From Wikipedia, the free encyclopedia
ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆಯನ್ನು ಕೆಲವೊಮ್ಮೆ ಬ್ರಿಟಿಷ್ ಭಾರತೀಯ ಸೇನೆ ಎಂದೂ ಕರೆಯಲಾಗಿದ್ದು, ಯೂರೋಪಿಯನ್ ಮೆಡಿಟರೇನಿಯನ್ ಮತ್ತು ಮಧ್ಯಪೂರ್ವ ರಣಾಂಗಣಗಳಿಗೆ ಹಲವಾರು ಸೇನಾ ವಿಭಾಗಗಳನ್ನು ಹಾಗೂ ಸ್ವತಂತ್ರ ಸೇನಾದಳಗಳನ್ನು ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಒದಗಿಸಿತ್ತು. ಹೊರದೇಶಗಳಲ್ಲಿ ಒಂದು ಮಿಲಿಯನ್ ಸೈನಿಕರ ದಂಡು ಸೇವೆ ಸಲ್ಲಿಸಿ, ಆ ಸೈನಿಕರ ಪೈಕಿ ೬೨,೦೦೦ ಸೈನಿಕರು ವೀರಸ್ವರ್ಗವನ್ನು ಪಡೆದರು ಮತ್ತು ೬೭,೦೦೦ ಸೈನಿಕರು ಗಾಯಗೊಂಡರು. ಒಟ್ಟು ೭೪,೧೮೭ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಮಡಿದರು.
ಕಿಚನರ್ ಭಾರತದ ಪ್ರಧಾನ ದಂಡನಾಯಕರಾಗಿ ನೇಮಕಗೊಂಡ ಬಳಿಕ, ೧೯೦೩ರಲ್ಲಿ ಭಾರತೀಯ ಸೇನೆಯಲ್ಲಿ ಹಲವಾರು ಪ್ರಮುಖ ಸುಧಾರಣೆಗಳಾದವು. ಅವರು ದೊಡ್ಡ ಪ್ರಮಾಣದ ಸುಧಾರಣೆಗಳನ್ನು ಸ್ಥಾಪಿಸಿದರು; ಅವುಗಳ ಪೈಕಿ ಮೂರು ಪ್ರತ್ಯೇಕ ಅಧ್ಯಕ್ಷರ ಆಡಳಿತಕ್ಕೆ ಒಳಪಟ್ಟಿದ್ದ ಸೇನಾವಿಭಾಗಗಳನ್ನು ಒಂದುಗೂಡಿಸಿ, ಮತ್ತಷ್ಟು ಮೇಲುಸ್ತರದ ರಚನೆಗಳನ್ನು ನಿರ್ಮಿಸಿ, ಹತ್ತು ಸೇನಾ ವಿಭಾಗಗಳನ್ನು ಸ್ಥಾಪಿಸಿದ ಕಾರ್ಯಗಳು ಪ್ರಮುಖವಾದವು.[1]
ಮೊದಲನೆಯ ಮಹಾಯುದ್ಧದಲ್ಲಿ ಭಾರತೀಯ ಸೇನೆಯು ಜರ್ಮನ್ ಚಕ್ರಾಧಿಪತ್ಯದ ವಿರುದ್ಧ ಜರ್ಮನ್ ಪೂರ್ವ ಆಫ್ರಿಕದಲ್ಲಿ ಮತ್ತು ಪಶ್ಚಿಮ ವಿಭಾಗಗಳಲ್ಲಿ ಕಾದಾಡಿತು. ವೈಪ್ರೆಸ್ ನ ಮೊದಲನೆಯ ಸಮರದಲ್ಲಿ ಖುದಾದಾದ್ ಖಾನ್ ವಿಕ್ಟೋರಿಯಾ ಕ್ರಾಸ್ ಪದಕವನ್ನು ಪಡೆದ ಮೊದಲ ಭಾರತೀಯರೆಂಬ ಕೀರ್ತಿಗೆ ಭಾಜನರಾದರು. ಭಾರತೀಯ ತುಕಡಿಗಳನ್ನು ಈಜಿಪ್ಟ್, ಗಲ್ಲೀಪೋಲೀಗೆ ಕಳುಹಿಸಲಾಯಿತು ಹಾಗೂ ಸುಮಾರು ೭೦೦,೦೦೦ ಭಾರತೀಯ ಸೈನಿಕರು ಮೆಸೊಪೊಟೋಮಿಯಾದಲ್ಲಿ ಅಟಮನ್ ಸಾಮ್ರಾಜ್ಯದ ವಿರುದ್ಧ ಸೆಣಸಿದರು.[2] ಕೆಲವು ತುಕಡಿಗಳನ್ನು ಹೊರದೇಶಗಳಿಗೆ ಕಳುಹಿಸಲಾಯಿತು, ಇತರ ತುಕಡಿಗಳು ಭಾರತದಲ್ಲಿಯೇ ಇದ್ದು ವಾಯುವ್ಯ ಗಡಿ ರಕ್ಷಣಾಕಾರ್ಯ ಹಾಗೂ ಆಂತರಿಕ ಭದ್ರತೆ ಮತ್ತು ತರಬೇತಿ ನೀಡುವ ಕೆಲಸಗಳನ್ನು ಮಾಡಲು ನಿಯೋಜಿಸಲ್ಪಟ್ಟವು.
