From Wikipedia, the free encyclopedia
ಡಾ. ಎಂ.ಎಸ್.ಸ್ವಾಮಿನಾಥನ್ (ಆಗಸ್ಟ್ ೭, ೧೯೨೫) ಭಾರತದ ಹಸಿರು ಕ್ರಾಂತಿಯ ಹರಿಕಾರ ರೆಂದು ಪ್ರಖ್ಯಾತರಾಗಿದ್ದಾರೆ.
ಡಾ ಎಂ. ಎಸ್. ಸ್ವಾಮಿನಾಥನ್ | |
---|---|
ಜನನ | ಆಗಸ್ಟ್ ೭, ೧೯೨೫ ಕುಂಬಕೋಣಂ |
ಮರಣ | ಸೆಪ್ಟೆಂಬರ್ ೨೮,೨೦೨೩ ಚೆನ್ನೈ, ತಮಿಳುನಾಡು |
ವಾಸಸ್ಥಳ | ಚೆನ್ನೈ |
ರಾಷ್ಟ್ರೀಯತೆ | ಭಾರತ |
ಕಾರ್ಯಕ್ಷೇತ್ರ | ಕೃಷಿ ವಿಜ್ಞಾನ |
ಸಂಸ್ಥೆಗಳು | ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೆಶನ್ |
ಅಭ್ಯಸಿಸಿದ ವಿದ್ಯಾಪೀಠ | ಮಹಾರಾಜಾ ಕಾಲೇಜು ತಮಿಳು ನಾಡು ಕೃಷಿ ಕಾಲೇಜು ಕೆಂಬ್ರಿಡ್ಜ್ ವಿಶ್ವವಿದ್ಯಾಲಯ ವಿಸ್ಕಾನ್ಸಿನ್ ವಿಶ್ವವಿದ್ಯಾಲಯ -ಮ್ಯಾಡಿಸನ್ |
ಪ್ರಸಿದ್ಧಿಗೆ ಕಾರಣ | ಭಾರತದಲ್ಲಿ ಹಸಿರು ಕ್ರಾಂತಿ |
ಪ್ರಭಾವಗಳು | ಡಾ. ನಾರ್ಮನ್ ಬೊರ್ಲಾಗ್ |
ಗಮನಾರ್ಹ ಪ್ರಶಸ್ತಿಗಳು | ಪದ್ಮಶ್ರೀ (೧೯೬೭) ಪದ್ಮಭೂಷಣ (೧೯೭೨) ಪದ್ಮವಿಭೂಷಣ (೧೯೮೯) ವರ್ಲ್ಡ್ ಫುಡ್ ಪ್ರೈಜ್ (೧೯೮೭) |
ಡಾ.ಎಂ.ಎಸ್.ಸ್ವಾಮಿನಾಥನ್, ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ. ಅವರು ಜನಿಸಿದ ದಿನ ಆಗಸ್ಟ್ ೭, ೧೯೨೫. ಸ್ವಾಮಿನಾಥನ್ ಅವರ ತಂದೆ ವೈದ್ಯರಾಗಿದ್ದು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ತಮ್ಮ ಪ್ರಾರಂಭಿಕ ಶಿಕ್ಷಣದ ನಂತರದಲ್ಲಿ ಸ್ವಾಮಿನಾಥನ್ ಅವರು ಕೃಷಿ ಪದವಿಗಾಗಿ ಓದಿದರು. ೧೯೪೯ರ ವರ್ಷದಲ್ಲಿ ಅವರಿಗೆ ಜೈವಿಕ ತಂತ್ರಜ್ಞಾನದಲ್ಲಿನ ಅಧ್ಯಯನಕ್ಕಾಗಿ ನೆದೆರ್ ಲ್ಯಾಂಡ್ ದೇಶದ ವಿದ್ಯಾರ್ಥಿವೇತನ ದೊರಕಿತು. ಮುಂದೆ ಅವರು ಅಮೇರಿಕಾದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿ.ಎಚ್.ಡಿ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ಉಚ್ಚತಮ ಶಿಕ್ಷಣವನ್ನು ಗಳಿಸಿದರು.
“ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದೆಂದರೆ ವಿದೇಶೀ ರೈತರನ್ನು ಶ್ರೀಮಂತರನ್ನಾಗಿಸುವ ಕೈಂಕರ್ಯ” ಎಂಬುದು ಸ್ವಾಮಿನಾಥನ್ ಅವರ ಬಲವಾದ ಅಭಿಪ್ರಾಯವಾಗಿತ್ತು. ಆದ್ದರಿಂದ ಭಾರತ ದೇಶವನ್ನು ಎಲ್ಲ ರೀತಿಯ ಆಹಾರ ಧಾನ್ಯಗಳ ಆಮದುಗಳಿಂದ ಮುಕ್ತವಾಗಿಸಬೇಕೆಂಬುದು ಅವರ ಅಭಿಲಾಷೆಯಾಗಿತ್ತು. 1966ರ ವರ್ಷದಲ್ಲಿ ಸ್ವಾಮಿನಾಥನ್ ಅವರು ನವದೆಹಲಿಯ ‘ಭಾರತೀಯ ವ್ಯವಸಾಯ ಸಂಶೋಧನಾ ಕೆಂದ್ರ’ದ ನಿರ್ದೇಶಕರಾಗಿ ನೇಮಕಗೊಂಡರು. ಭಾರತೀಯ ಕೃಷಿಕರ ಮೂಲ ಅವಶ್ಯಕತೆಗಳ ಕುರಿತಾಗಿ ನೇರವಾದ ಅನುಭವ ಪಡೆಯುವ ನಿಟ್ಟಿನಲ್ಲಿ ಸ್ವಾಮಿನಾಥನ್ ಅವರು, ಮಣ್ಣಿನ ಮಕ್ಕಳಾದ ರೈತರೊಂದಿಗೆ ತಾವೂ ಬೆರೆತು ಕೈಕೆಸರು ಮಾಡಿಕೊಂಡು ಅಹರ್ನಿಶಿ ದುಡಿದರು. ಸ್ವಾಮಿನಾಥನ್ ಅವರು ಸಿದ್ಧಪಡಿಸಿದ ವರದಿಯನ್ನು ಮೆಚ್ಚಿದ ರಾಕ್ ಫೆಲ್ಲರ್ ಪ್ರತಿಷ್ಠಾನ ಅವರಿಗೆ ಆರ್ಥಿಕ ಸಹಾಯ ನೀಡಲು ಮುಂದೆ ಬಂದದ್ದರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸ್ವಾಮಿನಾಥನ್, ಮಿಶ್ರತಳಿ ಗೋಧಿ ಬೀಜಗಳನ್ನು ಅಭಿವೃದ್ಧಿಪಡಿಸಿದರು. ಇದರ ಬಳಕೆಯ ದೆಸೆಯಿಂದಾಗಿ ಗೋಧಿ ಉತ್ಪನ್ನದಲ್ಲಿನ ಇಳುವರಿ ಹಲವು ಪಟ್ಟು ಹಿರಿದಾಗಿತ್ತು. ಈ ತೆರನಾದ ಗೋಧಿ ಬೀಜಗಳು ರೈತರಲ್ಲಿ ಸಂತಸ ಸಂಭ್ರಮೋತ್ಸಾಹಗಳನ್ನು ಮೂಡಿಸಿ ಬಹಳಷ್ಟು ರೈತರು ಪ್ರಯೋಜನ ಪಡೆಯಲಾರಂಭಿಸಿದರು. ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆಯಿಂದಾಗುವ ಪ್ರಯೋಜನಗಳನ್ನು ರೈತಾಪಿ ಜನರಿಗೆ ಮನನ ಮಾಡಿಕೊಡುವುದಕ್ಕಾಗಿ ಡಾ. ಸ್ವಾಮಿನಾಥನ್ ಅವರು ದೆಹಲಿಯ ಆಸುಪಾಸಿನಲ್ಲಿ ಸುಮಾರು ೨೦೦೦ ಪ್ರಾತಿನಿಧಿಕ ತೋಟಗಳನ್ನು ನಿರ್ಮಿಸಿದರು. ತಮ್ಮ ಅಬಿವೃದ್ಧಿಶೀಲ ಕಾಯಕದ ಪ್ರಥಮ ಹಂತದಲ್ಲಿ, 18000 ಟನ್ನುಗಳ ಮೆಕ್ಸಿಕನ್ ಗೊಧಿಯ ಬೀಜಗಳನ್ನು ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಸರ್ಕಾರದ ಮುಂದಿರಿಸಿದರು. ಸ್ವಾಮಿನಾಥನ್ ಅವರ ಕಾರ್ಯವೈಖರಿಯಲ್ಲಿದ್ದ ಹುಮ್ಮಸ್ಸು ಮತ್ತು ಸಾಧ್ಯತೆಗಳನ್ನು ಮನಗಂಡ ಸರ್ಕಾರ ಸ್ವಾಮಿನಾಥನ್ ಅವರಿಗೆ ಉತ್ತಮ ಬೆಂಬಲ ನೀಡಿತು. ಈ ಎಲ್ಲ ಕಾರಣಗಳ ದೆಸೆಯಿಂದಾಗಿ ೧೯೬೦ರ ವರ್ಷದಲ್ಲಿ ಕೇವಲ ೧೨ ಮಿಲಿಯನ್ ಟನ್ನುಗಳ ಗೋಧಿ ಉತ್ಪಾದಿಸುತ್ತಿದ್ದ ದೇಶ ಮುಂದಿನ ದಶಕಗಳಲ್ಲಿ ೭೦ ಮಿಲಿಯನ್ ಟನ್ನುಗಳಿಗೂ ಮೀರಿದ ಉತ್ಪಾದನಾ ಸಾಮರ್ಥ್ಯಗಳಿಸಿ ಆಹಾರ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತ ನಡೆಯಿತು. ಹೀಗೆ ತಮ್ಮನ್ನು ನಿತ್ಯ ಅಭಿವೃದ್ಧಿಶೀಲ ಪ್ರಯೋಗಶೀಲತೆಯಲ್ಲಿ ತೊಡಗಿಸಿಕೊಂಡ ಸ್ವಾಮಿನಾಥನ್ ಅವರು ವೈಜ್ಞಾನಿಕ ತಳಹದಿಯ ಬೇಸಾಯ ಪದ್ಧತಿಗಳ ಅನುಷ್ಠಾನದಲ್ಲಿ ತಮ್ಮ ಗಮನವನ್ನು ಕೆಂದ್ರೀಕರಿಸಿದರು. ಇದೇ “ಹಸಿರು ಕ್ರಾಂತಿ” ಎಂದು ಹೆಸರು ಪಡೆಯಿತು. ತಮ್ಮ ಈ ಸಾಧನೆಗಾಗಿ ಡಾ. ಸ್ವಾಮಿನಾಥನ್ ಅವರು “ಭಾರತದ ಹಸಿರುಕ್ರಾಂತಿಯ ಪಿತಾಮಹ” ಎಂದು ಮನೆಮಾತಾದರು.
ಭಾರತದ ಕೃಷಿ ವರುಣನ ಕೃಪೆ ಇಲ್ಲವೇ ಅವಕೃಪೆಗೆ ಸಿಲುಕಿ ಡೋಲಾಯಮಾನವಾದ ಸ್ಥಿತಿ ಅನುಭವಿಸುವುದನ್ನು ಕಂಡ ಸ್ವಾಮಿನಾಥನ್ ‘sustainable water security system for India’ ಎಂಬ ವಿಷಯದಲ್ಲಿ ತೀವ್ರವಾದ ಚಿಂತನೆಯನ್ನು ನಡೆಸಿದರು. ಕೃಷಿ ಕ್ಷೇತ್ರದಲ್ಲಿ ಟ್ರಾಕ್ಟರ್ ಮತ್ತಿತರ ಉಳುಮೆ ಮತ್ತು ಸಾಗುವಳಿ ಯಂತ್ರಗಳ ಬಳಕೆ, ಕಳೆ ಕೀಳುವ ಯಂತ್ರಗಳ ಬಳಕೆ, ಬೆಳೆ ತೆಗೆಯುವುದಕ್ಕೂ ಯಂತ್ರಗಳ ಉತ್ಪಾದನೆ ಇವೇ ಮುಂತಾಗಿ ಹಲವು ನಿಟ್ಟಿನಲ್ಲಿ ಅವರು ಅಭಿವೃದ್ಧಿ ಪಡಿಸಿದ ವಿಶಿಷ್ಟ ತಂತ್ರಗಳು, ಕೃಷಿ ಕ್ಷೇತ್ರದಲ್ಲಿನ ಮಹತ್ವದ ಕ್ರಾಂತಿಗೆ ಪೂರಕವಾಗಿದ್ದವು.
ಡಾ. ಸ್ವಾಮಿನಾಥನ್ ಅವರು ೧೯೯೦ರ ವರ್ಷದಲ್ಲಿ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೆಶನ್ ಸಂಸ್ಥೆಯನ್ನು ಚೆನ್ನೈನಲ್ಲಿ ಸ್ಥಾಪಿಸಿ ಕೃಷಿಕ್ಷೇತ್ರದಲ್ಲಿನ ತಮ್ಮ ಕೊಡುಗೆಯನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ಈ ಸಂಸ್ಥೆ ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆಗಾಗಿ ಮಹತ್ವದ ಕಾಯಕ ನಡೆಸುತ್ತಿದೆ.
ಹೀಗೆ ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ.
Seamless Wikipedia browsing. On steroids.