
ಲೋಕ ಸಭೆ ಚುನಾವಣಾ ಕ್ಷೇತ್ರ | ರಾಯಚೂರು |
Area | |
• Total | ೧೦ km೨ (೪ sq mi) |
Elevation | ೩೬೧ m (೧,೧೮೪ ft) |
Population (೨೦೦೧) | |
• Total | ೪೬೪೬೫ |
• Density | ೩೭೬೧.೩/km೨ (೯,೭೪೨/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+೫:೩೦ (ಐಎಸ್ಟಿ) |
ಪಿನ್ | ೫೮೪ ೧೨೩ |
ದೂರವಾಣಿ ಕೋಡ್ | ೦೮೫೩೮ |
Vehicle registration | ಕೆಎ-೩೬ |
Website | www |
ಮಾನ್ವಿ ನಗರ ಪಾಲಿಕೆಯಿಂದ ಆಡಳಿತ ನಡೆಸುತ್ತಿದೆ. ಇದು ಹಲವಾರು ಧಾರ್ಮಿಕ ಸ್ಥಳಗಳಿಗೆ ನೆಲೆಯಾಗಿದೆ: ಹಜರತ್ ಸೈಯದ್ ಷಾ ಸಬ್ಜಾಲಿ ಸತ್ತಾರ್ ಕ್ವಾದ್ರಿ ರಾ, ಮಲ್ಲಿಕಾರ್ಜುನ್ ಸ್ವಾಮಿ ದೇವಾಲಯ, ಮತ್ತು ಮಾನ್ವಿ. ಮಾನ್ವಿಯು ೧೮ ನೇ ಶತಮಾನದ ಮಾಧ್ವರಂತಹ ಹಿಂದೂ ಧರ್ಮದ ಹಲವಾರು ಧಾರ್ಮಿಕ ತತ್ವಜ್ಞಾನಿಗಳೊಂದಿಗೆ ಸಂಬಂಧ ಹೊಂದಿದೆ. ಇದು ದಾಸ ಸಾಹಿತ್ಯದ ಕೀರ್ತನಕಾರ ಜಗನ್ನಾಥದಾಸರು ಹುಟ್ಟಿದ ಊರು.[೨] ಇದು ಹಲವಾರು ಪುರಾತತ್ವ ಮತ್ತು ಐತಿಹಾಸಿಕ ತಾಣಗಳಿಗೆ ನೆಲೆಯಾಗಿದೆ, ಉದಾಹರಣೆಗೆ "ಬೆಟ್ಟದ ತುದಿಯಲ್ಲಿರುವ ಕೋಟೆ", ಪ್ರಾಚೀನ ಸೇತುವೆಗಳು ಮತ್ತು ಜುಮ್ಮಾ-ಮಸ್ಜಿದ್ ಮಸೀದಿ (ಶಾಹಿ-ಮಸ್ಜಿದ್). ಜುಮ್ಮಾ-ಮಸ್ಜಿದ್ ಭಾಮನಿ ಅಥವಾ ಆದಿಲ್ಶಾಹಿ ಅವಧಿಯ, ಹೊರಭಾಗದಲ್ಲಿ ಕಪ್ಪು ಕಲ್ಲಿರುವ ಪ್ರಾಚೀನ ಮಸೀದಿ. ಈ ಮಸೀದಿಯನ್ನು ಖಾಜಿ ಅಹ್ಮದ್ ಹುಸೇನ್ ಅವರ ಪೂರ್ವಜರ ತನಕ ನಿರ್ವಹಿಸುತ್ತಿದ್ದಾರೆ.