೧೯೦೨ರಲ್ಲಿ ಹರ್ಬರ್ಟ್ ಕಿಚನರ್ ರನ್ನು ಭಾರತದ ಪ್ರಧಾನ ದಂಡನಾಯಕರಾಗಿ ನೇಮಕ ಮಾಡಲಾಯಿತು ಹಾಗೂ ಐದು ವರ್ಷಗಳ ನಂತರ ಅವರ ಸೇವಾವಧಿಯನ್ನು ಮತ್ತೆ ಎರಡು ವರ್ಷಗಳವರೆಗೆ ವಿಸ್ತರಿಸಲಾಯಿತು ಹಾಗೂ ಈ ವಿಸ್ತರಿಸಲ್ಪಟ್ಟ ಸಮಯದಲ್ಲಿ ಅವರು ಭಾರತೀಯು ಸೇನೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದರು.[1] ಈ ಸುಧಾರಣೆಗಳ ಪ್ರಕಾರ ಭಾರತದಲ್ಲಿ ಒಂದೇ ಸೇನೆಯಿರುವುದೆಂದಾಗಿ, ಮೂರು ಪ್ರತ್ಯೇಕ ಅಧ್ಯಕ್ಷೀಯ ಆಡಳಿತಗಳಿಗೆ ಒಳಗಾಗಿದ್ದು ಸೇನೆಗಳನ್ನು ಒಂದುಗೂಡಿಸಲಾಯಿತು.[3] ಅದೇ ವೇಳೆಗೆ ರಾಜರುಗಳಾಳುತ್ತಿದ್ದ ರಾಜ್ಯsಗಳ ಸೇನಾದಳಗಳನ್ನೂ ಚಕ್ರಾಧಿಪತ್ಯದ ಸೇವೆಗಾಗಿ ದಕ್ಕುವಂತೆ ಮಾಡಿಕೊಳ್ಳಲಾಯಿತು.[3] ಭಾರತೀಯ ಸೇನೆಯಲ್ಲಿರುವ ತುಕಡಿಗಳಲ್ಲದೆ ಇನ್ನೂ ಹೆಚ್ಚಿನ ತುಕಡಿಗಳನ್ನು ಬ್ರಿಟಿಷ್ ಸೇನೆಯು ಒದಗಿಸುವುದನ್ನು ಮುಂದುವರಿಸಿತು. ಭಾರತೀಯ ಸೇನೆ ಎಂಬ ಪದವು ಬ್ರಿಟಿಷ್ ಮತ್ತು ಭಾರತೀಯ ತುಕಡಿಗಳೆರಡನ್ನೂ ಆಳುವಂತಹ ಒಟ್ಟಾರೆ ಅಧಿಕಾರವನ್ನು ಪ್ರತಿನಿಧಿಸುವ ಪದವಾಗಿ ಬಳಕೆಗೆ ತರಲಾಯಿತು. ಭಾರತೀಯ ಸೇನೆಯ ನೂತನ ರಚನೆಯನ್ನು ಒಂಬತ್ತು ವಿಭಾಗಗಳಲ್ಲಿ ಸ್ಥಾಪಿಸಲಾಯಿತು; ಪ್ರತಿ ವಿಭಾಗದಲ್ಲೂ ಒಂದು ಅಶ್ವಪಡೆ ಮತ್ತು ಮೂರು ಪದಾತಿದಳಗಳಿದ್ದವು ಹಾಗೂ ಈ ಒಂಬತ್ತು ವಿಭಾಗಗಳು ಮತ್ತು ಮೂರು ಸ್ವತಂತ್ರ ಪದಾತಿ ದಂಡುಗಳು ಭಾರತದಲ್ಲಿ ಸೇವೆ ಸಲ್ಲಿಸುವುದೆಂದು ನಿರ್ಧರಿಸಲಾಯಿತು.[4] ಭಾರತೀಯ ಸೇನೆಯು ಒಂದು ಬರ್ಮಾದಲ್ಲಿನ ವಿಭಾಗ ಮತ್ತು ಒಂದುಆಡೆನ್ ನಲ್ಲಿನ ದಂಡುಗಳನ್ನು ಒದಗಿಸುವ ಜವಾಬ್ದಾರಿಯನ್ನೂ ಹೊಂದಿತ್ತು.[4]
ನೂತನ ವಿಭಾಗಗಳ ಮೇಲ್ವಿಚಾರಣೆ ಮತ್ತು ಹತೋಟಿಗಾಗಿ ಸಹಾಯ ಒದಗಿಸುವ ಸಲುವಾಗಿ ಎರಡು ಭೂ ಸೇನೆಗಳು ರಚಿಸಲ್ಪಟ್ಟವು - ಉತ್ತರದ ಸೇನೆ ಮತ್ತು ದಕ್ಷಿಣದ ಸೇನೆ.[4] ಉತ್ತರದ ಸೇನೆಯಲ್ಲಿ ಐದು ವಿಭಾಗಗಳು ಮತ್ತು ಮೂರು ದಂಡುಗಳಿದ್ದು ಬಂಗಾಳದ ವಾಯುವ್ಯ ಗಡಿಪ್ರದೇಶದ ಜವಾಬ್ದಾರಿಯನ್ನು ಇದರ ಮೇಲೆ ಹೊರಿಸಲಾಗಿತ್ತು; ದಕ್ಷಿಣದ ಸೇನೆಯಲ್ಲಿ ನಾಲ್ಕು ವಿಭಾಗಗಳಿದ್ದು, ಭಾರತದ ಹೊರಗೆ ಎರಡು ದಳಗಳನ್ನು ಹೊಂದಿದ್ದು, ದಕ್ಷಿಣ ಭಾರತ ಮತ್ತು ಬಲೂಚಿಸ್ತಾನಗಳ ಹೊಣೆ ಇದರದ್ದಾಗಿತ್ತು.[4] ಈ ನೂತನ ವ್ಯವಸ್ಥೆಯ ದಳಗಳು ಮತ್ತು ದಂಡುಗಳಿಗೆ ಒಂದೇ ಅನುಕ್ರಮಣಿಕೆಯಲ್ಲಿ ಸಂಖ್ಯೆಗಳನ್ನು ನೀಡಲಾಯಿತು ಮತ್ತು ಬಾಂಬೆ, ಮದ್ರಾಸ್ ಮತ್ತು ಬಂಗಾಳದ ಸೇನೆಗಳ ಹಳೆಯ ಬಿರುದಾಗಳಿಗಳನ್ನು ಕೈಬಿಡಲಾಯಿತು.[3] ಈ ನೂತನ ದಳಗಳು ಮತ್ತು ದಂಡುಗಳು ತಮ್ಮ ಮೂಲಸ್ಥಾನದಲ್ಲೇ ಇರುವುದರ ಬದಲು ಈಗ ದೇಶದ ಯಾವ ಭಾಗಕ್ಕಾದರೂ ಸೇವೆ ಸಲ್ಲಿಸಲು ಕರೆಯಲ್ಪಡಬಹುದಾಗಿತ್ತು ಹಾಗೂ ವಾಯುವ್ಯ ಗಡಿಪ್ರದೇಶದಲ್ಲಿ ಕಾರ್ಯನಿರ್ವಹಣಾ ಪ್ರಯಾಣವನ್ನು ಒಂದು ವ್ಯವಸ್ಥಿತ ಹಾಗೂ ನಿರ್ಧರಿತ ಹುದ್ದೆಯೆಂದು ಪರಿಗಣಿಸಲಾಯಿತು.[3] ಆದರೆ ಸರ್ವ-ಬ್ರಿಟಿಷ್ ಅಥವಾ ಸರ್ವ-ಭಾರತೀಯ ದಂಡುಗಳನ್ನು ರಚಿಸುವ ವ್ಯವಸ್ಥೆಗೆ ಮಾತ್ರ ಬೆಂಬಲ ದೊರಕಲಿಲ್ಲ ಹಾಗೂ ಪ್ರತಿ ದಳ ಅಥವಾ ದಂಡಿನಲ್ಲಿ ಒಂದು ಬ್ರಿಟಿಷ್ ತಂಡವನ್ನು ಹೊಂದುವಂತಹ ವ್ಯವಸ್ಥೆಯನ್ನು ಮುಂದುವರಿಸಲಾಯಿತು.[3]
