ಉತ್ತರ ಕನ್ನಡ
ಕರ್ನಾಟಕದ ಜಿಲ್ಲೆ / From Wikipedia, the free encyclopedia
ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಈ ಜಿಲ್ಲೆ ಬುಹುತೇಕ ಅರಣ್ಯಪ್ರದೇಶದಿಂದ ಕೂಡಿದೆ. ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "ಯಕ್ಷಗಾನ" ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡಿ ಎಂದು ಕರೆಸಿಕೊಳ್ಳೂವ ಅಂಕೋಲಾ ಕೂಡ ಈ ಜಿಲ್ಲೆಗೆ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩).[1]
ದಿನಕರ ದೇಸಾಯಿಯವರು ಉತ್ತರ ಕನ್ನಡವನ್ನು ವರ್ಣಿಸಿ ಬರೆದಿರುವ ಚುಟುಕ:
ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