ಮಾನ್ವಿ ನಗರವು ಗುಡ್ಡ ಪ್ರದೇಶದಿಂದ ಸುತ್ತುವರೆಯಲ್ಪಟ್ಟಿದೆ. ಈ ಗುಡ್ಡ ಪ್ರದೇಶವು ಯಾಮಿನಿ ಪರ್ವತ ಶ್ರೇಣಿಗೆ ಸೇರಿದೆ. ಮಾನವಿ ಎಂಬ ಹೆಸರೇ ಸೂಚಿಸುವಂತೆ ಮಾನವೀಯತೆ ಮೆರೆಯುವಂತೆ ಪ್ರತಿಯೊಂದು ಗುಡ್ಡ ಪ್ರದೇಶವು ಪ್ರಮುಖ ಧರ್ಮಗಳನ್ನು ಪ್ರತಿನಿಧಿಸುತ್ತದೆ. ಸಬ್ಜಾಲಿ ಸತ್ತಾರ್ ದರ್ಗಾ ಬೆಟ್ಟವು ಇಸ್ಲಾಂ ಧರ್ಮವನ್ನು ಸೂಚಿಸಿದರೆ, ಮಲ್ಲಿಕಾರ್ಜುನ ಬೆಟ್ಟ ಹಿಂದೂ ಧರ್ಮವನ್ನು ಮತ್ತು ಕ್ರಿಶ್ಚಿಯನ ಬೆಟ್ಟ ಕ್ರೈಸ್ಟ ಧರ್ಮವನ್ನು ಪ್ರತಿನಿಧಿಸುತ್ತದೆ.
ಮಾನುವೆ ಅಥವಾ ಈಗಿನ ಮಾನ್ವಿ ಕಲ್ಯಾಣಿ ಚಾಲುಕ್ಯರ ಕಾಲದ ಒಂದು ಪ್ರಸಿದ್ಧ ಪಟ್ಟಣ. ಇಲ್ಲಿ ಹಳೆಯ ಕೋಟೆಯ ಅವಶೇಷಗಳು ಇವೆ. ಇಲ್ಲಿ ಹಿಂದೆ ಚಿನ್ನದ ಗಣಿಗಾರಿಕೆ ಇತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದ ಮಹಾಮಂಡಲೇಶ್ವರ ದೇವರಸನ ಆಳ್ವಿಕೆ ಸೂಚಿಸುವ ೧೦೫೨ ರ ಶಾಸನವಿದೆ. ಸೇವನರನ್ನು (ಯಾದವರು) ಬೆನ್ನಟ್ಟಿ ಹೊಯ್ಸಳ ದೊರೆ ಎರಡನೇ ಬಲ್ಲಾಳ ಮಾನುವೆಯವರೆಗೆ ಬಂದಿದ್ದ ಎಂದು ೧೩ ನೇ ಶತಮಾನದ ಶಾಸನ ತಿಳಿಸುತ್ತದೆ.
ಮಾನ್ವಿಯು ಸರಾಸರಿ ೩೬೨ ಮೀಟರ್ (೧೧೮೭ ಅಡಿ) ಎತ್ತರದಲ್ಲಿ ೧೦ ಚದರ ಕಿಲೋಮೀಟರ್ (೩.೮೬ ಚದರ ಮೈಲಿ) ಆಡಳಿತ-ಮಿತಿ ಪ್ರದೇಶವನ್ನು ಹೊಂದಿದೆ.
ಮಾನವಿ ಬಯಲುಸೀಮೆ ಪ್ರದೇಶವಾದ್ದರಿಂದ ಇಲ್ಲಿಯ ಹವಾಮಾನದಲ್ಲಿ ವ್ಯತ್ಯಯ ಕಂಡುಬರುವುದಿಲ್ಲ. ವರ್ಷಪೂರ್ತಿ ಒಂದೇ ರೀತಿಯ ಹವಾಮಾನ ನಿರೀಕ್ಷಿಸಬಹುದಾಗಿದೆ.
ಇಲ್ಲಿ ಕೃಷಿ ಅನುಕೂಲಕ್ಕಾಗಿ ತುಂಗಭದ್ರ ಎಡ ದಂಡೆ ನೀರಾವರಿ ಯೋಜನೆಯ ಸೌಲಭ್ಯವಿದೆ.
