From Wikipedia, the free encyclopedia
ಅಗ್ನಿಶಿಲೆಗಳು ಭೂಮಿಯ ಹೊರಚಿಪ್ಪಿನ ಮಂದ ಸುಮಾರು 8-10 ಮೈ. ಗಳೆಂದು ನಿರ್ಧರಿಸಲಾಗಿದೆ. ಈ ಚಿಪ್ಪು ಗಡಸಾಗಿದ್ದು ನಾನಾ ಬಗೆಯ ಶಿಲೆಗಳಿಂದ ಕೂಡಿದೆ. ಉತ್ಪತ್ತಿ ವಿಧಾನದ ವರ್ಗೀಕರಣದಂತೆ ಇವನ್ನು
Extended | en:Oceanic crust: 0–20 20–65 >65 |
ಎಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಬಹುಭಾಗ ಅಂದರೆ 95%ರಷ್ಟು ಅಗ್ನಿಶಿಲೆಗಳು. ಭೂಮಿಯ ಆಳದಲ್ಲಿ ಹುದುಗಿರುವ ಮ್ಯಾಗ್ಮ ಅಥವಾ ಮಾತೃಶಿಲಾದ್ರವದ ಆರುವಿಕೆಯಿಂದ ನೇರವಾಗಿ ಮೈದೋರಿದ ಶಿಲೆಗಳಿವು. ಇಂಗ್ಲಿಷ್ನಲ್ಲಿ ಇದನ್ನು ಇಗ್ನಿಯಸ್ ರಾಕ್ಸ್ (Igneous rock). ಮಾತೃದ್ರವ ಅಥವಾ ಮೂಲದ್ರವ ಉಂಟಾಗಲು ಹೆಚ್ಚಿನ ಶಾಖ ಅಗತ್ಯ. ಇದಕ್ಕೆ ಅಗ್ನಿಯೇ ಮೂಲಭೂತವಾದುದರಿಂದ ಇವನ್ನು ಅಗ್ನಿಶಿಲೆಗಳೆಂದು ಕರೆಯುತ್ತಾರೆ.[1]
ಶಿಲಾದ್ರವದಲ್ಲಿ ನಾನಾ ಬಗೆಯ ಸಿಲಿಕೇಟುಗಳು ಆವಿ ಮತ್ತು ಇತರ ಆಮ್ಲಗಳು ಅಲ್ಪ ಪ್ರಮಾಣದಲ್ಲಿ ಹುದುಗಿರುತ್ತವೆ. ಶಿಲಾದ್ರವ ಕ್ರಮೇಣ ಆರಿ ಹೆಪ್ಪುಗಟ್ಟುವಾಗ ಅನುಕ್ರಮವಾಗಿ ಸಿಲಿಕೇಟ್ ಖನಿಜಗಳು ರೂಪುಗೊಳ್ಳುತ್ತವೆ. ಈ ಕಾರ್ಯದಲ್ಲಿ ಆವಿ ಮತ್ತು ಆಮ್ಲಗಳು ಬಹು ಸಹಕಾರಿ. ಶಿಲಾದ್ರವ ಹೆಚ್ಚಿನ ಆಳದಲ್ಲಿ ಹುದುಗಿದ್ದರೂ ಭೂಮಿಯ ಮೇಲ್ಪದರಗಳಲ್ಲಿ ಆಗಾಗ ಉಂಟಾಗುವ ಒತ್ತಡದ ವ್ಯತ್ಯಾಸಗಳಿಂದ ಮೇಲಕ್ಕೆ ದಾರಿ ಮಾಡಿಕೊಂಡು ಬರುತ್ತದೆ. ಮೇಲೆ ಬಂದಂತೆಲ್ಲ ಅದರ ಉಷ್ಣತೆ ಕುಗ್ಗುತ್ತ ಹೋಗುತ್ತದೆ. ತಣ್ಣಗಿರುವ ಭೂಭಾಗದಲ್ಲಿ ಉಂಟಾದ, ಸೀಳು ಅಥವಾ ಬಿರುಕುಗಳಲ್ಲಿ ಶಿಲಾದ್ರವ ಪ್ರವಹಿಸುವಾಗ ಉಷ್ಣತೆ ಕಡಿಮೆಯಾಗಿ ದ್ರವ ಶಿಲೆಯಾಗಿ ಮಾರ್ಪಡುತ್ತದೆ.
