ಗಣಿತಜ್ಞ From Wikipedia, the free encyclopedia
ಸರ್ ಐಸಾಕ್ ನ್ಯೂಟನ್ FRS (4 ಜನವರಿ 1643– 31 ಮಾರ್ಚ್ 1727 [OS: 25 ಡಿಸೆಂಬರ್ 1642– 20 March 1727])[1] ರವರು ಓರ್ವ ಆಂಗ್ಲ ಭೌತವಿಜ್ಞಾನಿ, ಗಣಿತಜ್ಞ , ಖಗೋಳಶಾಸ್ತ್ರಜ್ಞ, ಸ್ವಾಭಾವಿಕ ತತ್ವಜ್ಞಾನಿ, ರಸಸಿದ್ಧಾಂತಿ, ಹಾಗೂ ಬ್ರಹ್ಮಜ್ಞಾನಿಯಾಗಿದ್ದರು. ಗಮನಾರ್ಹ ಪ್ರಮಾಣದ ತಜ್ಞರು ಹಾಗೂ ಸಾರ್ವಜನಿಕರು ಅವರ ಬಗ್ಗೆ ಇತಿಹಾಸದ ಬಹುಪ್ರಭಾವಿ ವ್ಯಕ್ತಿ ಎಂದು ತಿಳಿದು ಭಾವಿಸಿಕೊಂಡಿದ್ದಾರೆ.[7] 1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು ಅಭಿಜಾತ ಯಂತ್ರಶಾಸ್ತ್ರಕ್ಕೆ ಉತ್ತಮ ತಳಪಾಯ ಒದಗಿಸಿಕೊಟ್ಟ ಕೃತಿಯೆಂಬ ಹೆಗ್ಗಳಿಕೆ ಹೊಂದಿದೆ. ಈ ಕೃತಿಯಲ್ಲಿ, ನ್ಯೂಟನ್ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ಹಾಗೂ ಮೂರು ಗತಿಸೂತ್ರಗಳು ಮುಂದಿನ ಮೂರು ಶತಮಾನಗಳ ಕಾಲ ಭೌತಿಕ ಬ್ರಹ್ಮಾಂಡದ ವೈಜ್ಞಾನಿಕ ನೋಟವನ್ನೇ ಆಳಿದವು. ನ್ಯೂಟನ್ರು ಭೂಮಿಯ ಮೇಲಿನ ವಸ್ತುಗಳ ಚಲನೆ ಹಾಗೂ ಬಾಹ್ಯಾಕಾಶ ವಸ್ತುಗಳ ಚಲನೆಯೂ ಒಂದೇ ಗುಂಪಿನ ನೈಸರ್ಗಿಕ ಸೂತ್ರಗಳನ್ನು ಪಾಲಿಸುತ್ತವೆ ಎಂದು ಕೆಪ್ಲರನ ಗ್ರಹಗಳ ಚಲನೆಯ ಮೇಲಿನ ಸೂತ್ರಗಳು ಹಾಗೂ ತನ್ನ ಗುರುತ್ವಾಕರ್ಷಣಾ ಸಿದ್ಧಾಂತಗಳ ನಡುವಿನ ಸಾಮರಸ್ಯವನ್ನು ತೋರಿಸಿದರು. ಆ ಮೂಲಕ ಸೂರ್ಯಕೇಂದ್ರಿತವ್ಯವಸ್ಥೆಯ ಉಳಿದ ಅನುಮಾನಗಳನ್ನು ಪರಿಹರಿಸಿ ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಿದರು.
Sir Isaac Newton | |
---|---|
ಜನನ | [OS: 25 December 1642][1] Woolsthorpe-by-Colsterworth Lincolnshire, England | ೪ ಜನವರಿ ೧೬೪೩
ಮರಣ | 31 March 1727 84) [OS: 20 March 1727][1] Kensington, Middlesex, England | (aged
ವಾಸಸ್ಥಳ | England |
ಪೌರತ್ವ | English |
ರಾಷ್ಟ್ರೀಯತೆ | English (British from 1707) |
ಕಾರ್ಯಕ್ಷೇತ್ರ | physics, mathematics, astronomy, natural philosophy, alchemy, theology |
ಸಂಸ್ಥೆಗಳು | University of Cambridge Royal Society Royal Mint |
ಅಭ್ಯಸಿಸಿದ ವಿದ್ಯಾಪೀಠ | Trinity College, Cambridge |
ಶೈಕ್ಷಣಿಕ ಸಲಹೆಗಾರರು | Isaac Barrow[2] Benjamin Pulleyn[3][4] |
ಗಮನಾರ್ಹ ವಿದ್ಯಾರ್ಥಿಗಳು | Roger Cotes William Whiston |
ಪ್ರಸಿದ್ಧಿಗೆ ಕಾರಣ | Newtonian mechanics Universal gravitation Calculus Optics |
ಪ್ರಭಾವಗಳು | Henry More[5] Polish Brethren[6] |
ಪ್ರಭಾವಿತರು | Nicolas Fatio de Duillier John Keill |
ಹಸ್ತಾಕ್ಷರ | |
ಟಿಪ್ಪಣಿಗಳು His mother was Hannah Ayscough. His half-niece was Catherine Barton. |
ಯಂತ್ರಶಾಸ್ತ್ರದಲ್ಲಿ, ನ್ಯೂಟನ್ರು ಆವೇಗ ಮತ್ತು ಕೋನೀಯ ಆವೇಗಗಳ ಸಂರಕ್ಷಣಾ ನಿಯಮಗಳನ್ನು ಪ್ರತಿಪಾದಿಸಿದರು. ದೃಗ್ವಿಜ್ಞಾನದಲ್ಲಿ, ಅವರು ಪ್ರಪ್ರಥಮವಾಗಿ ಕಾರ್ಯರೂಪದಲ್ಲಿ ಪ್ರತಿಫಲನ ದೂರದರ್ಶಕ[8] ವನ್ನು ನಿರ್ಮಿಸಿದರಲ್ಲದೆ ಅಶ್ರಕವು ಬಿಳಿ ಬೆಳಕನ್ನು ಚದುರಿಸಿ ಅನೇಕ ವರ್ಣಗಳನ್ನಾಗಿ ವಿಭಜಿಸಿ ದೃಶ್ಯಸಾಧ್ಯ ರೋಹಿತವನ್ನಾಗಿಸಬಲ್ಲದು ಎಂಬ ಅವಲೋಕನದ ಮೇಲೆ ಆಧಾರಿತವಾಗಿ ವರ್ಣ ಸಿದ್ಧಾಂತವನ್ನು ವಿಷದಪಡಿಸಿದರು. ಅವರು ಪ್ರಯೋಗಾತ್ಮಕ ತಂಪಾಗಿಸುವಿಕೆಯ ಸೂತ್ರವನ್ನು ರಚಿಸಿದರಲ್ಲದೇ ಶಬ್ದದ ವೇಗವನ್ನು ಅಭ್ಯಸಿಸಿದರು.
ಗಣಿತಶಾಸ್ತ್ರದಲ್ಲಿ, ನ್ಯೂಟನ್ರು ಚಲನ ಮತ್ತು ಅಖಂಡ ಕಲನಗಳ ಅಭಿವೃದ್ಧಿಯ ಗೌರವವನ್ನು ಗಾಟ್ಫ್ರೀಡ್ ಲೇಬಿನಿಜ್/ಲೈಬ್ನಿಟ್ಸ್ರೊಂದಿಗೆ ಹಂಚಿಕೊಂಡಿದ್ದಾರೆ. ಸಾಧಾರಣೀಕರಿಸಿದ ದ್ವಿಪದ ಪ್ರಮೇಯವನ್ನು ನಿರೂಪಿಸಿದ ಅವರು "ನ್ಯೂಟನ್ರ ವಿಧಾನ" ಎಂದು ಕರೆಯಲ್ಪಡುವ ಫಲನಯಲ್ಲಿರುವ ಸೊನ್ನೆಗಳನ್ನು ಅಂದಾಜಿಸುವ ವಿಧಾನವನ್ನು ಕಂಡುಹಿಡಿದು ಘಾತಸರಣಿಗಳ ಅಧ್ಯಯನಕ್ಕೆ ಕಾಣಿಕೆ ನೀಡಿದರು.
ವಿಜ್ಞಾನದ ಇತಿಹಾಸದಲ್ಲಿ ನ್ಯೂಟನ್ ಅಥವಾ ಆಲ್ಬರ್ಟ್ ಐನ್ಸ್ಟೀನ್ರಲ್ಲಿ ಯಾರು ಹೆಚ್ಚಿನ ಪ್ರಭಾವ ಬೀರಿದ್ದರು ಎಂಬ ಬಗ್ಗೆ ಬ್ರಿಟನ್ನ ರಾಯಲ್ ಸೊಸೈಟಿಯು 2005ರಲ್ಲಿ ನಡೆಸಿದ ವಿಜ್ಞಾನಿಗಳ ಮತ್ತು ಸಾರ್ವಜನಿಕರ ಸಮೀಕ್ಷೆಯಲ್ಲಿ ಸ್ಟಷ್ಟವಾದ ಪ್ರಕಾರ ನ್ಯೂಟನ್ರು ವಿಜ್ಞಾನಿಗಳಿಗೆ ಈಗಲೂ ಪ್ರಭಾವಶಾಲಿಯಾಗಿಯೇ ಮುಂದುವರೆದಿದ್ದಾರೆ. ಒಟ್ಟಾರೆಯಾಗಿ ವಿಜ್ಞಾನಕ್ಕೆ ನೀಡಿದ ಕೊಡುಗೆಯಲ್ಲಿ ಹೆಚ್ಚಿನ ಪಾಲನ್ನು, ನ್ಯೂಟನ್ ನೀಡಿದ್ದಾರೆ ಎಂದು ಪರಿಗಣಿತವಾಗಿದ್ದರೂ, ಮನುಕುಲಕ್ಕೆ ನೀಡಿದ ಕೊಡುಗೆಯಲ್ಲಿ ಇಬ್ಬರೂ ಸಹಾ ಸಮೀಪವರ್ತಿಗಳು.[9]
ನ್ಯೂಟನ್ರು ಸಂಪ್ರದಾಯಬದ್ಧ ಕ್ರೈಸ್ತರಲ್ಲದೇ ಇದ್ದರೂ ಬಹಳಷ್ಟು ಧರ್ಮನಿಷ್ಟರಾಗಿದ್ದು, ಇಂದು ಅವರನ್ನು ನೆನೆಸಿಕೊಳ್ಳುವ ಪ್ರಕೃತಿ/ನೈಸರ್ಗಿಕ ವಿಜ್ಞಾನಕ್ಕಿಂತಲೂ ಹೆಚ್ಚು ಬೈಬಲ್ನ ವ್ಯಾಖ್ಯಾನಗಳನ್ನು ಬರೆದಿದ್ದರು.
ಲಿಂಕನ್ಷೈರ್ ಕೌಂಟಿಯ ಒಂದು ಸಣ್ಣ ಹಳ್ಳಿ ವೂಲ್ಸ್ಥೋರ್ಪ್-ಬೈ-ಕೋಲ್ಸ್ಟರ್ವರ್ತ್ಲ್ಲಿನ ವೂಲ್ಸ್ಥೋರ್ಪ್ ಮೇನರ್/ಮ್ಯಾನರ್ ಎಂಬಲ್ಲಿ, ಐಸಾಕ್ ನ್ಯೂಟನ್ರು 4 ಜನವರಿ 1643 [OS: 25 ಡಿಸೆಂಬರ್ 1642][1]ರಂದು ಜನಿಸಿದರು. ನ್ಯೂಟನ್ರು ಹುಟ್ಟಿದ ಆ ಸಮಯದಲ್ಲಿ, ಇಂಗ್ಲೆಂಡ್ ಗ್ರೆಗೋರಿಯನ್ ಪಂಚಾಂಗವನ್ನು ಅಳವಡಿಸಿಕೊಂಡಿರಲಿಲ್ಲ, ಆದ್ದರಿಂದ ಅವರ ಹುಟ್ಟಿದ ದಿನಾಂಕವನ್ನು ಕ್ರಿಸ್ಮಸ್ ದಿನ, 25 ಡಿಸೆಂಬರ್ 1642 ಎಂದು ದಾಖಲಿಸಲಾಗಿತ್ತು. ಅಲ್ಲಿನ ಶ್ರೀಮಂತ ರೈತ ಐಸಾಕ್ ನ್ಯೂಟನ್ ಎಂಬುದೇ ಹೆಸರಿನ ತನ್ನ ತಂದೆಯ ಮರಣದ ಮೂರು ತಿಂಗಳ ನಂತರ ನ್ಯೂಟನ್ ಹುಟ್ಟಿದರು. ಅಕಾಲಿಕ ಜನನದ ಕಾರಣ, ಆತ ತೀರಾ ಪುಟ್ಟ ಗಾತ್ರದ ಮಗುವಾಗಿದ್ದ, ಆತನ ತಾಯಿ ಹನ್ನಾ ಐಸ್ಕಫ್ ಹೇಳಿದರೆನ್ನಲಾಗುವ ಹಾಗೆ ಆತ ಕ್ವಾರ್ಟ್(ಗ್ಯಾಲನ್ನಿನ ನಾಲ್ಕನೇ ಒಂದು ಭಾಗ ಹಿಡಿಸುವ) (≈ 1.1 ಲೀಟರ್) ಲೋಟದೊಳಗೆ ಹಿಡಿಸುತ್ತಿದ್ದ. ಈ ಮಾಹಿತಿಯಿಂದ, ಸುಮಾರು 11ರಿಂದ 15 ವಾರಗಳ ಮುಂಚೆ ಜನಿಸಿದ್ದಿರಬಹುದು ಎಂದು ಅಂದಾಜಿಸಬಹುದಾಗಿದೆ. ನ್ಯೂಟನ್ಗೆ ಮೂರು ವರ್ಷವಾಗಿದ್ದಾಗ, ಆತನ ತಾಯಿ ಮರುಮದುವೆಯಾಗಿ, ತನ್ನ ಮಗನನ್ನು ಆತನ ತಾಯಿಯ ಕಡೆಯ ಅಜ್ಜಿ ಮಾರ್ಗೆರಿ ಐಸ್ಕಫ್ಳ ಆರೈಕೆಯಲ್ಲಿ ಬಿಟ್ಟು ತನ್ನ ನವಪತಿ ರೆವರೆಂಡ್ ಬರ್ನಾಬಸ್ ಸ್ಮಿತ್ರೊಡನೆ ಇರಲು ತೆರಳಿದರು. ಬಾಲಕ ಐಸಾಕ್ ತನ್ನ ಮಲತಂದೆಯನ್ನು ಇಷ್ಟಪಡದೇ, ಆತನನ್ನು ಮದುವೆಯಾದ ಕಾರಣ ತನ್ನ ತಾಯಿಯ ಮೇಲೆ ಶತೃತ್ವ ಬೆಳೆಸಿಕೊಂಡಿದ್ದುದಾಗಿ 19ನೇ ವಯಸ್ಸಿನ ತನಕ ಬರೆದಿಡಲಾದ ಪಾಪಗಳ ಪಟ್ಟಿಯಲ್ಲಿನ ಸಾಲಿನ ಮೂಲಕ ಶ್ರುತವಾಗುತ್ತದೆ: "ನನ್ನ ತಂದೆ ಹಾಗೂ ತಾಯಿ ಸ್ಮಿತ್ರನ್ನು ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುತ್ತೇನೆ ಎಂದು ಬೆದರಿಸಿದ್ದು."[10]
ಸುಮಾರು ಹನ್ನೆರಡನೇ ವರ್ಷದಿಂದ ಹದಿನೇಳನೆ ವರ್ಷದವರೆಗೆ, ನ್ಯೂಟನ್ರು ದ ಕಿಂಗ್ಸ್ ಸ್ಕೂಲ್, ಗ್ರಂಥಮ್ (ಅಲ್ಲಿನ ಗ್ರಂಥಾಲಯದ ಕಿಟಕಿಯ ಹೊಸ್ತಿಲಲ್ಲಿ ಇನ್ನೂ ಆತನ ಸಹಿಯನ್ನು ನೋಡಬಹುದು) ಎಂಬಲ್ಲಿ ಶಿಕ್ಷಣ ಪಡೆದನು. ಆತನನ್ನು ಶಾಲೆಯಿಂದ ಬಿಡಿಸಿದ ನಂತರ, ಅಕ್ಟೋಬರ್ 1659ರ ವೇಳೆಗೆ, ಆತನನ್ನು ವೂಲ್ಸ್ಥೋರ್ಪ್-ಬೈ-ಕೋಲ್ಸ್ಟರ್ವರ್ತ್ನಲ್ಲಿ ನೋಡಬಹುದಿತ್ತು. ಆತನ ಎರಡನೇ ಬಾರಿಗೆ ವಿಧವೆಯಾದ ತಾಯಿ, ಆತನನ್ನು ರೈತನನ್ನಾಗಿಸಲು ಪ್ರಯತ್ನಿಸುತ್ತಿದ್ದಳು. ಆತನು ಕೃಷಿಯನ್ನು ದ್ವೇಷಿಸುತ್ತಿದ್ದನು.[11] ಕಿಂಗ್ಸ್ ಸ್ಕೂಲ್ನ ಬೋಧಕ ಹೆನ್ರಿ ಸ್ಟೋಕ್ಸ್, ಆತನ ವಿದ್ಯೆಯನ್ನು ಪೂರೈಸಲು ಅನುವಾಗುವಂತೆ, ಮತ್ತೆ ಶಾಲೆಗೆ ಕಳುಹಿಸಲು ಅವನ ತಾಯಿಯನ್ನು ಒಪ್ಪಿಸಿದನು. ಶಾಲೆ ಬಳಿಯ ಪುಂಡರ ಮೇಲಿನ ಸೇಡು ತೀರಿಸುವ ಉದ್ದೇಶದಿಂದ ಭಾಗಶಃ ಪ್ರೇರಿತನಾಗಿ, ಆತನು ಉನ್ನತ-ಶ್ರೇಯಾಂಕಿತ ವಿದ್ಯಾರ್ಥಿಯಾದನು.[12]
