From Wikipedia, the free encyclopedia
ವೈದಿಕ ಯುಗ (ಅಥವಾ ವೈದಿಕ ಕಾಲ) ಹಿಂದೂ ಧರ್ಮದ ಅತ್ಯಂತ ಹಳೆಯ ಧರ್ಮಗ್ರಂಥಗಳಾದ ವೇದಗಳ ರಚನೆಯಾದ ಇತಿಹಾಸದಲ್ಲಿನ ಕಾಲವಾಗಿತ್ತು. ಈ ಯುಗದ ಕಾಲಾವಧಿ ಅನಿಶ್ಚಿತವಾಗಿದೆ. ವೇದಗಳಲ್ಲಿ ಅತಿ ಹಳೆಯದಾದ ಋಗ್ವೇದವು, ಆರಂಭಿಕ ವೈದಿಕ ಯುಗ ಎಂದೂ ನಿರ್ದೇಶಿಸಲಾಗುವ, ಸರಿಸುಮಾರು ಕ್ರಿ.ಪೂ. ೧೭೦೦ ಮತ್ತು ೧೧೦೦ರ ನಡುವೆ ರಚಿಸಲ್ಪಟ್ಟಿತು ಎಂದು ಬರಹದರಿಮೆಯ ಹಾಗು ಭಾಷಾಶಾಸ್ತ್ರ ಸಾಕ್ಷ್ಯಾಧಾರ ಸೂಚಿಸುತ್ತದೆ.[1][2]
ಭೌಗೋಳಿಕ ವ್ಯಾಪ್ತಿ | ದಕ್ಷಿಣ ಏಷ್ಯಾ |
---|---|
ಕಾಲ | ಕಬ್ಬಿಣ ಯುಗ |
ಅವಧಿಗಳು | ಕ್ರಿ.ಪೂ. 1500 - 500 |
ಇದಕ್ಕಿಂತ ಮೊದಲು | ಸಿಂಧೂ ತಟದ ನಾಗರೀಕತೆ |
ಇದಾದ ನಂತರ | ಬೃಹದ್ರಥಸ್ ರಾಜವಂಶ, ಹರ್ಯಂಕ ರಾಜವಂಶ, ಮಹಾಜನಪದಗಳು |
ವೈದಿಕ ಕಾಲದ ಮುಂಚಿನ ಭಾಗದಲ್ಲಿ ಇಂಡೋ-ಆರ್ಯರು ಉತ್ತರ ಭಾರತದಲ್ಲಿ ನೆಲೆಸಿದರು, ತಮ್ಮ ಜೊತೆಗೆ ನಿರ್ದಿಷ್ಟ ಧಾರ್ಮಿಕ ಸಂಪ್ರದಾಯಗಳನ್ನು ತಂದರು. ಸಂಬಂಧಿತ ಸಂಸ್ಕೃತಿಯು ಆರಂಭದಲ್ಲಿ ಭಾರತೀಯ ಉಪಖಂಡದ ವಾಯವ್ಯ ಭಾಗಗಳಲ್ಲಿ ಕೇಂದ್ರಿತವಾದ ಒಂದು ಬುಡಕಟ್ಟು, ಗ್ರಾಮೀಣ ಸಮಾಜವಾಗಿತ್ತು; ಇದು ಕ್ರಿ.ಪೂ. ೧೨೦೦ ರ ನಂತರ ಗಂಗಾ ಬಯಲಿಗೆ ಹರಡಿತು, ಏಕೆಂದರೆ ಹೆಚ್ಚುತ್ತಿರುವ ಸ್ಥಿರ ಕೃಷಿ, ನಾಲ್ಕು ಸಾಮಾಜಿಕ ವರ್ಗಗಳ ಶ್ರೇಣಿ, ಮತ್ತು ರಾಜಪ್ರಭುತ್ವ, ರಾಜ್ಯಮಟ್ಟದ ವ್ಯವಸ್ಥೆಗಳ ಹೊರಹೊಮ್ಮುವಿಕೆಯಿಂದ ಆಕಾರತಾಳಿತು. ವಿದ್ವಾಂಸರು ವೈದಿಕ ನಾಗರೀಕತೆಯನ್ನು ಇಂಡೋ-ಆರ್ಯನ್ ಮತ್ತು ಹರಪ್ಪನ್ ಸಂಸ್ಕೃತಿಗಳ ಮಿಶ್ರಣವೆಂದು ಪರಿಗಣಿಸುತ್ತಾರೆ.
