From Wikipedia, the free encyclopedia
ಭಾರತದ ಕರ್ನಾಟಕ ರಾಜ್ಯದ ಚನ್ನಪಟ್ಟಣದಲ್ಲಿ ಮರದಿಂದ ತಯಾರಿಸಲಾಗುವ ವಿಶಿಷ್ಟ ಗೊಂಬೆಗಳಿಗೆ ಚನ್ನಪಟ್ಟಣದ ಗೊಂಬೆಗಳು ಅನ್ನುತ್ತಾರೆ. ಬಣ್ಣ ಬಣ್ಣದ ಗೊಂಬೆಗಳು. ವಿಶಿಷ್ಟ ಕೆತ್ತನೆ, ಆಕರ್ಷಕ ಬಣ್ಣ, ವಿನ್ಯಾಸಗಳಿಂದ ಇದು ವರ್ಡ್ ಟ್ರೇಡ್ ಆರ್ಗನೈಸೇಷನ್ನಲ್ಲಿ ಒಂದು ಭೌಗೋಳಿಕ ವಿಶೇಷತೆ (Geographical Indication) ಎಂದು ಕರ್ನಾಟಕ ಸರ್ಕಾರದಿಂದ ನೋಂದಾಯಿಸಲ್ಪಟ್ಟಿದೆ.[1] ಈ ಗೊಂಬೆಗಳ ಜನಪ್ರಿಯತೆಯಿಂದಾಗಿ ಚನ್ನಪಟ್ಟಣವು 'ಗೊಂಬೆಗಳ ಊರು' ಎಂದೇ ಪ್ರಸಿದ್ಧವಾಗಿದೆ.[2] ಸಾಂಪ್ರದಾಯಿಕವಾಗಿ ಈ ಗೊಂಬೆಗಳನ್ನು 'ಆಲೆಮರ'ದಿಂದ ತಯಾರಿಸಲಾಗುತ್ತದೆ. (Wrightia tinctoria tree/ivory-wood)[3]
ಇಲ್ಲಿನ ಗೊಂಬೆ ಉದ್ಯಮಕ್ಕೆ ಮೂರು ಶತಮಾನಗಳ ಇತಿಹಾಸವಿದೆ. ಟಿಪ್ಪುಸುಲ್ತಾನನ ಕಾಲದಿಂದಲೂ ಇಲ್ಲಿ ಗೊಂಬೆಗಳ ಉದ್ಯಮ ಬೆಳೆದು ಬಂದಿದೆ. ಟಿಪ್ಪುಸುಲ್ತಾನನು ಸ್ಥಳೀಯ ಕರಕುಶಲಕರ್ಮಿಗಳಿಗೆ ಮರದಗೊಂಬೆಗಳ ತಯಾರಿಕೆಯನ್ನು ಕಲಿಸಿಕೊಡಲು ಪರ್ಶಿಯಾದಿಂದ ಕುಶಲಕರ್ಮಿಗಳನ್ನು ಕರೆಸಿದ್ದನು. 1759-1799ರಲ್ಲಿ ಪರ್ಷಿಯಾದ ಕುಶಲಕರ್ಮಿಗಳಿಂದ ಈ ಕಲೆ ಪರಿಚಯವಾಯಿತು. 'ಸ್ಕೂಲ್ ಬಾಬಾ ಸಾಹೇಬ್ ಮಿಯಾ' ಈ ಗೊಂಬೆಗಳ ಪಿತಾಮಹ ಎಂದು ಹೇಳಲಾಗುತ್ತದೆ. ಆತ ಈ ಗೊಂಬೆಗಳ ತಯಾರಿಕೆಯಲ್ಲಿ ಜಪಾನಿ ತಂತ್ರಜ್ನಾನವನ್ನು ಅಳವಡಿಸಿಕೊಂಡನು.[2] 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭವಾಯಿತು. ಮೈಸೂರು ದಿವಾನರು ಈ ತರಬೇತಿ ಸಂಸ್ಥೆಯನ್ನು ಆರಂಭಿಸಿದರು.[4] ಹೆಚ್ಚಾಗಿ ಈ ಗೊಂಬೆಗಳ ತಯಾರಿಕೆಗೆ 'ಆಲೆಮರ' ಬಳಸಲ್ಪಡುತ್ತದಾದರೂ, ಬೀಟೆ ಮತ್ತು ಗಂಧದಮರವೂ ಕೂಡ ಬಳಸಲ್ಪಡುತ್ತದೆ.