ಜೂನ್ 1661ರಲ್ಲಿ, ಆತನನ್ನು ಕೇಂಬ್ರಿಡ್ಜ್ನ ಟ್ರಿನಿಟಿ ಮಹಾವಿದ್ಯಾಲಯ(ಕಾಲೇಜ್ಗೆ)ಕ್ಕೆ ಸೈಜರ್ ಆಗಿ - ಒಂದು ತರಹದ ಕೆಲಸ-ಶಿಕ್ಷಣದ ವ್ಯವಸ್ಥೆಯಡಿ ಸೇರಿಸಲಾಯಿತು.[13] ಆ ಸಮಯದಲ್ಲಿ, ವಿದ್ಯಾಲಯದ ಪಾಠಗಳು, ಅರಿಸ್ಟಾಟಲ್ರ ಮೇಲೆ ಆಧಾರಿತವಾಗಿದ್ದವು, ಆದರೆ ನ್ಯೂಟನ್ ಆಧುನಿಕ ತತ್ವಜ್ಞಾನಿಗಳಾದ ಡೆಸ್ಕರ್ಟೆಸ್ ಮತ್ತು ಖಗೋಳಶಾಸ್ತ್ರಜ್ಞರಾದ ಕೊಪರ್ನಿಕಸ್, ಗೆಲಿಲಿಯೊ ಮತ್ತು ಕೆಪ್ಲರ್ರಂತಹಾ ವ್ಯಕ್ತಿಗಳ ಮುಂದುವರಿದ ವಿಚಾರಗಳ ಬಗ್ಗೆ ಓದಲು ಆರಿಸಿಕೊಂಡರು. 1665ರಲ್ಲಿ, ಆತನು ಸಾಧಾರಣೀಕರಿಸಿದ ದ್ವಿಪದ ಪ್ರಮೇಯವನ್ನು ರಚಿಸಿ ಮುಂದೆ ಅನಂತಸೂಕ್ಷ್ಮ ಕಲನವಾದ ಗಣಿತ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು. ನ್ಯೂಟನ್ರು 1665ರ ಆಗಸ್ಟ್ನಲ್ಲಿ ಪದವಿ ಪಡೆದ ತಕ್ಷಣ ಮಹಾಮಾರಿ ಪ್ಲೇಗ್ನ ಮುಂಜಾಗ್ರತೆಗಾಗಿ, ವಿಶ್ವವಿದ್ಯಾಲಯವು ಮುಚ್ಚಿತು. ಸಾಧಾರಣ ಕೇಂಬ್ರಿಡ್ಜ್ ವಿದ್ಯಾರ್ಥಿಯಾಗಿಯೇ,[14] ನ್ಯೂಟನ್ರ ವೂಲ್ಸ್ಥೋರ್ಪ್ನ ಮನೆಯಲ್ಲಿನ ಮುಂದಿನ ಎರಡು ವರ್ಷಗಳ ಕಾಲ ನಡೆದ ಖಾಸಗಿ ಅಧ್ಯಯನಗಳು ಕಲನ, ದೃಗ್ವಿಜ್ಞಾನ ಮತ್ತು ಗುರುತ್ವಾಕರ್ಷಣೆಯ ನಿಯಮಗಳ ಅಭಿವೃದ್ಧಿಗೆ ಕಾರಣವಾದವು. 1667ರಲ್ಲಿ ಟ್ರಿನಿಟಿಯ ಫೆಲೋ ಆಗಿ ಕೇಂಬ್ರಿಡ್ಜ್ಗೆ ಮರಳಿದರು.[15]
ನ್ಯೂಟನ್ರ ಗಣಿತಶಾಸ್ತ್ರದ ಮೇಲಿನ ಅಧ್ಯಯನಗಳು "ಆ ಕಾಲದಲ್ಲಿ ಅಭ್ಯಸಿಸುತ್ತಿದ್ದ ಗಣಿತಶಾಸ್ತ್ರದ ಪ್ರತಿಯೊಂದು ವಿಭಾಗವನ್ನು ಪ್ರತ್ಯೇಕವಾಗಿ ಮುನ್ನಡೆಸಿತು" ಎಂಬ ಅಭಿಪ್ರಾಯವಿದೆ.[16] ವ್ಯತ್ಯಾಸದ ದರ ಅಥವಾ ಕಲನ ಎಂದು ಕರೆಯಲಾಗುವ ನ್ಯೂಟನ್ರ ಈ ವಿಷಯದ ಮೇಲಿನ ಮುಂಚಿನ ಅಧ್ಯಯನವನ್ನು ಈಗಲೂ ನೋಡಬಹುದು, ಉದಾಹರಣೆಗೆ, ಇತ್ತೀಚೆಗೆ ಪ್ರಕಟಿಸಿದ ನ್ಯೂಟನ್ರ ಗಣಿತಶಾಸ್ತ್ರದ ಪ್ರಬಂಧಗಳ ಭಾಗವಾದ ಅಕ್ಟೋಬರ್ 1666ರ ಹಸ್ತಪ್ರತಿಯಲ್ಲಿದೆ.[17] ಅವರ ಗಣಿತಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಮತ್ತೊಂದು ವಿಷಯವೆಂದರೆ ಅಪರಿಮಿತ ಸರಣಿ. "ಡೆ ಅನಾಲಿಸಿ ಪೆರ್ ಎಕ್ವೇಷನ್ಸ್ ನ್ಯೂಮರೋ ಟರ್ಮಿನೊರಮ್ ಇನ್ಫಿನಿಟಾಸ್" ("ಸಮೀಕರಣಗಳ ಮೂಲಕ ವಿಶ್ಲೇಷಣೆಯಲ್ಲಿ ಪರಿಮಾಣಗಳ ಸಂಖ್ಯೆ ಅಪರಿಮಿತ") ಎಂದು ಬರೆದಿದ್ದ ನ್ಯೂಟನ್ರ ಹಸ್ತಪ್ರತಿಯನ್ನು ಐಸಾಕ್ ಬಾರ್ರೋರವರು ಜಾನ್ ಕಾಲಿನ್ಸ್ರಿಗೆ ಜೂನ್ 1669ರಲ್ಲಿ ಕಳಿಸಿದ್ದರು: ಆಗಸ್ಟ್ 1669ರಲ್ಲಿ ಬಾರ್ರೋರವರು ಕಾಲಿನ್ಸ್ರವರಿಗೆ ಅದರ ಲೇಖಕರ ಬಗ್ಗೆ "ಆತ ಶ್ರೀ ನ್ಯೂಟನ್, ನಮ್ಮ ವಿದ್ಯಾಲಯದ ಓರ್ವ ಫೆಲೊ, ಚಿಕ್ಕವಯಸ್ಸಿನವರಾಗಿದ್ದರೂ ಅದ್ಭುತ ಮೇಧಾವಿ ಹಾಗೂ ಈ ವಿಷಯಗಳಲ್ಲಿ ತಜ್ಞತೆ ಹೊಂದಿದ್ದಾರೆ" ಎಂದು ಪರಿಚಯಿಸಿದರು.[18] ನ್ಯೂಟನ್ರು ನಂತರ ಲೇಬಿನಿಜ್ರೊಂದಿಗೆ ಅನಂತಸೂಕ್ಷ್ಮ ಕಲನದ ಬೆಳವಣಿಗೆಯಲ್ಲಿನ ಆದ್ಯತೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಬಹಳಷ್ಟು ಆಧುನಿಕ ಇತಿಹಾಸಕಾರರ ಪ್ರಕಾರ ನ್ಯೂಟನ್ ಮತ್ತು ಲೇಬಿನಿಜ್ ಇಬ್ಬರೂ ಅನಂತಸೂಕ್ಷ್ಮ ಕಲನವನ್ನು ಸ್ವತಂತ್ರವಾಗಿ, ಆದರೆ ವಿಭಿನ್ನ ಅಂಕನ ಪದ್ಧತಿಗಳೊಂದಿಗೆ ಅಭಿವೃದ್ಧಿಪಡಿಸಿದರು. ಪ್ರಾಸಂಗಿಕವಾಗಿ ನ್ಯೂಟನ್ರು ಇದರ ಬಗ್ಗೆ 1693ರವರೆಗೆ ಏನನ್ನೂ ಪ್ರಕಟಿಸಿರಲಿಲ್ಲ, ಹಾಗೂ 1704ರವರೆಗೆ ಪೂರ್ಣ ಹೇಳಿಕೆ ನೀಡಿರಲಿಲ್ಲ, ಆದರೆ ಲೇಬಿನಿಜ್ರು 1684ರಲ್ಲಿ ತಮ್ಮ ವಿಧಾನಗಳ ಪೂರ್ಣ ವಿವರಣೆಯನ್ನು ಪ್ರಕಟಿಸಲು ಆರಂಭಿಸಿದ್ದರು. (ಲೇಬಿನಿಜ್ರ ಅಂಕನ ಪದ್ಧತಿ ಮತ್ತು "ವಿಕಲನ ವಿಧಾನ"ಗಳು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಅನುಕೂಲಕರ ಅಂಕನಪದ್ಧತಿಗಳು ಎಂಬ ಅಭಿಪ್ರಾಯವಿದ್ದು ಐರೋಪ್ಯ ಗಣಿತಜ್ಞರು, ಹಾಗೂ 1820ರ ನಂತರ ಅಥವಾ ಆಸುಪಾಸಿನಲ್ಲಿ ಬ್ರಿಟಿಷ್ ಗಣಿತಜ್ಞರುಗಳಿಂದ ಅನುಸರಿಸಲ್ಪಟ್ಟಿದೆ.) ಆದಾಗ್ಯೂ ಆ ತರಹದ ಅಭಿಪ್ರಾಯದಲ್ಲಿ, ನ್ಯೂಟನ್ರ ಕಾಲದ ಮತ್ತು ಆಧುನಿಕ ಕಾಲದ ವಿಮರ್ಶಕರು ನ್ಯೂಟನ್ರ ಪ್ರಿನ್ಸಿಪಿಯಾ ದ ಪ್ರಥಮ ಪುಸ್ತಕ/Book 1ದಲ್ಲಿ (1687ರಲ್ಲಿ ಪ್ರಕಟವಾಗಿತ್ತು) ಮತ್ತು ಅದರ ಪೂರ್ವಭಾವಿ ಹಸ್ತಪ್ರತಿಗಳಾದ 1684ರ ಡೆ ಮೊಟು ಕಾರ್ಪೋರಂ ಇನ್ ಜೀರಂ ("ಕಕ್ಷೆಯಲ್ಲಿನ ವಸ್ತುಗಳ ಚಲನೆಯ ಬಗ್ಗೆ")ಗಳ ವಿಚಾರದಲ್ಲಿ ಗಮನ ಸೆಳೆದ ಹಾಗೆ ಕಲನದ ವಿಷಯವನ್ನು ಗಮನಿಸುವುದನ್ನು ಬಿಡಲಾಗಿತ್ತು. ನಾವು ತಿಳಿದ ಹಾಗೆ ಪ್ರಿನ್ಸಿಪಿಯಾ ವನ್ನು ಕಲನದ ಭಾಷೆಯಲ್ಲಿ ಬರೆದಿರಲಿಲ್ಲ ಅಥವಾ ನ್ಯೂಟನ್ರ (ನಂತರದ) 'ಬಿಂದು/ಡಾಟ್' ಅಂಕನಪದ್ಧತಿಯಲ್ಲಿ ಬರೆದಂತೆ ಇರಲಿಲ್ಲ. ಆದರೆ ನ್ಯೂಟನ್ರ ಅಧ್ಯಯನವು ನಶಿಸುವ ಅಲ್ಪ ಪ್ರಮಾಣದ ಅನುಪಾತಗಳ ಮಿತಿಯ ಮೇಲೆ ಆಧಾರಿತವಾದ ಜ್ಯಾಮಿತಿಯ ರೂಪದಲ್ಲಿ ಅನಂತಸೂಕ್ಷ್ಮ ಕಲನವನ್ನು ವ್ಯಾಪಕವಾಗಿ ಬಳಸುತ್ತದೆ : ನ್ಯೂಟನ್ರು ಪ್ರಿನ್ಸಿಪಿಯಾ ದಲ್ಲೇ 'ಮೊದಲ ಹಾಗೂ ಕೊನೆಯ ಅನುಪಾತದ ವಿಧಾನ'[19] ಎಂಬ ಹೆಸರಿನಲ್ಲಿ ಇದನ್ನು ನಿದರ್ಶಿಸಿ, ತನ್ನ ಪ್ರತಿಪಾದನೆಯನ್ನು ಇದೇ ರೀತಿಯಲ್ಲಿ ಏಕೆ ಹಾಕಿದ್ದೆಂದು[20] 'ಈ ಮೂಲಕ ಅವಿಭಾಜ್ಯ ಸಂಖ್ಯೆಗಳ ವಿಧಾನದ ಮೂಲಕ ಅದನ್ನೇ ಮಾಡಲಾಗುತ್ತದೆ' ಎಂಬ ಷರಾದೊಂದಿಗೆ ವಿವರಿಸಿದ್ದಾರೆ. ಈ ವಿವರಣೆಗಳಿಂದಾಗಿಯೇ ಪ್ರಿನ್ಸಿಪಿಯಾ ವನ್ನು ಆಧುನಿಕ ಕಾಲದಲ್ಲಿ [21] "ಅನಂತಸೂಕ್ಷ್ಮ ಕಲನದ ಸಿದ್ಧಾಂತ ಹಾಗೂ ಅನ್ವಯಗಳೊಂದಿಗೆ ಸಮೃದ್ಧವಾದ ಪುಸ್ತಕ" ಎಂದು ಹಾಗೂ "ಲೆಕ್ವೆಲ್ ಎಸ್ಟ್ ಪ್ರೆಸ್ಕ್ಯು ಟೂಟ್ ಡೆ ಸೆ ಕ್ಯಾಲ್ಕಲ್" ('ಇದರಲ್ಲಿರುವುದೆಲ್ಲಾ ಹೆಚ್ಚುಕಡಿಮೆ ಕಲನವೇ') ಎಂದು ನ್ಯೂಟನ್ರ ಕಾಲ[22] ದಲ್ಲಿ ಅಭಿಪ್ರಾಯಪಡಲಾಗಿತ್ತು. "ಅನಂತಸೂಕ್ಷ್ಮ ಸಣ್ಣ ವಸ್ತುಗಳ ಒಂದು ಅಥವಾ ಹೆಚ್ಚಿನ" ಎಂಬ ವಿಷಯವನ್ನೊಳಗೊಂಡ ವಿಧಾನಗಳನ್ನು ನ್ಯೂಟನ್/ಅವರ 1684ರಲ್ಲಿನ[23] ಡೆ ಮೊಟು ಕಾರ್ಪೊರಂ ಇನ್ ಜೀರಂ ಮತ್ತು "1684ಕ್ಕೆ ಮುಂಚಿನ ಎರಡು ದಶಕಗಳಲ್ಲಿ"[24] ಚಲನೆಯ ಬಗೆಗಿನ ಪ್ರಬಂಧಗಳಲ್ಲಿ ನ್ಯೂಟನ್ರು ಬಳಸಿದ್ದರು.
ನ್ಯೂಟನ್ರು ತಮ್ಮ ಕಲನವನ್ನು ಪ್ರಕಟಿಸಲು ಇಚ್ಛೆಪಡದ ಮೂಲ ಕಾರಣ ತಮ್ಮನ್ನು ಆ ಬಗ್ಗೆ ಅಪಹಾಸ್ಯ ಮಾಡುತ್ತಾರೆಂಬ ಭಯ ಎನ್ನಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ನ್ಯೂಟನ್ರು ಮೊದಲಿಂದಲೂ ನ್ಯೂಟನ್ರ ಗುರುತ್ವಾಕರ್ಷಣ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಸ್ವಿಸ್ ಗಣಿತಜ್ಞ ನಿಕೊಲಸ್ ಫಾಟಿಯೊ ಡೆ ಡುಯಿಲಿಯರ್ರೊಂದಿಗೆ ಸಮೀಪದ ಬಾಂಧವ್ಯ ಹೊಂದಿದ್ದರು. 1691ರಲ್ಲಿ ಡುಯಿಲಿಯರ್ ನ್ಯೂಟನ್ರ ಪ್ರಿನ್ಸಿಪಿಯಾ ದ ನವೀನ ಆವೃತ್ತಿ ಸಿದ್ಧ ಮಾಡಲು ಯೋಜಿಸಿದ್ದರು, ಆದರೆ ಅದನ್ನು ಪೂರೈಸಲಿಲ್ಲ. ಆದರೆ, 1693ರಲ್ಲಿ ಇವರಿಬ್ಬರ ನಡುವಿನ ಬಾಂಧವ್ಯವು ಬದಲಾಯಿತು. ಆ ಸಮಯದಲ್ಲಿ, ಡುಯಿಲಿಯರ್ ಲೇಬಿನಿಜ್[25] ರೊಂದಿಗೆ ಅನೇಕ ಪತ್ರವ್ಯವಹಾರಗಳನ್ನು ಸಹಾ ನಡೆಸಿದ್ದರು.
1699ರಿಂದ ರಾಯಲ್ ಸೊಸೈಟಿಯ ಇತರ ಸದಸ್ಯರು (ನ್ಯೂಟನ್ರು ಅದರ ಸದಸ್ಯರಾಗಿದ್ದರು) ಲೇಬಿನಿಜ್ರ ಮೇಲೆ ಕೃತಿಚೌರ್ಯದ ಆಪಾದನೆ ಹೊರಿಸಲಾರಂಭಿಸಿದರು, 1711ರಲ್ಲಿ ಈ ವಿವಾದವು ಪೂರ್ಣ ಪ್ರಮಾಣದಲ್ಲಿ ಭುಗಿಲೆದ್ದಿತು. ನ್ಯೂಟನ್ರ ರಾಯಲ್ ಸೊಸೈಟಿ ನಡೆಸಿದ ಅಧ್ಯಯನದಲ್ಲಿ ನ್ಯೂಟನ್ರು ನಿಜವಾದ ಶೋಧಕರೆಂದು ಲೇಬಿನಿಜ್ರನ್ನು ಓರ್ವ ಮೋಸಗಾರರೆಂದು ಘೋಷಿಸಿತು. ನ್ಯೂಟನ್ರು ಸ್ವತಃ ಅಧ್ಯಯನದ ಮುಕ್ತಾಯದಲ್ಲಿ ಲೇಬಿನಿಜ್ರನ್ನು ಟೀಕಿಸಿದ್ದರೆಂದು ತಿಳಿದ ಮೇಲೆ ಈ ಅಧ್ಯಯನವನ್ನೇ ಅನುಮಾನಿಸಲಾಯಿತು. ಆಗ ಆರಂಭಗೊಂಡ ಕಟುವಾದ ನ್ಯೂಟನ್ v. ಲೇಬಿನಿಜ್ ಕಲನ ವಿವಾದವು, 1716ರಲ್ಲಿ [30] ಲೇಬಿನಿಜ್ರ ಮರಣದವರೆಗೂ ನಡೆದು ನ್ಯೂಟನ್ ಮತ್ತು ಲೇಬಿನಿಜ್ರ ಮನಶ್ಶಾಂತಿಯನ್ನು ಕಿತ್ತುಕೊಂಡಿತ್ತು.[26]
ಸಾಮಾನ್ಯವಾಗಿ ನ್ಯೂಟನ್ರನ್ನು ಯಾವುದೇ ಘಾತಕ್ಕೆ ಅನ್ವಯವಾಗುವ ಸಾಮಾನ್ಯೀಕರಿಸಿದ ದ್ವಿಪದ ಪ್ರಮೇಯದ ಶೋಧಕರೆಂದು ಗೌರವಿಸಲಾಗುತ್ತದೆ. ನ್ಯೂಟನ್ರ ಅನನ್ಯತೆ, ನ್ಯೂಟನ್ರ ವಿಧಾನ, ಘನ ಸಮತಲ ವಕ್ರಗಳ ವರ್ಗೀಕರಣ (ಎರಡು ಚರಾಕ್ಷರಗಳಲ್ಲಿನ ಮೂರನೇ ದರ್ಜೆಯ ಬಹುಪದೀಯ ಪರಿಮಾಣಗಳು), ಪರಿಮಿತ ವ್ಯತ್ಯಾಸಗಳ ಸಿದ್ಧಾಂತಕ್ಕೆ ಗಮನಾರ್ಹ ಕೊಡುಗೆ ನೀಡಿದರಲ್ಲದೇ, ಘಾತಸೂಚಿಗಳನ್ನು ಬಳಸಿದ ಹಾಗೂ ಡಿಯೊಫಾಂಟೈನ್ ಸಮೀಕರಣಕ್ಕೆ ಪರಿಹಾರಗಳನ್ನು ನೀಡಲು ಭುಜಯುಗ್ಮ ರೇಖಾಗಣಿತವನ್ನು ಬಳಸಿದ ಪ್ರಥಮರಾಗಿದ್ದಾರೆ. ಹರಾತ್ಮಕ ಸರಣಿಗಳ ಭಾಗಶಃ ಸಂಕಲನವನ್ನು ಪ್ರತಿಘಾತಗಳನ್ನು ಬಳಸಿ ಅಂದಾಜಿಸಿದ್ದರು (ಯೂಲರ್'ರ ಸಂಕಲನ ಸೂತ್ರದ ಪೂರ್ವಗಾಮಿ), ಮತ್ತು ಘಾತ ಸರಣಿಗಳನ್ನು ಆತ್ಮವಿಶ್ವಾಸದಿಂದ ಬಳಸಿದ ಹಾಗೂ ಪ್ರತ್ಯಾವರ್ತಿಸಿದ ಪ್ರಥಮ ವ್ಯಕ್ತಿಯೂ ಹೌದು.