ವೈದಿಕ ಕಾಲದ ಅಂತ್ಯವು ದೊಡ್ಡ, ನಗರೀಕೃತ ರಾಜ್ಯಗಳು, ಜೊತೆಗೆ ವೈದಿಕ ಸಂಪ್ರದಾಯಬದ್ಧತೆಗೆ ಸವಾಲೊಡ್ಡಿದ ಶ್ರಮಣ ಚಳುವಳಿಗಳ (ಜೈನ ಧರ್ಮ ಮತ್ತು ಬೌದ್ಧ ಧರ್ಮವನ್ನು ಒಳಗೊಂಡಂತೆ) ಉಗಮಕ್ಕೆ ಸಾಕ್ಷಿಯಾಯಿತು. ಕ್ರಿಸ್ತ ಶಕದ ಆರಂಭದ ಸುಮಾರು, ವೈದಿಕ ಸಂಪ್ರದಾಯವು ಹಿಂದೂ ಸಮನ್ವಯದ ಮುಖ್ಯ ಘಟಕಗಳಲ್ಲಿ ಒಂದೆನಿಸಿತು.
ಪೂರ್ವ ವೈದಿಕ ಯುಗದ ಸಾಮಾನ್ಯವಾಗಿ ಪ್ರಸ್ತಾಪಿಸಲಾದ ಕಾಲಾವಧಿ ಕ್ರಿ.ಪೂ. ೨ನೇ ಸಹಸ್ರಮಾನ. ಕ್ರಿ.ಪೂ. ೧೯೦೦ರಲ್ಲಿ ಕೊನೆಗೊಂಡ ಸಿಂಧೂತಟದ ನಾಗರೀಕತೆಯ ಪತನದ ನಂತರ, ಇಂಡೋ-ಆರ್ಯ ಜನರ ಗುಂಪುಗಳು ವಾಯವ್ಯ ಭಾರತಕ್ಕೆ ವಲಸೆ ಬಂದು ಉತ್ತರ ಸಿಂಧೂ ಕಣಿವೆಯಲ್ಲಿ ನೆಲೆಸಲು ಆರಂಭಿಸಿದರು.
ಆರ್ಯರ ಬಗ್ಗೆ ಜ್ಞಾನ ಬಹುತೇಕವಾಗಿ ಋಗ್ವೇದ ಸಂಹಿತಾದಿಂದ ಬರುತ್ತದೆ. ಇದರ ರಚನೆ ಕ್ರಿ.ಪೂ. ೧೫೦೦-೧೨೦೦ ನಡುವೆ ಆಯಿತು. ತಮ್ಮ ಜೊತೆ ಅವರು ತಮ್ಮ ವಿಶಿಷ್ಟ ಧಾರ್ಮಿಕ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ತಂದರು. ಪೂರ್ವ ಶಾಸ್ತ್ರೀಯ ಯುಗದ ವೈದಿಕ ನಂಬಿಕೆಗಳು ಮತ್ತು ಆಚರಣೆಗಳು ಊಹಿಸಲಾದ ಪ್ರೋಟೊ ಇಂಡೊ-ಯೂರೋಪಿಯನ್ ಧರ್ಮ ಹಾಗೂ ಇಂಡೊ-ಇರಾನಿಯನ್ ಧರ್ಮಕ್ಕೆ ನಿಕಟವಾಗಿ ಸಂಬಂಧಿಸಿದ್ದವು. ಹಳೆಯ ಭಾರತೀಯ ಧರ್ಮವು ಇಂಡೊ-ಯೂರೋಪಿಯನ್ ವಲಸಿಗರಲ್ಲಿ ಸಂಭಾವ್ಯವಾಗಿ ಜ಼ೇರಶ್ವಾನ್ ನದಿ (ಇಂದಿನ ಉಜ಼್ಬೇಕಿಸ್ತಾನ್) ಮತ್ತು (ಇಂದಿನ) ಇರಾನ್ನ ನಡುವಿನ ಸಂಪರ್ಕ ವಲಯದಲ್ಲಿ ಹೊರಹೊಮ್ಮಿತು. ಕನಿಷ್ಠಪಕ್ಷ ೩೮೩ ಇಂಡೋ-ಐರೋಪ್ಯೇತರ ಶಬ್ದಗಳು ಈ ಸಂಸ್ಕೃತಿಯಿಂದ ಎರವಲು ಪಡೆದದ್ದಾಗಿವೆ, ಇಂದ್ರ ಮತ್ತು ಧಾರ್ಮಿಕ ಪಾನೀಯವಾದ ಸೋಮ ಸೇರಿದಂತೆ. ಇಂದ್ರನು ಋಗ್ವೇದದ ೨೫೦ ಸ್ತೋತ್ರಗಳ ವಿಷಯವಸ್ತುವಾಗಿದ್ದಾನೆ. ಅವನನ್ನು ಬೇರೆ ಯಾವ ದೇವತೆಗಿಂತಲೂ ಹೆಚ್ಚಾಗಿ ಸೋಮದೊಂದಿಗೆ ಸಂಬಂಧಿಸಲಾಗಿತ್ತು.
ಈ ವಲಸೆಗಳ ಜೊತೆ ಈ ಪ್ರದೇಶದಲ್ಲಿ ಮೊದಲೇ ನೆಲೆಸಿದ್ದ ಜನಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳು ಆಗಿರಬಹುದು. ಋಗ್ವೇದವು ಆರ್ಯರು ಮತ್ತು ದಾಸರು ಹಾಗೂ ದಸ್ಯುಗಳ ನಡುವಿನ ಸಂಘರ್ಷಗಳ ಕಥನವನ್ನು ಹೊಂದಿದೆ. ದಾಸರು ಮತ್ತು ದಸ್ಯುಗಳು ಯಜ್ಞಗಳನ್ನು ಮಾಡದ (ಅಕ್ರತು) ಅಥವಾ ದೇವರ ಆಜ್ಞೆಗಳನ್ನು ಪಾಲಿಸದ (ಅವ್ರತ) ಜನರು ಎಂದು ಋಗ್ವೇದವು ವರ್ಣಿಸುತ್ತದೆ. ಅವರ ಮಾತನ್ನು ಮೃಧ್ರ ಎಂದು ವರ್ಣಿಸಲಾಗಿದೆ, ಇದರ ಅರ್ಥ ನಾನಾ ಬಗೆಯಾಗಿ ಮೃದು, ಒರಟು, ಪ್ರತಿಕೂಲ, ತಿರಸ್ಕಾರದಿಂದ ಕೂಡಿದ ಅಥವಾ ನಿಂದಾತ್ಮಕ ಎಂದು ಆಗಿರಬಹುದು. ದಾಸರು ಮತ್ತು ದಸ್ಯುಗಳು ವೈದಿಕ ಆರ್ಯರಿಗಿಂತ ಮೊದಲು ಉಪಖಂಡದಲ್ಲಿ ಆಗಮಿಸಿದ ಮುಂಚಿನ ಇಂಡೊ ಆರ್ಯ ವಲಸಿಗರು ಎಂದು ಅನೇಕ ಆಧುನಿಕ ವಿದ್ವಾಂಸರು ನಂಬುತ್ತಾರೆ.
