From Wikipedia, the free encyclopedia
ಹುಕ್ಕೇರಿ -ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಚಿಕ್ಕೋಡಿ, ಪೂರ್ವದಲ್ಲಿ ಗೋಕಾಕ, ದಕ್ಷಿಣದಲ್ಲಿ ಬೆಳಗಾಂವಿ ತಾಲ್ಲೂಕುಗಳೂ ಪಶ್ಚಿಮ ಮತ್ತು ದಕ್ಷಿಣದ ಸ್ವಲ್ಪ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯವೂ ಸುತ್ತುವರಿದಿವೆ. ಎರಡು ಪಟ್ಟಣಗಳಿದ್ದು ಒಟ್ಟು 119 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 992.0 ಚ.ಕಿಮೀ. ಜನಸಂಖ್ಯೆ 3,57,127.
Hukkeri
ಹುಕ್ಕೇರಿ | |
---|---|
Town | |
Coordinates: 16.23°N 74.6°E | |
Country | ಭಾರತ |
State | ಕರ್ನಾಟಕ |
District | Belagavi |
Elevation | ೬೩೧ m (೨,೦೭೦ ft) |
Population (2011) | |
• Total | ೨೩,೦೧೦ |
Languages | |
• Official | Kannada |
Time zone | UTC+5:30 (IST) |
PIN | 591309 |
Telephone code | 08333 |
Vehicle registration | KA-49 |
ತಾಲ್ಲೂಕಿನಲ್ಲಿ ಸಹ್ಯಾದ್ರಿ ಶ್ರೇಣಿಯ ಅನೇಕ ಕವಲುಗಳು ಹಬ್ಬಿಕೊಂಡಿವೆ. ಇವನ್ನು ಘಟಪ್ರಭಾ ಶ್ರೇಣಿಗಳೆಂದೂ ಹೇಳುವುದುಂಟು. ಘಟಪ್ರಭಾ ತಾಲ್ಲೂಕಿನ ಮುಖ್ಯನದಿ. ಈ ನದಿ ತಾಲ್ಲೂಕಿನ ಶೆಟ್ಟಿಹಳ್ಳಿಯ ಬಳಿ ದಕ್ಷಿಣದ ಅಂಚಿನಲ್ಲಿ ತಾಲ್ಲೂಕನ್ನು ಮುಟ್ಟಿ ಪೂರ್ವಾಭಿಮುಖವಾಗಿ ಮತ್ತು ತಾಲ್ಲೂಕಿನ ಗಡಿಯಾಗಿ ಸ್ವಲ್ಪ ದೂರ ಹರಿಯುವುದು. ಮುಂದೆ ಮಹಾರಾಷ್ಟ್ರ ಮತ್ತು ಬೆಳಗಾಂವಿ ತಾಲ್ಲೂಕನ್ನು ಬೇರ್ಪಡಿಸಿ ಅನಂತರ ಈ ತಾಲ್ಲೂಕಿನಲ್ಲಿ ಈಶಾನ್ಯಾಭಿಮುಖವಾಗಿ ಹರಿದು ಮುಂದೆ ಗೋಕಾಕ ತಾಲ್ಲೂಕನ್ನು ಸ್ವಲ್ಪ ದೂರ ಪ್ರತ್ಯೇಕಿಸಿ ಅನಂತರ ಗೋಕಾಕ ತಾಲ್ಲೂಕನ್ನು ಪ್ರವೇಶಿಸುವುದು. ಮಾರ್ಕಂಡೇಯ ಮತ್ತು ಹಿರಣ್ಯಕೇಶಿ ಘಟಪ್ರಭಾದ ಉಪನದಿಗಳು. ಹಿಡಕಲ್ಲು ಬಳಿ ಘಟಪ್ರಭಾ ನದಿಗೆ ಒಂದು ದೊಡ್ಡ ಅಣೆಕಟ್ಟನ್ನು ಕಟ್ಟಿ ನೀರಾವರಿಗೆ ಅನುಕೂಲ ಕಲ್ಪಿಸಲಾಗಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 808.19 ಮಿಮೀ.
ಇಲ್ಲಿನ ನೆಲ ವಿಶೇಷವಾಗಿ ಕಪ್ಪು ಮಣ್ಣಿನದು. ಕಬ್ಬು, ತಂಬಾಕು, ಮೆಣಸಿನ ಕಾಯಿ, ನೆಲಗಡಲೆ, ಬತ್ತ ಮತ್ತು ಜೋಳ ಇಲ್ಲಿನ ಮುಖ್ಯ ಬೆಳೆಗಳು. ಇವುಗಳ ಜೊತೆಗೆ ಹತ್ತಿ, ಗೋದಿ, ದ್ವಿದಳ ಧಾನ್ಯ ಮುಂತಾದು ವನ್ನು ಬೆಳೆಯುತ್ತಾರೆ. ಕೃಷಿ ಹಾಗೂ ವ್ಯಾಪಾರ ತಾಲ್ಲೂಕಿನ ಮುಖ್ಯ ಉದ್ಯೋಗಗಳು.
