ಹೈದರ್ ಅಲಿ, ಟಿಪ್ಪು ಸುಲ್ತಾನ್, ಬ್ರಿಟಿಷ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ಮೈಸೂರು ರಾಜ From Wikipedia, the free encyclopedia
ಪೂರ್ಣಯ್ಯ, ಕೃಷ್ಣಮಾಚಾರ್ಯ ಪೂರ್ಣಯ್ಯ|ಮಿರ್ ಮಿರಾನ್ ಪೂರ್ಣಯ್ಯ, (೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗೆಳಿಗೆ ಪರಿಚಿತರಾಗಿದ್ದ ಅವರು ಮೈಸೂರು ಸಂಸ್ಥಾನದ ಮೊಟ್ಟಮೊದಲ [೧] ದಿವಾನರಾಗಿದ್ದರು. [೨] ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು.[೩] ಮೇಧಾವಿ, ದಕ್ಷ ಆಡಳಿತಗಾರ, ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು. ಮೊದಲು ಹೈದರಾಲಿಯ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯವನ್ನು ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಬೇತಿ ನೀಡಿದರು. [೪]
'ಪೂರ್ಣಯ್ಯನ'ವರು, [೫] ಒಂದು ಬಡ 'ಮಾಧ್ವ ಬ್ರಾಹ್ಮಣ ಪರಿವಾರ'ದಿಂದ ಬಂದವರು. ೧೭೪೬ ರಲ್ಲಿ 'ಯಳಂದೂರಿ'ನಲ್ಲಿ ಜನಿಸಿದರು. ತಮ್ಮ ೧೧ ನೆಯ ವಯಸ್ಸಿನಲ್ಲೇ ತಂದೆಯವರು ನಿಧನರಾದರು. ಒಂದು ದಿನಸಿ ಅಂಗಡಿಯಲ್ಲಿ ಲೆಕ್ಖಬರೆದು ತಮ್ಮ ಪರಿವಾರವನ್ನು ಸಾಕುವ ಜವಾಬ್ದಾರಿ ಅವರಿಗೆ ಅತಿ ಚಿಕ್ಕವಯಸ್ಸಿನಲ್ಲೇ ಆಯಿತು. ಆ ಅಂಗಡಿಯ ಮಾಲೀಕನಿಗೆ 'ಆನಂದ ಶೆಟ್ಟಿ' ಎಂಬ ಶ್ರೀಮಂತ ವರ್ತಕನ ಪರಿಚಯವಿತ್ತು. ಅಂದಿನ ದಿನಗಳಲ್ಲಿ ಆನಂದ ಶೆಟ್ಟಿ ಹೈದರ್ ಆಲಿ, ಮತ್ತು ಮೈಸೂರರಸರ ಅರಮನೆಗೆ ಮತ್ತು ಆ ಪ್ರದೇಶದ ಸೈನಿಕ ದಳಕ್ಕೆ ಬೇಕಾದ ಎಲ್ಲ ಸಾಮಾನುಗಳನ್ನು ಒದಗಿಸುವಲ್ಲಿ ಸಮರ್ಥನಾಗಿದ್ದನು. ಈ ಸಂಪರ್ಕದಿಂದ ಲೆಕ್ಖಪತ್ರಗಳಲ್ಲಿ ನಿಷ್ಣಾತರಾಗಿದ್ದ ಪೂರ್ಣಯ್ಯನವರಿಗೆ ಅರಮನೆಯ ಎಲ್ಲ ಪದಾರ್ಥಗಳನ್ನೂ ನಿಯಮಿತವಾಗಿ ಒದಗಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಹೈದರಾಲಿಗೆ ಪೂರ್ಣಯ್ಯನವರ ಮೇಲೆ ಬಹಳ ಮೆಚ್ಚುಗೆಯಾಯಿತು. ಮುಂದೆ ಹೈದರಾಲಿಯ ಮಗ ಟಿಪ್ಪೂಸುಲ್ತಾನನಿಗೂ ಪೂರ್ಣಯ್ಯನವರು ಅತಿ ನಂಬಿಕೆಯ ವ್ಯಕ್ತಿಯಾಗಿ ಮುಂದುವರೆದರು.