೧೯೧೪ರಲ್ಲಿ, ಭಾರತೀಯ ಸೇನೆಯು ಸ್ವಯಂ ಇಚ್ಛೆಯಿಂದ ಪಾಲ್ಗೊಂಡ ಪ್ರಪಂಚದ ಅತಿ ದೊಡ್ಡ ಸೇನೆಯಾಗಿದ್ದು[1] ಅದರಲ್ಲಿ ಒಟ್ಟು ೨೪೦,೦೦೦ ಜನಗಳಿದ್ದರು[5] ಹಾಗೂ ನವೆಂಬರ್ ೧೯೧೮ರ ಹೊತ್ತಿಗೆ ಅದರಲ್ಲಿ ೫೪೮,೩೧೧ ಜನರಿದ್ದು, ಅದನ್ನು ಚಕ್ರಾಧಿಪತ್ಯದ ಸಮರಕೌಶಲದ ಮೀಸಲುಪಡೆಯೆಂದು ಪರಿಗಣಿಸಲಾಗಿತ್ತು.[6] ವಾಯುವ್ಯ ಗಡಿಯಲ್ಲಿ ಆಕ್ರಮಣ ನಡೆದಾಗ ಮತ್ತು ದಾಳಿಗಳು ನಡೆದಾಗ ಈ ದಳವನ್ನು ನಿಯತವಾಗಿ ಕರೆಸಲಾಗುತ್ತಿತ್ತು ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಈಜಿಪ್ಟ್ ಸಿಂಗಪುರ ಮತ್ತು ಚೀನಾಗಳಲ್ಲಿ ಕಾವಲುಪಡೆಯನ್ನು ಒದಗಿಸುವುದಕ್ಕೂ ಇದಕ್ಕೆ ಕರೆ ಕಳುಹಿಸಲಾಗುತ್ತಿತ್ತು.[7] ಈ ಸೇನಾ ಪಡೆಯನ್ನು ಎರಡು ಸೇನೆಗಳಾಗಿ ವಿಭಜಿಸಲಾಯಿತು: ಉತ್ತರದ ಸೇನೆಯು ವಾಯುವ್ಯದ ಗಡಿಯಿಂದ ಬಂಗಾಳದ ವರೆಗೆ ವಿಸ್ತರಿತವಾಗಿದ್ದು, ಅದರಲ್ಲಿ ಐದು ವಿಭಾಗಗಳು ಹಾಗೂ ಮೂರು ದಂಡುಗಳು ಅಧೀನಗೊಂಡಿದ್ದವು ಹಾಗೂ ದಕ್ಷಿಣದ ಸೇನೆಯು ಬಲೂಚಿಸ್ತಾನದಿಂದ ದಕ್ಷಿಣ ಭಾರತದವರೆಗೆ ಹಬ್ಬಿದ್ದುದಾಗಿದ್ದು ಅದರಲ್ಲಿ ನಾಲ್ಕು ವಿಭಾಗಗಳು ಅಧೀನದಲ್ಲಿಯೂ, ಎರಡು ವ್ಯೂಹಗಳು ಭಾರತದ ಹೊರಜಾಗಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದವು.[8] ಈ ಎರಡು ಸೇನೆಗಳು ೩೯ ಅಶ್ವಪಡೆಗಳು, ೧೩೮ ಪದಾತಿ ದಳಗಳು(ಅದರಲ್ಲಿ ೨೦ ಗೂರ್ಖಾ)ದಳಗಳೂ ಸೇರಿದಂತೆ,[5] ಒಂದು ಜಂಟಿ ಅಶ್ವ-ಪದಾತಿ ದಳ, ಒಂದು ಕಾರ್ಪ್ಸ್ ಆಫ್ ಗೈಡ್ಸ್ ಘಟಕ, ಮೂರು ಸುರಂಗಕಾರಕ ದಂಡುಗಳು ಮತ್ತು ೧೨ ಪರ್ವತ ಫಿರಂಗಿದಳದ ತಂಡಗಳನ್ನು ಹೊಂದಿದ್ದವು.[1]
ಈ ಸುಧಾರಣೆಯಿಂದಾದ ಒಂಬತ್ತು ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ಒಂದು ಅಶ್ವಪಡೆ ನತ್ತಯ ಮೂರು ಪದಾತಿ ದಳಗಳಿದ್ದವು. ಅಶ್ವಪಡೆಯಲ್ಲಿ ಒಂದು ಬ್ರಿಟಿಷ್ ಮತ್ತು ಎರಡು ಭಾರತೀಯ ದಂಡುಗಳಿದ್ದವು ಮತ್ತು ಪದಾತಿದಳದಲ್ಲಿ ಒಂದು ಬ್ರಿಟಿಷ್ ಮತ್ತು ಮೂರು ಭಾರತೀಯ ಪದಾತಿ ದಂಡುಗಳಿದ್ದವು.[9] ಭಾರತೀಯ ಸೇನೆಯ ಪದಾತಿ ದಳವು ಬ್ರಿಟಿಷ್ ಪದಾತಿ ದಳಕ್ಕಿಂತಲೂ ಚಿಕ್ಕದಾಗಿರುತ್ತಿತ್ತು; ಇದರಲ್ಲಿ ಮೂವತ್ತು ಆಡಳಿತಾಧಿಕಾರಿಗಳು ಮತ್ತು ೭೨೩ ಇತರೆ ಶ್ರೇಣಿಯವರಿದ್ದರೆ[5] ಬ್ರಿಟಿಷರದರಲ್ಲಿ ೨೯ ಆಡಳಿತಾಧಿಕಾರಿಗಳು ಮತ್ತು ೯೭೭ ಇತರ ಶ್ರೇಣಿಯವರು ಇರುತ್ತಿದ್ದರು.[10] ಭಾರತೀಯ ಪದಾತಿ ದಳಗಳನ್ನು ಆಗಾಗ್ಗೆ ವಿವಿಧ ಬುಡಕಟ್ಟುಗಳು, ಜಾತಿಗಳು ಅಥವಾ ಧರ್ಮಗಳ ಆಧಾರದ ಮೇಲೆ ವಿಂಗಡಿಸಲಾಗುತ್ತಿತ್ತು.