ತಾಲ್ಲೂಕು ಕೈಗಾರಿಕೆಯಲ್ಲೂ ಮುಂದಡಿಯಿಟ್ಟಿದೆ. ಇಲ್ಲಿ ಸಕ್ಕರೆ ಕಾರ್ಖಾನೆಯಿದ್ದು ಸಕ್ಕರೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಸ್ತುಗಳ ತಯಾರಿಕೆಯುಂಟು. ಬೆಲ್ಲ, ಪಾದರಕ್ಷೆ, ಸೇಂಗಾ ಎಣ್ಣೆ, ಅಗರಬತ್ತಿ, ಕಂಬಳಿ ಮುಂತಾದವುಗಳ ತಯಾರಿಕೆಗೆ ಈ ತಾಲ್ಲೂಕು ಹೆಸರಾಗಿದೆ.
ತಾಲ್ಲೂಕಿನ ಪೂರ್ವದಅಂಚಿನಲ್ಲಿ ಸ್ವಲ್ಪ ದೂರ ಬೆಳಗಾಂವಿ-ಮೀರಜ್ ರೈಲು ಮಾರ್ಗ ಹಾದುಹೋಗಿದೆ. ಬೆಳಗಾಂವಿ-ಸಂಕೇಶ್ವರ-ನಿಪ್ಪಾಣಿ, ಬೆಳಗಾಂವಿ ಹುಕ್ಕೇರಿ-ಚಿಕ್ಕೋಡಿ, ನಿಪ್ಪಾಣಿ-ಸಂಕೇಶ್ವರ-ಹುಕ್ಕೇರಿ-ಗೋಕಾಕ ಜಿಲ್ಲಾ ಹೆದ್ದಾರಿಗಳಿದ್ದು ಸುತ್ತಲ ಪಟ್ಟಣ ಮತ್ತು ಗ್ರಾಮಗಳಿಗೆ ಮಾರ್ಗಸಂಪರ್ಕವಿದೆ.
ಹುಕ್ಕೇರಿ 14ನೆಯ ಶತಮಾನದಿಂದ ಇತಿಹಾಸಪ್ರಸಿದ್ಧ. 1327ರಲ್ಲಿ ಮಹಮ್ಮದ್ಬಿನ್ ತುಗಲಕ್ ಇಲ್ಲಿ ಒಬ್ಬ ಅಮೀರನನ್ನು ನೇಮಿಸಿದ್ದ. 1500ರಲ್ಲಿ ಹುಕ್ಕೇರಿ ಹಾಗೂ ಅದರ ಸುತ್ತಲಿನ ಪ್ರದೇಶ ಫತೇಬಹದ್ದೂರ ಎಂಬ ವಾಜಿದಳದ ಸೇನಾ ನಾಯಕನ ಅಧೀನದಲ್ಲಿತ್ತೆಂದೂ 1502ರಲ್ಲಿ ಇದನ್ನು ಬಿಜಾಪುರದ ಸುಲ್ತಾನ ಯುಸೂಫ್ ಆದಿಲ್ಷಾ ತನ್ನ ವಶಕ್ಕೆ ತೆಗೆದುಕೊಂಡನೆಂದೂ ತಿಳಿದುಬರುವುದು. ಈತನ ಕಾಲದಲ್ಲಿಯೆ ಇಲ್ಲಿದ್ದ ಅಧಿಕಾರಿ ಐನ್ ಉಲ್ ಮುಲ್ಕ ಜಿಲಾನಿ ಹುಕ್ಕೇರಿಯ ಕೋಟೆಯನ್ನೂ ಅರಮನೆಯನ್ನೂ ನೀರಿನ ಕಾರಂಜಿಗಳನ್ನೂ ಕಟ್ಟಿಸಿದ. 1542ರಲ್ಲಿ ಈತ ಅಹಮದ್ ನಗರದ ಬುರಾನ್ ನಿಜಾಮ್ಷಾನೊಂದಿಗೆ ಸೇರಿ ಬಿಜಾಪುರದ ಸುಲ್ತಾನನನ್ನು ವಿರೋಧಿಸಿದ. ಆದರೆ ಬುರಾನ್ ಷಾ ಸೋಲಲು ಪುನಃ ಬಿಜಾಪುರದ ಷಾನೊಂದಿಗೆ ಸ್ನೇಹವನ್ನು ಬೆಳೆಸಿದ. ಆಗ ಈತನಿಗೆ ಕಿತ್ತೂರ ಸಂಸ್ಥಾನವನ್ನು ಬಳುವಳಿಯೆಂದು ಕೊಡಲಾಯಿತು. ಐನ್ ಉಲ್ ಮುಲ್ಕನ ತರುವಾಯ ಆತನ ತಮ್ಮ ಫತೇ ಮುಲ್ಕನು ಪಟ್ಟಕ್ಕೆ ಬಂದ. ಇವನ ತರುವಾಯ ಬಿಜಾಪುರದ ರಣದುಲ್ಲಾಖಾನ್ (1569) ಹಾಗೂ ಆತನ ಪುತ್ರ ರುಸ್ತುಮ್ ಜಮಾನ್ (1616) ಹುಕ್ಕೇರಿಗೆ ಅಧಿಕಾರಿಗಳಾಗಿದ್ದರು. ರುಸ್ತುಮ್ ಇಲ್ಲಿನ ಚೀನೀ ಗುಮ್ಮಟವನ್ನೂ ಕದಮ್ ರಸೂಲ್ ಮಸೀದಿಯನ್ನೂ ಕಟ್ಟಿಸಿದ. ರುಸ್ತುಮನ ತರುವಾಯ ಅಬ್ದುಲ್ ಖಾದರ್ ಹುಕ್ಕೇರಿಗೆ ಒಡೆಯನಾದ. ಪನಹಾಲದ ದೊರೆ ಇವನನ್ನು ಅಧಿಕಾರದಿಂದ ಇಳಿಸಿದ. 1643ರಲ್ಲಿ ಈತ ಮರಣಹೊಂದಿದ. 1668-86ರ ವರೆಗೆ ಹುಕ್ಕೇರಿಯನ್ನು ಇಂದುರಾವ್ ಘೋರ್ಪಡೆ ಆಳಿದುದಾಗಿ ತಿಳಿದುಬರುತ್ತದೆ. ಅನಂತರ ಹುಕ್ಕೇರಿ ಒಂದು ದೇಶಗತಿ ಯಾಯಿತು. ಈ ದೇಸಾಯಿಯು ಸಂಸ್ಥಾನಿಕ ನೆನ್ನಿಸಿಕೊಂಡ. 1687ರಲ್ಲಿ ಮುಗಲರು ಬಿಜಾಪುರವನ್ನು ನಾಶಮಾಡಿದಾಗ ದೇಸಾಯಿ ಸ್ವತಂತ್ರನಾಗಿ ಆಳಲು ಆರಂಭಿಸಿದ. ಈ ಮನೆತನದವರೇ ವಂಟಮುರಿ ದೇಸಾಯರ ಮನೆತನದ ಪೂರ್ವಿಕರೆಂದು ತಿಳಿದುಬರುತ್ತದೆ. 1763ರಲ್ಲಿ ನಾಲ್ಕನೆಯ ಪೇಶ್ವೆ ಮಾಧವರಾವ್ ದೇಸಾಯಿಯವರ ಮನೆತನವನ್ನು ಮುರಿದು ಸಂಸ್ಥಾನವನ್ನು ಕೊಲ್ಲಾಪುರದ ದೊರೆಗೆ ಪ್ರತಿವರ್ಷ 5,00,000 ಹಣವನ್ನು ನಜರ್ ಕೊಡುವಂತೆ ತಿಳಿಸಿ ಒಪ್ಪಿಸಿಕೊಟ್ಟ. ಆದರೆ ಕೊಲ್ಲಾಪುರದ ದೊರೆ ನಜರ್ ಕೊಡದಿರಲು ಪುನಃ ಸಂಸ್ಥಾನವನ್ನು ಹಿಂತೆಗೆದುಕೊಂಡು ಒಬ್ಬ ಮಾಮಲೆದಾರನನ್ನು ನೇಮಿಸಿದ. ನಿಪ್ಪಾಣಿಯ ದೇಸಾಯಿ ಜನರಲ್ ವೆಲ್ಲಸ್ಲಿಗೆ ಸಹಾಯ ಮಾಡಿದುದಕ್ಕೆಂದು ಪೇಶ್ವೆ ಹುಕ್ಕೇರಿಯನ್ನು ಚಿಕ್ಕೋಡಿ ಹಾಗೂ ಮನೋಳಿ ಭಾಗಗಳೊಂದಿಗೆ 1804ರಲ್ಲಿ ಬಹುಮಾನವೆಂದು ದೇಸಾಯಿಗೆ ಉಂಬಳಿಯಾಗಿ ಕೊಟ್ಟ. 1827ರ ಹೊತ್ತಿಗೆ ಹುಕ್ಕೇರಿ ಪುನಃ ಕೊಲ್ಲಾಪುರದ ದೊರೆಗಳಿಗೆ ಸೇರಿತು. 1906ರಲ್ಲಿ ಬ್ರಿಟಿಷರ ಆಳಿಕೆಯಲ್ಲಿ ಇದು ಸ್ವತಂತ್ರ ತಾಲ್ಲೂಕಾಯಿತು. ಇಂದಿಗೂ ಉಳಿದು ನಿಂತಿರುವ ಇಲ್ಲಿನ ದರ್ಗಾ, ಮಸೀದಿ, ಜೋಡಿಗುಮ್ಮಟಗಳೂ ಅರಮನೆ, ಕಾರಂಜಿ ಇವು ಬಹು ಆಕರ್ಷಕವಾಗಿವೆ.[1]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.