ಕಲ್ಯಾಣ್
From Wikipedia, the free encyclopedia
ಕಲ್ಯಾಣ್ : ಮಹಾರಾಷ್ಟ್ರದ ಠಾಣ ಜಿಲ್ಲೆಯ ಒಂದು ಪಟ್ಟಣ. ಮುಂಬಯಿಯ ಈಶಾನ್ಯಕ್ಕೆ ೫೨ ಕಿಮೀಗಳ ದೂರದಲ್ಲಿ ಉಲ್ಹಾಸ್ ನದಿಯ ದಡದಲ್ಲಿದೆ. ಮಧ್ಯ ರೈಲ್ವೆಯ ಪ್ರಮುಖ ಕೂಡುನಿಲ್ದಾಣ.
ಇಲ್ಲಿಂದ ಈಶಾನ್ಯಕ್ಕೊಂದು, ಆಗ್ನೇಯಕ್ಕೊಂದು ಮುಖ್ಯ ರೈಲುಮಾರ್ಗಗಳಿವೆ. ಮುಂಬಯಿಗೆ ಸಮೀಪದಲ್ಲಿರುವುದರಿಂದ ಇಲ್ಲೂ ಕೈಗಾರಿಕೆ ಬಹುಬೇಗ ಹಬ್ಬಿತು. ತತ್ಪರಿಣಾಮವಾಗಿ ಜನಸಂಖ್ಯೆ ತ್ರೀವ್ರಗತಿಯಿಂದ ಹೆಚ್ಚಿತು; ರೇಷ್ಮೆ ನೈಲಾನುಗಳ ನೆಯ್ಗೆಗೆ ಈ ಪಟ್ಟಣ ಬಲು ಪ್ರಸಿದ್ಧ. ಬತ್ತದಿಂದ ಅಕ್ಕಿ ತಯಾರಿಕೆ, ಇಟ್ಟಿಗೆ ಮತ್ತು ಹೆಂಚುಗಳ ಕೈಗಾರಿಕೆ ಮುಖ್ಯವಾದವು. ಸುತ್ತಣ ಪ್ರದೇಶದ ಗಣಿಗಳಲ್ಲಿ ಒಳ್ಳೆಯ ಕಲ್ಲು ದೊರಕುತ್ತದೆ. ಕಲ್ಯಾಣದಿಂದ ಸುಮಾರು ೨ ಕಿಮೀ ದೂರದಲ್ಲಿ ನಿರಾಶ್ರಿತರಿಗಾಗಿ ಉಲ್ಹಾಸ್ ನಗರವನ್ನು ಸ್ಥಾಪಿಸಲಾಗಿದೆ.