ಲುಕಾಸಿಯಾದ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ 1669ರಲ್ಲಿ ಆಯ್ಕೆಯಾದರು. ಆ ದಿನಗಳಲ್ಲಿ, ಕೇಂಬ್ರಿಡ್ಜ್ನ ಅಥವಾ ಆಕ್ಸ್ಫರ್ಡ್ನ ಯಾವುದೇ ಫೆಲೊ ದೀಕ್ಷೆ ಪಡೆದ ಆಂಗ್ಲಿಕನ್ ಪಾದ್ರಿಯಾಗಿರಬೇಕಿತ್ತು. ಆದಾಗ್ಯೂ ಲುಕಾಸಿಯಾದ ಪ್ರಾಧ್ಯಾಪಕ ಹುದ್ದೆಯ ನಿಯಮಗಳ ಪ್ರಕಾರ ಚರ್ಚ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಬಾರದು ಎಂದಿತ್ತು (ವಿಜ್ಞಾನಕ್ಕೆಂದು ಹೆಚ್ಚಿನ ಸಮಯ ಮೀಸಲಿಡಲೆಂದಿರಬಹುದು). ನ್ಯೂಟನ್ರು ದೀಕ್ಷೆ ಪಡೆಯಬೇಕೆಂಬ ಅಗತ್ಯದಿಂದ ವಿನಾಯಿತಿ ನೀಡಬೇಕೆಂದು ವಾದ ಮಾಡಿದರು, ಅನುಮತಿ ನೀಡಬೇಕಿದ್ದ ಚಾರ್ಲ್ಸ್ II ಈ ವಾದವನ್ನು ಒಪ್ಪಿದರು. ಹಾಗಾಗಿ ನ್ಯೂಟನ್ರ ಧಾರ್ಮಿಕ ನಿಲುವುಗಳು ಹಾಗೂ ಆಂಗ್ಲಿಕನ್ ಸಂಪ್ರದಾಯಶರಣತೆಗಳ ನಡುವಿನ ಸಂಘರ್ಷವು ನಿವಾರಣೆಯಾಯಿತು.[27]
1670ರಿಂದ 1672ರವರೆಗೆ, ನ್ಯೂಟನ್ರು ದೃಗ್ವಿಜ್ಞಾನದ ಮೇಲೆ ಉಪನ್ಯಾಸ ನೀಡಿದರು/ಉಪನ್ಯಾಸಕರಾಗಿದ್ದರು. ಈ ಅವಧಿಯಲ್ಲಿ ಅವರು ಬೆಳಕಿನ ವಕ್ರೀಭವನವನ್ನು ಪರಿಶೋಧಿಸಿದರು, ಪ್ರಿಸಮ್/ಅಶ್ರಗ ಶ್ವೇತ ಬೆಳಕನ್ನು ವರ್ಣಗಳ ರೋಹಿತವನ್ನಾಗಿ ವಿಂಗಡಿಸುತ್ತದೆ ಹಾಗೂ ಮಧ್ಯದಲ್ಲಿ ಮಸೂರವನ್ನಿಟ್ಟು ಎರಡನೇ ಪ್ರಿಸಮ್/ಅಶ್ರಗವನ್ನಿಟ್ಟರೆ, ಅದು ಬಹುವರ್ಣದ ರೋಹಿತವನ್ನು ಮತ್ತೆ ಶ್ವೇತ ಬೆಳಕಾಗಿ ಒಂದುಗೂಡಿಸುತ್ತದೆ ಎಂದು ಪ್ರಮಾಣೀಕರಿಸಿದರು.[29]
ಅವರು ಬಣ್ಣದ ಬೆಳಕು ತನ್ನ ಲಕ್ಷಣಗಳನ್ನು ಬದಲಾಯಿಸುವುದಿಲ್ಲವೆಂದು, ಬಣ್ಣದ ಪ್ರಭೆಯೊಂದನ್ನು ಪ್ರತ್ಯೇಕಿಸಿ ವಿವಿಧ ವಸ್ತುಗಳ ಮೇಲೆ ಹಾಯಿಸಿ ತೋರಿಸಿದರು. ನ್ಯೂಟನ್ರು ಪ್ರತಿಫಲಿಸಿದಾಗಲಿ ಅಥವಾ ಚದುರಿದಾಗಲಿ ಅಥವಾ ಪಸರಿಸಿದಾಗಾಗಲಿ ಅದರ ವರ್ಣವು ಬದಲಾಗದೇ ಇರುವುದನ್ನು ತೋರಿಸಿದರು. ಇದರಿಂದಾಗಿ ಅವರು ಬಣ್ಣದ ರಚನೆಯು ಮುಂಚೆಯೇ ವರ್ಣಮಯವಾಗಿರುವ ಬೆಳಕಿನೊಡನೆ ವರ್ತಿಸುವುದರಿಂದಾಗಿ ಆಗುವುದೇ ಹೊರತು ವಸ್ತುಗಳು ತಮಗೆ ತಾವೇ ವರ್ಣವನ್ನು ಹೊಂದಿರುವುದಿಲ್ಲ ಎಂಬ ನಿರ್ಣಯಕ್ಕೆ ಬಂದರು. ಇದನ್ನು ನ್ಯೂಟನ್ರ ವರ್ಣ ಸಿದ್ಧಾಂತ ಎನ್ನಲಾಗುತ್ತದೆ.[30]
ಈ ಅಧ್ಯಯನದಿಂದ ಯಾವುದೇ ಪ್ರತಿಫಲಿತ ದೂರದರ್ಶಕದ ಮಸೂರವು ಬೆಳಕಿನ ಚದುರುವಿಕೆಯಿಂದಾಗುವ ವರ್ಣಗಳ ಪ್ರಭೆಯ ಸಮಸ್ಯೆ ಎದುರಿಸುತ್ತದೆ ಎಂಬ ನಿರ್ಣಯಕ್ಕೆ ಬಂದರು(ವರ್ಣೋನ್ಮಾದ), ಹಾಗೂ ಇದಕ್ಕೆ ಮಾದರಿಯಾಗಿ ಅವರು ಈ ಸಮಸ್ಯೆಯ ನಿವಾರಕವಾಗಿ ಕನ್ನಡಿಯೊಂದನ್ನು ಬಳಸಿದ ದೂರದರ್ಶಕವನ್ನು ತಯಾರಿಸಿದರು.[31] ವಾಸ್ತವವಾಗಿ ಕಾರ್ಯತಃ ಇಂದಿಗೆ ನ್ಯೂಟೊನಿಯನ್ ದೂರದರ್ಶಕ,[31] ಎಂದು ಖ್ಯಾತವಾಗಿರುವ ಪ್ರತಿಫಲಿತ ದೂರದರ್ಶಕದ ನಿರ್ಮಾಣವು, ಸಮರ್ಪಕ ಕನ್ನಡಿ ವಸ್ತುವಿನ ಗುರುತಿಸುವಿಕೆ ಹಾಗೂ ಆಕಾರ ನೀಡುವ ತಂತ್ರದ ಸಮಸ್ಯೆಯ ಪರಿಹಾರದ ಹುಡುಕಾಟದಲ್ಲಿರುವಾಗ ಆಯಿತು. ನ್ಯೂಟನ್ರು ತಮ್ಮ ದೂರದರ್ಶಕಗಳ ದೃಗ್ವಿಜ್ಞಾನ ಗುಣಮಟ್ಟವನ್ನು ನಿರ್ಧರಿಸಲು ನ್ಯೂಟನ್ರ ರಿಂಗ್ಗಳನ್ನು ಬಳಸಿ ಐಚ್ಛಿಕ ಸಂಯೋಜನೆಯ ಹೆಚ್ಚು ಪ್ರತಿಫಲಿಸುವ ಪ್ರತಿಫಲನ ಲೋಹದಿಂದ ಉಜ್ಜಿ ತನ್ನದೇ ರೀತಿಯ ಕನ್ನಡಿಗಳನ್ನು ತಯಾರಿಸಿದರು. 1668ರ[32] ಕೊನೆಯಲ್ಲಿ ಪ್ರಥಮ ಪ್ರತಿಫಲಿತ ದೂರದರ್ಶಕ ವನ್ನು ನಿರ್ಮಿಸಲು ಸಾಧ್ಯವಾಯಿತು. 1671ರಲ್ಲಿ ರಾಯಲ್ ಸೊಸೈಟಿಯು ಅವರ ಪ್ರತಿಫಲಿತ ದೂರದರ್ಶಕದ ಪ್ರದರ್ಶನವನ್ನು ಕೋರಿತು.[33] ಅವರ ಆಸಕ್ತಿಯು ಅವರನ್ನು ಹುರಿದುಂಬಿಸಿ ಆನ್ ಕಲರ್ ಎಂಬ ನಿಬಂಧವನ್ನು ಪ್ರಕಟಿಸುವಂತೆ ಮಾಡಿತು, ಅದನ್ನು ನಂತರ ಅವರು ಆಪ್ಟಿಕ್ಸ್ ಪುಸ್ತಕ ವಾಗಿ ವಿಸ್ತರಿಸಿದರು. ರಾಬರ್ಟ್ ಹುಕ್ರು ನ್ಯೂಟನ್ರ ಕೆಲ ಆಲೋಚನೆಗಳನ್ನು ಟೀಕಿಸಿದ್ದರಿಂದ, ನ್ಯೂಟನ್ರು ಎಷ್ಟು ನೊಂದುಕೊಂಡರೆಂದರೆ ಸಾರ್ವಜನಿಕ ಚರ್ಚೆಯಿಂದಲೇ ಹೊರಗುಳಿದರು. 1679-80ರಲ್ಲಿ, ಹುಕ್ರು ರಾಯಲ್ ಸೊಸೈಟಿಯ ಪತ್ರವ್ಯವಹಾರದ ನಿರ್ವಾಹಕರೆಂದು ನೇಮಕಗೊಂಡಾಗ ರಾಯಲ್ ಸೊಸೈಟಿಯ ವ್ಯವಹಾರ[34] ಗಳಲ್ಲಿನ ನ್ಯೂಟನ್ರ ಪಾತ್ರದ ಬಗ್ಗೆ ಪತ್ರವ್ಯವಹಾರವನ್ನು ಆರಂಭಿಸಿದಾಗ ನ್ಯೂಟನ್ ಮತ್ತು ಹುಕ್ ಸಣ್ಣ ವಾಗ್ವಾದ ರೂಪದ ವಿಚಾರ ವಿನಿಮಯ ನಡೆಸಿದರು, ಇದರಿಂದಾಗಿ ನ್ಯೂಟನ್ರು ಗ್ರಹಗಳ ಕಕ್ಷೆಗಳ ಅಂಡಾಕೃತಿಯು ತ್ರಿಜ್ಯ ಸದಿಶದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುವ ಕೇಂದ್ರಗಾಮಿ ಬಲದಿಂದಾಗಿರುತ್ತದೆ ಎಂಬುದನ್ನು ಸಾಕ್ಷ್ಯಾಧಾರಿತವಾಗಿ ನಿರೂಪಿಸುವ (ನ್ಯೂಟನ್ರ ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ - ಇತಿಹಾಸ ಮತ್ತು ಡೆ ಮೊಟು ಕಾರ್ಪೊರಂ ಇನ್ ಜೀರಂ ಅನ್ನು ನೋಡಿರಿ) ಪ್ರಚೋದನೆಗೆ ಒಳಗಾದರು. ಆದರೆ ಹುಕ್[35] ರ ಮರಣದವರೆಗೂ ಇಬ್ಬರ ನಡುವಿನ ಬಾಂಧವ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ.
ನ್ಯೂಟನ್ರು ಬೆಳಕು, ಅಂಶಗಳು ಅಥವಾ ಕಣಗಳಿಂದಾಗಿದ್ದು ಸಾಂದ್ರ ಮಾಧ್ಯಮದ ಮೂಲಕ ರಭಸದಿಂದ ಹಾಯಿಸಿದರೆ ವಕ್ರೀಭವಗೊಳ್ಳುತ್ತವೆ ಎಂಬ ವಾದ ಮಂಡಿಸಿದ್ದರು. ಅವರು ಪ್ರತಿಫಲನದ ಪುನರಾವರ್ತಿತ ನಮೂನೆ/ಮಾದರಿಯನ್ನು ಮತ್ತು ತೆಳು ಪದರ/ಫಿಲ್ಮ್ (ಆಪ್ಟಿಕ್ಸ್ Bk.II, Props. 12),ಗಳ ಮೂಲಕ ಪ್ರಸರಿತಗೊಳ್ಳುವುದನ್ನು ವಿವರಿಸಲು ಶಬ್ದ ಮಾದರಿಯ ತರಂಗಗಳನ್ನು ಬಳಸುವ ಯೋಚನೆಯ ಅಂಚಿನಲ್ಲಿದ್ದರು, ಆದರೂ ಪ್ರೇರಿತ ಕಣಗಳನ್ನು ಪ್ರತಿಫಲಿಸುವಂತೆ ಅಥವಾ ಪಸರಿಸುವಂತೆ(Props.13) ಮಾಡುವ ತಮ್ಮ 'ಫಿಟ್ಸ್' ಸಿದ್ಧಾಂತವನ್ನು ಉಳಿಸಿಕೊಂಡರು. ನಂತರ ಭೌತವಿಜ್ಞಾನಿಗಳು ಬೆಳಕಿನ ಸಂಪೂರ್ಣವಾಗಿ ತರಂಗಮಾದರಿಯ ವಿವರಣೆಯ ವ್ಯತಿಕರಣ ನಮೂನೆಗಳನ್ನು ಹಾಗೂ ಸಾಮಾನ್ಯ ವಿವರ್ತನೆಯ ಸಂಗತಿಯನ್ನು ವಿವರಿಸಲು ಆದ್ಯತೆ ನೀಡಿದರು. ಇಂದಿನ ಕ್ವಾಂಟಂ ಯಂತ್ರಶಾಸ್ತ್ರದಲ್ಲಿ, ಫೋಟಾನ್ಗಳು ಮತ್ತು ತರಂಗ ಕಣದ ಉಭಯತ್ವಗಳು ನ್ಯೂಟನ್ರ ಬೆಳಕಿನ ಅರ್ಥೈಸುವಿಕೆಗೆ ಕೇವಲ ಅಲ್ಪ ಪ್ರಮಾಣದ ಹೋಲಿಕೆ ಹೊಂದಿವೆ.
1675ರ ತಮ್ಮ ಬೆಳಕಿನ ಬಗೆಗಿನ ಕಲ್ಪನೆ ಯಲ್ಲಿ, ನ್ಯೂಟನ್ರು ಕಣಗಳ ನಡುವೆ ಶಕ್ತಿಯ ರವಾನೆಯಲ್ಲಿ ಈಥರ್ನ ಪಾತ್ರವಿದೆ ಎಂಬ ಆಧಾರವನ್ನಿಟ್ಟುಕೊಂಡಿದ್ದರು. ಬ್ರಹ್ಮವಿದ್ಯಾವಾದಿ ಹೆನ್ರಿ ಮೋರ್/ಮೂರ್ರ ಸಂಪರ್ಕವು ರಸಸಿದ್ಧಾಂತದ ಅವರ ಆಸಕ್ತಿಯನ್ನು ಮರಳಿಸಿತು. ಈಥರ್ನ ಬದಲಾಗಿ ಕಣಗಳ ನಡುವಿನ ಆಕರ್ಷಣೆ ಹಾಗೂ ವಿಕರ್ಷಣೆಯ ವಿಚಾರದಲ್ಲಿ ರಸತಂತ್ರದ ಆಲೋಚನಾ ಶೈಲಿಯ ನಿಗೂಢ ಶಕ್ತಿಗಳ ಪ್ರಭಾವವನ್ನು ಕಲ್ಪಿಸಿದರು. ನ್ಯೂಟನ್ರ ರಸಸಿದ್ಧಾಂತದ ಬಗೆಗಿನ ಅನೇಕ ಲೇಖನಗಳನ್ನು ಸಂಪಾದಿಸಿದ್ದ ಜಾನ್ ಮೇನರ್ಡ್ ಕೀನೆಸ್ರು ನೀಡಿದ ಹೇಳಿಕೆ ಹೀಗಿತ್ತು "ನ್ಯೂಟನ್ರು ಕಾರಣ ಯುಗದ ಮೊದಲಿಗರಲ್ಲ; ಅವರು ಮಾಂತ್ರಿಕ ಯುಗದ ಕೊನೆಯವರು."[36] ನ್ಯೂಟನ್ರ ರಸಸಿದ್ಧಾಂತದ ಬಗೆಗಿನ ಆಸಕ್ತಿಯನ್ನು ವಿಜ್ಞಾನಕ್ಕೆ ಅವರ ಕೊಡುಗೆಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ; ಆದಾಗ್ಯೂ, ಅವರು ಸ್ಪಷ್ಟವಾಗಿಯೇ ರಸತಂತ್ರದ ಪ್ರಯೋಗಗಳನ್ನು ತ್ಯಜಿಸಿದ್ದರು.[5] (ಅದು ರಸಸಿದ್ಧಾಂತ ಮತ್ತು ವಿಜ್ಞಾನದ ನಡುವೆ ಸ್ಪಷ್ಟ ಪ್ರತ್ಯೇಕತೆ ಕಂಡುಕೊಂಡಿಲ್ಲದ ಸಮಯವಾಗಿತ್ತು.) ಅವರು ದೂರ ನಿರ್ವಾತದಲ್ಲಿ ಶಕ್ತಿಯ ಪ್ರಭಾವದ ನಿಗೂಢತ್ವವನ್ನು ಅಲಕ್ಷಿಸಿದ್ದಲ್ಲಿ, ಅವರು ತಮ್ಮ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ರಚಿಸಲಾಗುತ್ತಿರಲಿಲ್ಲ. (ಇದನ್ನೂ ನೋಡಿ ಐಸಾಕ್ ನ್ಯೂಟನ್ರ ನಿಗೂಢ ಅಧ್ಯಯನಗಳು.)
1ದೆತ್ರಎತಎಸ್ತ್704ರಲ್ಲಿ ನ್ಯೂಟನ್ರು ತಮ್ಮ ಬೆಳಕಿನ ಕಣವಾದವನ್ನು ಮಂಡಿಸಿದ್ದ ಆಪ್ಟಿಕ್ಸ್ ಪುಸ್ತಕ ವನ್ನು ಪ್ರಕಟಿಸಿದರು. ಅವರು ಬೆಳಕನ್ನು ವಿಪರೀತ ಸೂಕ್ಷ್ಮ ಕಣಗಳಿಂದಾಗಿದೆ, ಹಾಗೂ ಸಾಮಾನ್ಯ ವಸ್ತುವು ಸಾಂದ್ರವಾದ ಕಣಗಳಿಂದಾಗಿದೆ ಎಂಬುದನ್ನು ರಸತಂತ್ರದ ಒಂದು ವಿಧದ ಪರಿವರ್ತನೆಯ ಮೂಲಕ ಊಹಿಸಿದರು "ಸಾಂದ್ರ ಕಾಯಗಳು ಮತ್ತು ಬೆಳಕು ಪರಸ್ಪರ ಪರಿವರ್ತಿತವಾಗಬಲ್ಲವೇ, ಹಾಗೂ ಕಾಯಗಳು ತಮ್ಮ ಸಂಯೋಜನೆಯೊಳಗೆ ಪ್ರವೇಶಿಸಿದ ಬೆಳಕಿನ ಕಣಗಳಿಂದ ಹೆಚ್ಚಿನ ಚಟುವಟಿಕೆಯನ್ನು ಹೊಂದಲಾರವೇ?"[37] ನ್ಯೂಟನ್ರು ಘರ್ಷಣಾತ್ಮಕ ಸ್ಥಾಯಿವಿದ್ಯುಜ್ಜನಕದ ಮೂಲ ಮಾದರಿಯನ್ನು ಗಾಜಿನ ಗೋಲವೊಂದನ್ನು ಬಳಸಿ ನಿರ್ಮಿಸಿದರು (ದೃಗ್ವಿಜ್ಞಾನ, 8ನೇ ಪ್ರಶ್ನೆ).