'ದಿವಾನ್', ಎಂದರೆ ಇವತ್ತಿನ ಸಂದರ್ಭಕ್ಕೆ 'ಚೀಫ್ ಸೆಕ್ರೆಟರಿ' ಎಂದು ಹೇಳಬಹುದು. ದಿವಾನ್ ಪೂರ್ಣಯ್ಯನವರು, [೬] ಟಿಪ್ಪೂ ಸುಲ್ತಾನ್, ಹೈದರ್ ಅಲಿ ಆಸ್ಥಾನದಲ್ಲಿ ಅವರು ಹಿರಿಯ ಅಧಿಕಾರಿಯಾಗಿದ್ದರು. ಆನಂತರ ಬ್ರಿಟಿಷರ ಆಳ್ವಿಕೆಯಲ್ಲಿಯೂ ಅವರು ದಿವಾನರಾಗಿದ್ದರು. ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅವರೇ ಮೈಸೂರು ಪ್ರಾಂತ್ಯದ ಆಗುಹೋಗುಗಳಿಗೆ ಬಾಧ್ಯಸ್ಥರಾಗಿದ್ದರು. ಮಹಾ ಮೇಧಾವಿ, ದಕ್ಷ ಆಡಳಿತಗಾರ ಎಂದು ಪೂರ್ಣಯ್ಯ ಜನಪ್ರಿಯರಾಗಿದ್ದರು. ಹಲವು ಭಾಷಾ ಕೋವಿದ, ಕುಶಲ ಕೆಲಸಗಾರರಷ್ಟೇ ಅಲ್ಲದೆ ಕಷ್ಟಪಟ್ಟು ದುಡಿಯುವ ಜನಸೇವಕ ಎಂದೂ ಖ್ಯಾತರಾಗಿದ್ದರು. ಟಿಪ್ಪು ಸಾವಿನ ನಂತರ ಮೈಸೂರು ಪ್ರಾಂತ್ಯ ಒಡೆಯರ್ ಅವರ ಆಳ್ವಿಕೆಗೆ ಬಂತು. ಆಗಿನ್ನೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕ ಹುಡುಗ. ಅವರಿಗೆ ವಿದ್ಯಾಭ್ಯಾಸ, ತರಬೇತಿ, ರಾಜ್ಯಭಾರ, ಆಡಳಿತದ ಸೂಕ್ಷ್ಮಗಳನ್ನು ತಿಳಿಯ ಹೇಳಿದವರು ಪೂರ್ಣಯ್ಯನವರು ಎಂದು ಇತಿಹಾಸ ಹೇಳುತ್ತದೆ. ಪೂರ್ಣಯ್ಯನವರ ತೈಲಚಿತ್ರ ಕೃಪೆ: 'ಕಾಮತ್ ಡಾಟ್ ಕಾಂ'.[೭]
ಈಗ ಅವರ ಸ್ಮರಣಾರ್ಥವಾಗಿ ಮೈಸೂರಿನಲ್ಲಿ ಪೂರ್ಣಯ್ಯ ಛತ್ರವೆಂದು ಹೆಸರಾಗಿದ್ದ ಗೃಹವನ್ನು ಅದಕ್ಕೆ ಪೂರ್ಣಯ್ಯ ಸ್ಮಾರಕ ಸಭಾಂಗಣ ಮತ್ತು ಛತ್ರ ಎಂದು ಹೆಸರಿಸಲಾಗಿದೆ.[೮] ಸಾರ್ವಜನಿಕರಿಗೆ ಈ ಛತ್ರ ಈಗ ಮುಕ್ತವಾಗಿದೆ. ಯಾರುಬೇಕಾದರು ಅಲ್ಲಿ ಮದುವೆ, ಉಪನಯನ, ಆರತಕ್ಷತೆ, ಸಭೆ, ಮೀಟಿಂಗು ಈಟಿಂಗು ಮುಂತಾದ ಸಾರ್ವಜನಿಕ ಸಮಾರಂಭಗಳನ್ನು ಆಚರಿಸಿಕೊಳ್ಳಬಹುದು.ಈ ಸಭಾಂಗಣ ವಿಶಾಲವಾಗಿದ್ದು ಒಂದು ನೆಲ ಅಂತಸ್ತಿದೆ. ಅದು ಭೋಜನ ಗೃಹ. ಒಂದು ಮುಖ್ಯ ಸಭಾಂಗಣ ಮತ್ತು ಕಡಿಮೆ ಜನ ಹಿಡಿಸುವ ಕಾರ್ಯಕ್ರಮಗಳಿಗಾಗಿ ಮೇಲಂತಸ್ತಿನಲ್ಲಿ ಒಂದು ಮಿನಿ ಸಭಾಂಗಣ. ಈ ಛತ್ರ ಮಹಾತ್ಮಾ ಗಾಂಧೀ ರಸ್ತೆಯಲ್ಲಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಛತ್ರವನ್ನು ಅಂದವಾಗಿ ನವೀಕರಿಸಲಾಗಿದೆ. ಒಂದು ಭಾಗ ಮಾತ್ರ ಸಿದ್ಧವಾಗಿದ್ದ ಈ ಸಭಾಂಗಣವನ್ನು ಉದ್ಘಾಟಿಸಿಸಲಾಯಿತು.
ಮುಜರಾಯಿ ಇಲಾಖೆ ಹಾಗೂ ಅರಮನೆಯ ಮುಜರಾಯಿ ಮಂಡಳಿಯ ಸಹಭಾಗಿತ್ವದಲ್ಲಿ ಕಟ್ಟಿರುವ ನೂತನ ಸಭಾಂಗಣವನ್ನು ಸಾರ್ವಜನಿಕರು ಬಳಸಬಹುದು. ಚಾಮುಂಡಿ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಶಿವಲಿಂಗೇ ಗೌಡ, ಈ ಛತ್ರದ ಬಗ್ಗೆ ಸಾರ್ವಜನಿಕರಿಗೆ ಎಲ್ಲಾ ಮಾಹಿತಿ ನೀಡುತ್ತಾರೆ. ಮೈಸೂರು ರಾಜ್ಯದ ನಾನಾ ಜಿಲ್ಲೆಗಳಲ್ಲಿಯೂ ಪೂರ್ಣಯ್ಯನವರು ಛತ್ರ ಕಟ್ಟಿಸಿದ್ದರು. ಪ್ರವಾಸಿಗರು ತಂಗಲು ಅವರು ಕಲ್ಪಿಸಿದ್ದ ಉಚಿತ ವಸತಿ ವ್ಯವಸ್ಥೆ ಆದಾಗಿತ್ತು. ಮೈಸೂರಿನ ಛತ್ರಕ್ಕೆ ಸ್ಮಾರಕದ ಯೋಗ ಲಭಿಸಿತು.
Seamless Wikipedia browsing. On steroids.