೨೦೧೧ ರ ಭಾರತದ ಜನಗಣತಿಯ ಪ್ರಕಾರ,[೩] ಮಾನ್ವಿಯ ಜನಸಂಖ್ಯೆಯ ೫೧% ಪುರುಷರು ಮತ್ತು ೪೯% ಮಹಿಳೆಯರು ಇದ್ದಾರೆ. ಪಟ್ಟಣವು ಸರಾಸರಿ ೪೭% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಕಡಿಮೆಯಾಗಿದೆ; ಪುರುಷರ ಸಾಕ್ಷರತೆ ೫೫% ಮತ್ತು ಮಹಿಳಾ ಸಾಕ್ಷರತೆ ೩೯%. ಮಾನ್ವಿಯಲ್ಲಿ, ಜನಸಂಖ್ಯೆಯ ೧೭% ಆರು ವರ್ಷದೊಳಗಿನವರು ಇದ್ದಾರೆ.
ಮಾನವಿ ನಗರದ ಗುಡ್ಡದ ಮೇಲಿರುವ ಪುರಾತನ ಕೋಟೆ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ೪೫೦ ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ ಮತ್ತು ಒಂದೇ ಸ್ಥಳದಲ್ಲಿ ಒಟ್ಟು ೫ ದೇವಸ್ಥಾನ ಇದ್ದು ಮಲ್ಲಿಕಾರ್ಜುನ ಪಾರ್ವತಿದೇವಿ ಶಂಕರಲಿಂಗ, ಎಮ್ಮೆ ಬಸವಣ್ಣ ಮತ್ತು ಶ್ರೀ ಮಾರುತಿ ದೇವಸ್ಥಾನವು ಈ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ತಾಲೂಕಿನ ನಿರಮಾನವಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಯಲ್ಲಮ್ಮ ದೇವಿಯ ಜಾತ್ರೆಯು ಪ್ರಸಿದ್ಧವಾಗಿದೆ.
ಮಾನ್ವಿ ಪಟ್ಟಣದ ಸಿಂಧನೂರು ರಸ್ತೆಯ ಕಲ್ಮಠದ ಧ್ಯಾನ ಮಂದಿರ ಪ್ರಸಿದ್ಧಿ ಸ್ಥಳವಾಗಿದೆ. ಇಲ್ಲಿ ಸುಂದರ ಶಿವಲಿಂಗವನ್ನು ಕಾಣಬಹುದು. ಪ್ರತಿ ವರ್ಷ ಶಿವರಾತ್ರಿಗೆ ಈ ಧ್ಯಾನ ಮಂದಿರದಲ್ಲಿ ಗಾರಿಗೆ ಜಾತ್ರೆ ನಡೆಯುತ್ತದೆ. ಹಾಗೂ ಈ ಜಾತ್ರೆಯ ವಿಶೇಷವೆಂದರೆ ಮಹಿಳೆಯರೇ ರಥವನ್ನು ಎಳೆಯುತ್ತಾರೆ. ಅದೇ ರೀತಿ ಈ ಕಲ್ಮಠದಲ್ಲಿ ಪ್ರತಿ ವರ್ಷ ದಸರಾ ಹಬ್ಬವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಬಾಶುಮಿಯನ್ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿಎ, ಬಿಎಸ್ಸಿ ಮತ್ತು ಬಿಕಾಂ ಕೋರ್ಸ್ಗಳನ್ನು ನೀಡುತ್ತದೆ. ಜೂನ್ ೨೦೨೩ ರ ಹೊತ್ತಿಗೆ ಕಾಲೇಜು ಬಿಸಿಎ ಪದವಿಯ ಕೋರ್ಸ್ಗಳನ್ನು ನಡೆಸಲು ಅರ್ಜಿ ಸಲ್ಲಿಸಿದೆ, ಆದರೆ ಇನ್ನೂ ಅನುಮೋದನೆಯನ್ನು ಪಡೆಯಬೇಕಾಗಿತ್ತು.[೪]
ಕ್ರಿ. ಶ. ೧೫೪೦ ರಲ್ಲಿ ಇಗ್ನೇಶಿಯಸ್ ಲೊಯೊಲನಿಂದ ಸ್ಥಾಪಿತವಾದ ಯೇಸು ಸಭೆಯು ೨೦೦೨ ರಲ್ಲಿ ತಲುಪದವರನ್ನು ತಲುಪುವುದು ಎಂಬ ಗುರಿಯನ್ನು ಇಟ್ಟು ಕೊಂಡು, ಮಾನವಿ ತಾಲ್ಲೂಕಿನಲ್ಲಿ 'ಲೊಯೊಲ ಸಂಸ್ಥೆ' ಆರಂಭಿಸಿದರು. ಬಡಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಶಿಕ್ಷಣ ಒದಗಿಸುವಿಕೆ ಇದರ ಪ್ರಮುಖ ಆಶಯ.