[11] ಪ್ರತಿ ವಿಭಾಗದ ಕೇಂದ್ರಕಚೇರಿಗಳಿಗೆ ಸೇರಿದಂತಹ ಹೆಚ್ಚುವರಿ ದಂಡುಗಳಲ್ಲಿ ಒಂದು ಅಶ್ವದಳ, ಒಂದು ದಂಡಿನ ಸಲುವಾಗಿ ರಸ್ತೆ, ಸೇತುವೆ, ಮುಂತಾದುವುಗಳನ್ನು ಮಾಡುವವರ ದಳ ಮತ್ತು ಬ್ರಿಟಿಷ್ ರಾಯಲ್ ಫೀಲ್ಡ್ ಆರ್ಮಿ ಒದಗಿಸಿದ ಒಂದು ಫಿರಂಗಿ ದಳಗಳು ಇರುತ್ತಿದ್ದವು. ಪ್ರತಿ ವಿಭಾಗದಲ್ಲೂ ಸುಮಾರು ೧೩,೦೦೦ ಜನರು ಇರುತ್ತಿದ್ದರು, ಇದು ಬ್ರಿಟಿಷ್ ವಿಭಾಗಕ್ಕಿಂತಲೂ ಕೊಂಚ ಕಡಿಮೆ ಸಂಖ್ಯೆಯೇ ಆಗಿರುತ್ತಿತ್ತು; ಏಕೆಂದರೆ ಇಲ್ಲಿನ ಪದಾತಿ ದಳ ಮತ್ತು ಫಿರಂಗಿ ದಳಗಳು ಅಲ್ಲಿಗಿಂತಲೂ ಕಡಿಮೆ ಸಂಖ್ಯೆಯನ್ನು ಹೊಂದಿರುತ್ತಿದ್ದವು.[12] ೩೮ ಭಾರತೀಯ ದಳಗಳ ಅಧಿಕಾರ ವಹಿಸಲು ಸಾಕಾಗುವಷ್ಟು ಸಂಖ್ಯೆಯಾದ ೫೦೦ ಬ್ರಿಟಿಷ್ ಅಧಿಕಾರಿಗಳನ್ನು ಕಿಚನರ್ಸ್ ಆರ್ಮಿಯ ನೂತನ ವಿಭಾಗಗಳಿಗೆ ವರ್ಗ ಮಾಡಿದುದರಿಂದ ಭಾರತೀಯ ಸೇನೆಯು ಮತ್ತಷ್ಟು ದುರ್ಬಲವಾಯಿತು.[13]
ಯಥಾಕ್ರಮವಾದ ಭಾರತೀಯ ಸೇನೆಯೊಂದಿಗೆ ರಾಜರುಗಳಾಳುತ್ತಿದ್ದ ರಾಜ್ಯಗಳ ಸೇನೆಗಳು ಮತ್ತು ಸಹಾಯಕ ಸೈನ್ಯದ (ಯೂರೋಪಿಯನ್ ಸ್ವಯಂ ಇಚ್ಛೆಯಿಂದ ಬಂದವರ ಪಡೆ)ದಳಗಳನ್ನೂ ಸಹ ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಮಾಡಲು ಕರೆಯಲಾಗುತ್ತಿತ್ತು.[1] ರಾಜರಾಳ್ವಿಕೆಯ ರಾಜ್ಯಗಳು ಸಾಮ್ರಾಜ್ಯ ಸೇವಾ ದಳಗಳನ್ನು ರಚಿಸಿದರು ಮತ್ತು ೧೯೧೪ರಲ್ಲಿ ಈ ದಳದಲ್ಲಿ ೨೨,೬೧೩ ಜನರಿದ್ದು, ಅವರು ೨೦ ಅಶ್ವದಳಗಳು ಮತ್ತು ೧೪ ಪದಾತಿ ದಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.[12] ಯುದ್ಧ ಕೊನೆಗೊಳ್ಳುವ ವೇಳೆಗೆ ೨೬,೦೦೦ ಸೈನಿಕರು ಸಾಮ್ರಾಜ್ಯ ಸೇವೆಯಲ್ಲಿ ಹೊರದೇಶಗಳಲ್ಲಿ ಕಾರ್ಯವೆಸಗಿದ್ದರು.[14] ಸಹಾಯಕ ದಳವು ಇನ್ನೂ ೪೦,೦೦೦ ಸೈನಿಕರನ್ನು ೧೧ ಅಶ್ವದಳಗಳಲ್ಲಿ ಮತ್ತು ೪೨ ಸ್ವಯಂಸೇವಕ ಪದಾತಿದಳಗಳಲ್ಲಿ ಹೊಂದಿತ್ತು.[5] ಅಲ್ಲದೆ ಗಡಿಪ್ರದೇಶದ ಸೇನೆ ಮತ್ತು ಸೇನಾ ಪೊಲೀಸರ ಸೇವೆಯೂ ಲಭ್ಯವಿದ್ದು ಆ ಎರಡೂ ದಳಗಳಲ್ಲಿ ಒಟ್ಟು ಸುಮಾರು ೩೪,೦೦೦ ಜನರಿದ್ದರು.[5]
ರಣಾಂಗಣ ಪಡೆಯ ಕೇಂದ್ರಕಚೇರಿಯು ದೆಹಲಿಯಲ್ಲಿದ್ದಿತು ಮತ್ತು ಹಿರಿಯ ಅಧಿಕಾರಿ(ಭಾರತದ ಪ್ರಧಾನ ದಂಡನಾಯಕ)ರಿಗೆ ಭಾರತದ ಜನರಲ್ ಸಿಬ್ಬಂದಿಯ ಪ್ರಧಾನ ಅಧಿಕಾರಿಯ ಬೆಂಬಲವಿರುತ್ತಿತ್ತು. ಭಾರತೀಯ ಸೇನೆಯ ಎಲ್ಲಾ ಹಿರಿಯ ಅಧಿಕಾರದ ಹುದ್ದೆಗಳು ಮತ್ತು ಸಿಬ್ಬಂದಿಗಳ ಹುದ್ದೆಗಳು ಬ್ರಿಟಿಷ್ ಮತ್ತು ಭಾರತೀಯ ಸೇನೆಗಳ ಹಿರಿಯ ಆಡಳಿತಾಧಿಕಾರಿಗಳ ವರ್ತುಲದಲ್ಲಿ ಒಬ್ಬರ ನಂತರ ಒಬ್ಬರದ್ದರಂತೆ ಬದಲಾಗುತ್ತಿತ್ತು. ೧೯೧೪ರಲ್ಲಿ ಪ್ರಧಾನ ದಂಡನಾಯಕರಾಗಿದ್ದವರು ಭಾರತೀಯ ಸೇನೆಯ[15] ಜನರಲ್ ಸರ್ ಬ್ಯೂಚಾಂಪ್ ಡಫ್ ಹಾಗೂ ಜನರಲ್ ಸಿಬ್ಬಂದಿಯ ಪ್ರಧಾನ ಅಧಿಕಾರಿಯಾಗಿದ್ದವರು ಬ್ರಿಟಿಷ್ ಸೇನೆಯ ಲೆಫ್ಟಿನೆಂಟ್ ಆಗಿದ್ದ ಜನರಲ್ ಸರ್ ಪರ್ಸಿ ಲೇಕ್ ರವರು.