ಗುಲಗಂಜಿ ಗಾತ್ರದ ಗೊಂಬೆಗಳಿಂದ ಹಿಡಿದು ದೊಡ್ಡ ಗೊಂಬೆಗಳ ಕೆತ್ತನೆಯಲ್ಲಿ ಕುಶಲ ಕರ್ಮಿಗಳು ನಿಪುಣರು. ಬುಗುರಿ, ಬ್ಯಾಂಡ್ ಸೆಟ್, ದಿಬ್ಬಣ ತಂಡದ ಆಟಿಕೆ ಗೊಂಬೆಗಳು ಹಾಗೂ ದಸರಾ ಗೊಂಬೆಗಳು ಹಾಗೂ ದೇವರ ಗೋಪುರ, ವಿವಿಧ ಭಂಗಿಯ ವಿಗ್ರಹಗಳು, ಗೃಹಾಲಂಕಾರದ, ಗೃಹೋಪಯೋಗಿ ವಸ್ತುಗಳು, ಮರದ ಆಭರಣಗಳು ತಯಾರಾಗುತ್ತವೆ.[5] ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ಗೊಂಬೆಗಳು ಸಿದ್ಧವಾಗುತ್ತವೆ. ಈ ಗೊಂಬೆಗಳ ತಯಾರಿಕೆಯಲ್ಲಿ ಕಾಲಕ್ರಮೇಣ ಬದಲಾವಣೆಗಳಾಗಿವೆ. ಸಾಂಪ್ರದಾಯಿಕವಾಗಿ ಆಲೆಮರದಲ್ಲಿ ತಯಾರಿಸಲಾಗುತ್ತಿದ್ದರೂ ಅದರ ಜೊತೆ ರಬ್ಬರ್, ಪೈನ್, ಟೀಕ್, sycamore, cedar ಮರಗಳೂ ಬಳಸಲ್ಪಡುತ್ತಿವೆ. ಗೊಂಬೆಗಳ ಕೆತ್ತನೆಗೆ ಬೇಕಾದ ಮೃದುವಾದ ಆಲೆ ಮರಗಳು ಚನ್ನಪಟ್ಟಣದಲ್ಲಿಯೇ ಬೆಳೆಯುತ್ತವೆ.[6] ತಯಾರಿಕೆಯ ಹಂತಗಳು ಹೀಗಿರುತ್ತವೆ. ಮರವನ್ನು ತರುವುದು, ಅದರನ್ನು ಸಂಸ್ಕರಿಸುವುದು, ಬೇಕಾದ ಆಕಾರಕ್ಕೆ ಕತ್ತರಿಸುವುದು, ಗೊಂಬೆಗಳನ್ನು ಕೊರೆಯುವುದು, ಬಣ್ಣ ಹಚ್ಚುವುದು ಮತ್ತು ಕೊನೆಗೆ ಪಾಲಿಶ್ ಮಾಡುವುದು. ಈ ಗೊಂಬೆಗಳು ಮಕ್ಕಳ ಆಟಿಕೆಯಾಗಿ ಬಳಕೆಯಾಗುವುದರಿಂದ ಸುರಕ್ಷತೆಗಾಗಿ ಸಸ್ಯಜನ್ಯ ಬಣ್ಣಗಳನ್ನು ಬಳಸಲಾಗುತ್ತದೆ.[2] ಅಕ್ಟೋಬರ್ ೨೦೦೬ರ ಅಂಕಿ ಅಂಶಗಳ ಪ್ರಕಾರ ಆರುಸಾವಿರಕ್ಕಿಂತಲೂ ಹೆಚ್ಚು ಜನರು ೨೫೪ ಗೃಹ ಕೈಗಾರಿಕಾ ಘಟಕಗಳಲ್ಲಿ ಮತ್ತು ೫೦ ಸಣ್ಣ ಕಾರ್ಖಾನೆಗಳಲ್ಲಿ ಈ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (KSHDCL) ಇವರಿಗೆ ಮಾರುಕಟ್ಟೆ ಒದಗಿಸುವ ಸಹಕಾರ ನೀಡುತ್ತದೆ.