ಹಲವು ಬಾರಿ ಅಂದರೆ ಒತ್ತಡ ಅತಿಯಾಗಿರುವ ಸನ್ನಿವೇಶದಲ್ಲಿ ಸೀಳುಗಳ ಮುಖಾಂತರ ಹೊರಹೊಮ್ಮಿ ಸುತ್ತಮುತ್ತಲ ನೆಲದಮೇಲೆ ಪ್ರವಾಹರೂಪದಲ್ಲಿ ಹರಿದು ಹೆಪ್ಪುಗಟ್ಟುತ್ತದೆ.[2] ಇದೇ ಲಾವಾಪ್ರವಾಹ. ಈ ಪ್ರವಾಹ ಹಲವು ವೇಳೆ ಬಹು ವಿಸ್ತಾರವಾಗಿ ಹರಡಿ ಕ್ರಮೇಣ ಹೆಚ್ಚು ಭೂಪ್ರದೇಶವನ್ನು ಆವರಿಸಬಹುದು.[3] ಅಲ್ಲದೆ ಈ ತೆರನಾದ ಚಟುವಟಿಕೆ ಸ್ವಲ್ಪಕಾಲ ಮುಂದುವರಿದಲ್ಲಿ ಲಾವಾಪ್ರಸ್ತರಗಳು ಒಂದರ ಮೇಲೊಂದು ವರಸೆ ವರಸೆಯಾಗಿ ಅಡಕವಾಗುತ್ತ ಹೋಗಬಹುದು. ಭಾರತದ ದಕ್ಷಿಣ ಪ್ರಸ್ಥಭೂಮಿಯಲ್ಲಿನ ಡೆಕ್ಕನ್ ಬೆಸಾಲ್ಟ್ ಎಂಬ ಅಗ್ನಿಶಿಲೆ ಇದಕ್ಕೆ ಅತ್ಯಂತ ಉತ್ತಮವಾದ ಉದಾಹರಣೆ. ಈ ಶಿಲೆಗಳು ಸುಮಾರು 2,00,000 ಚ.ಮೈ.ಗಳಷ್ಟು ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಹರಡಿದೆ. ಪುಣೆ, ಮುಂಬಯಿ, ಬೆಳಗಾವಿಗಳ ಸುತ್ತಮುತ್ತಲ ಪ್ರದೇಶದಲ್ಲಿ ಇಂಥ ಕರಿಕಲ್ಲಿನ ಬೆಟ್ಟ ಗುಡ್ಡಗಳನ್ನು ನೋಡಬಹುದು. ಕೆಲವು ವೇಳೆ ಈ ಬಗೆಯ ಶಿಲೆಗಳಲ್ಲಿ ಹುದುಗಿದ್ದ ಅನಿಲಗಳು ಹೊರಹೊಮ್ಮುವಾಗ ನಾನಾ ಗಾತ್ರದ, ನಾನಾ ಆಕಾರದ ರಂಧ್ರಗಳುಂಟಾಗುತ್ತವೆ. ಹಲವು ಸಂದರ್ಭಗಳಲ್ಲಿ ಮಾತೃಶಿಲಾದ್ರವದ ರಾಸಾಯನಿಕ ಸಂಯೋಜನೆಗೆ ಅನುಗುಣವಾಗಿ ಶಿಲೆಯ ಹೊರಮೈ ನುಣುಪಾಗಿದ್ದು ಹಗ್ಗದೋಪಾದಿಯಲ್ಲಿ ಕಂಡುಬರುತ್ತದೆ.[4] ಅಥವಾ ಶಿಲೆಯ ಹೊರಮೈ ಛಿದ್ರಗೊಂಡು ಒರಟಾಗಿ ತೋರಬಹುದು. ಲಾವಾ ಪ್ರವಾಹಕ್ಕೆ ನೀರಿನ ಅಥವಾ ಶೈತ್ಯದ ಸಂಪರ್ಕ ಉಂಟಾದಾಗ ದಿಂಬಿನಾಕಾರವನ್ನು ಪಡೆಯುವುದುಂಟು. ಇಂದಿಗೂ ಈ ಶಿಲೆಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ Archived 2016-09-21 ವೇಬ್ಯಾಕ್ ಮೆಷಿನ್ ನಲ್ಲಿ..