[16] ಪ್ರತಿ ಭಾರತೀಯ ಪದಾತಿ ದಳದಲ್ಲಿ ಭಾರತದಲ್ಲಿರುವ ಬ್ರಿಟಿಷ್ ಸೇನೆಯಿಂದ ಆಯ್ಕೆಯಾದ ೧೩ ಆಡಳಿತಾಧಿಕಾರಿಗಳು ಮತ್ತು ೧೭ ಭಾರತೀಯ ಸೇನೆಯಿಂದ ಆಯ್ಕೆಯಾದ ಆಡಳಿತಾಧಿಕಾರಿಗಳು ಇರುತ್ತಿದ್ದರು - ಇವರು ವಲಸೆ ಬಂದ ಬ್ರಿಟಿಷ್ ಅಧಿಕಾರಿಗಳಾಗಿದ್ದು ವಸಾಹತುಶಾಹಿ ಭಾರತೀಯ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯುದ್ಧದ ತೀವ್ರತೆ ಹೆಚ್ಚಾದಂತೆ ಹಾಗೂ ಹೆಚ್ಚು ಹೆಚ್ಚು ಅಧಿಕಾರಿಗಳು ಸಾವನ್ನಪ್ಪುತ್ತಿದ್ದಂತೆ, ಬ್ರಿಟಿಷ್ ಮೂಲದ ಅಧಿಕಾರಿಗಳನ್ನೇ ಸತ್ತವರ ಜಾಗದಲ್ಲಿ ಭರ್ತಿ ಮಾಡುವುದು ಬಹಳ ಕಷ್ಟವಾಯಿತು ಹಾಗೂ ತತ್ಕಾತಣಗಳಿಂದ ಹಲವಾರು ಸಂದರ್ಭಗಳಲ್ಲಿ ಪದಾತಿದಳಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವುದನ್ನೇ ಕಡಿಮೆ ಮಾಡಲಾಯಿತು. ೧೯೧೯ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ಮೂಲದವರನ್ನು ಅಧಿಕಾರಿಯ ಹುದ್ದೆಗಾಗಿ ತರಬೇತಿಗೆ ಒಳಗಾಗಲು ರಾಯಲ್ ಮಿಲಿಟರಿ ಕಾಲೇಜ್ಗೆ ಆಯ್ಕೆ ಮಾಡಲು ಅನುಮತಿ ನೀಡಲಾಯಿತು.[17]
ಭಾರತೀಯ ಸೇನೆಗೆ ಸಾಮಾನ್ಯವಾಗಿ ವಾರ್ಷಿಕವಾಗಿ ಹುದ್ದೆಗೆ/ತರಬೇತಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ೧೫,೦೦೦ ಜನರನ್ನು; ಯುದ್ಧಕಾಲದಲ್ಲಿ ೮೦೦,೦೦೦ಕ್ಕೂ ಹೆಚ್ಚು ಜನ ಸೇನೆಗೆ ಸೇರಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು ಹಾಗೂ ಸಮರೇತರ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ೪೦೦,೦೦೦ಕ್ಕೂ ಹೆಚ್ಚು ಜನರು ತಾವಾಗಿಯೇ ಮುಂದೆ ಬಂದರು. ೧೯೧೮ರ ವೇಳೆಗೆ ಸುಮಾರು ೧.೩ ಮಿಲಿಯನ್ ಜನರು ಸೇವೆ ಸಲ್ಲಿಸಲು ಮುಂದೆ ಬಂದಿದ್ದರು.[18] ಒಂದು ಮಿಲಿಯನ್ ಭಾರತೀಯ ತುಕಡಿಗಳು ಯುದ್ಧಕಾಲದಲ್ಲಿ ಹೊರದೇಶದಲ್ಲಿ ಸೇವೆ ಸಲ್ಲಿಸಿದವು; ಆ ಸೇವೆ ಸಲ್ಲಿಸಿದವರ ಪೈಕಿ ೬೨,೦೦೦ ಜನರು ಹತರಾದರು ಮತ್ತು ೬೭,೦೦೦ ಜನರು ಗಾಯಗೊಂಡರು.[19] ಒಟ್ಟಾರೆ, ಮೊದಲನೆಯ ಮಹಾಯುದ್ಧ ದಲ್ಲಿ ೭೪,೧೮೭ ಭಾರತೀಯ ಸೈನಿಕರು ಸಾವನ್ನಪ್ಪಿದರು.[14]
ಮೊದಲನೆಯ ಮಹಾಯುದ್ಧ ಕ್ಕೆ ಮುನ್ನ ಭಾರತೀಯ ಸೇನೆಯನ್ನು ಆಂತರಿಕ ಭದ್ರತೆ ಮತ್ತು ವಾಯುವ್ಯ ಗಡಿಯನ್ನು ಆಫ್ಘಾನಿಸ್ತಾನದವರ ದಾಳಿಯಿಂದ ಕಾಪಾಡಲು ಬಳಸಿಕೊಳ್ಳಲಾಗುತ್ತಿತ್ತು. ಯುದ್ಧ ಸಾರಿದಾಕ್ಷಣ ಈ ಕೆಲಸಗಳೇನೂ ತಪ್ಪಲಿಲ್ಲ. ಗಡಿಯ ರಕ್ಷಣೆಗಾಗಿ ನಿಯಮಿಸಲ್ಪಟ್ಟ ಸೇನಾ ವಿಭಾಗಗಳೆಂದರೆ ಪ್ರಸ್ತುತದಲ್ಲಿದ್ದ ಮೊದಲನೆಯ (ಪೆಷಾವರ್) ವಿಭಾಗ, ಎರಡನೆಯ (ರಾವಲ್ಪಿಂಡಿ) ವಿಭಾಗ, ನಾಲ್ಕನೆಯ (ಕ್ವೆಟ್ಟಾ) ವಿಭಾಗ.[20] ಯುದ್ಧ-ರಚಿತವಾದ, ಭಾರತಕ್ಕೆ ಸೇವೆ ಸಲ್ಲಿಸಿದ, ಏಕೈಕ ವಿಭಾಗವೆಂದರೆ ೧೯೧೬ರಲ್ಲಿ ರಚಿತವಾದ ೧೬ನೆಯ ಭಾರತೀಯ ವಿಭಾಗ; ಇದನ್ನೂ ಸಹ ವಾಯವ್ಯ ಗಡಿಯಲ್ಲಿಯೇ ಪಹರೆ ಕಾಯಲು ನಿಲ್ಲಿಸಲಾಯಿತು.[20] ಈ ಎಲ್ಲಾ ವಿಭಾಗಗಳೂ ಇನ್ನೂ ತಮ್ಮ ತಮ್ಮ ನಿರ್ದೇಶಿತ ಸ್ಥಳಗಳಲ್ಲೇ ಇದ್ದವು ಮತ್ತು ಮೊದಲನೆಯ ಮಹಾಯುದ್ಧ ಮುಗಿದ ನಂತರ ಮೂರನೆಯ ಆಫ್ಘನ್ ಯುದ್ಧದಲ್ಲಿ ಪಾಲ್ಗೊಂಡವು.[20]