ಮಾನ್ವಿಯು ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಮತ್ತು ಇತರ ಪ್ರಮುಖ ನಗರಗಳಿಗೆ ರಸ್ತೆಯ ಮೂಲಕ ಸಂಪರ್ಕ ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವು ಹೈದರಾಬಾದ್ನಲ್ಲಿದೆ. ಮಾನ್ವಿಯು ಲಾರಿ ಮತ್ತು ಡಿಸಿಎಂಗಳ ಮೂಲಕ ಹೆಚ್ಚಿನ ಸಂಖ್ಯೆಯ ಸಾರಿಗೆಯನ್ನು ಹೊಂದಿದೆ ಮತ್ತು ಮಾನ್ವಿ ಲಾರಿ ಸಂಘದಿಂದ ನಿಯಂತ್ರಿಸಲ್ಪಡುತ್ತದೆ.
ಆಟೋ ರಿಕ್ಷಾಗಳನ್ನು ನಗರದೊಳಗೆ ಸಾರಿಗೆಯಾಗಿ ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇತರ ನಗರಗಳು ಮತ್ತು ಹಳ್ಳಿಗಳಿಗೆ ಬಸ್ ಸೇವೆಯನ್ನು ನಡೆಸುತ್ತದೆ. ಬೇರೆ ಬೇರೆ ಖಾಸಗಿ ಬಸ್ ಸೇವೆಗಳೂ ಇವೆ.
ರಾಯಚೂರು ಮಾನ್ವಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ರಾಯಚೂರು ಭಾರತದ ಎಲ್ಲಾ ಪ್ರಮುಖ ಭಾಗಗಳಿಗೆ ರೈಲುಗಳನ್ನು ಸಂಪರ್ಕಿಸುವ ಪ್ರಮುಖ ರೈಲು ಮಾರ್ಗದಿಂದ ಸೇವೆ ಸಲ್ಲಿಸುತ್ತದೆ.
ಹೊಸ ರೈಲು ಮಾರ್ಗ, ಮುನಿರಾಬಾದ್-ಮಹಬೂಬ್ನಗರ ರೈಲು ಮಾರ್ಗವು ಮಾನ್ವಿ ಮೂಲಕ ಹಾದುಹೋಗುತ್ತದೆ. ಈ ರೈಲು ಮಾರ್ಗದ ಮೂಲಕ ಮಾನ್ವಿ ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಮಾನವಿ ನಗರವು ಜಿಲ್ಲಾ ಕೇಂದ್ರವಾದ ರಾಯಚೂರಿನಿಂದ ಸುಮಾರು ೫೦ ಕಿಲೋಮೀಟರ್ ದೂರದಲ್ಲಿದೆ. ರಾಜ್ಯ ಹೆದ್ದಾರಿ ೨೩ ಮಾನವಿ ನಗರದ ಮೂಲಕ ಹಾಯ್ದು ಹೋಗುತ್ತದೆ. ರಾಯಚೂರು ರೈಲ್ವೆ ನಿಲ್ದಾಣ ಮಾನವಿಗೆ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ.
Seamless Wikipedia browsing. On steroids.