ಚಿತ್ರದುರ್ಗ ಜಿಲ್ಲೆಯ ಮರಡಿಹಳ್ಳಿ, ಕುರುಬರ ಮರಡಿಕೆರೆ, ತುಮಕೂರಿನ ಬೆಳ್ಳಾರ, ಕೋಲಾರದ ಚಿನ್ನದ ಗಣಿ ಪ್ರದೇಶದ ಮಾರಿಕುಪ್ಪಂ-ಈ ಸ್ಥಳಗಳಲ್ಲಿ ದಿಂಬಿನಾಕಾರದ ಅಗ್ನಿಶಿಲಾಪ್ರವಾಹದ ರಚನೆಗಳಿವೆ. ದ್ರವ ರೂಪದಲ್ಲಿನ ಲಾವಾ ಆರಿ ಶಿಲೆಯಾದಾಗ ಪ್ರಮಾಣದಲ್ಲಿ ಕುಗ್ಗುವುದರಿಂದ ಒತ್ತಡದ ವ್ಯತ್ಯಾಸಗಳುಂಟಾಗಿ ನಿರ್ದಿಷ್ಟ ರೀತಿಯ ಸೀಳುಗಳು ತಲೆದೋರುತ್ತವೆ. ಇವು ಶಿಲೆಯ ಹೊರಮೈಯಿಂದ ಬಹು ಆಳದವರೆಗೆ ವ್ಯಾಪಿಸಿರುತ್ತವೆ. ಕ್ರಮೇಣ ಶಿಲಾ ಪ್ರವಾಹ ಒಂದೇ ಗಾತ್ರದ ಮುಮ್ಮೂಲೆಯ, ಚಚ್ಚೌಕನೆಯ ಐದು ಅಥವಾ ಆರು ಮುಖಗಳಿಂದ ಕೂಡಿದ ನೀಳ್ಗಂಬಗಳಾಗಿ ಮಾರ್ಪಡುತ್ತದೆ
ಇದು ಭೂಸ್ತರಗಳಲ್ಲಿ ನುಗ್ಗುವ ವಿಚಾರದಲ್ಲಿ ಭೂವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಆದ್ದರಿಂದ ಇದನ್ನು ಅಂತರ್ಗತ (ಪ್ಲುಟಾನ್) ಎಂದು ಇತ್ತೀಚೆಗೆ ಕರೆಯಲಾಗಿದೆ. ಹಿಂದಿದ್ದ ಭೂಸ್ತರಗಳನ್ನು ಸ್ಥಳಾಂತರಗೊಳಿಸಿ ಅಥವಾ ಅವನ್ನು ಭಕ್ಷಿಸಿ, ತೆರವಾದ ಜಾಗವನ್ನು ಆಳದಿಂದ ನುಗ್ಗಿಬರುತ್ತಿರುವ ಶಿಲಾದ್ರವ ಆವರಿಸಬಹುದು. ಅಥವಾ ಕ್ರಮೇಣ ಹಿಂದಿದ್ದ ಭೂಭಾಗಗಳನ್ನೇ ಕಾಯಾಂತರಗೊಳಿಸಿ ಅವುಗಳ ಸ್ಥಳಗಳನ್ನು ಆಕ್ರಮಿಸಲೂಬಹುದು.
ಬಹಿಸ್ಸರಣ ಅಥವಾ ಅಂತಸ್ಸರಣದ ಆಕಾರ, ರಚನೆ ಮತ್ತು ಅವುಗಳಿಗೂ ಅಕ್ಕ ಪಕ್ಕದ ನಾಡಶಿಲೆಗಳಿಗೂ ಇರುವ ಪರಸ್ಪರಸಂಬಂಧ ಇವನ್ನು ಕೂಲಂಕಷವಾಗಿ ಪರಿಶೀಲಿಸಿದಲ್ಲಿ, ಅವು ರೂಪತಾಳಿದ ವಿಧಾನವನ್ನು ಮತ್ತು ಶಿಲಾದ್ರವ ಆರಿ ತಣ್ಣಗಾದ ಕ್ರಮವನ್ನು ಅರಿತುಕೊಳ್ಳಬಹುದು. ಈ ದೃಷ್ಟಿಯಿಂದ ಶಿಲಾರೂಪದ ಸೀಳುಗಳು, ಛಿದ್ರಗಳು ಮತ್ತು ಕೆಲವು ಖನಿಜಗಳ ನಿರ್ದಿಷ್ಟರಚನೆ ಮತ್ತು ರೇಖಾರಚನೆಗಳು ಬಹು ಮುಖ್ಯವಾದುವು. ಇವುಗಳ ಪ್ರಾಮುಖ್ಯವನ್ನು ಮೊದಲ ಬಾರಿಗೆ ಗಮನಿಸಿದವನೆಂದರೆ ಜರ್ಮನಿಯ ಖ್ಯಾತ ಭೂವಿಜ್ಞಾನಿ ಅರ್ನ್ಸ್ಟ್ ಕ್ಲೂಸ್.
ಶಿಲೆಯ ಹೊರರಚನೆಯಷ್ಟೇ ಮುಖ್ಯವಾದುದು ಒಳರಚನೆ ಅಥವಾ ವಿನ್ಯಾಸ, ಇದು ಶಿಲೆ ಉಂಟಾದ ರೀತಿಯನ್ನೂ ಆಗಿನ ಸನ್ನಿವೇಶವನ್ನೂ ಅರಿತುಕೊಳ್ಳಲು ಬಹು ಸಹಾಯಕ. ವಿನ್ಯಾಸ ಶಿಲೆಯ ಖನಿಜ ಕಣಗಳ ಗಾತ್ರ, ಆಕಾರ, ಸ್ವರೂಪ ಮತ್ತು ವಿವಿಧ ಕಣಗಳಿಗಿರುವ ಪರಸ್ಪರ ಸಂಬಂಧವನ್ನು ಅವಲಂಬಿಸಿದೆ. ಖನಿಜಕಣಗಳು ಸಂಪೂರ್ಣವಾಗಿ ಸ್ಫುಟಗೊಂಡಲ್ಲಿ ಪೂರ್ಣಸ್ಫಟಿಕಾಕೃತಿಯುಳ್ಳ ರಚನೆ (ಹಾಲೊಕ್ರಿಸ್ಟಲೈನ್-) ಅಸ್ಫುಟಗೊಂಡಲ್ಲಿ ಅಪೂರ್ಣಸ್ಫಟಿಕಾಕೃತಿಯುಳ್ಳ ರಚನೆ (ಹಾಲೊ ಹಯಲೈನ್) ಮಧ್ಯವರ್ತಿಯಾಗಿದ್ದಲ್ಲಿ ಅರ್ಧಸ್ಫಟಿಕಾಕೃತಿಯುಳ್ಳ ರಚನೆ (ಹೆಮಿಕ್ರಿಸ್ಟಲೈನ್) ಎಂದೂ ಹೇಳಲಾಗುತ್ತದೆ.