1679ರಲ್ಲಿ, ನ್ಯೂಟನ್ರು ಗ್ರಹಗಳ ಚಲನೆಯ ಕೆಪ್ಲರರ ನಿಯಮಗಳನ್ನು ಆಧಾರವಾಗಿಟ್ಟುಕೊಂಡು ಯಂತ್ರಶಾಸ್ತ್ರದ ತಮ್ಮ ಅಧ್ಯಯನಕ್ಕೆ ಮರಳಿದರು, i.e., 1679-80ರ ಅವಧಿಯಲ್ಲಿ ರಾಯಲ್ ಸೊಸೈಟಿಯ ಪತ್ರವ್ಯವಹಾರದ ನಿರ್ವಾಹಕರೆಂದು ನೇಮಕಗೊಂಡಾಗ ರಾಯಲ್ ಸೊಸೈಟಿಯ ವ್ಯವಹಾರಗಳಲ್ಲಿನ ನ್ಯೂಟನ್ರ ಪಾತ್ರದ ಬಗ್ಗೆ ಬಯಲಿಗೆ ತರುವ ಉದ್ದೇಶದಿಂದ ಪತ್ರವ್ಯವಹಾರವನ್ನು ಆರಂಭಿಸಿದ ಹುಕ್ರೊಂದಿಗಿನ ಅಲ್ಪ ಪ್ರಮಾಣದ ಪತ್ರಹಸ್ತಾಂತರದ ನಂತರ ಪ್ರಚೋದಿತರಾಗಿ ಗುರುತ್ವಾಕರ್ಷಣೆ ಹಾಗೂ ಗ್ರಹಗಳ ಕಕ್ಷೆಯ ಮೇಲಿನ ಅದರ ಪ್ರಭಾವದ ಅಧ್ಯಯನವನ್ನು ಮುಂದುವರೆಸಿದರು.[34] ನ್ಯೂಟನ್ರ ಖಗೋಳಶಾಸ್ತ್ರದ ಮೇಲಿನ ಆಸಕ್ತಿಯು 1680/1681ರ ಚಳಿಗಾಲದಲ್ಲಿ ಧೂಮಕೇತುವೊಂದರ ಕಾಣಿಸಿಕೊಳ್ಳುವಿಕೆಯಿಂದ ಮತ್ತಷ್ಟು ಪ್ರಚೋದನೆ ಪಡೆಯಿತು. ಇದರ ಬಗ್ಗೆ ಜಾನ್ ಫ್ಲಾಸ್ಟೀಡ್ರ ಜೊತೆ ಪತ್ರಸಂವಾದ ಸಹ ನಡೆಸಿದರು.[38] ಹುಕ್ರೊಂದಿಗಿನ ವಿವಾದದ ನಂತರ ಗ್ರಹಗಳ ಕಕ್ಷೆಗಳ ಅಂಡಾಕೃತಿಯು ತ್ರಿಜ್ಯ ಸದಿಶದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುವ ಕೇಂದ್ರಗಾಮಿ ಬಲದಿಂದಾಗಿರುತ್ತದೆ ಎಂಬುದನ್ನು ನಿರೂಪಿಸುವ (ನ್ಯೂಟನ್ರ ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ - ಇತಿಹಾಸ ಮತ್ತು ಡೆ ಮೊಟು ಕಾರ್ಪೊರಂ ಇನ್ ಜೀರಂ ಅನ್ನು ನೋಡಿರಿ) ಸಾಕ್ಷ್ಯವನ್ನು ನ್ಯೂಟನ್ರು ಕಾರ್ಯಗತಗೊಳಿಸಿದರು. ನ್ಯೂಟನ್ರು ಇದರ ಪರಿಣಾಮಗಳನ್ನು ಎಡ್ಮಂಡ್ ಹ್ಯಾಲಿ ಮತ್ತು ರಾಯಲ್ ಸೊಸೈಟಿಗಳಿಗೆ ಡೆ ಮೊಟು ಕಾರ್ಪೊರಂ ಇನ್ ಜೀರಂ ಎಂಬ ಸುಮಾರು 9 ಹಾಳೆಗಳಷ್ಟು ಬರೆದಿದ್ದ ಲಘುಪುಸ್ತಕದ ಮೂಲಕ ತಿಳಿಸಿದರು, ಡಿಸೆಂಬರ್ 1684ರಲ್ಲಿ[39] ರಾಯಲ್ ಸೊಸೈಟಿಯ ದಾಖಲಾತಿ ಪುಸ್ತಕದಲ್ಲಿ ಇದನ್ನು ನಕಲಿಸಲಾಯಿತು. ಈ ಪುಸ್ತಕದಲ್ಲಿದ್ದ ತಿರುಳನ್ನು ಬೆಳೆಸಿಕೊಂಡು ಪ್ರಿನ್ಸಿಪಿಯಾ ವನ್ನು ರಚಿಸಿದರು.
ಎಡ್ಮಂಡ್ ಹ್ಯಾಲಿಯ ಉತ್ತೇಜನ ಮತ್ತು ಆರ್ಥಿಕ ಬೆಂಬಲದೊಂದಿಗೆ ಪ್ರಿನ್ಸಿಪಿಯಾ 5 ಜುಲೈ 1687ರಂದು ಪ್ರಕಟವಾಯಿತು. ಈ ಕೃತಿಯಲ್ಲಿ ನ್ಯೂಟನ್ರು ಮುಂದಿನೆರಡು ಶತಮಾನಗಳಿಗೂ ಹೆಚ್ಚಿನ ಕಾಲ ಸುಧಾರಣೆಗೊಳಪಡದಿದ್ದ ಚಲನೆಯ ಮೂರು ಸಾರ್ವತ್ರಿಕ ನಿಯಮಗಳನ್ನು ನಿರೂಪಿಸಿದ್ದರು. ಅವರು ಲ್ಯಾಟಿನ್ ಪದ ಗ್ರಾವಿಟಾಸ್ (ತೂಕ) ಎಂಬ ಪದವನ್ನು ಗುರುತ್ವಾಕರ್ಷಣೆಯೆಂದು ಹೆಸರಾದ ಶಕ್ತಿಗೆ ಬಳಸಿ, ಸಾರ್ವತ್ರಿಕ ಗುರುತ್ವಾಕರ್ಷಣಾ ನಿಯಮವನ್ನು ನಿರೂಪಿಸಿದ್ದರು. ಅದೇ ಕೃತಿಯಲ್ಲಿ ನ್ಯೂಟನ್ರು 'ಮೊದಲ ಮತ್ತು ಕೊನೆಯ ಅನುಪಾತ'ದ ಮೂಲಕ ಜ್ಯಾಮಿತೀಯ ವಿಶ್ಲೇಷಣೆಯ ಕಲನ-ಮಾದರಿಯ ವಿಧಾನವನ್ನು ತಿಳಿಸಿದರು, ಗಾಳಿಯಲ್ಲಿನ ಶಬ್ದದ ವೇಗದ ಪ್ರಥಮ ವಿಶ್ಲೇಷಣಾತ್ಮಕ ಲಕ್ಷಣವನ್ನು (ಬಾಯ್ಲೆ'ರ ನಿಯಮದ ಮೇಲೆ ಆಧಾರಿತ) ನಿರೂಪಿಸಿದರು, ಭೂಮಿಯ ಗೋಲಾಕೃತಿಯಲ್ಲಿನ ಚಪ್ಪಟೆ ಭಾಗದ ತರ್ಕ ಮಂಡಿಸಿದರು, ಭೂಮಿಯ ಧೃವಭಾಗದ ಚಪ್ಪಟೆ ಪ್ರದೇಶದ ಮೇಲಿನ ಚಂದ್ರನ ಗುರುತ್ವಾಕರ್ಷಣೆಯ ಫಲವಾಗಿ ವಿಷುವತ್/ಸಂಕ್ರಾಂತಿಗಳ ಅಕ್ಷಭ್ರಮಣ, ಚಂದ್ರನ ಅನಿಯತ ಚಲನೆಯ ಗುರುತ್ವಾಕರ್ಷಣಾ ಅಧ್ಯಯನಕ್ಕೆ ಚಾಲನೆ ನೀಡಿದರು, ಧೂಮಕೇತುಗಳ ಕಕ್ಷೆಯ ಲಕ್ಷಣಗಳ ಬಗ್ಗೆ ಸಿದ್ಧಾಂತವೊಂದನ್ನು ನೀಡಿದರು ಹಾಗೂ ಇನ್ನೂ ಅನೇಕ ವಿಚಾರಗಳನ್ನು ಇದರಲ್ಲಿ ಮಂಡಿಸಿದ್ದಾರೆ.
ನ್ಯೂಟನ್ರು ಸೌರವ್ಯೂಹದ ಸೂರ್ಯಕೇಂದ್ರಿತ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ್ದರು. 1680ರ ದಶಕದ ಮಧ್ಯದಲ್ಲಿಯೇ ಸೌರವ್ಯ್ಯೂಹದ ಗುರುತ್ವಾಕರ್ಷಣ ಕೇಂದ್ರದಿಂದ "ಸೂರ್ಯನ ದಿಕ್ಪಲ್ಲಟ"ವನ್ನು ಗುರುತಿಸಿದ್ದರಿಂದ ತಕ್ಕಮಟ್ಟಿಗೆ ಆಧುನಿಕ ವಿಧಾನದಲ್ಲಿ ನಿರೂಪಿಸಿದ್ದರು.[40] ನ್ಯೂಟನ್ರ ಪ್ರಕಾರ, ನಿಶ್ಚಲವೆನ್ನಲಾದ ಸೂರ್ಯನ ಅಥವಾ ಇನ್ನು ಯಾವುದೇ ಕಾಯದ ಕೇಂದ್ರದ ಬದಲಿಗೆ, "ಭೂಮಿ, ಸೂರ್ಯ ಹಾಗೂ ಎಲ್ಲಾ ಗ್ರಹಗಳ ಸಾಮಾನ್ಯ ಗುರುತ್ವಾಕರ್ಷಣಾ ಕೇಂದ್ರವನ್ನು ವಿಶ್ವದ ಕೇಂದ್ರವೆಂದು ಗಣಿಸಿಬೇಕಾಗುತ್ತದೆ", ಹಾಗೂ ಈ ಗುರುತ್ವಾಕರ್ಷಣ ಕೇಂದ್ರವು "ನಿಶ್ಚಲವಾಗಿರುತ್ತದೆ ಅಥವಾ ಏಕಪ್ರಕಾರವಾಗಿ ನೇರ ಸಾಲಿನಲ್ಲಿ ಮುಂದೆ ಚಲಿಸುತ್ತಿರುತ್ತದೆ" (ನ್ಯೂಟನ್ರು ಸಾಮಾನ್ಯ ರೀತಿಯಾದ ಕೇಂದ್ರವು ಅದು ಎಲ್ಲೇ ಇರಲಿ ನಿಶ್ಚಲವಾಗಿರುತ್ತದೆ ಎಂಬ ಆಲೋಚನೆಯ ಬದಲಿಗೆ "ನಿಶ್ಚಲವಾಗಿದ್ದಾಗ" ಎಂಬ ವಿಧಾನ ಬಳಸಿದರು).[41]
ನ್ಯೂಟನ್ರ ಅದೃಶ್ಯ ಶಕ್ತಿಯು ಬಹಳ ದೂರದಿಂದ ಪರಿಣಾಮ ಬೀರುತ್ತದೆ ಎಂಬ ಸಿದ್ಧಾಂತವು ಅವರನ್ನು "ನಿಗೂಢ ಸಂಸ್ಥೆಗಳನ್ನು" ವಿಜ್ಞಾನ[42] ದೊಂದಿಗೆ ಜೋಡಿಸುತ್ತಿದ್ದಾರೆ ಎಂಬ ಟೀಕೆಗಳನ್ನು ಎದುರಿಸುವ ಹಾಗೆ ಮಾಡಿತು. ನಂತರ, ಪ್ರಿನ್ಸಿಪಿಯಾ ದ ಎರಡನೇ ಆವೃತ್ತಿಯಲ್ಲಿ (1713), ನ್ಯೂಟನ್ರು ಅಂತಹಾ ಟೀಕೆಗಳನ್ನು ದೃಢವಾಗಿ ತಿರಸ್ಕರಿಸಿ ಜನರಲ್ ಷೋಲಿಯಂ/ಸ್ಕೋಲಿಯಂನ ಮುಕ್ತಾಯದಲ್ಲಿ, ಆ ವಿದ್ಯಮಾನವು ಗುರುತ್ವಾಕರ್ಷಣೆಯನ್ನು ಸೂಚಿಸುತ್ತದೆ; ಆದರೆ ಅದರ ಕಾರಣವನ್ನು ಸೂಚಿಸಲಾಗಿಲ್ಲ, ಹಾಗೂ ಸಂಗತಿಯು ಸೂಚಿಸದ ವಿಷಯಗಳ ಮೇಲೆ ಕಲ್ಪನೆ ಮಾಡಿಕೊಳ್ಳುವುದು ಸರಿಯಲ್ಲ ಹಾಗೂ ಅನಗತ್ಯ ಎಂಬ ಅಭಿಪ್ರಾಯ ತಳೆದರು. (ಇಲ್ಲಿ ನ್ಯೂಟನ್ರು ತಮ್ಮ ಪ್ರಖ್ಯಾತ ಶಬ್ದಪ್ರಯೋಗ ಹೈಪೋತಿಸಿಸ್ ನಾನ್-ಫಿಂಗೋ ವನ್ನು ಬಳಸಿದ್ದಾರೆ).
ಪ್ರಿನ್ಸಿಪಿಯಾ ದೊಂದಿಗೆ, ನ್ಯೂಟನ್ರು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟರು.[43] ಸ್ವಿಸ್-ಸಂಜಾತ ಗಣಿತಜ್ಞ ನಿಕೋಲಸ್ ಫಾಟಿಯೊ ಡೆ ಡುಯಿಲಿಯರ್ರೂ ಸೇರಿದಂತೆ ಅನೇಕ ಅಭಿಮಾನಿಗಳನ್ನು ಗಳಿಸಿದರು, ನಿಕೋಲಸ್ರೊಂದಿಗೆ ಏಕಾಏಕಿ ಕೊನೆಗೊಂಡ 1693ರವರೆಗೆ ಮುಂದುವರೆದ ಗಾಢ ಸ್ನೇಹವನ್ನು ಹೊಂದಿದ್ದರು, ಅದೇ ಸಮಯದಲ್ಲಿ ನ್ಯೂಟನ್ರು ನರಮಂಡಲದ ಕುಸಿತವನ್ನನುಭವಿಸಿದರು.[44]
1690ರ ದಶಕದಲ್ಲಿ, ನ್ಯೂಟನ್ರು ಬೈಬಲ್ನ ವಾಚ್ಯಾರ್ಥಗಳ ವ್ಯಾಖ್ಯಾನದ ಬಗ್ಗೆ ಅನೇಕ ಧಾರ್ಮಿಕ ಲಘುಪುಸ್ತಕಗಳನ್ನು ಬರೆದರು. ಹೆನ್ರಿ ಮೂರ್ರ ಬ್ರಹ್ಮಾಂಡದ ಮೇಲಿನ ನಂಬಿಕೆ ಮತ್ತು ಡೇಕಾರ್ಟನ/ಕಾರ್ಟೀಸಿಯನ್ ದ್ವಿತ್ವದ ತಿರಸ್ಕರಣೆಯು ನ್ಯೂಟನ್ರ ಧಾರ್ಮಿಕ ಆಸಕ್ತಿಗೆ ಪ್ರೇರಣೆಯಾಗಿರಬಹುದು. ಜಾನ್ ಲಾಕೆಗೆ ಕಳುಹಿಸಿದ್ದ ಹಸ್ತಪ್ರತಿಯೊಂದರಲ್ಲಿ ತ್ರಿಮೂರ್ತಿತ್ವದ ಅಸ್ತಿತ್ವವನ್ನು ಕುರಿತು ನಡೆಸಿದ ಚರ್ಚೆಯಿದ್ದದ್ದು ಪ್ರಕಟಗೊಳ್ಳಲೇ ಇಲ್ಲ. ನಂತರದ ಕೃತಿಗಳಾದ– ದ ಕ್ರೋನಾಲಜಿ ಆಫ್ ಆನ್ಷಿಯೆಂಟ್ ಕಿಂಗ್ಡಮ್ಸ್ ಅಮೆಂಡೆಡ್ (1728) ಮತ್ತು ಆಬ್ಸರ್ವೇಷನ್ಸ್ ಅಪಾನ್ ದ ಪ್ರೊಫೆಸೀಸ್ ಆಫ್ ಡೇನಿಯಲ್ ಮತ್ತು ಅಪೋಕ್ಯಾಲಿಪ್ಸ್ ಆಫ್ St. ಜಾನ್ (1733)–ಗಳು ಅವರ ಮರಣದ ನಂತರ ಪ್ರಕಟವಾದವು. ಅವರು ರಸವಾದದ ಬಗ್ಗೆಯೂ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದರು (ಮೇಲೆ ನೋಡಿ).