ವೈದಿಕ ಆರ್ಯರ ವಿವಿಧ ಬುಡಕಟ್ಟುಗಳ ನಡುವಿನ ಅನ್ಯೋನ್ಯ ಮಾರಕ ಸೇನಾ ಸಂಘರ್ಷಗಳನ್ನೂ ಋಗ್ವೇದದಲ್ಲಿ ವರ್ಣಿಸಲಾಗಿದೆ. ಅಂತಹ ಸಂಘರ್ಷಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ದಾಶರಾಜ್ಞ ಯುದ್ಧ. ಈ ಯುದ್ಧವು ಪರುಷ್ಣಿ ನದಿ (ಇಂದಿನ ರಾವಿ) ತೀರದಲ್ಲಿ ನಡೆಯಿತು. ಈ ಯುದ್ಧವು ಸುದಾಸನ ನೇತೃತ್ವದಲ್ಲಿ ಭಾರತ ಬುಡಕಟ್ಟು ಮತ್ತು ಹತ್ತು ಬುಡಕಟ್ಟುಗಳಾದ ಪುರು, ಯದು, ತುರ್ವಶ, ಅನು, ದ್ರುಹ್ಯು, ಅಲೀನ, ಭಾಲನರು, ಪಕ್ಥ, ಶಿವ, ಮತ್ತು ವಿಷಾಣಿನರ ಒಕ್ಕೂಟದ ನಡುವೆ ನಡೆಯಿತು. ಭಾರತರು ಸರಸ್ವತಿ ನದಿಯ ಮೇಲಿನ ಪ್ರದೇಶಗಳ ಸುತ್ತ ವಾಸಿಸುತ್ತಿದ್ದರೆ, ಅವರ ಪಶ್ಚಿಮ ನೆರೆಹೊರೆಯವರಾದ ಪುರುಗಳು ಸರಸ್ವತಿಯ ಕೆಳಗಿನ ಪ್ರದೇಶಗಳ ಉದ್ದಕ್ಕೂ ವಾಸಿಸುತ್ತಿದ್ದರು. ಇತರ ಬುಡಕಟ್ಟುಗಳಿ ಭಾರತರ ವಾಯವ್ಯಕ್ಕೆ ಪಂಜಾಬ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ರಾವಿ ನದಿಯ ನೀರಿನ ವಿಭಜನೆಯು ಯುದ್ಧದ ಒಂದು ಕಾರಣವಾಗಿರಬಹುದು. ಬುಡಕಟ್ಟುಗಳ ಒಕ್ಕೂಟವು ರಾವಿಯ ಒಡ್ಡುಗಳನ್ನು ತೆರೆದು ಭಾರತರನ್ನು ಮುಳುಗಿಸಲು ಪ್ರಯತ್ನಿಸಿತು, ಆದರೂ ಸುದಾಸನು ವಿಜಯಿಯಾದನು. ಪುರುಗಳ ಮುಖಂಡನಾದ ಪುರುಕುತ್ಸನು ಈ ಯುದ್ಧದಲ್ಲಿ ಮೃತನಾದನು ಮತ್ತು ಭಾರತರು ಹಾಗೂ ಪುರುಗಳು ಯುದ್ಧದ ನಂತರ ಕುರು ರಾಜ್ಯ ಎಂಬ ಹೊಸ ಬುಡಕಟ್ಟಾಗಿ ವಿಲೀನಗೊಂಡರು.