ಖನಿಜಗಳ ರಚನೆ ಅತಿಸೂಕ್ಷ್ಮವಾಗಿದ್ದಲ್ಲಿ ಅಥವಾ ಶಿಲೆ ಮುದ್ದೆಯಾಗಿದ್ದು ಅಸ್ಪಷ್ಟ ವಿನ್ಯಾಸವಿದ್ದಲ್ಲಿ ಮೂಲಭೂತವಾದ ಶಿಲಾದ್ರವ ಬಹುತೀವ್ರಗತಿಯಲ್ಲಿ ಆರಿ ತಣ್ಣಗಾಯಿತೆಂದೂ ಕಣಗಳು ದಪ್ಪನಾಗಿದ್ದು ರಚನೆ ಒರಟಾಗಿದ್ದಲ್ಲಿ ಶಿಲಾದ್ರವ ನಿಧಾನವಾಗಿ ಆರುತ್ತ ಬಂದಿತೆಂದೂ ಹೇಳಬಹುದು.
ಭೂಮಿಯ ಮೇಲೆ ವಿವಿಧ ರೀತಿಯ ಶಿಲೆಗಳಿವೆಯಾದರೂ ಸಾಮಾನ್ಯವಾಗಿ ಒಂದರಂತೆ ಮತ್ತೊಂದು ಇಲ್ಲ. ವಿನ್ಯಾಸದಲ್ಲೂ ಖನಿಜ ಮತ್ತು ರಾಸಾಯನಿಕ ಸಂಯೋಜನೆಯಲ್ಲೂ ಒಂದರಿಂದ ಮತ್ತೊಂದಕ್ಕೆ ಅನೇಕ ಸ್ಪಷ್ಟ ವ್ಯತ್ಯಾಸಗಳು ಕಂಡುಬರುತ್ತವೆ. ಈ ಕಾರಣ ವೈಜ್ಞಾನಿಕ ರೀತಿಯಲ್ಲಿ ಇವುಗಳನ್ನು ಅಧ್ಯಯನ ಮಾಡಲು ಶಿಲೆಗಳನ್ನು ನಾನಾ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗೆ ಮಾಡದ ಹೊರತು ಅವುಗಳ ವಿವರವಾದ ಅಭ್ಯಾಸ ಸುಗಮವಾಗುವುದಿಲ್ಲ.[5] ಆದರೆ ವರ್ಗೀಕರಣ ಅಷ್ಟು ಸುಲಭಸಾಧ್ಯವಲ್ಲ. ಭೂವಿಜ್ಞಾನದಲ್ಲಿ ಹತ್ತಾರು ಬಗೆಯ ಶಿಲಾವರ್ಗೀಕರಣಗಳನ್ನು ಕಾಣಬಹುದು. ಇವುಗಳಲ್ಲಿ ಮುಖ್ಯವಾದುವು;
ಇದು ವಿವರವಾದ ಶಿಲಾಧ್ಯಯನಕ್ಕೆ ಬಹು ಸಹಕಾರಿ. ಕಾರಣ ಸೂಕ್ಷ್ಮದರ್ಶಕ ಯಂತ್ರ ಮತ್ತು ಇತರ ಉಪಕರಣಗಳ ಸಹಾಯದಿಂದ ಶಿಲೆಯ ಖನಿಜಗಳನ್ನು ವಿವರವಾಗಿ ಅಭ್ಯಸಿಸಬಹುದು. ವಿವಿಧ ಖನಿಜಗಳ ಒಟ್ಟುಗೂಡುವಿಕೆಯಿಂದ ಆದುದೇ ಶಿಲೆ ಎಂಬುದನ್ನು ಮಾತ್ರ ನಾವು ಇಲ್ಲಿ ಮರೆಯಬಾರದು. ಶಿಲೆಯ ಖನಿಜಗಳನ್ನು ಅವಶ್ಯಕ ಅಥವಾ ಪ್ರಧಾನ ಖನಿಜಗಳು, ಸಹಾಯಕ ಅಥವಾ ಅನಾವಶ್ಯಕ ಖನಿಜಗಳು ಮತ್ತು ಗೌಣ ಖನಿಜಗಳೆಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಮೊದಲೆರಡು ಗುಂಪಿನವು ಶಿಲಾದ್ರವದ ನೇರ ಆರುವಿಕೆಯಿಂದ ಉಂಟಾದುವು. ಈ ಕಾರಣದಿಂದ ಇವಕ್ಕೆ ಮೂಲಖನಿಜಗಳೆಂದು ಹೆಸರಿಡಲಾಗಿದೆ. ಮೂರನೆಯ ಗುಂಪಿನವು ಮೂಲಖನಿಜಗಳು, ಶಿಥಿಲೀಕರಣಕ್ಕೋ ಅಥವಾ ರೂಪಾಂತರಕ್ಕೋ ಒಳಗಾದಾಗ ಉಂಟಾದವು. ಹಲವು ವೇಳೆ ಖನಿಜಪೂರಿತ ದ್ರವಗಳ ಚಟುವಟಿಕೆಯೂ ಇವುಗಳಿಗೆ ಕಾರಣವಾಗಬಹುದು. ಶಿಲೆಗಳ ವರ್ಗೀಕರಣದಲ್ಲಿ ಮೂಲಖನಿಜಗಳು ಬಹುಮುಖ್ಯ. ಇತರವು ಗೌಣ. ಮೂಲ ಖನಿಜಗಳನ್ನನುಸರಿಸಿಯೇ ಶಿಲೆಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಉದಾಹರಣೆಗೆ: ಕ್ವಾಟ್ರ್ಸ್ ಫೆಲ್ಸ್ಫಾರ್ಗಳ ಜೊತೆಯಲ್ಲಿ ಕಾಗೆಬಂಗಾರ (ಮೈಕ) ಅಥವಾ ಹಾರ್ನ್ಬ್ಲೆಂಡ್ ಇದ್ದಲ್ಲಿ ಆ ಶಿಲೆ ಗ್ರಾನೈಟ್ ಎನಿಸುತ್ತದೆ. ಇವುಗಳೊಡನೆ ಸ್ಫೀನ್, ಅಪೆಟೈಟ್, ಜಿರ್ಕಾನ್ ಮುಂತಾದ ಸಹಾಯಕ ಖನಿಜಗಳೂ ಕ್ಲೋರೈಟ್, ಮ್ಯಾಗ್ನಟೈಟ್ ಮುಂತಾದ ಆನುಷಂಗಿಕ ಖನಿಜಗಳೂ ಇರಬಹುದು; ಅಥವಾ ಇಲ್ಲದಿದ್ದರೂ ಇರಬಹುದು. ಅಂದರೆ ಶಿಲೆಯನ್ನು ಹೆಸರಿಸಲು ಇವುಗಳ ಪಾತ್ರ ಗೌಣ. ಅವಶ್ಯಕ ಖನಿಜಗಳಲ್ಲಿ ಯಾವುದಾದರೊಂದಿಲ್ಲದಿದ್ದರೂ ಅದು ಗ್ರಾನೈಟ್ ಆಗಲಾರದು. ಉದಾಹರಣೆಗೆ ಕ್ವಾಟ್ರ್ಸ್ ಇಲ್ಲದಿದ್ದರೆ ಅದೇ ಶಿಲೆ ಸಯನೈಟ್ ಶಿಲೆ ಎನಿಸುತ್ತದೆ.
ಶಿಲೆಗಳ ಉತ್ಪತ್ತಿಯನ್ನು ವಿವೇಚಿಸಲು ಈ ಬಗೆಯ ವರ್ಗೀಕರಣ ಬಹುಸಹಾಯಕ. ಒಂದೇ ತೆರನಾದ ಮಾತೃ ಶಿಲಾದ್ರವದಿಂದ ಮೈವೆತ್ತ ಶಿಲೆಗಳು ತಮ್ಮ ವಿನ್ಯಾಸದಲ್ಲಿ ಮತ್ತು ಖನಿಜ ಸಂಯೋಜನೆಯಲ್ಲಿ ಭಿನ್ನಭಿನ್ನವಾಗಿ ಕಂಡರೂ ಅವುಗಳ ರಾಸಾಯನಿಕ ಸಂಯೋಜನೆಯಲ್ಲಿ ಈ ಬಗೆಯ ಭೇದಭಾವಗಳು ಬರಲಾರವು.