ನ್ಯೂಟನ್ರು 1689ರಿಂದ 1690ರವರೆಗೆ ಮತ್ತು 1701ರಲ್ಲಿ ಇಂಗ್ಲೆಂಡ್ನ ಸಂಸತ್ನ ಸದಸ್ಯರೂ ಆಗಿದ್ದರು, ಆದರೆ ಕೆಲ ದಾಖಲೆಗಳ ಪ್ರಕಾರ ಅವರು ವ್ಯಕ್ತಪಡಿಸಿದ ಏಕೈಕ ಅಭಿಪ್ರಾಯವೆಂದರೆ ಕೊಠಡಿಯಲ್ಲಿನ ತಂಪಾದ ಗಾಳಿಯ ಪ್ರವಾಹ ಹೆಚ್ಚಿದ ಬಗ್ಗೆ ಹಾಗೂ ಕಿಟಕಿ ಮುಚ್ಚಲುಮಾಡಿದ ಕೋರಿಕೆ ಮಾತ್ರವೇ.[45]
ನ್ಯೂಟನ್ರು ಘನ ಟಂಕಸಾಲೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು 1696ರಲ್ಲಿ ಲಂಡನ್ಗೆ ತೆರಳಿದರು, ಈ ಹುದ್ದೆಯನ್ನು ಅವರು ಹಾಲಿಫಾಕ್ಸ್ನ ಪ್ರಥಮ ಅರ್ಲ್ ಆಗಿದ್ದ ಚಾರ್ಲ್ಸ್ ಮೊಂಟಗುರವರು ವಿತ್ತ ಮಂತ್ರಿಯಾಗಿದ್ದಾಗ ಅವರ ಆಶ್ರಯದಿಂದ ಪಡೆದ ಹುದ್ದೆಯಾಗಿತ್ತು. ಅವರು ಇಂಗ್ಲೆಂಡ್ನ ನಾಣ್ಯ ಟಂಕಿಸುವಿಕೆಯ ಬೃಹತ್ ಜವಾಬ್ದಾರಿ ಹೊತ್ತರು, ಮಾಸ್ಟರ್ ಲುಕಾಸ್ರ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಅನುಸರಿಸಿದರು (ಎಡ್ಮಂಡ್ ಹ್ಯಾಲಿಯವರ ತಾತ್ಕಾಲಿಕ ಚೆಸ್ಟರ್ ಶಾಖೆಯ ನಿಯೋಜಿತ ನಿಯಂತ್ರಕರ ಹುದ್ದೆಯನ್ನು ಸುಭದ್ರಗೊಳಿಸಿದರು). ನ್ಯೂಟನ್ರು 1699ರಲ್ಲಿ ಲುಕಾಸ್ರ ಮರಣದ ನಂತರ ಪ್ರಾಯಶಃ ಶ್ರೇಷ್ಠ-ಪ್ರಸಿದ್ಧ ಟಂಕಸಾಲೆಯ ಮುಖ್ಯಸ್ಥನಾದರಲ್ಲದೇ, ಈ ಹುದ್ದೆಯಲ್ಲಿ ಅವರು ಮರಣಿಸುವವರೆಗೆ ಮುಂದುವರೆದರು. ಈ ತರಹದ ಹುದ್ದೆಗಳನ್ನು ಲಾಭದಾಯಕ ಹುದ್ದೆ ಎಂದು ಪರಿಗಣಿಸುತ್ತಿದ್ದರಾದರೂ, ನ್ಯೂಟನ್ರು ಅದನ್ನು ಗಂಭೀರವಾಗಿ ತೆಗೆದುಕೊಂಡರು, 1701ರಲ್ಲಿ ಕೇಂಬ್ರಿಡ್ಜ್ನ ಜವಾಬ್ದಾರಿಗಳಿಂದ ನಿವೃತ್ತಿ ಪಡೆದು, ಹಣ ಚಲಾವಣೆಯನ್ನು ಸುಧಾರಿಸಲು ತನ್ನ ಅಧಿಕಾರವನ್ನು ಬಳಸಿ ಖೋಟಾನೋಟು ಮುದ್ರಕರನ್ನು ಹಾಗೂ ಚಲಾಯಿಸುವವರನ್ನು ಶಿಕ್ಷಿಸಿದರು. 1717ರಲ್ಲಿ ಟಂಕಸಾಲೆಯ ಮುಖ್ಯಸ್ಥರಾಗಿ "ರಾಣಿ ಆನ್ನೆಯವರ ಕಾನೂನಿನ" ಸಹಾಯದಿಂದ ನ್ಯೂಟನ್ರು ಅನುದ್ದೇಶಪೂರ್ವಕವಾಗಿ ದ್ವಿಲೋಹ ಪದ್ಧತಿಯ ಚಿನ್ನದ ನಾಣ್ಯಗಳು ಮತ್ತು ಬೆಳ್ಳಿಯ ಪೆನ್ನಿಗಳ ಬದಲಿಗೆ ಚಿನ್ನಕ್ಕೆ ಬದಲಿಸುವ ಮೂಲಕ ಪೌಂಡ್ ಸ್ಟರ್ಲಿಂಗ್ಅನ್ನು ಬೆಳ್ಳಿ ದರ್ಜೆಯಿಂದ ಚಿನ್ನದ ದರ್ಜೆಗೆ ಏರಿಸಿದರು. ಇದರಿಂದಾಗಿ ಬೆಳ್ಳಿಯ ಸ್ಟರ್ಲಿಂಗ್ ನಾಣ್ಯವನ್ನು ಕರಗಿಸಿ ಬ್ರಿಟನ್ನ ಹೊರಗೆ ಸಾಗಿಸಬೇಕಾಯಿತು. ನ್ಯೂಟನ್ರನ್ನು 1703ರಲ್ಲಿ ರಾಯಲ್ ಸೊಸೈಟಿಯ ಅಧ್ಯಕ್ಷರನ್ನಾಗಿ ಹಾಗೂ ಫ್ರೆಂಚ್ ಅಕಾಡೆಮೀ ಡೆಸ್ ಸೈನ್ಸಸ್ನ ಸದಸ್ಯರನ್ನಾಗಿಸಲಾಯಿತು. ರಾಯಲ್ ಸೊಸೈಟಿಯ ಅಧ್ಯಕ್ಷ ಸ್ಥಾನದಲ್ಲಿದ್ದಾಗ, ನ್ಯೂಟನ್ರು ತಮ್ಮ ಅಧ್ಯಯನದಲ್ಲಿ ಬಳಸಿದ್ದ ಫ್ಲಾಮ್ಸ್ಟೀಡ್ರ ಹಿಸ್ಟೊರಿಯಾ ಕೊಲೆಟಿಸ್ ಬ್ರಿಟಾನಿಕಾ ವನ್ನು ಮುಂಚೆಯೇ ಪ್ರಕಟಿಸುವುದರ ಮೂಲಕ ಖಗೋಳಶಾಸ್ತ್ರಜ್ಞ ರಾಯಲ್ ಮತ್ತು ಜಾನ್ ಫ್ಲಾಮ್ಸ್ಟೀಡ್ರ ನಡುವೆ ಶತೃತ್ವ ಉಂಟಾಗಲು ಕಾರಣರಾದರು.[46]
ಏಪ್ರಿಲ್ 1705ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಮಹಾವಿದ್ಯಾಲಯಕ್ಕೆ ನೀಡಿದ ಅಧಿಕೃತ ಭೇಟಿಯಲ್ಲಿ ರಾಣಿ ಆನ್ನೆ ನ್ಯೂಟನ್ರಿಗೆ ನೈಟ್ ಪದವಿ ನೀಡಿದರು. ಆದರೆ ಈ ನೈಟ್ ಪದವಿ ಪ್ರದಾನದ ಮೂಲಕಾರಣ ನ್ಯೂಟನ್ರ ವಿಜ್ಞಾನದ ಸಾಧನೆ ಅಥವಾ ಟಂಕಸಾಲೆಯ ಮುಖ್ಯಸ್ಥರಾಗಿ ಸಲ್ಲಿಸಿದ ಸೇವೆಯ ಕೃತಜ್ಞತೆಗಾಗಲ್ಲದೇ, ಮೇ 1705ರಲ್ಲಿ ನಡೆಯಲಿದ್ದ ಸಂಸತ್ತಿನ ಚುನಾವಣೆಯ ರಾಜಕೀಯ ಉದ್ದೇಶಗಳಿಂದ ಪ್ರೇರಿತವಾದದ್ದಾಗಿತ್ತು.[47]
ತನ್ನ ಜೀವನದ ಕೊನೆಯ ದಿನಗಳಲ್ಲಿ, ನ್ಯೂಟನ್ರು ವಿಂಚೆಸ್ಟರ್ ಹತ್ತಿರದ ಕ್ರಾನ್ಬರಿ ಉದ್ಯಾನದ ಬಳಿ ಮನೆ ಕೊಂಡುಕೊಂಡು ಅದರಲ್ಲಿ ತಮ್ಮ ಸೋದರ ಸೊಸೆ ಹಾಗೂ ಆಕೆಯ ಪತಿಯೊಂದಿಗೆ 1727ರಲ್ಲಿ ತಾವು ಮರಣಿಸುವವರೆಗೆ ಇದ್ದರು.[48] ನ್ಯೂಟನ್ರು 31 ಮಾರ್ಚ್ 1727ರಂದು [OS: 20 ಮಾರ್ಚ್ 1726],[1] ಲಂಡನ್ನಲ್ಲಿ ನಿದ್ದೆಯಲ್ಲೇ ಕೊನೆಯುಸಿರೆಳೆದರು, ನಂತರ ಅವರ ವೆಸ್ಟ್ಮಿನ್ಸ್ಟರ್ ಆಬ್ಬೆಯಲ್ಲಿ ಅವರ ಶವಸಂಸ್ಕಾರ ನಡೆಸಲಾಯಿತು. ಅವರ ಅರೆ-ಸೋದರಸೊಸೆ, ಕ್ಯಾಥರೀನ್ ಬಾರ್ಟನ್ ಕಾಂಡ್ಯೂಟ್,[49] ಲಂಡನ್ನ ಜರ್ಮಿನ್ ಸ್ಟ್ರೀಟ್ನಲ್ಲಿನ ಮನೆಯಲ್ಲಿ ಸಾಮಾಜಿಕ ವ್ಯವಹಾರ ಸಹಾಯಕಿಯಾಗಿದ್ದರು; ಆಕೆಯು ಸಿಡುಬಿನಿಂದ ಚೇತರಿಸಿಕೊಳ್ಳುತ್ತಿದ್ದಾಗ ಆಕೆಗೆ ಬರೆದ ಪತ್ರದ ಪ್ರಕಾರ ನ್ಯಾಟನ್ರು ಆಕೆಯ "ಪ್ರೀತಿಯ ಮಾವ"ನಾಗಿದ್ದರು[50]. ಮಕ್ಕಳಿರದಿದ್ದ ನ್ಯೂಟನ್ರು, ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಸಂಬಂಧಿಕರಿಗೆ ತಮ್ಮ ಆಸ್ತಿಗಳನ್ನು ಹಂಚಿ, ಮೃತ್ಯುಪತ್ರ ಬರೆಯದೇ ಮರಣಿಸಿದರು.
ಅವರ ಸಾವಿನ ನಂತರ, ನ್ಯೂಟನ್ರ ದೇಹದಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಕಂಡುಬಂದಿದ್ದು ಬಹುಶಃ ಅವರ ರಸಸಿದ್ಧಾಂತದ ಚಟುವಟಿಕೆಯಿಂದಾಗಿದ್ದಿರಬಹುದು. ಪಾದರಸದ ವಿಷಪೂರಣ ನಂತರದ ನ್ಯೂಟನ್ರ ಬದುಕಿನಲ್ಲಿನ ವಿಲಕ್ಷಣತೆಗೆ ಕಾರಣವಾಗಿದ್ದಿರಬಹುದು.[51]
"ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಆಗ್ಗಾಗ್ಗೆ ಹೇಳುತ್ತಿದ್ದ ಪ್ರಕಾರ ನ್ಯೂಟನ್ರು ಇದುವರೆಗಿನ ಓರ್ವ ಅಪ್ರತಿಮ ಮೇಧಾವಿ ಹಾಗೂ "ಅವರು ಅದೃಷ್ಟಶಾಲಿಯೂ ಹೌದು, ಏಕೆಂದರೆ ನಾವು ವಿಶ್ವದ ವ್ಯವಸ್ಥೆಯನ್ನು ಒಂದಕ್ಕಿಂತ ಹೆಚ್ಚು ಸಲ ಸ್ಥಿರಪಡಿಸಲಾಗದು"[52] ಎಂದು ಇನ್ನೊಮ್ಮೆ ಹೇಳಿದ್ದರು. ಆಂಗ್ಲ ಕವಿ ಅಲೆಕ್ಸಾಂಡರ್ ಪೋಪ್ರು ನ್ಯೂಟನ್ರ ಸಾಧನೆಗಳಿಂದ ಪುಲಕಿತರಾಗಿ ಸುಪ್ರಸಿದ್ಧ ಸಮಾಧಿಲೇಖವನ್ನು ಬರೆದರು:
ಪ್ರಕೃತಿ ಮತ್ತು ಪ್ರಕೃತಿಯ ನಿಯಮಗಳು ರಾತ್ರಿಯಲ್ಲಿ ಮರೆಯಾಗುತ್ತವೆ;
ದೇವರು ಹೇಳಿದ "ನ್ಯೂಟನ್ರು ಇರಲಿ" ಮತ್ತು ಎಲ್ಲೆಡೆ ಬೆಳಕಾಯಿತು.
ನ್ಯೂಟನ್ರು ತಮ್ಮ ಸಾಧನೆಗಳ ಬಗೆಗೆ ಬಹಳಷ್ಟು ವಿನಮ್ರರಾಗಿದ್ದರು ಎಂಬುದು, ರಾಬರ್ಟ್ ಹುಕ್ರಿಗೆ ಫೆಬ್ರವರಿ 1676ರಲ್ಲಿ ಬರೆದ ಪ್ರಸಿದ್ಧವಾದ ಪತ್ರದಲ್ಲಿ ಕಾಣಿಸುತ್ತದೆ:
ಅತ್ಯಂತ ಎತ್ತರದ ಪುರುಷಶ್ರೇಷ್ಠರ ಹೆಗಲ ಮೇಲೆ ನಿಂತು ನೋಡಿದ್ದರಿಂದಲೇ ಇತರರಿಗಿಂತ ಹೆಚ್ಚು ನೋಡಲು ನನಗೆ ಸಾಧ್ಯವಾಯಿತು.[53][54]
ಇಬ್ಬರು ಲೇಖಕರ ಪ್ರಕಾರ ಮೇಲಿನ ಹೇಳಿಕೆ (ಗೂನು ಬೆನ್ನುಳ್ಳ ಹಾಗೂ ಕುಬ್ಜರಾಗಿದ್ದ) ಹುಕ್ರ ಮೇಲಿನ ನಿಂದಾತ್ಮಕ ಅಣಕವಾಗಿತ್ತೇ ಹೊರತು, ನಿಜಕ್ಕೂ ಹೇಳುವುದಾದರೆ – ಜೊತೆಗೆ – ನಮ್ರತೆಯ ಹೇಳಿಕೆಯಾಗಿರಲಿಲ್ಲ.[55][56] ಆಗ ಇಬ್ಬರೂ ದೃಗ್ವಿಜ್ಞಾನದ ಸಂಶೋಧನೆಗಳಿಗೆ ಸಂಬಂಧಿಸಿದಂತೆ ವಾದವಿವಾದದಲ್ಲಿ ತೊಡಗಿದ್ದರು. ಎರಡನೇ ಅಭಿಪ್ರಾಯವು ಅವರ ಇನ್ನಿತರ ಸಂಶೋಧನೆಗಳ ಮೇಲಿನ ವಿವಾದಗಳನ್ನು ಗಮನಿಸಿದರೆ, ಉದಾಹರಣೆಗೆ ಮೇಲೆ ತಿಳಿಸಿದಂತೆ ಕಲನದ ಸಂಶೋಧನೆ ಯಾರದು ಎಂಬ ವಿವಾದದ ಬೆಳಕಿನಲ್ಲಿ ಸೂಕ್ತವೆನಿಸಬಹುದು.
ನಂತರದ ಒಂದು ದಿನಚರಿಯಲ್ಲಿ, ನ್ಯೂಟನ್ರು ಹೀಗೆ ಬರೆದಿದ್ದರು:
ಈ ಪ್ರಪಂಚದ ಜನ ನಾನು ಮಾಡಿದ ಕಾರ್ಯಗಳ ಬಗೆಗೆ ಏನು ಅಭಿಪ್ರಾಯ ಹೊಂದಿದ್ದಾರೋ ನಾನರಿಯೆ. ಸಮುದ್ರದ ದಂಡೆಯಲ್ಲಿ ಆಡಿಕೊಳ್ಳುತ್ತಿರುವ ಪುಟ್ಟ ಮಗುವಿನಂತೆ ನನಗೆ ನಾನು ತೋರಿಬರುತ್ತಿದ್ದೇನೆ. ಒಮ್ಮೆ ನುಣುಪಾಗಿರುವ ಕಲ್ಲನ್ನು ನಾನು ತೆಗೆದುಕೊಂಡಿರಬಹುದು, ಆಗೊಮ್ಮೆ ಈಗೊಮ್ಮೆ ಬೇರೆಡೆ ಗಮನ ಹರಿಸಿ ಉಳಿದ ಚಿಪ್ಪುಗಳಿಗಿಂತಲೂ ವಿಚಿತ್ರವೂ ಮನೋಹರವಾದ ಬೆಣಚುಕಲ್ಲು ಅಥವಾ ಕಪ್ಪೆಚಿಪ್ಪನ್ನು ಆರಿಸಿಕೊಂಡಿರಬಹುದು, ಆದರೆ ನನ್ನ ಮುಂದೆ ಅನಂತವಾದ ಅದ್ಭುತಗಳನ್ನು ಪ್ರದರ್ಶಿಸುವ ಅಪಾರ ವಾರಿರಾಶಿಯೇ ಇದೆ.[57]
ವೆಸ್ಟ್ಮಿನ್ಸ್ಟರ್ ಆಬ್ಬೆಯಲ್ಲಿನ ಗಾಯಕರ ಪರದೆಯ ಎದುರಿರುವ ಗಾಯಕ ವೃಂದದ ಪ್ರವೇಶದ್ವಾರದ ಉತ್ತರಕ್ಕೆ ನ್ಯೂಟನ್ರ ಸಮಾಧಿಯನ್ನು (1731) ಕಾಣಬಹುದು. ಇದನ್ನು ಶಿಲ್ಪಿ ಮೈಕೆಲ್ ರಿಸ್ಬ್ರಾಕ್(1694–1770)ರು ಬಿಳಿ ಮತ್ತು ಬೂದುಬಣ್ಣದ ಅಮೃತಶಿಲೆಯಲ್ಲಿ ವಾಸ್ತುಶಿಲ್ಪಿ ವಿಲಿಯಂ ಕೆಂಟ್ರ(1685–1748) ವಿನ್ಯಾಸದ ಮೇರೆಗೆ ಕೆತ್ತಿದ್ದರು. ಸಮಾಧಿಯ ಮೇಲೆ ನ್ಯೂಟನ್ರ ಮೂರ್ತಿಯು ಶಿಲಾಶವಸಂಪುಟದ ಮೇಲೆ ಒರಗಿಕೊಂಡಿರುವಂತೆ ಹಾಗೂ ಅವರ ಬಲ ಮೊಣಕೈ ತಮ್ಮ ಅನೇಕ ಶ್ರೇಷ್ಠ ಪುಸ್ತಕಗಳ ಮೇಲೆ ಆನಿಸಿಕೊಂಡಿರುವಂತೆ ಮತ್ತು ಅವರ ಎಡಗೈ ಗಣಿತಶಾಸ್ತ್ರದ ವಿನ್ಯಾಸವನ್ನು ಹೊಂದಿರುವ ಕಾಗದದ ಸುರುಳಿಯತ್ತ ತೋರುತ್ತಿರುವಂತೆ ಚಿತ್ರಿಸಲಾಗಿದೆ. ಅವರ ಮೇಲೆ ಪಿರಮಿಡ್ ಹಾಗೂ ರಾಶಿಚಕ್ರದ ಚಿಹ್ನೆಗಳನ್ನು ಹೊಂದಿರುವ ಹಾಗೂ 1680ರ ಧೂಮಕೇತುವಿನ ಪಥವನ್ನು ತೋರಿಸುವ ಬಾಹ್ಯಾಕಾಶ ಗೋಲವಿದೆ. ದೂರದರ್ಶಕ ಮತ್ತು ಪ್ರಿಸಮ್/ಅಶ್ರಗಗಳಂತಹಾ ಉಪಕರಣಗಳನ್ನು ಹೊಂದಿರುವ ಲಪ್ಪವನ್ನು ಉಬ್ಬುಚಿತ್ರವೊಂದರಲ್ಲಿ ತೋರಿಸುತ್ತದೆ.[58] ಲ್ಯಾಟಿನ್ ಭಾಷೆಯಲ್ಲಿರುವ ಪೀಠದ ಮೇಲಿರುವ ಶಿಲಾಲೇಖವನ್ನು ಭಾಷಾಂತರಿಸಿದಾಗ :
ದೈವಿಕವಾದ ಬುದ್ಧಿಮತ್ತೆಯನ್ನು ಹೊಂದಿದ್ದ, ತಮ್ಮದೇ ಆದ ಗಣಿತಶಾಸ್ತ್ರದ ಸೂತ್ರಗಳನ್ನು/ಮೂಲತತ್ವಗಳನ್ನು ಕಂಡುಹಿಡಿದ, ಗ್ರಹಗಳ ಪಥ ಹಾಗೂ ಈ ಆಕೃತಿಯನ್ನು, ಧೂಮಕೇತುಗಳನ್ನು ಅನ್ವೇಷಿಸಿದ, ಸಾಗರದ ಉಬ್ಬರವಿಳಿತಗಳನ್ನು, ಬೆಳಕಿನ ಕಿರಣಗಳ ನಡುವಿನ ಭಿನ್ನತೆಯನ್ನು ಕಂಡುಹಿಡಿದ ಹಾಗೂ ಇನ್ನಿತರ ಯಾವುದೇ ತಜ್ಞ ಕಂಡುಹಿಡಿಯದ ಬಣ್ಣಗಳ ಲಕ್ಷಣಗಳನ್ನು ಕಂಡುಹಿಡಿದ, ನೈಟ್ ಪದವೀಧರ ಐಸಾಕ್ ನ್ಯೂಟನ್ರನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಪ್ರಕೃತಿಯ, ಪ್ರಾಚೀನ ಹಾಗೂ ಪವಿತ್ರ ಗ್ರಂಥಗಳ ತಮ್ಮ ಪ್ರತಿಪಾದನೆಗಳಲ್ಲಿ ಕಾರ್ಯನಿಷ್ಠ, ಚತುರ ಮತ್ತು ನಂಬಿಕಾರ್ಹರಾಗಿದ್ದರು, ದೇವರ ಮಹಾಶಕ್ತಿ ಮತ್ತು ಒಳ್ಳೆಯತನವನ್ನು ಪ್ರತಿಪಾದಿಸಿದ್ದರು, ಹಾಗೂ ತಮ್ಮ ನಡೆನುಡಿಗಳಲ್ಲಿ ಸುವಾರ್ತೆಯ ಸರಳತೆಯನ್ನು ತೋರಿಸಿಕೊಂಡವರು. ಜೀವಿಗಳು ಮಾನವಕುಲದ ಆ ತರಹದ ಒಂದು ಆಭರಣ ಅಸ್ತಿತ್ವದಲ್ಲಿತ್ತು ಎಂದು ಹರ್ಷಿಸುತ್ತಾರೆ! ಅವರು 25 ಡಿಸೆಂಬರ್ 1642ರಂದು ಜನಿಸಿದರು, ಮತ್ತು 20 ಮಾರ್ಚ್ 1726/7ರಂದು ಮರಣಿಸಿದರು. ಎಂಬರ್ಥ ಬರುತ್ತದೆ — ಇದರ ಆಂಗ್ಲ ಭಾಷಾಂತರ G.L. ಸ್ಮಿತ್ರದ್ದು, ದ ಮಾನ್ಯುಮೆಂಟ್ಸ್ ಅಂಡ್ ಜೆನೀ ಆಫ್ St. ಪಾಲ್ಸ್ ಕೆಥಡ್ರಲ್, ಅಂಡ್ ಆಫ್ ವೆಸ್ಟ್ಮಿನ್ಸ್ಟರ್ ಆಬ್ಬೆ (1826), ii, 703–4.[58]
1978ರಿಂದ 1988ರವರೆಗೆ, ಬ್ಯಾಂಕ್ ಆಫ್ ಇಂಗ್ಲೆಂಡ್ನಿಂದ ಬಿಡುಗಡೆ ಮಾಡಲಾದ (ಬ್ಯಾಂಕ್ ಆಫ್ ಇಂಗ್ಲೆಂಡ್ನಿಂದ ಕೊನೆಯದಾಗಿ ಬಿಡುಗಡೆಯಾದ £1 ನೋಟುಗಳವು) D ಸರಣಿಯ £1 ಬ್ಯಾಂಕ್ನೋಟುಗಳಲ್ಲಿ ಹ್ಯಾರಿ ಎಕ್ಲೆಸ್ಟೋನ್ರು ವಿನ್ಯಾಸ ಮಾಡಿದ ನ್ಯೂಟನ್ರ ಚಿತ್ರವಿತ್ತು. ನೋಟುಗಳ ಹಿಂಬದಿಯಲ್ಲಿ ದೂರದರ್ಶಕ, ಪ್ರಿಸಮ್/ಅಶ್ರಗ ಮತ್ತು ಸೌರವ್ಯೂಹದ ನಕ್ಷೆಯೊಂದಿಗೆ ಪುಸ್ತಕವನ್ನು ಹಿಡಿದ ನ್ಯೂಟನ್ರ ಚಿತ್ರವಿತ್ತು.[59]
ಸೇಬಿನ ಮೇಲೆ ನಿಂತಿರುವ ಐಸಾಕ್ ನ್ಯೂಟನ್ರ ಪ್ರತಿಮೆಯೊಂದನ್ನು, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಕೃತಿ ಚರಿತ್ರೆಯ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು.