ಯುದ್ಧಕಾರಣವನ್ನು ಬೆಂಬಲಿಸುವ ಯತ್ನದಲ್ಲಿ, ಭಾರತವು ಆಫ್ಘಾನಿಸ್ತಾನದ ತೀವ್ರತರವಾದ ಆಕ್ರಮಣಕ್ಕೆ ತುತ್ತಾಗುವ ಸಂಭವವಿತ್ತು. ೧೯೧೫ರ ಅಕ್ಟೋಬರ್ ಮಾಸದಲ್ಲಿ ಸುಸ್ಪಷ್ಟವಾಗಿ ಯುದ್ಧಕೌಶಲದ ಯುಕ್ತಿಗಳನ್ನೇ ಪ್ರಧಾನವಾದ ಉದ್ದೇಶವಾಗಿರಿಸಿಕೊಂಡಟರ್ಕೋ-ಜರ್ಮನ್ ಮಿಷನ್ ಒಂದು ಕಾಬೂಲ್ ನಲ್ಲಿ ಬಂದು ಸೇರಿತು. ಆಟೋಮಾನ್ ಸುಲ್ತಾನರ ಪಕ್ಷ ಸೇರಲು ಒಡಂಬಡಿಸಿದ ಸಂಘಗಳ ಆಂತರಿಕ ವಿರೋಧದ ನಡುವೆಯು, ಹಬೀಬುಲ್ಲಾ ಖಾನ್ ತಮ್ಮ ಶಾಂತಿ ಒಪ್ಪಂದದ ರೀತ್ಯಾ ನಡೆದುಕೊಂಡರು ಮತ್ತು ಆಫ್ಘಾನಿಸ್ತಾನದ ತಟಸ್ಥತೆಯನ್ನು ಮುಂದುವರಿಸಿಕೊಂಡು ಬಂದರು.[21] ಇಷ್ಟಾಗಿಯೂ, ಗಡಿಪ್ರದೇಶದಲ್ಲಿ ಸ್ಥಳೀಯ ಘಟನೆಗಳು ನಡೆದೇ ತೀರಿದವು ಮತ್ತು ಆ ಘಟನೆಗಳ ಪೈಕಿ ತೋಚಿಯಲ್ಲಿ ನಡೆದ ಕಾರ್ಯಾಚರಣೆ (೧೯೧೪–೧೫), ಮೊಹ್ಮಂದರು, ಬುನರ್ವಾಲರು ಮತ್ತು ಸ್ವಾತಿಗಳ ವಿರುದ್ಧ ಕಾರ್ಯಾಚರಣೆ (೧೯೧೫), ಕಲಾತ್ ಕಾರ್ಯಾಚರಣೆಗಳು (೧೯೧೫–೧೬), ಮೊಹ್ಮಂದ್ ತಡೆಯೊಡ್ಡುವಿಕೆe (೧೯೧೬–೧೭), ನಹ್ಸೂದರ ವಿರುದ್ಧ ಕಾರ್ಯಾಚರಣೆ (೧೯೧೭) ಮತ್ತು ಮರ್ರಿ ಮತ್ತು ಖೆತ್ರಾನ್ ಬುಡಕಟ್ಟುಗಳ ವಿರುದ್ಧ ಕಾರ್ಯಾಚರಣೆ (೧೯೧೮)ಗಳು ಪ್ರಮುಖವಾದವು.[22]
ಭಾರತ ಮತ್ತು ಬರ್ಮಾ ನಡುವೆ ಇರುವ ಈಶಾನ್ಯ ಗಡಿ ಪ್ರದೇಶದಲ್ಲಿ ಡಿಸೆಂಬರ್ ೧೯೧೪ರಿಂದ ಫೆಬ್ರವರಿ ೧೯೧೫ರ ವರೆಗೆ ಬರ್ಮಾ ಸೇನಾ ಪೊಲೀಸರು ಕಚಿನ್ಸ್ ಬುಡಕಟ್ಟು ಜನಾಂಗದವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಂಡರು ಹಾಗೂ ಇದಕ್ಕೆ ೧/೭ನೆಯ ಗೂರ್ಖಾ ರೈಫಲ್ಸ್ ಮತ್ತು ೬೪ನೆಯ ಮಾರ್ಗನಿರ್ಮಾಣ-ನಿರ್ವಾಹಕದಳಗಳ ಬೆಂಬಲವೂ ಇತ್ತು.[23] ನವೆಂಬರ್ ೧೯೧೭ರಿಂದ ಮಾರ್ಚ್ ೧೯೧೯ರ ವರೆಗೆ, ಕುಕಿ ಬುಡಕಟ್ಟು ಜನಾಂಗದ ವಿರುದ್ಧ ಕಾರ್ಯಾಚರಣೆಗಳನ್ನು ಅಸ್ಸಾಂ ರೈಫಲ್ಸ್ ನ ಸಹಕಾರಿ ಸೈನ್ಯದ ಘಟಕಗಳು ಮತ್ತು ಬರ್ಮಾ ಸೇನಾ ಪೊಲೀಸರು ಕೈಗೊಂಡರು.[24]
ಮೊದಲಿಗೆ ಆಂತರಿಕ ಭದ್ರತೆಗಾಗಿ ಹಾಗೂ ನಂತರ ತರಬೇತಿ ವಿಭಾಗಗಳಾಗಿ ಭಾರತದಲ್ಲಿ ಉಳಿದ ಇತರ ವಿಭಾಗಗಳೆಂದರೆ ೫ನೆಯ (ಮ್ಹೌ) ವಿಭಾಗ, ೮ನೆಯ (ಲಕ್ನೋ) ವಿಭಾಗ ಮತ್ತು ೯ನೆಯ (ಸಿಕಂದರಾಬಾದ್) ವಿಭಾಗ.[20] ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಈ ವಿಭಾಗಗಳು ತಮ್ಮ ಪದಾತಿ ದಳಗಳನ್ನು ಇತರ ಕ್ರಿಯಾತ್ಮಕವಾಗಿರುವ ವ್ಯೂಹಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ಒದಗಿ, ತನ್ಮೂಲಕ ಈ ವಿಭಾಗಗಳ ಪದಾತಿದಳಗಳು ಬಡವಾದವು; ೫ನೆಯ (ಮ್ಹೌ) ವಿಭಾಗವು ೫ನೆಯ (ಮ್ಹೌ) ಅಶ್ವದಳವನ್ನು೨ನೆಯ ಭಾರತೀಯ ಅಶ್ವದಳ ವಿಭಾಗಕ್ಕೆ ನೀಡಬೇಕಾಯಿತು. ೮ನೆಯ (ಲಕ್ನೋ) ವಿಭಾಗವು ೮ನೆಯ (ಲಕ್ನೋ) ಅಶ್ವದಳವನ್ನು ಮೊದಲನೆಯ ಭಾರತೀಯ ಅಶ್ವದಳದ ಹಿತಕ್ಕಾಗಿ ಕೊಡಮಾಡಿತು ಮತ್ತು ೨೨ನೆಯ (ಲಕ್ನೋ) ಪದಾತಿ ದಳವು ೧೧ನೆಯ ಭಾರತೀಯ ವಿಭಾಗಕ್ಕೆ ಸೇರಿಹೋಯಿತು. ೯ನೆಯ (ಸಿಕಂದರಾಬಾದ್)ವಿಭಾಗವು ೯ನೆಯ (ಸಿಕಂದರಾಬಾದ್) ಅಶ್ವದಳವನ್ನು೨ನೆಯ ಭಾರತೀಯ ಅಶ್ವದಳದ ಪುಷ್ಟೀಕರಣಕ್ಕಾಗಿ ಕಳೆದುಕೊಂಡಿತು ಮತ್ತು ೨೭ನೆಯ (ಬೆಂಗಳೂರು) ಪದಾತಿ ದಳವನ್ನು ಬ್ರಿಟಿಷ್ ಪೂರ್ವ ಆಫ್ರಿಕಾಗೆ ರವಾನಿಸಲಾಯಿತು.[20] ಇತರ ಯುದ್ಧಪೂರ್ವ ಘಟಕಗಳ ಪೈಕಿ ಬರ್ಮಾ ವಿಭಾಗವು ಬರ್ಮಾದಲ್ಲಿಯೇ ಆಂತರಿಕ ರಕ್ಷಣಾ ಕಾರ್ಯಗಳನ್ನು ಮಾಡಿಕೊಂಡು ಉಳಿಯಿತು; ಅಂತೆಯೇ ಆಡೆನ್ ಪದಾತಿ ದಳವು ಆಡೆನ್ ನಲ್ಲಿಯೇ ಉಳಿಯಿತು.[20]