ಕ್ರಿ.ಪೂ. ೧೨ನೇ ಶತಮಾನದ ನಂತರ, ಋಗ್ವೇದವು ತನ್ನ ಅಂತಿಮ ರೂಪವನ್ನು ತೆಗೆದುಕೊಂಡಂತೆ ವೈದಿಕ ಸಮಾಜವು ಅರೆ ಅಲೆಮಾರಿ ಜೀವನದಿಂದ ನೆಲೆಯೂರಿದ ಕೃಷಿಗೆ ಪರಿವರ್ತನೆಗೊಂಡಿತು. ವೈದಿಕ ಸಂಸ್ಕೃತಿಯು ಪಶ್ಚಿಮ ಗಂಗಾ ಬಯಲಿಗೆ ವಿಸ್ತರಿಸಿತು. ದಟ್ಟ ಅರಣ್ಯಾವರಣದ ಕಾರಣ ಗಂಗಾ ಬಯಲು ವೈದಿಕ ಬುಡಕಟ್ಟುಗಳಿಗೆ ಗಡಿಯಾಚೆ ಉಳಿದಿತ್ತು. ಕ್ರಿ.ಪೂ. ೧೦೦೦ ರ ನಂತರ,ಬೋಡುದಿಕಿ ಮತ್ತು ನೇಗಿಲುಗಳ ಬಳಕೆ ವ್ಯಾಪಕವಾಯಿತು ಮತ್ತು ಅರಣ್ಯಗಳನ್ನು ಸುಲಭವಾಗಿ ಕಡಿಯಬಹುದಿತ್ತು. ಇದು ವೈದಿಕ ಆರ್ಯರಿಗೆ ಪಶ್ಚಿಮ ಗಂಗಾ ಬಯಲಿನಲ್ಲಿ ನೆಲೆಸಲು ಸಾಧ್ಯವಾಗಿಸಿತು. ಅನೇಕ ಹಳೆ ಬುಡಕಟ್ಟುಗಳು ಒಂದುಗೂಡಿ ದೊಡ್ಡ ರಾಜಕೀಯ ಘಟಕಗಳಾಗಿ ರೂಪಗೊಂಡವು.
ಕ್ರಿ.ಪೂ. ೧೧೦೦ರ ನಂತರ ಇಂಡೊ-ಆರ್ಯರು ಗಂಗಾ ಬಯಲಿಗೆ ವಲಸೆ ಹೋಗಿ ನೆಲೆಗೊಂಡ ರೈತರಾದಾಗ, ವೈದಿಕ ಧರ್ಮ ಮತ್ತಷ್ಟು ಅಭಿವೃದ್ಧಿಗೊಂಡಿತು, ಮತ್ತು ಉತ್ತರ ಭಾರತದ ಸ್ಥಳೀಯ ಸಂಸ್ಕೃತಿಗಳೊಂದಿಗೆ ಇನ್ನಷ್ಟು ಸಮನ್ವಯಗೊಂಡಿತು. ಈ ಅವಧಿಯಲ್ಲಿ ವರ್ಣಾಶ್ರಮ ಪದ್ಧತಿ ಹೊರಹೊಮ್ಮಿತು. ಭಾರತೀಯ ಇತಿಹಾಸದ ಈ ಹಂತದಲ್ಲಿ ಈ ಪದ್ಧತಿಯು ವಿವಿಧ ಸಾಮಾಜಿಕ ವರ್ಗಗಳಲ್ಲಿ ಶ್ರಮ ವಿಭಜನೆಯನ್ನು ಪ್ರತಿಬಿಂಬಿಸುವ ವರ್ಗಗಳ ಒಂದು ಶ್ರೇಣಿ ವ್ಯವಸ್ಥೆಯಾಗಿತ್ತು. ವೈದಿಕ ಕಾಲದ ವರ್ಗಗಳು ನಾಲ್ಕು: ಬ್ರಾಹ್ಮಣ ಪುರೋಹಿತರು ಮತ್ತು ಯೋಧ ಕುಲೀನರು ಮೇಲಿದ್ದರು, ಮುಕ್ತ ಕೃಷಿಕರು ಮತ್ತು ವರ್ತಕರು ಮೂರನೆಯ ವರ್ಗ, ಮತ್ತು ಸೇವಕರು, ಕಾರ್ಮಿಕರು ಮತ್ತು ಕುಶಲಕರ್ಮಿಗಳು, ಅನೇಕರು ಸ್ಥಳೀಯ ಜನರಾಗಿದ್ದರು, ನಾಲ್ಕನೇ ವರ್ಗ. ಈ ಅವಧಿಯಲ್ಲಿ ಕೃಷಿ, ಲೋಹ, ಮತ್ತು ಸರಕು ಉತ್ಪಾದನೆ, ಜೊತೆಗೆ ವ್ಯಾಪಾರ, ಬಹಳವಾಗಿ ವಿಸ್ತರಿಸಿತು, ಮತ್ತು ಮುಂಚಿನ ಉಪನಿಷತ್ತುಗಳು ಹಾಗೂ ಅನೇಕ ಸೂತ್ರಗಳು ಸೇರಿದಂತೆ ನಂತರದ ಹಿಂದೂ ಸಂಸ್ಕೃತಿಗೆ ಪ್ರಧಾನವಾದ ವೈದಿಕ ಯುಗದ ಪಠ್ಯಗಳನ್ನು ಪೂರ್ಣಗೊಳಿಸಲಾಯಿತು.