1816ರಲ್ಲಿ ನ್ಯೂಟನ್ರಿಗೆ ಸಂಬಂಧಪಟ್ಟ ಹಲ್ಲನ್ನು £730[60] (us$3,633)ಗಳಿಗೆ ಲಂಡನ್ನಲ್ಲಿ ಉಂಗುರದಲ್ಲಿ ಜೋಡಿಸಿಕೊಳ್ಳಲು ಇಚ್ಛಿಸಿದ್ದ ಶ್ರೀಮಂತ ವ್ಯಕ್ತಿಯೊಬ್ಬನಿಗೆ ಮಾರಲಾಯಿತು.[61] 2002ರ ಗಿನ್ನೆಸ್ ವಿಶ್ವದಾಖಲೆಗಳಲ್ಲಿ ಇದನ್ನು ಅತಿ ಹೆಚ್ಚು ಮೌಲ್ಯದ ಹಲ್ಲು ಎಂಬುದಾಗಿ ಹೆಸರಿಸಲಾಗಿದೆ, ಇದರ ಬೆಲೆ 2001[61] ರ ನಂತರದ ಗಣನೆಯಲ್ಲಿ ಸುಮಾರು £25,000 (us$35,700) ಆಗುತ್ತದೆ.[61] ಅದನ್ನು ಯಾರು ಕೊಂಡರು ಹಾಗೂ ಸದ್ಯದಲ್ಲಿ ಇದು ಯಾರ ಬಳಿಯಿದೆ ಎಂಬುದು ಈಗ ರಹಸ್ಯವಾಗಿದೆ.
ಇತಿಹಾಸಕಾರ ಸ್ಟೀಫನ್ D. ಸ್ನೋಬೆಲೆನ್ ನ್ಯೂಟನ್ರ ಬಗ್ಗೆ ಹೀಗೆ ಹೇಳುತ್ತಾರೆ, "ಐಸಾಕ್ ನ್ಯೂಟನ್ರು ಓರ್ವ ಪಾಷಂಡಿಯಾಗಿದ್ದರು. ಆದರೆ ... ಅವರು ತಮ್ಮ ಖಾಸಗಿ ನಂಬಿಕೆಗಳ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ — ಇದನ್ನು ಸಂಪ್ರದಾಯಶರಣರು ವಿಪರೀತ ಸುಧಾರಣಾವಾದಿತ್ವ ಎಂಬ ಭಾವನೆ ಹೊಂದಿದ್ದರು. ಅವರು ತಮ್ಮ ಖಾಸಗಿ ನಂಬಿಕೆಯನ್ನು ಎಷ್ಟರಮಟ್ಟಿಗೆ ರಹಸ್ಯವಾಗಿಟ್ಟಿದ್ದರೆಂದರೆ ಪಂಡಿತರು ಈಗಲೂ ಅದರ ರಹಸ್ಯ ಬಿಡಿಸಲು ಪ್ರಯತ್ನಿಸುತ್ತಿದ್ದಾರೆ."[6] ಸ್ನೊಬೆಲನ್ ಕೊನೆಯದಾಗಿ ಹೇಳುವ ಪ್ರಕಾರ ನ್ಯೂಟನ್ರು ಕನಿಷ್ಟ ಸೊಸಿನಿಯನ್ ಬೆಂಬಲಿಗರಾಗಿದ್ದರು (ಅವರು ಕನಿಷ್ಟ ಎಂಟು ಸೊಸಿನಿಯನ್ ಪುಸ್ತಕಗಳನ್ನು ಹೊಂದಿದ್ದು, ಆಮೂಲಾಗ್ರವಾಗಿ ಓದಿದ್ದರು), ಬಹುಶಃ ಏರಿಯಸ್ ಪಂಥೀಯರಾಗಿದ್ದಿರಬಹುದು ಹಾಗೂ ಬಹಳಷ್ಟು ಮಟ್ಟಿಗೆ ತ್ರಿಮೂರ್ತಿಸಿದ್ಧಾಂತದ ವಿರೋಧಿಯಾಗಿದ್ದಿರಬೇಕು[6]. ಧಾರ್ಮಿಕ ಅಸಹಿಷ್ಣುತೆಯ ಪರಾಕಾಷ್ಠೆಯ ಸಮಯದಲ್ಲಿ ಸಾರ್ವಜನಿಕವಾಗಿ ನ್ಯೂಟನ್ರ ಸುಧಾರಣಾವಾದಿ ಅಭಿಪ್ರಾಯಗಳನ್ನು ತೋರಿಸಿದ್ದರೆನ್ನಲಾಗಿದೆ, ಅದರಲ್ಲಿ ಪ್ರಮುಖವಾಗಿ ಧಾರ್ಮಿಕ ಕಟ್ಟಳೆಗಳನ್ನು ಪಾಲಿಸಲು ಅವರ ವಿರೋಧ ಹಾಗೂ ಸಾವಿನ ಸಮಯದಲ್ಲಿ ಅವರಿಗೆ ಪಾಲಿಸಲೆಂದು ಹೇಳಿದ್ದ ಪವಿತ್ರ ಸಂಸ್ಕಾರಗಳನ್ನು ಆಚರಿಸಲು ವಿರೋಧಿಸಿದ್ದು ಗಮನಾರ್ಹವಾಗಿದೆ.[6]
ಸ್ನೋಬೆಲೆನ್ರು ಚರ್ಚಿಸಿದ ಅಭಿಮತದ ಪ್ರಕಾರ,[6] T.C. ಫಿಜನ್ಮೇಯರ್ರ ವಾದದ ಪ್ರಕಾರ ರೋಮನ್ ಕ್ಯಾಥೊಲಿಕರು, ಆಂಗ್ಲಿಕನ್ರು ಮತ್ತು ಬಹಳಷ್ಟು ಪ್ರೊಟೆಸ್ಟಂಟ್ರು ಪಾಲಿಸುವ ಪಾಶ್ಚಿಮಾತ್ಯ ಸಂಪ್ರದಾಯದ ಬದಲಿಗೆ ನ್ಯೂಟನ್ರು ತ್ರಿಮೂರ್ತಿತ್ವದ ಪೌರ್ವಾತ್ಯ ಸಂಪ್ರದಾಯವನ್ನು ಪಾಲಿಸುತ್ತಿದ್ದರು.[62] ತಮ್ಮದೇ ಅಧಿಕಾರಾವಧಿಯಲ್ಲಿ ಅವರನ್ನು ರೋಸೆಕ್ರೂಷಿಯನ್ ಪಂಥದವರು ಎಂದು ಆರೋಪಿಸಲಾಯಿತು (ರಾಯಲ್ ಸೊಸೈಟಿ ಹಾಗೂ ಚಾರ್ಲ್ಸ್ IIರ ಆಸ್ಥಾನದ ಅನೇಕರಂತೆ).[63]
ಚಲನೆಯ ಸೂತ್ರಗಳು ಹಾಗೂ ಸಾರ್ವತ್ರಿಕ ಗುರುತ್ವಾಕರ್ಷಣೆಯು ನ್ಯೂಟನ್ರ ಪ್ರಸಿದ್ಧ ಸಂಶೋಧನೆಗಳಾದರೂ, ಅವರು ಬ್ರಹ್ಮಾಂಡವನ್ನು ಕೇವಲ ಒಂದು ಯಂತ್ರದಂತೆ ಎಂದರೆ ಅತಿ ದೊಡ್ಡ ಗಡಿಯಾರದಂತೆ ಎಂಬ ಅಭಿಪ್ರಾಯದ ಬೆಂಬಲವಾಗಿ ಅದನ್ನು ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಅವರು, "ಗುರುತ್ವಾಕರ್ಷಣೆಯು ಗ್ರಹಗಳ ಚಲನೆಯನ್ನು ವಿವರಿಸುತ್ತದೆಯೇ ಹೊರತು ಗ್ರಹಗಳನ್ನು ಚಲಿಸುವಂತೆ ಮಾಡಿದವರಾರು ಎಂಬುದನ್ನು ಹೇಳುವುದಿಲ್ಲ. "ದೇವರು ಎಲ್ಲಾ ವಸ್ತುಗಳ ನಿಯಂತ್ರಣ ಹೊಂದಿರುತ್ತಾನೆ ಹಾಗೂ ಎಲ್ಲವನ್ನೂ ತಿಳಿದಿರುತ್ತಾನೆ ಹಾಗೂ ಏನು ಮಾಡಬೇಕೆಂದು ನಿರ್ಧರಿಸುತ್ತಾನೆ"[64] ಎಂದು ಹೇಳಿದರು.
ಅವರ ವೈಜ್ಞಾನಿಕ ಪ್ರಸಿದ್ಧಿಯ ಎದುರು ನಿಲ್ಲಲಾಗದ, ನ್ಯೂಟನ್ರ ಬೈಬಲ್ನ ಅಧ್ಯಯನಗಳು ಮತ್ತು ಮುಂಚಿನ ಚರ್ಚ್ ಪಾದ್ರಿಗಳ ಮೇಲಿನ ಅಧ್ಯಯನಗಳೂ ಗಮನಾರ್ಹ. ನ್ಯೂಟನ್ರು ಗ್ರಂಥಪಾಠ ವಿಮರ್ಶೆಯ ಮೇಲೆ ಗಮನಾರ್ಹವಾದ ಆನ್ ಹಿಸ್ಟಾರಿಕಲ್ ಅಕೌಂಟ್ ಆಫ್ ಟು ನೋಟೆಬಲ್ ಕರಪ್ಷನ್ಸ್ ಆಫ್ ಸ್ಕ್ರಿಪ್ಚರ್ ಎಂಬ ಕೃತಿಗಳನ್ನು ಬರೆದಿದ್ದಾರೆ. ಅವರು ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನಾಂಕವನ್ನು 3ನೇ ಏಪ್ರಿಲ್, AD 33 ಎಂದು ಅಂದಾಜಿಸಿದರು, ಇದು ಸಾಂಪ್ರದಾಯಿಕವಾಗಿ ಒಪ್ಪಿತವಾಗಿರುವ ದಿನಾಂಕಕ್ಕೆ ಹೊಂದಿಕೆಯಾಗುತ್ತದೆ.[65] ಅವರು ಬೈಬಲ್ನಲ್ಲಿನ ರಹಸ್ಯ ಸಂದೇಶಗಳ ಪತ್ತೆಗೆ ಪ್ರಯತ್ನ ಪಟ್ಟು ವೈಫಲ್ಯ ಹೊಂದಿದರು.
ತಮ್ಮ ಇಡೀ ಜೀವನದಲ್ಲಿ, ನ್ಯೂಟನ್ರು ಪ್ರಕೃತಿ ವಿಜ್ಞಾನದ ಬಗ್ಗೆ ಬರೆದದ್ದಕ್ಕಿಂತ ಹೆಚ್ಚು ಧರ್ಮದ ಬಗ್ಗೆ ಬರೆದರು. ಅವರು ತರ್ಕಬದ್ಧ ವಿಶ್ವವ್ಯಾಪಿತ್ವದ ಬಗ್ಗೆ ನಂಬಿಕೆ ಇಟ್ಟಿದ್ದರು, ಆದರೆ ಲೇಬಿನಿಜ್ ಹಾಗೂ ಬರೂಚ್ ಸ್ಪಿನೋಜಾರ ನಂಬಿಕೆಗಳಲ್ಲಿದ್ದ ಭೌತಚೇತನವಾದವನ್ನು ತಿರಸ್ಕರಿಸಿದರು. ಆದ್ದರಿಂದ, ಕ್ರಮವಾಗಿರುವ ಮತ್ತು ಶಕ್ತಿಕ್ರಿಯಾವಾದದ ಬ್ರಹ್ಮಾಂಡವನ್ನು ಅರ್ಥೈಸಿಕೊಳ್ಳಬಹುದು, ಹಾಗೂ ಕ್ರಿಯಾತ್ಮಕ ಕಾರಣಗಳಿಂದ ಮಾತ್ರವೇ ಅರ್ಥೈಸಿಕೊಳ್ಳಬೇಕು. ತನ್ನ ಪತ್ರಗಳಲ್ಲಿ, ನ್ಯೂಟನ್ರು ಪ್ರಿನ್ಸಿಪಿಯಾ ಬರೆಯುವಾಗ "ನಿಯಮಗಳನ್ನು ರೂಪಿಸುವಾಗ ದೇವರ ನಂಬಿಕೆಯ ಬದಲಿಗೆ ಮಾನವರನ್ನು ತುಲನೆ ಮಾಡಬಹುದಾದಂತಹಾ ನಿಯಮಗಳ ಬಗ್ಗೆ ಒಂದು ಕಣ್ಣಿಟ್ಟಿದ್ದೆ"[66] ಎಂದು ಹೇಳಿದ್ದಾರೆ. ವಿಶ್ವದ ವ್ಯವಸ್ಥೆಯಲ್ಲಿ ಒಂದು ವಿನ್ಯಾಸವಿರುವ ಬಗ್ಗೆ ಕುರುಹನ್ನು ಅವರು ಕಂಡುಕೊಂಡರು: "ಇಂತಹಾ ಗ್ರಹವ್ಯವಸ್ಥೆಯಲ್ಲಿನ ಅಪೂರ್ವ ಏಕರೂಪತ್ವವು ಆಯ್ಕೆಯ ಪ್ರಭಾವವನ್ನು ನೀಡಿರಲೇಬೇಕು". ಆದರೆ ನ್ಯೂಟನ್ರು ಅಂತಿಮವಾಗಿ ವ್ಯವಸ್ಥೆಯನ್ನು ಸುಧಾರಿಸಲು ಅಸ್ಥಿರತೆಗಳ ಸಾವಕಾಶ ಬೆಳವಣಿಗೆಯಿಂದಾಗಿ ದೈವಿಕ ಹಸ್ತಕ್ಷೇಪದ ಅಗತ್ಯವಿರುತ್ತದೆ ಎಂಬ ಅಭಿಪ್ರಾಯ ಮಂಡಿಸಿದ್ದರು.[67] ಈ ವಾದಕ್ಕೆ ಲೇಬಿನಿಜ್ ಕಟುವಿಡಂಬನೆಯಾಗಿ : "ದೇವರು ತನ್ನ ಗಡಿಯಾರವನ್ನು ಆಗ್ಗಾಗ್ಗೆ ಮರುಹೊಂದಿಸುತ್ತಿರುತ್ತಾನೆ ; ಇಲ್ಲದೇ ಹೋದರೆ ಅದು ಚಲಿಸದೇ ಹೋದೀತು. "ಇದನ್ನು ನಿರಂತರಗೊಳಿಸಲು ಬಹುಶಃ ಆತನಿಗೆ ದೂರದೃಷ್ಟಿ ಇಲ್ಲದೇ ಹೋಯಿತೇನೋ"[68] ಎಂದರು. ನ್ಯೂಟನ್ರ ಪ್ರತಿಪಾದನೆಯನ್ನು ಆತನ ಬೆಂಬಲಿಗ ಸ್ಯಾಮ್ಯುಯೆಲ್ ಕ್ಲಾರ್ಕೆ ಪ್ರಸಿದ್ಧವಾದ ಪತ್ರವ್ಯವಹಾರದಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದರು.
ನ್ಯೂಟನ್ ಮತ್ತು ರಾಬರ್ಟ್ ಬಾಯ್ಲೆರ ಯಂತ್ರಶಾಸ್ತ್ರದ ತತ್ವಗಳನ್ನು ವಿಚಾರವಾದಿ ಲಘುಪುಸ್ತಕ ಬರೆಯುವವರೆಲ್ಲರೂ ಸರ್ವದೇವಾರಾಧನೆ ಹಾಗೂ ಧಾರ್ಮಿಕ ಭಾವೋನ್ಮಾದಕ್ಕೆ ಸೂಕ್ತ ಬದಲಿಯಾಗಬಹುದು ಎಂದು ಪ್ರೋತ್ಸಾಹಿಸಿದರು ಹಾಗೂ ಸಂಪ್ರದಾಯ ಹಾಗೂ ಧರ್ಮಸಹಿಷ್ಣು ಬೋಧಕರೆಲ್ಲರೂ ಹಿಂಜರಿಕೆಯಿಂದ ಸ್ವೀಕರಿಸಿದರು.[69] ಆದ್ದರಿಂದ ವಿಜ್ಞಾನದ ಸ್ಪಷ್ಟತೆ ಹಾಗೂ ಸರಳತೆಯು ಭಾವೋನ್ಮಾದ ಹಾಗೂ ನಾಸ್ತಿಕತೆ[70] ಯ ಅಪಾಯಗಳ ಭಾವುಕತೆ ಮತ್ತು ಅನುಭಾವದ ಮೂಢನಂಬಿಕೆಗಳ ಪರಾಕಾಷ್ಠೆಯೊಂದಿಗೆ ಹೋರಾಟ ನಡೆಸಲು ಹಾಗೂ, ಅದೇ ಸಮಯದಲ್ಲಿ ಆಂಗ್ಲ ತಾರ್ಕಿಕ ದೈವವಾದಿಗಳ ಎರಡನೇ ಅಲೆಯು; ನ್ಯೂಟನ್ರ ಸಂಶೋಧನೆಗಳನ್ನು "ನೈಸರ್ಗಿಕ ಧರ್ಮ"ದ ಸಾಧ್ಯತೆಯನ್ನು ಪ್ರದರ್ಶಿಸಲು ಬಳಸಿಕೊಂಡಿತು.
ಜ್ಞಾನೋದಯಕ್ಕೆ ಮುಂಚಿನ "ಮಾಂತ್ರಿಕ ಆಲೋಚನೆ", ಹಾಗೂ ಕ್ರೈಸ್ತಧರ್ಮದ ರಹಸ್ಯ ಅಂಶಗಳ ಮೇಲೆ ನಡೆದ ದಾಳಿಗಳ ಮೂಲವು ಬಾಯ್ಲೆರ ಬ್ರಹ್ಮಾಂಡದ ಯಾಂತ್ರಿಕ ವ್ಯವಸ್ಥೆಯ ಕಲ್ಪನೆಯಾಗಿತ್ತು. ನ್ಯೂಟನ್ರು ಬಾಯ್ಲೆರ ಕಲ್ಪನೆಗಳಿಗೆ ಗಣಿತಾತ್ಮಕ ಪುರಾವೆಗಳ ಮೂಲಕ ಪೂರ್ಣತೆ ನೀಡಿ, ಬಹುಶಃ ಇನ್ನೂ ಪ್ರಮುಖವಾಗಿ ಅವುಗಳನ್ನು ಜನಪ್ರಿಯಗೊಳಿಸುವಲ್ಲಿ ಹೆಚ್ಚು ಯಶಸ್ವಿಯಾದರು.[71] ನ್ಯೂಟನ್ರು ಹಸ್ತಕ್ಷೇಪ ನಡೆಸುವ ದೇವರಿರುವ ವಿಶ್ವದ ಬದಲಿಗೆ ದೇವರಿಂದ ತರ್ಕಬದ್ಧ ಹಾಗೂ ಸಾರ್ವತ್ರಿಕ ನಿಯಮಗಳ ಅನುಸಾರ ರಚಿತವಾದ ವಿಶ್ವದ ಕಲ್ಪನೆ ಮೂಡಿಸಿದರು.[72] ಈ ನಿಯಮಗಳನ್ನು ಶೋಧಿಸಲು ಎಲ್ಲಾ ಜನರಿಗೂ ಸಾಧ್ಯವಿದ್ದು, ಜನರಿಗೆ ಮತ್ತೊಂದಲ್ಲದ ಇದೇ ಜೀವನದಲ್ಲಿ ತಮ್ಮದೇ ಆದ ಗುರಿಗಳನ್ನು ಸಾಧಿಸಲು ಅವಕಾಶ ನೀಡಿದ್ದು, ತಮ್ಮದೇ ಆದ ತಾರ್ಕಿಕ ಶಕ್ತಿಗಳಿಂದ ತಮ್ಮನ್ನು ಸರಿಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.[73]
ನ್ಯೂಟನ್ರು ಈ ಎಲ್ಲಾ ಸೃಷ್ಟಿಯ ಭವ್ಯತೆಯ ಮುಂದೆ ಅಸ್ತಿತ್ವದಲ್ಲಿಲ್ಲ ಎನ್ನಲಾಗುವುದಿಲ್ಲವಾದ್ದರಿಂದ ದೇವರನ್ನು ಶ್ರೇಷ್ಠ ಸೃಷ್ಟಿಕರ್ತ ಎಂಬಂತೆ ಕಂಡರು[74][75][76] ಆತನ ವಕ್ತಾರ ಕ್ಲಾರ್ಕೆ, ಲೇಬಿನಿಜ್ರ ತನ್ನ ಸೃಷ್ಟಿಯಲ್ಲಿ ಭಾಗವಹಿಸದೇ ಲಾರೆಂಜಿನ್ ಡು ಮಾಲ್ ನ ಜವಾಬ್ದಾರಿಯಿಂದ ದೇವರನ್ನು ಮುಕ್ತರಾಗಿಸುವ ದೇವನ್ಯಾಯವಾದವನ್ನು ತಿರಸ್ಕರಿಸಿದರು, ಕ್ಲಾರ್ಕೆ ಅದಕ್ಕೆ ಅಂತಹಾ ದೇವರು ಕೇವಲ ಹೆಸರಿಗೆ ಮಾತ್ರ ನಿಯಾಮಕನಾಗಿರುತ್ತಾನೆ, ಇದು ಸರಿಸುಮಾರು ನಾಸ್ತಿಕತ್ವವೇ ಎಂದು ನಿರಾಕರಿಸಿದರು.[77] ಆದರೆ ಆಗ ಅಂದಾಜಿಸದ ವಿಷಯವೆಂದರೆ, ಮುಂದಿನ ಶತಮಾನದಲ್ಲಿನ ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ನ್ಯೂಟನ್ರ ವ್ಯವಸ್ಥೆಯ ಯಶಸ್ಸು, ಲೇಬಿನಿಜ್ರು ಹೇಳಿದ ತಾರ್ಕಿಕ ದೈವವಾದವನ್ನು ಮರುಸ್ಥಾಪನೆಗೊಳಿಸುತ್ತದೆ ಎಂಬುದು.[78] ಸಾಮಾನ್ಯ ಮಾನವ ತರ್ಕಗಳಿಂದಾಗಿಯೇ ವಿಶ್ವವನ್ನು ಅರ್ಥೈಸಿಕೊಳ್ಳಬಲ್ಲ ಸಾಧ್ಯತೆಯು, ಓಡೋ ಮಾಕ್ವಾರ್ಡ್ ವಾದಿಸಿದ ಪ್ರಕಾರ ತಮ್ಮ ಸರಿಪಡಿಸಿಕೊಳ್ಳುವಿಕೆ ಹಾಗೂ ದುಷ್ಟತನದ ನಿವಾರಣೆಗೆ ಮನುಷ್ಯರೇ ಜವಾಬ್ದಾರರಾದರು.[79]
ಇನ್ನೊಂದು ಕಡೆ, ಧರ್ಮಸಹಿಷ್ಣುಗಳು ಮತ್ತು ನ್ಯೂಟನ್ರ ಯೋಚನೆಗಳು ದೀರ್ಘಾವಧಿಯಲ್ಲಿ ಕಲ್ಪಿಸಿಕೊಂಡಾಗ, ಯಾಂತ್ರಿಕ ಬ್ರಹ್ಮಾಂಡ ಕಲ್ಪನೆಯ ಧಾರ್ಮಿಕ ಪಂಗಡವು ಜ್ಞಾನೋದಯ ಪಂಥವು ಕಷ್ಟಪಟ್ಟು ನಿವಾರಿಸಲು ಪ್ರಯತ್ನಿಸಿದ ಭಾವುಕತೆ ಹಾಗೂ ಅನುಭಾವದ ಕಲ್ಪನೆಗೆ ಮರಳುತ್ತಿದ್ದ ಧರ್ಮಯುಗದ ಕಲ್ಪನೆಯಾಯಿತು.[80]
1704ರಲ್ಲಿ ಬರೆದ ಹಸ್ತಪ್ರತಿಯೊಂದರಲ್ಲಿ ಬೈಬಲ್ನಿಂದ ವೈಜ್ಞಾನಿಕ ವಿಚಾರಗಳನ್ನು ಹೊರತರಲು ನಡೆಸಿದ ತನ್ನ ಪ್ರಯತ್ನಗಳನ್ನು ವಿವರಿಸುವಾಗ, ಅವರು ವಿಶ್ವವು 2060ಕ್ಕೆ ಮುನ್ನ ಕೊನೆಗೊಳ್ಳುವುದಿಲ್ಲ ಎಂದು ಅಂದಾಜಿಸಿದರು. ಇದನ್ನು ಮುನ್ಸೂಚಿಸುವಾಗ ಅವರು ಹೀಗೆ ಹೇಳಿದರು, "ಇಲ್ಲಿ ನನ್ನ ಉದ್ದೇಶ ಖಡಾಖಂಡಿತವಾಗಿ ಅಂತ್ಯದ ಸಮಯವನ್ನು ಹೇಳುವುದಲ್ಲ, ಬದಲಿಗೆ ವಿಶ್ವವು ಕೊನೆಗೊಳ್ಳುವ ದಿನದ ಬಗ್ಗೆ ಆಗ್ಗಾಗ್ಗೆ ಭವಿಷ್ಯ ಹೇಳುವ ಹಾಗೂ ಹಾಗೆ ಹೇಳಿದ ಭವಿಷ್ಯ ಸುಳ್ಳಾದಾಗ ಪವಿತ್ರ ಸಿದ್ಧಾಂತಗಳನ್ನು ತಪ್ಪೆಂದು ಹೇಳುವ ಭ್ರಮಾಧೀನ ಜನರ ಅವಿಚಾರದ ಊಹಾಪೋಹಗಳಿಗೆ ಕಡಿವಾಣ ಹಾಕುವ ಉದ್ದೇಶವಷ್ಟೇ."[81]
ಜ್ಞಾನೋದಯ ತತ್ವಜ್ಞಾನಿಗಳು ಪೂರ್ವಿಕ ವಿಜ್ಞಾನಿಗಳ ಕಿರು ಚರಿತ್ರೆಯನ್ನು — ಪ್ರಮುಖವಾಗಿ ಗೆಲಿಲಿಯೊ, ಬಾಯ್ಲೆ, ಮತ್ತು ನ್ಯೂಟನ್ರನ್ನು — ತಮ್ಮ ಮಾರ್ಗದರ್ಶಕರಾಗಿ ಹಾಗೂ ತಮ್ಮ ಪ್ರಸಕ್ತ ದಿನಮಾನದ ಪ್ರತಿ ಭೌತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ವಿಚಿತ್ರ ಪ್ರಕೃತಿ ಹಾಗೂ ಪ್ರಾಕೃತಿಕ ನಿಯಮಗಳ ಅನ್ವಯಿಸುವಿಕೆಗೆ ಹೊಣೆಗಾರರನ್ನಾಗಿ ಆಯ್ಕೆ ಮಾಡಿದರು. ಇದನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದ ಇತಿಹಾಸ ಮತ್ತು ಸಾಮಾಜಿಕ ರಚನೆಯ ಪಾಠಗಳನ್ನು ತ್ಯಜಿಸಬೇಕು.[82]
ನ್ಯೂಟನ್ರ ಪ್ರಾಕೃತಿಕ ಹಾಗೂ ತರ್ಕಬದ್ಧವಾಗಿರುವ ನಿಯಮಗಳ ಮೇಲೆ ಆಧಾರಿತವಾದ ಬ್ರಹ್ಮಾಂಡದ ಕಲ್ಪನೆಯೇ ಜ್ಞಾನೋದಯ ಸಿದ್ಧಾಂತದ ಮೂಲಗಳಲ್ಲೊಂದಾಗಿದೆ.[83] ಲಾಕೆ ಮತ್ತು ವಾಲ್ಟೇರ್ ಪ್ರಕೃತಿ ನಿಯಮ ಕಲ್ಪನೆಯನ್ನು ರಾಜಕೀಯ ವ್ಯವಸ್ಥೆಯಲ್ಲಿ ಅಳವಡಿಸಿ ಅಂತರ್ಗತ ಹಕ್ಕುಗಳ ಬಗ್ಗೆ ವಾದಿಸಿದರು; ನೈಸರ್ಗಿಕತಾವಾದಿಗಳು ಮತ್ತು ಆಡಂ ಸ್ಮಿತ್ ಮನಶ್ಶಾಸ್ತ್ರ ಮತ್ತು ಸ್ವಹಿತಾಸಕ್ತಿಯ ಪ್ರಾಕೃತಿಕ ಕಲ್ಪನೆಗಳನ್ನು ಆರ್ಥಿಕ ವ್ಯವಸ್ಥೆಗಳಿಗೆ ಅಳವಡಿಸಲು ಪ್ರಯತ್ನಿಸಿದರೆ, ಸಮಾಜಶಾಸ್ತ್ರಜ್ಞರು ಪ್ರಸ್ತುತ ಸಾಮಾಜಿಕ ವ್ಯವಸ್ಥೆಯು ಬೆಳವಣಿಗೆಯ ನೈಸರ್ಗಿಕ ಮಾದರಿಯಲ್ಲಿ ಇತಿಹಾಸವನ್ನು ಸೇರಿಸಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದರು. ಮಾನ್ಬೊಡ್ಡೋ ಮತ್ತು ಸ್ಯಾಮ್ಯುಯೆಲ್ ಕ್ಲಾರ್ಕೆ ನ್ಯೂಟನ್ರ ಕೃತಿಯ ಅಂಶಗಳನ್ನು ವಿರೋಧಿಸಿದರೂ, ಅಂತಿಮವಾಗಿ ತಮ್ಮ ಧಾರ್ಮಿಕ ನಿಲುವುಗಳಿಗೆ ಬದ್ಧವಾಗುವಂತೆ ಹೊಂದಿಸಿ ಬಳಸಿದರು.
ಘನ ಟಂಕಸಾಲೆಯ ಮುಖ್ಯಸ್ಥರಾಗಿ, ನ್ಯೂಟನ್ರು ಬೃಹತ್ ಮರುನಾಣ್ಯೀಕರಣದಲ್ಲಿ ಚಲಾವಣೆಯಾದ ನಾಣ್ಯಗಳಲ್ಲಿ 20% ಖೋಟಾ ನಾಣ್ಯಗಳು ಎಂದು ಅಂದಾಜಿಸಿದ್ದರು. ಖೋಟಾನಾಣ್ಯ ಚಲಾವಣೆಯು ನೇಣು ಹಾಕುವಿಕೆ, ಕುದುರೆಗೆ ಕಟ್ಟಿ ಎಳೆದೊಯ್ಯುವಿಕೆ ಹಾಗೂ ದೇಹದ ಕಾಲು ಭಾಗ ಕತ್ತರಿಸುವಿಕೆ/ಕಾಲು ಕತ್ತರಿಸುವಿಕೆಯಂತಹ ಶಿಕ್ಷೆಗಳನ್ನು ವಿಧಿಸಬಹುದಾದ ಒಂದು ಗುರುತರ ಅಪರಾಧವಾಗಿತ್ತು. ಇಷ್ಟಾದರೂ ನಿರ್ಭರ ಅಪರಾಧಿಗಳ ಅಪರಾಧ ನಿರ್ಣಯವು ಬಹಳ ಕಷ್ಟಸಾಧ್ಯವಾಗಿ ಪರಿಣಮಿಸಿತ್ತು; ಆದಾಗ್ಯೂ, ನ್ಯೂಟನ್ರು ಇದಕ್ಕೆ ಸಮರ್ಥರಾದವರೆನಿಸಿದರು.[84] ಪಾನಗೃಹಗಳ ಹಾಗೂ ಛತ್ರಗಳ ವಾಡಿಕೆಯ ವ್ಯಕ್ತಿಯ ವೇಷದಲ್ಲಿ, ತಾವೇ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದರು.[85] ಅಭಿಯೋಜಕರ ಮೇಲೆ ಎಲ್ಲಾ ರೀತಿಯ ನಿರ್ಬಂಧವಿದ್ದಾಗ್ಯೂ, ಮತ್ತು ಸರ್ಕಾರದ ವಿವಿಧ ಶಾಖೆಗಳನ್ನು ಪ್ರತ್ಯೇಕಿಸಿದ್ದಾಗ್ಯೂ ಆಂಗ್ಲ ಕಾನೂನು ಪುರಾತನ ಹಾಗೂ ಅಧಿಕಾರಿಗಳ ಭೀಕರ ರಿವಾಜುಗಳನ್ನು ಹೊಂದಿತ್ತು. ನ್ಯೂಟನ್ರನ್ನು ಜೂನ್ 1698 ಮತ್ತು ಕ್ರಿಸ್ಮಸ್ 1699ರ ನಡುವೆ ಶಾಂತಿಪಾಲಕ ನ್ಯಾಯಾಧಿಕಾರಿಯಾಗಿ ನೇಮಿಸಲಾಗಿತ್ತು. ಅವರು ಸುಮಾರು 200 ಜನ ಸಾಕ್ಷಿಗಳು,ಮಾಹಿತಿದಾರರು ಮತ್ತು ಶಂಕಿತರುಗಳೊಂದಿಗೆ ಪಾಟಿ-ಸವಾಲು ನಡೆಸಿದರು. ನ್ಯೂಟನ್ರು ತಮ್ಮ ಎಲ್ಲಾ ಅಪರಾಧ ನಿರ್ಣಯಗಳಲ್ಲಿ ಯಶಸ್ವಿಯಾದರು ಹಾಗೂ ಫೆಬ್ರವರಿ 1699ರಲ್ಲಿ ಆತ ಹತ್ತು ಆರೋಪಿಗಳನ್ನು ನೇಣುಗಂಬಕ್ಕೇರಲು ಸಿದ್ಧರಾಗಿಸಿದ್ದರು.[ಸೂಕ್ತ ಉಲ್ಲೇಖನ ಬೇಕು]
ನ್ಯೂಟನ್ರ ಮೊಕದ್ದಮೆಗಳಲ್ಲಿ ರಾಜನ ವಕೀಲನು ವಿಲಿಯಂ ಚಾಲನರ್ ಎಂಬಾತನ ವಿರುದ್ಧ ಹೂಡಿದ್ದು ಇತ್ತು.[86] ಚಾಲನರ್ನ ಯೋಜನೆಗಳಲ್ಲಿ ಕ್ಯಾಥೊಲಿಕರ ವಂಚನೆಯ ಗುಪ್ತಕೂಟಗಳನ್ನು ರಚಿಸಿ ತಾನು ಬೀಸಿದ ಬಲೆಗೆ ಬಿದ್ದ ದೌರ್ಭಾಗ್ಯಶಾಲಿಗಳನ್ನು ಸಂಚುಗಾರರಾಗಿ ಮಾರ್ಪಡಿಸುವುದೂ ಒಂದು. ಚಾಲನರ್ ತನ್ನನ್ನು ಓರ್ವ ಸಭ್ಯನನ್ನಾಗಿ ಕಾಣಿಸಿಕೊಳ್ಳಬಲ್ಲ ಮಟ್ಟಿಗೆ ಶ್ರೀಮಂತನಾಗಿಬಿಟ್ಟಿದ್ದ. ಚಾಲನರ್ ಟಂಕಸಾಲೆಯ ಮುಖ್ಯಸ್ಥರನ್ನು ಖೋಟಾನೋಟು ಚಲಾವಣೆಗಾರರಿಗೆ ಸಾಧನಗಳನ್ನು ನೀಡುತ್ತಿದ್ದಾರೆಂದು ಸಂಸತ್ತಿಗೆ ಅಹವಾಲು ಸಲ್ಲಿಸಿದ್ದ (ಇದೇ ರೀತಿಯ ಆಪಾದನೆಗಳನ್ನು ಇತರರೂ ಮಾಡಿದ್ದರು). ಆತ ಮುಖ್ಯಸ್ಥರ ಕಾರ್ಯವೈಖರಿಯನ್ನು ಉತ್ತಮಗೊಳಿಸಲು ಅದನ್ನು ಪರಿಶೀಲನೆಗೊಳಪಡಿಸಲು ತನಗೆ ಅನುಮತಿ ನೀಡಲು ಕೇಳಿದ್ದನು. ಆತ ಖೋಟಾ ನಾಣ್ಯಗಳನ್ನು ಟಂಕಿಸುತ್ತಲೇ, ನಾಣ್ಯ ಟಂಕಿಸಲು ತನ್ನ ನಕಲಿಸಲು ಬಾರದ ಯೋಜನೆಗಳನ್ನು ಅಳವಡಿಸಿಕೊಳ್ಳಲು ಸಂಸತ್ತಿಗೆ ಅಹವಾಲು ಸಲ್ಲಿಸಿದ್ದ.[87] ನ್ಯೂಟನ್ರು ಖೋಟಾನೋಟು ಚಲಾವಣೆಗಾಗಿ ಚಾಲನರ್ನನ್ನು ವಿಚಾರಣೆಗೊಳಪಡಿಸಿ ಸೆಪ್ಟೆಂಬರ್ 1697ರಲ್ಲಿ ನ್ಯೂಗೇಟ್ ಬಂದೀಖಾನೆಗೆ ಕಳಿಸಿದ್ದರು, ಆದರೆ ಚಾಲನರ್ನ ಸ್ನೇಹಿತರು ಉನ್ನತ ಹುದ್ದೆಗಳಲ್ಲಿದ್ದುದರಿಂದ ಆತನ ಖುಲಾಸೆಯಾಗಿ ಬಿಡುಗಡೆ ಹೊಂದಿದನು.[86] ನ್ಯೂಟನ್ರು ಎರಡನೇ ಬಾರಿಗೆ ಆತನನ್ನು ನಿರ್ಣಾಯಕ ಸಾಕ್ಷ್ಯಗಳೊಡನೆ ವಿಚಾರಣೆಗೊಳಪಡಿಸಿದರು. ಚಾಲನರ್ನ ದೇಶದ್ರೋಹದ ಅಪರಾಧ ನಿರ್ಣಯವಾಗಿ ಕುದುರೆಗೆ ಕಟ್ಟಿ ಎಳೆಸಿ, ಕಾಲು ಕತ್ತರಿಸಿ 23 ಮಾರ್ಚ್ 1699ರಂದು ಟೈಬರ್ನ್ ಗಲ್ಲುಕಂಬದಲ್ಲಿ ಗಲ್ಲಿಗೇರಿಸಲಾಯಿತು.[88]
ಪ್ರಸಿದ್ಧ ಚಲನೆಯ ಮೂರು ನಿಯಮಗಳು (ಆಧುನಿಕ ರೀತಿಯ ನಿರೂಪಣೆಯಲ್ಲಿ):
ನ್ಯೂಟನ್ರ ಪ್ರಥಮ ನಿಯಮ ವು, (ಜಡತ್ವದ ನಿಯಮ ಎಂದೂ ಹೆಸರಾಗಿದೆ) ಬಾಹ್ಯ ಶಕ್ತಿಯ ಪ್ರಚೋದನೆ ಇಲ್ಲದೇ ಹೋದರೆ ಯಾವುದೇ ವಸ್ತು ನಿಶ್ಚಲವಾಗಿದ್ದರೆ ಅದು ನಿಶ್ಚಲವಾಗಿಯೇ ಇರುತ್ತದೆ ಹಾಗೂ ಏಕರೂಪ ಚಲನೆಯಲ್ಲಿರುವ ವಸ್ತು ಏಕರೂಪ ಚಲನೆಯಲ್ಲಿಯೇ ಇರುತ್ತದೆ ಎಂದು ತಿಳಿಸುತ್ತದೆ.
