ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.[2][3][4]
ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.
ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.
ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು.
ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್.
ಕವಿತೆಗಳು
ನಿವೇದನ (1942)
ಉಮರನ ಒಸಗೆ
ಮಂಕುತಿಮ್ಮನ ಕಗ್ಗ - I
ಮರುಳ ಮುನಿಯನ ಕಗ್ಗ - II
ಶ್ರೀರಾಮ ಪರೀಕ್ಷಣಂ
ಅ೦ತಃಪುರಗೀತೆ
ಗೀತ ಶಾಕುಂತಲಾ
ಜ್ಞಾಪಕ ಚಿತ್ರಶಾಲೆ
ನಿಬಂಧ
ಜೀವನ ಸೌಂದರ್ಯ ಮತ್ತು ಸಾಹಿತ್ಯ
ಸಾಹಿತ್ಯ ಶಕ್ತಿ
ಸಂಸ್ಕೃತಿ
ಬಾಳಿಗೊಂದು ನಂಬಿಕೆ
ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ)-(ಗೀತೆಯ ಮೇಲೆ ಪ್ರವಚನ ಸಂಗ್ರಹ)
ನಾಟಕ
ವಿದ್ಯಾರಣ್ಯ ವಿಜಯ
ಜಾಕ್ ಕೇಡ್
ಮ್ಯಾಕ್
ಇಂಗ್ಲಿಷಿನಲ್ಲಿ
Vedanta and Nationalism (1909)
The Problems of Indian Native States (1917)
The Native States in the Empire (1918)
The Indian Native States and the Montagu-Chelmsford Report (1918)
The Government of India and the Indian States, The Indian States Committee: A Note on its Terms of Reference and Their Implications (1928)
All About Mysore (1931)
The States and their People in the Indian Constitution (1931)
೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು.
ಡಿ.ವಿ.ಜಿ. ಅವರು, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು.
1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದರು.
ಅವರ ಈ ಮಾತುಗಳು: ‘ರಾಜದಂಡ ಹುಟ್ಟಿದ್ದು ಮನುಷ್ಯನಿಗೆ ಮನುಷ್ಯನ ವಿಷಯದಲ್ಲಿರುವ ಹೆದರಿಕೆಯಿಂದ. ರಾಜ್ಯನಿಬಂಧನೆಯಾದದ್ದೂ ಮನುಷ್ಯನಿಗೆ ಮನುಷ್ಯನಲ್ಲಿರುವ ಅಪನಂಬಿಕೆಯಿಂದ. ಮನುಷ್ಯರು ಅನ್ಯೋನ್ಯ ಸಹವಾಸದಲ್ಲಿರಬೇಕಾಗಿಬಂದ ಮೇಲೆ, ಒಬ್ಬನನ್ನೊಬ್ಬನು ನಂಬದಿದ್ದರೆ ಬದುಕು ಸಾಗದು; ಪೂರ್ತಿ ನಂಬುವುದೆಂದರೆ ವಂಚನೆಯ ಶಂಕೆ.
ಹೀಗೆ ನಂಬಿಕೆ–ಅಪನಂಬಿಕೆಗಳ ಬೆರಕೆಯೇ ರಾಜ್ಯಸಂಬಂಧಗಳ ಒಳತಿರುಳು... ಸಾರ್ವಜನಿಕ ಕಾರ್ಯಕ್ಕೆಂದು ಮುಂದೆ ಬರುವವರ ಮನಸ್ಸುಗಳಲ್ಲಿ ಪ್ರತ್ಯಕ್ಷವಾಗಲ್ಲದಿದ್ದರೆ ಪರೋಕ್ಷವಾಗಿಯಾದರೂ, ಸಮೀಪದಲ್ಲಿ ಅಲ್ಲದಿದ್ದರೆ ದೂರವಾಗಿಯಾದರೂ, ಸ್ವಪ್ರಯೋಜನದ ನಿರೀಕ್ಷೆ ಅಷ್ಟೋ ಇಷ್ಟೋ ಇರುವುದು ಅಸ್ವಾಭಾವಿಕವಲ್ಲ. ಆದರೆ ಎಲ್ಲಿ ಅವರು ನೂರಕ್ಕೆ ನೂರು ಮಂದಿಯೂ ಅಂಥವರೇ ಆಗಿದ್ದಾರೆಯೋ ಆ ದೇಶ ತೀರ ಬಡದೇಶವೆನ್ನಬೇಕು.
ಸ್ವಾಭಾವಿಕವಾದ ಆಶಾಪ್ರವೃತ್ತಿಯ ಮಟ್ಟದಿಂದ ಮೇಲೇರಿ ನಡೆಯಬಲ್ಲವನು ದೇಶದ ನೂರರಲ್ಲಿ ಹತ್ತು ಮಂದಿಯಾದರೂ ಎಲ್ಲಿ ದೊರೆಯುತ್ತಾರೆಯೋ ಅದೇ ಪ್ರಜಾರಾಜ್ಯವನ್ನು ಅನರ್ಥದಿಂದ ಉಳಿಸಿಕೊಳ್ಳಬಲ್ಲ ದೇಶ’.
ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವುದರ ಅಪಾಯದ ಬಗ್ಗೆಯೂ ಡಿವಿಜಿ ಎಚ್ಚರಿಸಿದ್ದರು. ‘ಅನ್ನ ವಸ್ತು ಸಂಪಾದನೆಗಾಗಿ ಬೇರೆ ವೃತ್ತಿಯನ್ನಿರಿಸಿಕೊಂಡು, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯಕ್ಕೆ ಕೈ ಹಚ್ಚುವವರೆಲ್ಲ ನಿಷ್ಪಾಕ್ಷಿತ ರಾಜ್ಯಸ್ಥರೇ. ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು.[6]
೧೯೬೧ ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ.ವಿ.ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ.
ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರು ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ:
ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ| ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ| ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಂಬ್ರಿತೊವ್ವೀ| ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ||
ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ,ಪಳದ್ಯ, ಕೋಸಂಬರಿ, ತೊವ್ವೆ,ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.[11]
೨೦೦೩ರಲ್ಲಿ ಬೆಂಗಳೂರಿನ ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.[12][13]