ಅಗ್ನಿಶಿಲೆಯನ್ನು ರಾಸಾಯನಿಕವಾಗಿ ವಿಭಜಿಸಿ ಅದರ ಸಂಯೋಜನೆಯನ್ನು 13 ಅಥವಾ 14 ಮುಖ್ಯ ಆಕ್ಸೈಡುಗಳ ರೂಪದಲ್ಲಿ ನಿಯೋಜಿಸಲಾಗುವುದು. ಇವುಗಳ ಒಟ್ಟು ಮೊತ್ತ 100. ಹೀಗೆ ನಿರ್ಧರಿಸಿದ ಆಕ್ಸೈಡುಗಳನ್ನು ಮತ್ತೆ ವಿವಿಧ ಪ್ರಮಾಣದಲ್ಲಿ ಸಂಯೋಜಿಸಿ ಬಂದ ಅಂಕಿಅಂಶಗಳ ಆಧಾರದ ಮೇಲೆ ಅಗ್ನಿಶಿಲೆಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಇಂದಿಗೂ ಈ ಬಗೆಯ ವರ್ಗೀಕರಣ, ಶಿಲೆಗಳು ನಿರ್ಮಾಣವಾದ ರೀತಿಯನ್ನು ವಿವೇಚಿಸುವುದರಲ್ಲಿ ಬಹು ಸಹಾಯಕವಾಗಿದೆ.
ಇದು ಶಿಲೆಗಳ ಆಕಾರ, ರಚನೆ, ವಿನ್ಯಾಸ ಮತ್ತು ಅವು ತೋರಿಬರುವ ರೀತಿಯನ್ನನುಸರಿಸಿದೆ. ಶಿಲಾದ್ರವ ಆರಿ ಹೆಪ್ಪುಗಟ್ಟಿದ ವಿಧಾನಕ್ಕನುಸಾರವಾಗಿ ಶಿಲೆಗಳ ಆಕಾರ, ರಚನೆ ಬೇರೆ ಬೇರೆಯಾಗುತ್ತವೆ. ಹೆಚ್ಚು ಆಳದಲ್ಲಿರುವ ಶಿಲಾದ್ರವ ಬಹು ಮಂದಗತಿಯಲ್ಲಿ ಆರಿ ಹೆಪ್ಪುಗಟ್ಟುವ ಕಾರಣ ಅದರ ಹೊರಮೈ ರಚನೆ ವಿನ್ಯಾಸ ಒಂದು ತೆರನಾಗಿದ್ದರೆ ಅದೇ ಶಿಲಾದ್ರವ ಕೂಪ ಅಥವಾ ಬಿರುಕುಗಳ ಮೂಲಕ ನೆಲದ ಮೇಲೆ ಶೀಘ್ರಗತಿಯಲ್ಲಿ ಆರಿ ಹೆಪ್ಪುಗಟ್ಟಿದಾಗ ತಲೆದೋರುವ ಲಕ್ಷಣ, ವಿನ್ಯಾಸಗಳೇ ಬೇರೆ ತೆರನಾಗಿರುತ್ತವೆ. ಒಂದಕ್ಕೊಂದು ಅಷ್ಟೂ ಅಷ್ಟು ಭಿನ್ನ. ಅಲ್ಲದೆ ಇವೆರಡರ ಮಧ್ಯೆ ಅಂತರಾಳದಲ್ಲಿ ಆರಿ ತಣ್ಣಗಾದಾಗ ಉಂಟಾಗುವ ಲಕ್ಷಣ, ವಿನ್ಯಾಸಗಳೇ ಬೇರೆ. ಇದನ್ನು ಉಪಯೋಗಿಸಿಕೊಂಡು ಪಾತಾಳದಲ್ಲಿ ಉಂಟಾದ ಶಿಲೆಗಳನ್ನು ಅಂತರ್ಗತಶಿಲೆ ಅಥವಾ ಪ್ಲುಟಾನಿಕ್ ಶಿಲೆ ಎಂದೂ, ಅಂತರಾಳದಲ್ಲಿ ಉಂಟಾದುವನ್ನು ಮಧ್ಯಸ್ಥಶಿಲೆ ಅಥವಾ ಹೈಪಬಿಸಲ್ ಶಿಲೆ ಎಂದೂ ಮತ್ತು ನೆಲದ ಮೇಲೆ ಉಂಟಾದುವನ್ನು ಬಹಿರ್ಗತಶಿಲೆ ಅಥವಾ ವಲ್ಕ್ಯಾನಿಕ್ ಶಿಲೆ ಎಂದೂ ಮೂರು ಗುಂಪುಗಳಾಗಿ ಗುರುತಿಸಲಾಗಿದೆ. ಅಂತರ್ಗತ ಶಿಲೆಗಳು ಸಮಕಣ ವಿನ್ಯಾಸವನ್ನೂ ಮಧ್ಯಸ್ಥಶಿಲೆಗಳು ಅಸಮಕನ ವಿನ್ಯಾಸವನ್ನೂ ಬಹಿರ್ಗತಶಿಲೆ ಅಸ್ಪಷ್ಟ ಅಥವಾ ಪ್ರವಾಹ ವಿನ್ಯಾಸವನ್ನೂ ಸೂಚಿಸುತ್ತದೆ. ಹೀಗೆ ವಿನ್ಯಾಸವನ್ನೇ ಆಧಾರವಾಗಿಟ್ಟುಕೊಂಡು ಶಿಲೆಗಳನ್ನು ವರ್ಗೀಕರಿಸಲಾಗಿದೆ.