ಒಂದು ಬೃಹತ್ ಬುಡಕಟ್ಟು ಹಲವಾರು ಬುಡಕಟ್ಟುಗಳೊಂದಿಗೆ ಸೇರಿ ಹೊಸ ಘಟಕವಾಗಿ ಅತ್ಯಂತ ಮುಂಚಿನ ವೈದಿಕ ರಾಜ್ಯವಾದ ಕುರು ರಾಜ್ಯದ ರಚನೆಯಾಯಿತು. ಈ ರಾಜ್ಯವನ್ನು ಆಳಲು ವೈದಿಕ ಸೂಕ್ತಗಳನ್ನು ಸಂಗ್ರಹಿಸಿ ಕೈ ಅಕ್ಷರದಲ್ಲಿ ಪ್ರತಿ ಮಾಡಲಾಯಿತು, ಮತ್ತು ಹೊಸ ಧರ್ಮಾಚರಣೆಗಳನ್ನು ಅಭಿವೃದ್ಧಿಗೊಳಿಸಲಾಯಿತು. ಇವೇ ಈಗಿನ ಸಂಪ್ರದಾಯಬದ್ಧ ಶ್ರೌತ ಕ್ರಿಯಾವಿಧಿಗಳನ್ನು ರೂಪಿಸಿದವು. ರಾಜ ಪರೀಕ್ಷಿತ ಮತ್ತು ಅವನ ಉತ್ತರಾಧಿಕಾರಿ ಜನಮೇಜಯ ಕುರು ರಾಜ್ಯದ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿನ ಇಬ್ಬರು ಪ್ರಮುಖ ವ್ಯಕ್ತಿಗಳು. ಇವರಿಬ್ಬರು ಈ ರಾಜ್ಯವನ್ನು ಕಬ್ಬಿಣ ಯುಗದ ಉತ್ತರ ಭಾರತದ ಪ್ರಬಲ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯಾಗಿ ಮಾರ್ಪಡಿಸಿದರು.
