ಕರ್ಮ
From Wikipedia, the free encyclopedia
ಕರ್ಮ: ಭಾರತೀಯ ದರ್ಶನಗಳೆಲ್ಲವೂ ಒಮ್ಮತದಿಂದ ಅಂಗೀಕರಿಸಿರುವ ಸಿದ್ಧಾಂತ. ದರ್ಶನದಲ್ಲಿ ಮಾತ್ರವಲ್ಲ, ನಿತ್ಯಜೀವನದಲ್ಲೂ ಕರ್ಮದ ಕಲ್ಪನೆ ಬಹುವಾಗಿ ವಿಸ್ತಾರವಾಗಿದೆ. ಕರ್ಮವೆಂದರೆ ಕೆಲಸ (ಕೃ ಧಾತು), ಮಾಡಿದುದು, ಆದರೆ ಕರ್ಮವೆಂಬ ಪದದಲ್ಲಿ ಹಿಂದೆ ಮಾಡಿದುದರಿಂದ ಮುಂದೆ ಬಂದೇ ಬರುವ, ಬರಲಿರುವ ಅಥವಾ ಬಂದ, ಫಲ ಅಥವಾ ವಿಪಾಕದ ಅರ್ಥವೂ ಸೇರಿದೆ. ಮಾಡಿದುದನ್ನು ಉಣ್ಣಲೇಬೇಕೆಂಬ ನಿಲವಿಗೆ ಕರ್ಮಸಿದ್ಧಾಂತವೆಂದು ಹೆಸರು. ಕರ್ಮಸಿದ್ಧಾಂತಕ್ಕೆ ಮೂಲವಾಗಿ ಪುನರ್ಜನ್ಮದ ನಂಬಿಕೆಯೂ ಪ್ರಸಕ್ತವಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳಿಗೆ ಅನುಸಾರವಾಗಿ, ಆ ಕರ್ಮಗಳ ಫಲವಾಗಿ, ಈ ಜನ್ಮ ಸಿದ್ಧವಾಗಿದೆಯೆಂದೂ ಈ ಜನ್ಮದಲ್ಲಿ ಮಾಡುವ ಕರ್ಮಗಳಿಂದ ಮುಂದಿನ ಜನ್ಮ ನಿರ್ದಿಷ್ಟವಾಗುವುದೆಂದೂ ನಮ್ಮಲ್ಲಿನ ನಂಬಿಕೆ. ಎಂದರೆ ನಾವು ಅನುಭವಿಸುವ ಸುಖದುಃಖಗಳಿಗೆ ನಾವು ಮಾಡಿದ ಕೆಲಸಗಳೇ ಕಾರಣವೆಂದು ತಾತ್ಪರ್ಯ. ಮಾಡಿದ ಮೇಲೆ ಅದಕ್ಕೆ ನಿಯತವಾದ ಫಲವನ್ನು ಅನುಭವಿಸಲೇಬೇಕೆಂಬ ಶ್ರದ್ಧೆ ಎಲ್ಲ ಹಿಂದೂ ಜನರ ಸಂಸ್ಕಾರದಲ್ಲಿಯೂ ಸೇರಿಬಂದಿದೆ. ಪಾಪಭೀತಿಗೆ ಬಲವಾದ ಕಾರಣವೆಂದರೆ ಕರ್ಮಸಿದ್ಧಾಂತವೇ. ಬಡವರು, ರೋಗಿಗಳು, ಆರ್ತರು ತಮ್ಮ ತಮ್ಮ ಸ್ಥಿತಿಯಲ್ಲಿ ಸಮಾಧಾನಚಿತ್ತರಾಗಿದ್ದರೆ, ಶ್ರೀಮಂತರನ್ನು, ಸುಖಿಗಳನ್ನು ಕಂಡು ಕರುಬದಿದ್ದರೆ, ಕರ್ಮಸಿದ್ಧಾಂತದಲ್ಲಿನ ವಿಶ್ವಾಸ ಅದಕ್ಕೆ ಕಾರಣ. ಜನಜೀವನದಲ್ಲಿ ಅವಶ್ಯವಾದ ಎಳೆಯಂತೆ ಒದಗಿ ಬಂದಿರುವ ಕರ್ಮ ಸಿದ್ಧಾಂತಕ್ಕೆ ತಾತ್ತ್ವಿಕ ಸಮರ್ಥನೆಯಿದೆ.