ನ್ಯೂಟನ್ರ ಎರಡನೇ ನಿಯಮ ವು ಒಂದು ವಸ್ತುವಿನ ಮೇಲಿನ ಅನ್ವಯಿಕ ಶಕ್ತಿಯು, , ಸಮಯದೊಂದಿಗೆ ಅದರ ಅವಿಚ್ಛಿನ್ನತೆ/ಆವೇಗದ ಬದಲಾವಣೆಯ ದರದ ಮೇಲೆ ಅವಲಂಬಿತವಾಗಿರುತ್ತದೆ, , ಎಂದು ತಿಳಿಸುತ್ತದೆ. ಗಣೀತೀಯವಾಗಿ ಹೇಳಬೇಕೆಂದರೆ
ಎರಡನೇ ನಿಯಮವು ಸ್ಥಿರ ದ್ರವ್ಯರಾಶಿಯ ವಸ್ತುವಿಗೆ ಅನ್ವಯಿಸುವುದರಿಂದ (dm /dt = 0), ಮೊದಲ ಅಂಶವು ಅಂತರ್ಧಾನವಾಗಿ, ಬದಲಿಕೆಯಿಂದ ವೇಗವರ್ಧಕದ ಲಕ್ಷಣದ ನಿರೂಪಣೆಯಿಂದಾಗಿ ಸೂತ್ರವನ್ನು ಕೆಳಕಂಡ ಕಿರು ಪ್ರಮಾಣದಲ್ಲಿ ಬರೆಯಬಹುದು
ಮೊದಲ ಮತ್ತು ಎರಡನೇ ಸೂತ್ರಗಳು ಅರಿಸ್ಟಾಟಲ್ರ ಭೌತಶಾಸ್ತ್ರದ ನಿಯಮಗಳನ್ನು ಮುರಿಯುತ್ತವೆ, ಅರಿಸ್ಟಾಟಲ್ರ ಪ್ರಕಾರ ಚಲನೆಯನ್ನು ಮುಂದುವರೆಸಲು ಶಕ್ತಿಯ ಬಳಕೆ ಅನಿವಾರ್ಯ ಎಂದಿದೆ. ಆದರೆ ಇದರಲ್ಲಿ ಚಲನೆಯ ಸ್ಥಿತಿಯನ್ನು ಬದಲಿಸಲು ಮಾತ್ರವೇ ಶಕ್ತಿಯ ಬಳಕೆ ಅಗತ್ಯ ಎಂದಿದೆ. ಶಕ್ತಿಯ SI ಘಟಕವನ್ನು ನ್ಯೂಟನ್ ಎಂದು, ನ್ಯೂಟನ್ರ ಗೌರವಾರ್ಥವಾಗಿ ಕರೆಯಲಾಗುತ್ತದೆ.
ನ್ಯೂಟನ್ರ ಮೂರನೇ ನಿಯಮ ವು ಪ್ರತಿ ಕ್ರಿಯೆಗೆ ಸಮಾನ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದು ತಿಳಿಸುತ್ತದೆ. ಇದರ ಪ್ರಕಾರ ಯಾವುದೇ ವಸ್ತುವಿನ ಮೇಲೆ ಪ್ರಯೋಗಿಸಿದ ಬಲಕ್ಕೆ ಪ್ರತಿಯಾಗಿ ವಿರುದ್ಧ ದಿಕ್ಕಿನಲ್ಲಿ ಮೊದಲ ವಸ್ತುವಿನ ಅದೇ ಪ್ರಮಾಣದ ವಿರುದ್ಧ ಬಲ ಪ್ರಯೋಗವಾಗಿರುತ್ತದೆ. ಒಂದು ಸಾಮಾನ್ಯ ಉದಾಹರಣೆಯೆಂದರೆ ಎರಡು ಐಸ್ ಸ್ಕೇಟರ್ಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ತಳ್ಳಿ ಜೋಡಿಸುವುದು. ಇನ್ನೊಂದು ಉದಾಹರಣೆಯೆಂದರೆ ಬಂದೂಕು,ತುಪಾಕಿಗಳ ಹಿಮ್ಮೆಟ್ಟುವಿಕೆ, ಇವುಗಳಲ್ಲಿ ಗುಂಡನ್ನು ಹಾರಿಸುವ ಬಲವು, ಬಂದೂಕಿನ ಕಡೆಗೂ ಸಹಾ ಸಮಾನ ಬಲದೊಂದಿಗೆ ಅಪ್ಪಳಿಸಿ ಬಂದೂಕುಧಾರಿಯನ್ನು ಹಿಂದೆ ಜಗ್ಗುತ್ತದೆ. ಕ್ರಿಯೆಯಲ್ಲಿನ ಎರಡು ವಸ್ತುಗಳ ದ್ರವ್ಯರಾಶಿಯು ಒಂದೇ ಇರಬೇಕಿಲ್ಲವಾದುದರಿಂದ, ವಸ್ತುಗಳ ನಡುವಣ ಬಲದ ಉತ್ಕರ್ಷ ಒಂದೇ ಆಗಿರಬೇಕೆಂದಿಲ್ಲ (ಬಂದೂಕಿನ ಹಿಮ್ಮೆಟ್ಟುವಿಕೆಯ ಸಂದರ್ಭದಂತೆ).
ಅರಿಸ್ಟಾಟಲ್ರ ಭೌತತತ್ವಗಳ ಹಾಗಲ್ಲದೇ, ನ್ಯೂಟನ್ರ ಭೌತಶಾಸ್ತ್ರವು ಸಾರ್ವತ್ರಿಕವಾಗಿ ಅನ್ವಯಿಸುತ್ತದೆ ಎನ್ನಲಾಗುತ್ತದೆ. ಉದಾಹರಣೆಗೆ, ಎರಡನೇ ನಿಯಮವು ಗ್ರಹಗಳಿಗೂ ಹಾಗೂ ಬೀಳುವ ಕಲ್ಲಿಗೂ ಅನ್ವಯಿಸುತ್ತದೆ.
ಎರಡನೇ ನಿಯಮದ ಸದಿಶ ಲಕ್ಷಣವು ವಸ್ತುವಿನ ಅವಿಚ್ಛಿನ್ನತೆ/ಆವೇಗ ಬದಲಾಯಿಸುವ ರೀತಿ ಹಾಗೂ ಒತ್ತಡದ ದಿಕ್ಕುಗಳ ನಡುವೆ ಜ್ಯಾಮಿತೀಯ ಸಾಪೇಕ್ಷತೆಯನ್ನು ಸೂಚಿಸುತ್ತದೆ. ನ್ಯೂಟನ್ರಿಗಿಂತ ಮುನ್ನ, ಸೂರ್ಯನನ್ನು ಸುತ್ತುವ ಗ್ರಹವು ಅದರ ಚಲನೆಯನ್ನು ಮುಂದುವರೆಸಲು ಪ್ರೇಷಕ ಬಲದ ಅಗತ್ಯವಿರುತ್ತದೆ ಎಂದು ಅಂದಾಜಿಸಲಾಗಿತ್ತು. ನ್ಯೂಟನ್ರು ಅದರ ಬದಲಿಗೆ ಸೂರ್ಯನಿಂದ ತನ್ನೆಡೆಗೆ ಆಕರ್ಷಣೆಯ ಗುಣವಿದ್ದರೆ ಸಾಕು ಎಂದು ತೋರಿಸಿದರು. ಪ್ರಿನ್ಸಿಪಿಯಾ ದ ಪ್ರಕಟಣೆಯ ಅನೇಕ ದಶಕಗಳ ನಂತರವೂ, ಈ ಆಲೋಚನೆಯು ಸಾರ್ವತ್ರಿಕವಾಗಿ ಒಪ್ಪಿತವಾಗಿರಲಿಲ್ಲ, ಹಾಗೂ ಅನೇಕ ವಿಜ್ಞಾನಿಗಳು ಡೆಸ್ಕಾರ್ಟೆಸ್ರ ವಿರುದ್ಧಸುಳಿ/ವಾರ್ಟಿಸಿಸ್ ಸಿದ್ಧಾಂತವನ್ನೇ ಬಳಸುತ್ತಿದ್ದರು.[89]
ಟೆಂಪ್ಲೇಟು:Double image stack ನ್ಯೂಟನ್ರು ತಾವೇ ಅನೇಕ ಬಾರಿ ತಮ್ಮ ಗುರುತ್ವಾಕರ್ಷಣಾ ಸಿದ್ಧಾಂತವನ್ನು ಕಂಡುಹಿಡಿಯಲು ಕಾರಣವಾದ ಮರದಿಂದ ಕೆಳಗೆ ಬಿದ್ದ ಸೇಬಿನ ಸನ್ನಿವೇಶವನ್ನು ಹೇಳುತ್ತಿದ್ದರು.[90]
ವ್ಯಂಗ್ಯಚಿತ್ರಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೇಬು ಅವರ ತಲೆಯ ಮೇಲೆ ಬಿತ್ತು, ಹಾಗೂ ಇದರ ಪರಿಣಾಮವಾಗಿ ಅವರಿಗೆ ಹೇಗೋ ಗುರುತ್ವಾಕರ್ಷಣೆಯ ಶಕ್ತಿಯ ಅರಿವಾಯಿತು ಎನ್ನುತ್ತವೆ. ಅವರ ಟಿಪ್ಪಣಿ ಪುಸ್ತಕಗಳಿಂದ ನ್ಯೂಟನ್ರು 1660ರ ದಶಕದ ಕೊನೆಯವರೆಗೂ ಭೌಮಿಕ ಗುರುತ್ವಾಕರ್ಷಣೆಯು ವಿಲೋಮ ವರ್ಗದ ಅನುಪಾತದಲ್ಲಿ ಚಂದ್ರನವರೆಗೆ ವಿಸ್ತರಿಸಿರುವುದು ಎಂಬ ಆಲೋಚನೆಯೊಂದಿಗೆ ತಿಣುಕಾಟ ನಡೆಸುತ್ತಿದ್ದರು ಎಂಬುದು ಅರಿವಾಗುತ್ತದೆ; ಆದಾಗ್ಯೂ ಪೂರ್ಣ ಪ್ರಮಾಣದ ಸಿದ್ಧಾಂತವನ್ನು ರಚಿಸಲು ಅವರಿಗೆ ಎರಡು ದಶಕಗಳೇ ಬೇಕಾದವು.[91] ಘನ ಟಂಕಸಾಲೆಯಲ್ಲಿ ನ್ಯೂಟನ್ರ ಸಹಾಯಕರಾಗಿದ್ದ ಮತ್ತು ನ್ಯೂಟನ್ರ ಸೋದರ ಸೊಸೆಯ ಗಂಡನಾಗಿದ್ದ ಜಾನ್ ಕಾಂಡ್ಯೂಟ್, ಈ ಸಂದರ್ಭವನ್ನು ನ್ಯೂಟನ್ರ ಜೀವನದ ಬಗ್ಗೆ ಬರೆದಾಗ ಹೀಗೆ ವಿವರಿಸುತ್ತಾರೆ:
1666ರಲ್ಲಿ ಅವರು ಮತ್ತೆ ಕೇಂಬ್ರಿಡ್ಜ್ನಿಂದ ನಿವೃತ್ತಿ ಪಡೆದು ತಮ್ಮ ತಾಯಿ ಇರುವ ಲಿಂಕನ್ಷೈರ್ಗೆ ಬಂದರು. ಅವರು ಯೋಚನಾಮಗ್ನರಾಗಿ ಉದ್ಯಾನದಲ್ಲಿ ಅತ್ತಿಂದಿತ್ತ ಸುತ್ತಾಡುತ್ತಿದ್ದಾಗ ಅವರ ಮನಸ್ಸಿನಲ್ಲಿ ಗುರುತ್ವಾಕರ್ಷಣೆಯ ಶಕ್ತಿಯು (ಮರದಲ್ಲಿದ್ದ ಸೇಬನ್ನು ನೆಲಕ್ಕೆ ತಂದ) ಭೂಮಿಯಿಂದ ನಿಗದಿತ ದೂರದವರೆಗೆ ಮಾತ್ರವೇ ಸೀಮಿತಗೊಂಡಿಲ್ಲ, ಆದರೆ ಈ ಶಕ್ತಿಯು ಸಾಮಾನ್ಯವಾಗಿ ಯೋಚಿಸಿದ್ದಕ್ಕಿಂತ ಹೆಚ್ಚಿನ ದೂರದವರೆಗೆ ಮುಂದುವರೆದಿರಬಹುದು ಎಂಬ ಆಲೋಚನೆ ಮೂಡಿತು. ಚಂದ್ರನಷ್ಟು ಎತ್ತರದವರೆಗೆ ಯಾಕೆ ಮುಂದುವರೆದಿರಬಾರದು ಎಂದು ತನಗೆ ತಾನೆ ಪ್ರಶ್ನೆ ಹಾಕಿಕೊಂಡ ಅವರು & ಹಾಗಿದ್ದರೆ, ಅದು ಚಂದ್ರನ ಚಲನೆಯ ಮೇಲೆ ಪ್ರಭಾವ ಬೀರುವಷ್ಟಿರಬೇಕು & ಬಹುಶಃ ತನ್ನ ಕಕ್ಷೆಯಲ್ಲಿಯೇ ಉಳಿದುಕೊಳ್ಳುವ ಹಾಗೆ ಮಾಡಿರಬೇಕು ಎಂದುಕೊಂಡರು, ನಂತರ ಅವರು ಈ ಊಹೆಯ ಪರಿಣಾಮಗಳನ್ನು ಲೆಕ್ಕ ಹಾಕುವುದರಲ್ಲಿ ತೊಡಗಿದರು.[92]
ಗುರುತ್ವಾಕರ್ಷಣೆಯು ಇದೆಯೇ ಎಂಬುದು ಪ್ರಶ್ನೆಯಾಗಿರಲಿಲ್ಲ, ಆದರೆ ಅದು ಚಂದ್ರನನ್ನು ತನ್ನ ಕಕ್ಷೆಯೊಳಗೆ ಹಿಡಿದಿಡುವಷ್ಟರ ಮಟ್ಟಿಗೆ ಭೂಮಿಯಿಂದ ಅಷ್ಟು ದೂರದವರೆಗೆ ಪಸರಿಸಿರಬಹುದೇ ಎಂಬುದಾಗಿತ್ತು. ನ್ಯೂಟನ್ರು ಆ ಬಲವನ್ನು ಎರಡು ಕಾಯಗಳ ನಡುವಿನ ದೂರದ ವಿಲೋಮ ವರ್ಗಕ್ಕೆ ಇಳಿಸಲು ಸಾಧ್ಯವಾಗುವುದಾದರೆ ಚಂದ್ರನ ಕಕ್ಷೆಯ ಅವಧಿಯನ್ನು ಲೆಕ್ಕ ಹಾಕಿ ತಾಳೆ ನೋಡಬಹುದು ಎಂಬುದನ್ನು ತೋರಿಸಿದರು. ಅವರು ಇದೇ ಬಲವು ಇತರ ಕಕ್ಷೆಯ ಚಲನೆಗಳಿಗೆ ಕಾರಣವಾಗಿರಬಹುದು ಎಂದು ಊಹಿಸಿ ಹಾಗೆಂದೇ ಅದಕ್ಕೆ "ಸಾರ್ವತ್ರಿಕ ಗುರುತ್ವಾಕರ್ಷಣೆ" ಎಂದು ಕರೆದರು.
ಸಮಕಾಲೀನ ಬರಹಗಾರ, ವಿಲಿಯಂ ಸ್ಟಕಿಲೇ, ಎಂಬುವವರು ತನ್ನ ಮೆಮೊಯಿರ್ಸ್ ಆಫ್ ಸರ್ ಐಸಾಕ್ ನ್ಯೂಟನ್ಸ್ ಲೈಫ್ ಎಂಬ ಪುಸ್ತಕದಲ್ಲಿ 15 ಏಪ್ರಿಲ್ 1726ರಂದು ಕೆನ್ಸಿಂಗ್ಟನ್ನಲ್ಲಿ ನಡೆದ ನ್ಯೂಟನ್ರೊಂದಿಗಿನ ಮಾತುಕತೆಯನ್ನು ದಾಖಲಿಸಿದ್ದಾರೆ, ಅದರಲ್ಲಿ ನ್ಯೂಟನ್ರು "ಹಿಂದೆ ಗುರುತ್ವಾಕರ್ಷಣೆಯ ತತ್ವವು ತನ್ನ ಮನಸ್ಸಿಗೆ ಬಂದ ಬಗ್ಗೆ ನೆನಪಿಸಿಕೊಂಡಿದ್ದರು. ಅವರು ಆಲೋಚನಾಮಗ್ನರಾಗಿದ್ದಾಗ ಸೇಬಿನ ಬೀಳುವಿಕೆಯ ಪ್ರಸಂಗದಿಂದ ಮನಸ್ಸಿಗೆ ಬಂತು. ಸೇಬು ಯಾವಾಗಲೂ ಮೇಲಿಂದ ಕೆಳಕ್ಕೆ ನೇರವಾಗಿ ಏಕೆ ನೆಲಕ್ಕೆ/ಕೆಳಕ್ಕೆ ಬೀಳಬೇಕು. ಅದು ಮೇಲಿನ ದಿಕ್ಕಿನಲ್ಲಿ ಅಥವಾ ಪಕ್ಕಕ್ಕೆ ಏಕೆ ಬೀಳುವುದಿಲ್ಲ, ಬದಲಿಗೆ ಯಾವಾಗಲೂ ಭೂಮಿಯ ಕೇಂದ್ರಕ್ಕೆ ಏಕೆ ಸ್ಥಿರವಾಗಿ ಬೀಳುತ್ತದೆ ಎಂದು ತಮ್ಮಲ್ಲಿಯೇ ಯೋಚಿಸಿದರು." "ಅದೇ ರೀತಿಯಲ್ಲಿ ವಾಲ್ಟೇರ್ರು ಎಪಿಕ್ ಪೊಯೆಟ್ರಿಯ ಮೇಲಿನ ತಮ್ಮ ಪ್ರಬಂಧ ದಲ್ಲಿ (1727), "ಸರ್ ಐಸಾಕ್ ನ್ಯೂಟನ್ ತಮ್ಮ ಉದ್ಯಾನದಲ್ಲಿ ನಡೆದಾಡುತ್ತಿದ್ದಾಗ ಮರದಿಂದ ಕೆಳಗೆ ಬೀಳುತ್ತಿದ್ದ ಸೇಬನ್ನು ನೋಡಿ, ಗುರುತ್ವಾಕರ್ಷಣೆ ವ್ಯವಸ್ಥೆಯ ಬಗ್ಗೆ ಮೊತ್ತಮೊದಲಿಗೆ ಆಲೋಚಿಸಿದರು" ಎಂದು ಬರೆದಿದ್ದಾರೆ.
ಅನೇಕ ಮರಗಳನ್ನು ನ್ಯೂಟನ್ರು ಹೇಳಿದ "ಸೇಬಿನ ಮರ"ವೆಂದು ಸೂಚಿಸಲಾಗುತ್ತಿದೆ. ದ ಕಿಂಗ್ ಸ್ಕೂಲ್, ಗ್ರಂಥಮ್ನವರ ಪ್ರಕಾರ, ಆ ಮರವನ್ನು ಶಾಲೆಯು ಖರೀದಿಸಿ, ಬುಡಸಮೇತ ಹೊರಕ್ಕೆ ತೆಗೆದು ಮುಖ್ಯೋಪಾಧ್ಯಾಯರ ಉದ್ಯಾನಕ್ಕೆ ಅನೇಕ ವರ್ಷಗಳ ನಂತರ ಸಾಗಿಸಲಾಯಿತು. [ಈಗಿನ] ನ್ಯಾಷನಲ್ ಟ್ರಸ್ಟ್ -ಮಾಲೀಕತ್ವದ ವೂಲ್ಸ್ಥೋರ್ಪ್ ಮೇನರ್ನ ಸಿಬ್ಬಂದಿಯು ಇದನ್ನು ಅಲ್ಲಗಳೆಯುತ್ತಾರೆ. ತಮ್ಮ ಉದ್ಯಾನದಲ್ಲಿರುವ ಮರವೇ ನ್ಯೂಟನ್ರು ವಿವರಿಸಿದ್ದ ಮರವೆಂದು ಹೇಳುತ್ತಾರೆ. ನ್ಯೂಟನ್ರು ಅಲ್ಲಿ ಓದುತ್ತಿದ್ದಾಗ ಇದ್ದ ಕೋಣೆಯ ಕೆಳಗೆ ಮೂಲ ಮರದ ಸಂತತಿಯ ಮರವನ್ನು ಕೇಂಬ್ರಿಡ್ಜ್ನ ಟ್ರಿನಿಟಿ ಮಹಾವಿದ್ಯಾಲಯದ ಮುಖ್ಯ ದ್ವಾರದ ಹೊರಗೆ ಈಗಲೂ ನೋಡಬಹುದು. ರಾಷ್ಟ್ರೀಯ ಫಲ ಸಂಗ್ರಹ ಸಂಸ್ಥೆಯು ಅದರ ಕಸಿಟೊಂಗೆಯನ್ನು ಸರಬರಾಜು ಮಾಡಬಲ್ಲರು ಬ್ರಾಗ್ಡೇಲ್ನಲ್ಲಿನ[93], ಅದು ಕೆಂಟ್ ಹೂವಿನ ಹಾಗೆ ಕಾಣುತ್ತದೆ ದಪ್ಪನಾದ ಅಡಿಗೆಯ ಬಗೆಯಲ್ಲಿ ಅದನ್ನು ಬಳಸಲಾಗುತ್ತದೆ.[94]
|
|
|
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.