ಸರಿಯಾದ ಮಾರುಕಟ್ಟೆ ಬೆಂಬಲವಿಲ್ಲದೇ ಒಂದು ಅವಧಿಯಲ್ಲಿ ದಶಕಕ್ಕೂ ಹೆಚ್ಚು ಕಾಲ ಆರ್ಥಿಕ ಸಂಕಷ್ಟಕ್ಕೆ ಸಿಲುಕೆ ಚನ್ನಪಟ್ಟಣದ ಗೊಂಬೆ ನಾಶವಾಗುವ ಹಂತ ತಲುಪಿತ್ತು. ತದನಂತರ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ನೆರವಿನಿಂದ ಕರಕುಶಲಕರ್ಮಿಗಳಿಗೆ ಇಂದಿನ ಬದಲಾಗುತ್ತಿರುವ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡಲಾಯಿತು. ನುರಿತ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಗೊಂಬೆಗಳನ್ನು ಸ್ಥಳೀಯ ಕುಶಲಕರ್ಮಿಗಳಿಗೆ ಪರಿಚಯಿಸಿ ಅದರ ಮೂಲಕ ಉತ್ತಮ ಗೊಂಬೆಗಳನ್ನು ತಯಾರಿಸುವ ತರಬೇತಿ ನೀಡಲಾಯಿತು. ಕರ್ನಾಟಕ ರಾಜ್ಯ ಸರ್ಕಾರವು ಚನ್ನಪಟ್ಟಣದಲ್ಲಿ ಒಂದು ಕ್ರಾಫ್ಟ್ ಮಳಿಗೆ ನಿರ್ಮಿಸಿಕೊಟ್ಟಿದ್ದು, ಆ ಉತ್ಪಾದನಾ ಘಟಕವು ೩೨ ಲೇತ್ ಯಂತ್ರಗಳನ್ನು ಹೊಂದಿದೆ. ವಿಶ್ವ ಸ್ಕೀಂ ನಲ್ಲಿ ಕರ್ನಾಟಕ ಮತ್ತು ಡಚ್ ಸರ್ಕಾರಗಳಿಂದ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
ಅಮೆರಿಕ, ಇಂಗ್ಲೆಂಡ್, ಕೆನಡಾ, ಬ್ರಿಟನ್, ಯುಗೋಸ್ಲಾವಿಯಾ, ಜಪಾನ್, ಜರ್ಮನಿ ಮತ್ತಿತರ ದೇಶಗಳಿಗೆ ಇಲ್ಲಿನ ಗೊಂಬೆಗಳು ರಫ್ತಾಗುತ್ತವೆ. ಇತ್ತೀಚಿನ ವರ್ಶಗಳಲ್ಲಿ ಅನೇಕ ಕಂಪನಿಗಳು ಹಾಗೂ ಸಂಸ್ಥೆಗಳಿಂದ ಚನ್ನಪಟ್ಟಣದ ಗೊಂಬೆ ಕಲೆಯ ಪುನಶ್ಚೇತನ ಪ್ರಯತನಗ್ಳಾಗುತ್ತಿವೆ. ಭಾರತ್ ಆರ್ಟ್ ಮತ್ತು ಕ್ರಾಫ್ಟ್ ಈ ಕೆಲಸದಲ್ಲಿ ಮುಂಚೂಣಿಯಲ್ಲಿರುವ ಒಂದು ಹಳೆಯ ಕಂಪನಿಯಾಗಿದ್ದು ಚನ್ನಪಟ್ಟಣದಲ್ಲಿ ಉತ್ಪಾದನಾ ಘಟಕ ಹೊಂದಿದೆ.[7] ಚನ್ನಪಟ್ಟಣದ ಗೊಂಬೆಗಳಿಗಾಗಿ ಇಕಾಮರ್ಸ್ ತಾಣವನ್ನು ಪ್ರಾರಂಭಿಸಿತು.[8]. Craftizone.com ತಾಣವು ನೇರವಾಗಿ ಗೊಂಬೆಗಳನ್ನು ಮಾರಾಟ ಮಾಡುವ ಸಹಾಯ ಮಾಡುತ್ತದೆ. ವರ್ನಮ್ ಎನ್ನುವ ಸಾಮಾಜಿಕ ಸಂಸ್ಥೆಯು ಚನ್ನಪಟ್ಟಣದ ಕರಕುಶಲಕರ್ಮಿಗಳೊಂದಿಗೆ ಈ ಇನ್ನೂರು ವರ್ಷಗಳ ಹಳೆಯ ಕಲೆಯಲ್ಲಿ ಈಗಿನ ಕಾಲಕ್ಕೆ ತಕ್ಕಂತೆ ವಿವಿಧ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ.[9] iFolk ಚನ್ನಪಟ್ಟಣ ಟಾಯ್ಸ್ ಮತ್ತು ಹ್ಯಾಂಡಿಕ್ರಾಫ್ಟ್ಸ್, ಶ್ರೀ ಬೀರೇಶ್ವರ ಆರ್ಟ್ ಮತ್ತು ಕ್ರಾಫ್ಟ್, ನಿಶಿ ಚೌಹಾಣ್ ಅನಿಮಲ್ ಫಾರ್ಮ್ ಮುಂತಾದ ಸೇವಾಸಂಸ್ಥೆಗಳು, ಕಂಪನಿಗಳು ಚನ್ನಪಟ್ಟಣದ ಗೊಂಬೆಗಳಿಗೆ ಹೊಸವಿನ್ಯಾಸಗಳನ್ನು ಮತ್ತು ಮಾರುಕಟ್ಟೆಗಳನ್ನು ಒದಗಿಸಲು ನೆರವಾಗುತ್ತಿವೆ.[6][8]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.