೧೯೦೧ರಲ್ಲಿ ಪರ್ಷಿಯನ್ ಕೊಲ್ಲಿಯ ಶಿರೋಭಾಗದಲ್ಲಿರುವ ಮಸ್ಜಿದ್-ಎ-ಸುಲೇಮಾನ್ ನಲ್ಲಿ ವಾಣಿಜ್ಯಪರವಾದ ಪ್ರಮಾಣದ ತೈಲದ ಪತ್ತೆಯಾಯಿತು.[25] ೧೯೧೪ರಲ್ಲಿ ಯುದ್ಧದ ಆರಂಭದ ದಿನಗಳಲ್ಲಿ, ಈ ತೈಲದ ಮೈದಾನಗಳಲ್ಲಿ ಕಾರ್ಯವೆಸಗುವ ಪರವಾನಗಿ ಇದ್ದ ಖಾಸಗಿ ಮಾಲಿಕತ್ವದ ಆಂಗ್ಲೋ-ಪರ್ಷಿಯನ್ ತೈಲ ಕಂಪನಿಯನ್ನು ಬ್ರಿಟಿಷ್ ಸರ್ಕಾರವು ಕೊಳ್ಳುವ ಹಂತದಲ್ಲಿತ್ತು; ಅದರ ಪ್ರಮುಖ ಉದ್ದೇಶವು ಬ್ರಿಟಿಷ್ ಸೇನೆಗೆ ತೈಲವನ್ನು ಒದಗಿಸುವುದಾಗಿತ್ತು. ಕೆಲವೇ ದಿನಗಳಲ್ಲಿ ಆಟೋಮಾನ್ ಟರ್ಕಿಷ್ ಸೇನೆಯನ್ನು ಚಾಲ್ತಿಗೊಳಿಸಲಾಗುತ್ತಿರುವುದು ಸುಸ್ಪಷ್ಟವಾಗಿ ಅರಿವಿಗೆ ಬಂದಿತು ಹಾಗೂ ಆಗಸ್ಟ್ ನಲ್ಲಿ ಈ ಬಹುವಿಧಗಳಲ್ಲಿ ಅವಶ್ಯವಾದ ಸ್ವತ್ತನ್ನು ರಕ್ಸಿಸುವ ಸಲುವಾಗಿ ಸಾದಿಲವಾರು ಹಂಚಿಕೆಗಳನ್ನು ಹಮ್ಮಿಕೊಳ್ಳಲು ಭಾರತ ಸರ್ಕಾರಕ್ಕೆ ಆದೇಶ ನೀಡಲಾಯಿತು. ಟರ್ಕಿಷ್ ಸೇನೆಯು ಜರ್ಮನ್ನರನ್ನು ಬೆಂಬಲಿಸುವುದಾಗಿ ಹೊರಬಂದಾಗ ಭಾರತೀಯ ಸೇನೆಯು ತೈಲಪ್ರದೇಶಗಳನ್ನು ರಕ್ಷಿಸಬೇಕೆಂಬುದು ನಿಯೋಜಿತ ಹಂಚಿಕೆಯಾಗಿತ್ತು. ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡಯಾತ್ರಾ ದಳ D (ಕೆಳಗೆ ನೋಡಿ)ಯು ಲೆಫ್ಟಿನೆಂಟ್-ಜನರಲ್ ಸರ್ ಆರ್ಥರ್ ಬ್ಯಾರೆಟ್ ರ ನೇತೃತ್ವದಲ್ಲಿ ಬಾಂಬೆಯಿಂದ ಬಹ್ ರೈನ್ ಗೆ ೧೬ ಅಕ್ಟೋಬರ್ ೧೯೧೪ರಂದು ಪ್ರಯಾಣ ಬೆಳೆಸಿತು.[26] ಯುದ್ಧದ ಯತ್ನವನ್ನು ಬೆಂಬಲಿಸಲು ಸಾಮ್ರಾಜ್ಯದ ಜನರಲ್ ಸಿಬ್ಬಂದಿಯು ಕರೆ ನೀಡಿದುದಕ್ಕೆ ಓಗೊಟ್ಟು ಸೆಪ್ಟೆಂಬರ್[27] ನ ಕೊನೆಯಲ್ಲಿ ಯೂರೋಪ್ ಗೆ ತರಾತುರಿಯಲ್ಲಿ ಕಳುಹಿಸಲ್ಪಟ್ಟಿದ್ದ ದಂಡಯಾತ್ರಾ ದಳ A ಮತ್ತು ದಂಡಯಾತ್ರಾದಳ D ಒಟ್ಟುಗೂಡಿ ಭಾರತದ ಹೊರಗೆ ಯುದ್ಧದಲ್ಲಿ ತೊಡಗಿಕೊಂಡಂತಹ ಮೊದಲ ಭಾರತೀಯ ಸೇನಾದಳಗಳಾದವು.
ಖಾಯಂ ಆದ ವಿಭಾಗಗಳ ಜೊತೆಗೆ ಭಾರತೀಯ ಸೇನೆಯು ಹಲವಾರು ಖಾಸಗಿ ದಂಡುಗಳನ್ನು ನಿರ್ಮಿಸಿತು. ದಕ್ಷಿಣದ ಸೇನೆಯ ಅಂಗವಾಗಿ ಆಡೆನ್ ಬ್ರಿಗೇಡ್ ಅನ್ನು ಆಡೆನ್ ಪ್ರೊಟೆಕ್ಟೊರೇಟ್ ನಲ್ಲಿ ಸಮರಕೌಶಲಗಳಿಗೆ ಹಾಗೂ ಹಂಚಿಕೆಗಳಿಗೆ ಉಪಯೋಗವಾಗುವಂತಹ, ಯೂರೋಪ್ ನಿಂದ ಭಾರತಕ್ಕೆ ಇದ್ದ ಪ್ರಮುಖ ನೌಕಾಮಾರ್ಗದಲ್ಲಿ ಇರಿಸಲಾಯಿತು.[20] ಬನ್ನು ಬ್ರಿಗೇಡ್, ದೇರಾಜಾತ್ ಬ್ರಿಗೇಡ್ ಮತ್ತು ಕೋಹತ್ ಬ್ರಿಗೇಡ್ ಗಳೆಲ್ಲವೂ ಉತ್ತರದ ಸೇನೆಯ ಅಂಗಗಳಾಗಿದ್ದವು ಹಾಗೂ ಆ ದಳಗಳನ್ನು ವಾಯುವ್ಯ ಗಡಿಯ ಗುಂಟ ಪಹರೆಗೆ ಹಚ್ಚಲಾಗಿತ್ತು.[20] ೧೨ ಮೇ ೧೯೧೮ರಂದು, ಬನ್ನು ಮತ್ತು ದೇಜಾರಾತ್ ದಂಡುಗಳನ್ನು ಜನರಲ್ ಜಿ,ಡಬ್ಲ್ಯೂ. ಬೇಯ್ನಾನ್ ರ ನೇತೃತ್ವದ ವಝೀರಿಸ್ತಾನ್ ಭೂ ದಳದ ಸುಪರ್ದಿಗೆ ಒಪ್ಪಿಸಲಾಯಿತು.[28] ದಕ್ಷಿಣ ಪರ್ಷಿಯಾ ಮತ್ತು ಪರ್ಷಿಯಾ ಕೊಲ್ಲಿಯಲ್ಲಿದ್ದ ಆಂಗ್ಲೋ-ಪರ್ಷಿಯನ್ ತೈಲ ನಿಕ್ಷೇಪಗಳನ್ನು ರಕ್ಷಿಸುವ ಸಲುವಾಗಿ, ಪರ್ಷಿಯನ್ ಚಳುವಳಿಯ ಆರಂಭದ ದಿನಗಳಲ್ಲಿದಕ್ಷಿಣ ಪರ್ಷಿಯಾ ಬ್ರಿಗೇಡ್ಅನ್ನು ೧೯೧೫ರಲ್ಲಿ ರಚಿಸಲಾಯಿತು.[20]