ಟಿರೆಲ್ ಅವರು ಮೇಲೆ ವಿವರಿಸಿರುವ ಮುಖ್ಯಗುಣಗಳ ಆಧಾರದ ಮೇಲೆ ಅಗ್ನಿಶಿಲೆಗಳನ್ನು ಹೀಗೆ ವರ್ಗೀಕರಿಸಿದ್ದಾರೆ.
ಒಂದು ಪ್ರದೇಶದಲ್ಲಿ ನಾನಾ ಬಗೆಯ ಅಗ್ನಿಶಿಲೆಗಳು ಕಂಡುಬಂದರೂ ವಿವರವಾಗಿ ಅವನ್ನು ಅಭ್ಯಾಸ ಮಾಡಿದಲ್ಲಿ ಎಲ್ಲವೂ ಪರಸ್ಪರ ಸಂಬಂಧವನ್ನು ಸೂಚಿಸುತ್ತ ಒಂದೇ ಮಾತೃಶಿಲಾದ್ರವದಿಂದ ವಿವಿಧ ಘಟ್ಟಗಳಲ್ಲಿ ಹೊರಬಂದುವೆಂದು ಸ್ಪಷ್ಟವಾಗುತ್ತದೆ. ಈ ಮಾತೃಶಿಲಾದ್ರವವನ್ನು ಮೂಲ ಬೆಸಾಲ್ಟ್ ಎಂದು ಅನೇಕ ಭೂವಿಜ್ಞಾನಿಗಳು ಪರಿಗಣಿಸಿದ್ದಾರೆ. ಆದರೆ ಹಲವರ ಅಭಿಮತದಂತೆ ಒಂದಕ್ಕೆ ಬದಲಾಗಿ ಎರಡು ಮಾತೃಶಿಲಾದ್ರವಗಳೇ ಇವೆಯೆಂದೂ ನಂಬಲಾಗಿದೆ. ಒಟ್ಟಿನಲ್ಲಿ ಮಾತೃಶಿಲಾದ್ರವ ಆರುವಾಗ ವಿವಿಧ ಘಟ್ಟಗಳಲ್ಲಿ ವಿಧವಿಧವಾದ ಶಿಲೆಗಳು ಉತ್ಪನ್ನವಾದುವೆಂದು ನಿರ್ಧರಿಸಲಾಗಿದೆ. ಹೀಗಾದಾಗ ಮೊದಲು ಕಾಣಿಸಿಕೊಂಡವು ಪ್ರತ್ಯಾಮ್ಲ (ಬೇಸಿಕ್) ಶಿಲೆಗಳು, ಕೊನೆಯಲ್ಲಿ ಬಂದವು ಆಮ್ಲಶಿಲೆ ಅಥವಾ ಆಮ್ಲೀಯಶಿಲೆಗಳು ಇವೆರಡರ ಮಧ್ಯೆ ರೂಪ ತಾಳಿದವು ಬಗೆಬಗೆಯ ಮಧ್ಯವರ್ತಿಶಿಲೆಗಳು. ಈ ಪ್ರಕ್ರಿಯೆಯನ್ನೇ ವಿಭೇದೀಕರಣ ಎಂದು ಕರೆಯಲಾಗಿದೆ.
ಮತ್ತೆ ಕೆಲವರ ಅಭಿಪ್ರಾಯದಂತೆ ಮಾತೃಶಿಲಾದ್ರವ ಪ್ರವಹಿಸುವಾಗ ತನ್ನ ದಾರಿಗೆ ಅಡ್ಡಬಂದ ಸುಣ್ಣಶಿಲೆ, ಜೇಡುಶಿಲೆ ಮುಂತಾದ ಅನ್ಯಶಿಲೆಗಳನ್ನು ತನ್ನಲ್ಲಿ ಹೆಚ್ಚು ಶಾಖವಿರುವ ಕಾರಣ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಅದರ ರಾಸಾಯನಿಕ ಸಂಯೋಜನೆಯಲ್ಲಿ ತೀವ್ರ ಬದಲಾವಣೆಗಳುಂಟಾಗಿ ಹೊಸಶಿಲೆಗಳು ತಲೆದೋರುತ್ತವೆ. ಸುಣ್ಣಶಿಲೆಯನ್ನು ಜೀರ್ಣಿಸಿಕೊಂಡಲ್ಲಿ ಆಲ್ಕಲೈನ್ ಶಿಲೆಯೂ ಜೇಡುಶಿಲೆಯನ್ನು ಅರಗಿಸಿಕೊಂಡಲ್ಲಿ ನೋರೈಟ್ಶಿಲೆಯೂ ಉಂಟಾಗುವುದೆಂದು ಭಾವಿಸಲಾಗಿದೆ. ಇಂಥ ಪ್ರಕ್ರಿಯೆಯನ್ನು ಸಮೀಕರಣ (ಅಸ್ಸಿಮಿಲೇಷನ್) ಎನ್ನುತ್ತಾರೆ.