ಈ ಅವಧಿಯಲ್ಲಿ ಉದಯಿಸಿದ ಹೊಸ ಧಾರ್ಮಿಕ ಯಜ್ಞಗಳಲ್ಲಿ ಅಶ್ವಮೇಧ ಯಜ್ಞ ಅತ್ಯಂತ ಸುಪರಿಚಿತವಾದದ್ದು. ಈ ಯಜ್ಞದಲ್ಲಿ ಒಂದು ಪವಿತ್ರೀಕರಿಸಿದ ಕುದುರೆಯನ್ನು ರಾಜ್ಯಗಳನ್ನು ಸಂಚರಿಸಲು ಒಂದು ವರ್ಷ ಮುಕ್ತವಾಗಿ ಬಿಡಲಾಗುತ್ತಿತ್ತು. ಕುದುರೆಯನ್ನು ಆಯ್ದ ಯೋಧರ ಗುಂಪು ಅನುಸರಿಸುತ್ತಿತ್ತು. ಕುದುರೆಯು ಅಲೆದಾಡಿದ ರಾಜ್ಯಗಳು ಮತ್ತು ಪ್ರದೇಶಗಳು ಗೌರವ ಸಲ್ಲಿಸಬೇಕಾಗಿತ್ತು ಅಥವಾ ಕುದುರೆಯು ಸೇರಿದ ರಾಜನೊಂದಿಗೆ ಯುದ್ಧ ಮಾಡಲು ಸಿದ್ಧವಾಗಬೇಕಾಗಿತ್ತು. ಈ ಯುಗದಲ್ಲಿ ಈ ಯಜ್ಞವು ಅಂತರರಾಜ್ಯ ಸಂಬಂಧಗಳ ಮೇಲೆ ಗಣನೀಯ ಒತ್ತಡ ಹಾಕಿತು. ಈ ಅವಧಿಯು ವರ್ಣ ಪದ್ಧತಿಯ ಬಳಕೆಯಿಂದ ಸಾಮಾಜಿಕ ಶ್ರೇಣೀಕರಣದ ಆರಂಭವನ್ನೂ ಕಂಡಿತು. ವರ್ಣ ಪದ್ಧತಿ ಎಂದರೆ ಕ್ಷತ್ರಿಯ, ಬ್ರಾಹ್ಮಣ, ವೈಶ್ಯ ಹಾಗೂ ಶೂದ್ರ ವರ್ಗಗಳಲ್ಲಿ ವೈದಿಕ ಸಮಾಜದ ವಿಭಜನೆ.
ಅವೈದಿಕ ಶಾಲ್ವ ಬುಡಕಟ್ಟಿನಿಂದ ಸೋಲು ಕಂಡ ನಂತರ ಕುರು ರಾಜ್ಯ ಕ್ಷೀಣಿಸಿತು, ಮತ್ತು ವೈದಿಕ ಸಂಸ್ಕೃತಿಯ ರಾಜಕೀಯ ಕೇಂದ್ರ ಪೂರ್ವಕ್ಕೆ ಗಂಗಾ ತೀರದ ಪಾಂಚಾಲ ರಾಜ್ಯದೊಳಗೆ ಸ್ಥಳಾಂತರಗೊಂಡಿತು. ನಂತರ, ಮತ್ತಷ್ಟು ಪೂರ್ವಕ್ಕಿದ್ದ ಇಂದಿನ ಉತ್ತರ ಬಿಹಾರ ಮತ್ತು ಆಗ್ನೇಯ ನೇಪಾಳ ಪ್ರದೇಶದಲ್ಲಿದ್ದ ವಿದೇಹ ರಾಜ್ಯವು ರಾಜಕೀಯ ಕೇಂದ್ರವಾಗಿ ಹೊರಹೊಮ್ಮಿತು. ಇದು ರಾಜ ಜನಕನ ಆಳ್ವಿಕೆಯಲ್ಲಿ ಪ್ರಾಧಾನ್ಯ ಮುಟ್ಟಿತು. ಈ ರಾಜನ ಆಸ್ಥಾನ ಬ್ರಾಹ್ಮಣ ಋಷಿಗಳು ಮತ್ತು ಯಾಜ್ಞವಲ್ಕ್ಯ ಹಾಗೂ ಉದ್ದಾಲಕ ಆರುಣಿಯರಂತಹ ದಾರ್ಶನಿಕರಿಗೆ ಆಶ್ರಯ ನೀಡಿತು.
