ಪ್ರಯಾಗ್ ರಾಜ್
ಪ್ರಯಾಗ ರಾಜ್ / From Wikipedia, the free encyclopedia
ಪ್ರಯಗ್ರಾಜ್, ಹಿಂದಿ:प्रयागराज; ಉರ್ದು: پریاگراج), ಉತ್ತರ ಪ್ರದೇಶದಲ್ಲಿರುವ ಒಂದು ಪ್ರಮುಖ ಪಟ್ಟಣ ಹಾಗೂ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಅಕ್ಟೋಬರ್ ೧೬, ೨೦೧೮ ರಂದು ರಾಜ್ಯಸರ್ಕಾರವು ನಗರದ ಹೆಸರನ್ನು ಅಲಹಾಬಾದ್ (ಹಿಂದಿನ ಮೊಘಲ್ ಹೆಸರು) ನಿಂದ ಪ್ರಯಗರಾಜ್ಗೆ ಬದಲಾಯಿಸಿತು.ಇದರ ಮೂಲ ಹೆಸರು ಪ್ರಯಾಗ (ಹಿಂದಿ:प्रयाग), ಮೊಘಲ್ ದೊರೆ ಅಕ್ಬರನು ಈ ನಗರಕ್ಕೆ ಅಲಹಾಬಾದ್ ಎಂಬ ಹೆಸರಿಟ್ಟನು. ಇದು ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ದಕ್ಷಿಣಕ್ಕೆ ಸುಮಾರು ೨೦೫ ಕಿಲೊಮೀಟರ್ಸ್ ದೂರದಲ್ಲಿದೆ. ಅಲಹಾಬಾದ್ ಜಿಲ್ಲೆಯ ಆಡಳಿತ ಕೇಂದ್ರವಾಗಿರುವ ಈ ನಗರವು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ೧೩೦ನೆಯದಾಗಿದೆ.(೨೦೧೧ರಲ್ಲಿನ ಬೆಳವಣಿಗೆಯ ಪ್ರಮಾಣ ಶೇ.೨.೦೯) ಗಂಗಾ, ಯಮುನಾ ಮತ್ತು ಪುರಾತನ ಸರಸ್ವತಿ ನದಿಗಳ ಸಂಗಮಸ್ಥಳವಾದುದರಿಂದ ಹಿಂದೂಗಳಿಗೆ ಇದು ಪ್ರಮುಖ ತೀರ್ಥಸ್ಥಳವಾಗಿದೆ.[1] ಅಲ್ಲದೆ ಇದು ಕುಂಭ ಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಇತರ ಮೂರು ಸ್ಥಳಗಳು ಹರಿದ್ವಾರ, ಉಜ್ಜಯಿನಿ ಮತ್ತು ನಾಶಿಕ್. ರಾಜ್ಯಸರ್ಕಾರೀ ಮತ್ತು ಕೇಂದ್ರಸರ್ಕಾರಗಳ ಅನೇಕ ಕಚೇರಿಗಳು ಇಲ್ಲಿದ್ದು ಪ್ರಯಗ್ರಾಜ್ ನಗರವು ದೇಶದ ನಾಲ್ಕನೇ ಹಳೆಯ ವಿಶ್ವವಿದ್ಯಾಲಯವನ್ನು ಹಾಗೂ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಹೊಂದಿದೆ. ದೇಶದ ೧೪ ಪ್ರಧಾನಮಂತ್ರಿಗಳಲ್ಲಿ ೭ ಮಂದಿಗೆ ಪ್ರಯಗ್ರಾಜ್ ಸ್ವಂತನೆಲೆಯಾಗಿದೆ. ಜವಹರಲಾಲ್ ನೆಹರೂ, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಗುಲ್ಜಾರಿಲಾಲ್ ನಂದಾ, ವಿ ಪಿ ಸಿಂಗ್ ಹಾಗೂ ಚಂದ್ರಶೇಖರ್ ಇವರು ಪ್ರಯಗ್ರಾಜ್ನನಲ್ಲೇ ಹುಟ್ಟಿದವರು ಅಥವಾ ಪ್ರಯಗ್ರಾಜ್ ವಿವಿಯ ವಿದ್ಯಾರ್ಥಿಗಳು ಅಥವಾ ಪ್ರಯಗ್ರಾಜ್ ಕ್ಷೇತ್ರದಿಂದ ಆಯ್ಕೆಯಾದವರು. ಇತರ ಪ್ರಮುಖ ನಗರಗಳಾದ ಕಾನ್ಪುರ, ಲಕ್ನೋ, ವಾರಣಾಸಿ ಮತ್ತು ಮಧ್ಯಪ್ರದೇಶದ ರೇವಾಗಳು ಪ್ರಯಗ್ರಾಜ್ ನೆರೆಹೊರೆಯಲ್ಲಿವೆ.