ಲೋಹ ಖನಿಜಗಳಿಗಂತೂ ಅಗ್ನಿಶಿಲೆಗಳ ತೌರೂರು. ಕಾರಣ ಖನಿಜಗಳಿಗೆ ಮೂಲಭೂತವಾದ ಅದುರು ಮಾತೃದ್ರವ ಮತ್ತು ಮಾತೃಶಿಲಾದ್ರವದ ಅವಿಭಾಜ್ಯ ಅಂಶ. ಅಗ್ನಿಶಿಲೆಗಳಲ್ಲಿ ದೊರೆಯುವ ಮುಖ್ಯವಾದ ಲೋಹಗಳು ಇವು-ಚಿನ್ನ, ತಾಮ್ರ, ತವರ, ಕ್ರೋಮಿಯಂ, ಟೈಟೇನಿಯಂ, ಕಬ್ಬಿಣ, ನಿಕ್ಕಲ್, ಇವೇ ಅಲ್ಲದೆ ಇತರ ಖನಿಜಗಳಾದ ಅಭ್ರಕ, ಕುರಂದದಕಲ್ಲು (ಕೋರಂಡಂ), ಜಿರ್ಕಾನ್, ವಜ್ರ, ಮಾನಜೈಟ್, ಕೊಲಂಬೈಟ್, ಸಾಮರ್ಸ್ಕೈಟ್, ಯುರೇನಿಯಂ ಮತ್ತು ಥೋರಿಯಂಗಳೂ ಸಿಕ್ಕುತ್ತವೆ.
ಇವು ಧಾರವಾಡ ಶಿಲಾಸಮೂಹದೊಡನೆ ಬೆರೆತಿರುವ ರಯೋಲೈಟ್, ಬೆಸಾಲ್ಟ್ ಮುಂತಾದ ಬಹಿಸ್ಸರಣ ಶಿಲೆಗಳು. ಇವು ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುವ ಧಾರವಾಡ ಶಿಲಾಸಮುದಾಯದಲ್ಲಿ ಕಂಡುಬರುತ್ತವೆ. ಇವಲ್ಲದೆ ಕ್ಲೋಸ್ಪೇಟೆ ಗ್ರಾನೈಟ್, ಚಾರ್ನಕೈಟ್ ಮೊದಲಾದ ಅಂತಸ್ಸರಣಶಿಲೆಗಳೂ ಇವೆ. ಇವು ಬೆಟ್ಟ ಗುಡ್ಡಗಳೋಪಾದಿಯಲ್ಲಿ ಧಾರವಾಡ ಶಿಲಾಸಮುದಾಯ ಮತ್ತು ನೈಸ್ಶಿಲಾಸ್ತೋಮದಿಂದ ಹೊರಬಂದಂತೆ ಕಾಣುತ್ತವೆ. ಗ್ರಾನೈಟ್ ಬೆಟ್ಟ ಗುಡ್ಡಗಳು ಕ್ಲೋಸ್ಪೇಟೆ (ರಾಮನಗರ), ತುಮಕೂರು, ಮೊಳಕಾಲ್ಮೂರು, ಬಳ್ಳಾರಿ ಈ ಪ್ರಾಂತ್ಯಗಳಲ್ಲೆಲ್ಲ ಕಂಡುಬರುತ್ತವೆ. ಚಾರ್ನಕೈಟ್ ಬೆಟ್ಟಗಳು ನಮ್ಮ ನಾಡಿನ ದಕ್ಷಿಣ ವಲಯದ ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಶಿವಸಮುದ್ರದ ಪ್ರದೇಶಗಳಲ್ಲಿ ಹರಡಿವೆ. ಇವೆಲ್ಲವೂ ಅರ್ಷೇಯಕಲ್ಪಕ್ಕೆ ಸೇರಿದವು. ಈ ಶಿಲಾಸಮೂಹವನ್ನು ಛೇದಿಸಿರುವ ನೂರಾರು ಒಡ್ಡುಗಳು (ಡೈಕ್ಸ್) ಈ ನಾಡಿನ ಅನೇಕ ಭಾಗಗಳಲ್ಲಿ ಕಾಣಬಂದಿವೆ. ಉತ್ತರ ಭಾಗದಲ್ಲಿ ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಧ್ಯಕಲ್ಪಕ್ಕೆ ಸೇರಿದ ಬೆಸಾಲ್ಟ್ ಎಂಬ ಬಹಿಸ್ಸರಣಶಿಲೆಯ ಬೆಟ್ಟಗುಡ್ಡಗಳನ್ನು ಗುರುತಿಸಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.