ಕ್ರಿ.ಪೂ. ೬ನೇ ಶತಮಾನದ ವೇಳೆಗೆ, ರಾಜಕೀಯ ಘಟಕಗಳು ಮಹಾಜನಪದಗಳು ಎಂದು ಕರೆಯಲಾದ ದೊಡ್ಡ ರಾಜ್ಯಗಳಲ್ಲಿ ಏಕೀಕರಣಗೊಂಡವು. ಈ ರಾಜ್ಯಗಳಲ್ಲಿ ನಗರೀಕರಣದ ಪ್ರಕ್ರಿಯೆ ಆರಂಭವಾಗಿತ್ತು ಮತ್ತು ಬಹಳ ದೂರವಿರುವ ಪ್ರದೇಶಗಳ ನಡುವೆಯೂ ವಾಣಿಜ್ಯ ಹಾಗೂ ಪ್ರಯಾಣ ಸುಲಭವಾಯಿತು. ಮಗಧಕ್ಕೆ ಪೂರ್ವದಲ್ಲಿನ ಒಂದು ಸಣ್ಣ ರಾಜ್ಯವಾದ ಮತ್ತು ಆಧುನಿಕ ದಿನದ ಪಶ್ಚಿಮ ಬಂಗಾಳದ ನೆರೆರಾಜ್ಯ ಅಂಗವು ವೈದಿಕ ಸಂಸ್ಕೃತಿಯ ಪೂರ್ವ ಗಡಿಯಾಗಿತ್ತು. ಯಾದವರು ದಕ್ಷಿಣದ ಕಡೆ ವಿಸ್ತರಿಸಿ ಮಥುರಾದಲ್ಲಿ ನೆಲೆಸಿದರು. ಅವರ ರಾಜ್ಯದ ದಕ್ಷಿಣಕ್ಕೆ ವತ್ಸ ರಾಜ್ಯವಿತ್ತು. ವತ್ಸವನ್ನು ಅದರ ರಾಜಧಾನಿ ಕೌಶಾಂಬಿಯಿಂದ ಆಳಲಾಗುತ್ತಿತ್ತು. ನರ್ಮದಾ ನದಿ ಮತ್ತು ವಾಯವ್ಯ ದಖ್ಖನದ ಭಾಗಗಳು ದಕ್ಷಿಣ ಸೀಮೆಯಾಗಿದ್ದವು. ಹೊಸದಾಗಿ ರಚನೆಯಾದ ರಾಜ್ಯಗಳು ಪ್ರಾಬಲ್ಯಕ್ಕಾಗಿ ಹೆಣಗಾಡಿದವು ಮತ್ತು ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸಲು ಆರಂಭಿಸಿದವು.
ವೈದಿಕ ಭಾರತದ ಅಂತ್ಯ ಭಾಷಾ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಂದ ಗುರುತಿಸಲ್ಪಟ್ಟಿದೆ. ಪಾಣಿನಿಯ ವ್ಯಾಕರಣವು ಸೂತ್ರ ಪಠ್ಯಗಳ ಕ್ರೋಢೀಕರಣದಲ್ಲಿ ಅಂತಿಮ ತುದಿಯನ್ನು, ಮತ್ತು ಅದೇ ವೇಳೆಗೆ ಶಾಸ್ತ್ರೀಯ ಸಂಸ್ಕೃತದ ಆರಂಭವನ್ನು ಗುರುತಿಸುತ್ತದೆ. ಕ್ರಿ.ಪೂ. ೬ನೇ ಶತಮಾನದ ಪೂರ್ವಾರ್ಧದಲ್ಲಿ ಮೊದಲನೇ ದಾರ್ಯಸ್ನ ಸಿಂಧೂ ಕಣಿವೆಯ ಮೇಲಿನ ಆಕ್ರಮಣ ಬಾಹ್ಯ ಪ್ರಭಾವದ ಆರಂಭವನ್ನು ಗುರುತಿಸುತ್ತದೆ, ಮತ್ತು ಇಂಡೊ ಗ್ರೀಕರ ರಾಜ್ಯಗಳಲ್ಲಿ ಮುಂದುವರೆಯಿತು. ಏತನ್ಮಧ್ಯೆ, ಭಾರತದೊಳಗೆ, ಶ್ರಮಣ ಚಳುವಳಿಗಳು ವೈದಿಕ ಧರ್ಮಗ್ರಂಥಗಳು ಮತ್ತು ಧರ್ಮಾಚರಣೆಗಳ ಅಧಿಕಾರ ಮತ್ತು ಸಂಪ್ರದಾಯಬದ್ದತೆಗೆ ಸವಾಲು ಒಡ್ಡಿದವು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.