ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
From Wikipedia, the free encyclopedia
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ. ಎಲ್ಲ ಕಲೆಗಳಂತೆ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯೂ ಈ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ವಿಜಯನಗರ ಕಾಲದ ದೇವಾಲಯಗಳು ದಕ್ಷಿಣ ಭಾರತದ ತುಂಬೆಲ್ಲಾ ಹರಡಿಕೊಂಡಿವೆ. ಹೊಸದಾಗಿ ದೇವಾಲಯಗಳನ್ನು ಕಟ್ಟಿಸುವುದರ ಜೊತೆಗೆ ಹಳೆಯ ದೇವಾಲಯಗಳ ಪುನುರುಜ್ಜೀವನ ಕಾರ್ಯವನ್ನು ಈ ಕಾಲದಲ್ಲಿ ನೆಡೆಸಲಾಗಿದೆ. ಕರ್ನಾಟಕದ ಬಹುತೇಕ ದೇವಾಲಯಗಳ ನವೀಕರಣ ಕಾರ್ಯದಲ್ಲಿ ವಿಜಯನಗರ ಸಾಮ್ರಾಜ್ಯ ದ ಶೈಲಿ ಎದ್ದು ಕಾಣುತ್ತದೆ.
![Thumb image](http://upload.wikimedia.org/wikipedia/commons/thumb/2/2a/Vidyashankara_Temple_at_Shringeri.jpg/640px-Vidyashankara_Temple_at_Shringeri.jpg)
ಶೈಲಿ::: ವಿಜಯನಗರ ಕಾಲದ ದೇವಾಲಯಗಳಲ್ಲಿ ಕಾಣುವುದು ದ್ರಾವಿಡ ಶೈಲಿಯ ಮುಂದುವರೆದ ರೂಪ. ಚೋಳರ ಕಾಲದ ದೇವಾಲಯಗಳಂತೆ ದೊಡ್ಡ ಆಕಾರದ ಒಂದೇ ಕಟ್ಟಡಕ್ಕೆ ಬದಲಾಗಿ ಸಾಮಾನ್ಯ ಆಕಾರದ ಅನೇಕ ಕಟ್ಟಡಗಳ ಸಮುದಾಯ ಈ ಕಾಲದ ದ್ರಾವಿಡ ಶೈಲಿಯ ವೈಶಿಷ್ಟ್ಯ. ಮುಖ್ಯ ದೇವಾಲಯವು ಮಧ್ಯದಲ್ಲಿದ್ದು ಅದರ ಸುತ್ತ ಕೈಸಾಲೆಗಳು , ಮಂಟಪಗಳು ಇರುತ್ತಿದ್ದವು. ಪೂಜಾ ವಿಧಾನದಲ್ಲಾದ ಬದಲಾವಣೆ ಮತ್ತು ಮಹೋತ್ಸವಗಳ ಆಚರಣೆಯು ಕಟ್ಟಡದಲ್ಲಾದ ಬದಲಾವಣೆಗೆ ಮುಖ್ಯ ಕಾರಣವೆಂದು ವಿದ್ವಾಂಸರು ಹೇಳುತ್ತಾರೆ. ಹೊಸ ಆವಶ್ಯಕತೆ ಗನುಗುಣವಾಗಿ ದೇವಾಲಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಸ್ತರಿಸಿದ್ದಾರೆ.