ಭಾರತೀಯ ಸೇನೆಯು ಮೊದಲನೆಯ ಮಹಾಯುದ್ಧ ದ ಸಮಯದಲ್ಲಿ ಏಳು ದಂಡಯಾತ್ರಾ ಪಡೆಗಳನ್ನು ರಚಿಸಿ, ಹೊರದೇಶಗಳಿಗೆ ಕಾರ್ಯಾರ್ಥವಾಗಿ ಕಳುಹಿಸಿತು.[29]
ಯುದ್ಧವು ಆರಂಭವಾದ ಕಾಲದಲ್ಲಿ ಭಾರತೀಯ ಸೇನೆಯಲ್ಲಿ ೧೫೦,೦೦೦ ತರಬೇತಿ ಪಡೆದ ಪುರುಷರಿದ್ದರು ಮತ್ತು ಭಾರತ ಸರ್ಕಾರವು ಎರಡು ಅಶ್ವದಳಗಳ ಮತ್ತು ಎರಡು ಪದಾತಿ ದಳಗಳ ಸೇವೆಯನ್ನು ಸಮುದ್ರದ ಅತ್ತಣ ದೇಶಗಳಲ್ಲಿನ ಯುದ್ಧಕ್ಕೆ ಕಳುಹಿಸಿಕೊಡುವ ಇರಾದೆ ತೋರಿತು.[30] ಭಾರತೀಯ ದಂಡಯಾತ್ರಾ ದಳ A ಎಂದು ಕರೆಯಲ್ಪಟ್ಟ ಈ ದಳವು ಜನರಲ್ ಸರ್ ಜೇಮ್ಸ್ ವಿಲ್ ಕಾಕ್ಸ್ ರ ನೇತೃತ್ವದಲ್ಲಿ ಯುದ್ಧದಲ್ಲಿ ಭಾಗವಹಿಸಿತು.[30] ಸೇನಾದಳ A ಬ್ರಿಟಿಷ್ ದಂಡಯಾತ್ರಾ ದಳಕ್ಕೆ ಸೇರ್ಪಡೆಗೊಳಿಸಲಾಯಿತು ಹಾಗೂ ಈ ನಾಲ್ಕೂ ವಿಭಾಗಗಳನ್ನು ಎರಡು ಸೇನಾ ದಂಡುಗಳಾಗಿ ಪರಿವರ್ತಿಸಲಾಯಿತು: ಒಂದು ಪದಾತಿಗಳ ಭಾರತೀಯ ಸೇನಾಂಗ ಮತ್ತು ಇನ್ನೊಂದು ಭಾರತೀಯ ಅಶ್ವದಳ ಸೇನಾಂಗ.[31][32] ಮಾರ್ಸೀಲೆಸ್ ಅನ್ನು ೩೦ ಸೆಪ್ಟೆಂಬರ್ ೧೯೧೪ರಂದು ತಲುಪಿದಾಗ ಯುದ್ಧ ಘೋಷಿತವಾಗಿ ಇನ್ನೂ ಆರು ವಾರಗಳಾಗಿದ್ದವಷ್ಟೆ; ಆಗ ಈ ಪಡೆಯನ್ನು ವೈಪ್ರೆಸ್ ಸೇಲೆಯಂಟ್ ಗೆ ಕಳುಹಿಸಲಾಯಿತು ಮತ್ತು ಅಲ್ಲಿ, ೧೯೧೪ರ ಅಕ್ಟೋಬರ್ ತಿಂಗಳಲ್ಲಿ, ಈ ಸೇನಾಂಗಗಳು ಬಸ್ಸೀ ಕದನದಲ್ಲಿ ಪಾಲ್ಗೊಂಡವು.[33] ಮಾರ್ಚ್ ೧೯೧೫ರಲ್ಲಿ ೭ನರಯ (ಮೀರತ್) ವಿಭಾಗವನ್ನು ನಿಯೋವ್ ಚಾಪಲೆ ಕದನದಲ್ಲಿ ಮುತ್ತಿಗೆ ಹಾಕುವುದಕ್ಕೆ ಮುಂದಾಳತ್ವ ವಹಿಸಲು ಆಯ್ಕೆ ಮಾಡಲಾಯಿತು.[33] ಈ ದಂಡಯಾತ್ರಾ ದಳಕ್ಕೆ ಅವರು ಫ್ರ್ಯಾನ್ಸ್ ನಲ್ಲಿ ಕಾಲಿಟ್ಟಾಗ ನೀಡಲ್ಪಟ್ಟ ಲೀ ಎನ್ ಫೀಲ್ಡ್ ಬಂದೂಕುಗಳಂತಹ ನೂತನ ಶಸ್ತ್ರಗಳನ್ನು ಬಳಸುವುದರ ಬಗ್ಗೆ ಅರಿವು ಇಲ್ಲದಿರುವ ಕಾರಣ ಬಹಳವೇ ತೊಂದರೆಯಾಯಿತು; ಅಲ್ಲದೆ ಈ ದಳದ ಬಳಿ ಬಹಳ ಕಡಿಮೆ ಶಸ್ತ್ರಗಳಿದ್ದವು ಹಾಗೂ ಮುಂದಿನ ಸಾಲಿನಲ್ಲಿ ಯುದ್ಧಕ್ಕೆ ನಿಂತಿರುವಾಗ ತಮ್ಮ ಬಳಿ ಶಸ್ತ್ರಗಳೇ ಇಲ್ಲವಾಗಿ ಪಕ್ಕದ ಸೇನಾಂಗದವರನ್ನು ಶಸ್ತ್ರಾಸ್ತ್ರಗಳಿಗಾಗಿ ಹಾಗೂ ತಮ್ಮನ್ನು ರಕ್ಷಿಸಲಿಕ್ಕಾಗಿ ಅವಲಂಬಿಸುವಂತಹ ಪರಿಸ್ಥಿತಿ ಬಂದೊದಗಿತು.[33] ಅವರಿಗೆ ಆ ಖಂಡದ ಹವಾಗುಣವೂ ಒಗ್ಗುತ್ತಿರಲಿಲ್ಲ ಹಾಗೂ ಚಳಿ ತಡೆಯಲು ಬೇಕಾದ ಬೆಚ್ಚನೆಯ ಬಟ್ಟೆಗಳು ಅವರ ಬಳಿ ಇರಲಿಲ್ಲ; ಹೀಗಾಗಿ ಅವರ ಮನೋಸ್ಥಿತಿಯು ಉತ್ತೇಜನಕಾರಿಯಾರಿರಲೇ ಇಲ್ಲ; ಅಷ್ಟೇ ಅಲ್ಲದೆ, ಮೀಸಲು ಪದ್ಧತಿಯೂ ಅವರಿಗೆ ಉರುಳಾಯಿತು - ಬೆಂಬಲಕ್ಕೆಂದು ಸೈನ್ಯಗಳನ್ನು ಯಾವುದೇ ತುಕಡಿಯಿಂದ ಕರೆಸಿಕೊಳ್ಳಲಾಗುತ್ತಿತ್ತು ಹಾಗೂ ಅವರ ನೂತನ ಘಟಕಗಳಿಗೆ ಯಾವ ವಿಧದಲ್ಲೂ ಹೊಂದಾಣಿಕೆಯಾಗುತ್ತಿರಲಿಲ್ಲ. ಅಧಿಕಾರಿಗಳ ಸಾವುಗಳು ಹೆಚ್ಚಿನ ತೊಡಕುಗಳನ್ನು ಉಂಟುಮಾಡುತ್ತಿದ್ದವು; ಏಕೆಂದರೆ ಹೋದವರ ಜಾಗಕ್ಕೆ ಬಂದಂತಹ ಅಧಿಕಾರಿಗಳಿಗೆ ಭಾರತೀಯ ಸೇನೆಯ ಪರಿಚಯವಿರುತ್ತಿರಲಿಲ್ಲ ಹಾಗೂ ಅವರ ಭಾಷೆಯನ್ನು ಮಾತನಾಡಲು ಬರುತ್ತಿರಲಿಲ್ಲ.[33] ಖಿನ್ನತೆ ಹೆಚ್ಚಿದಂತೆ ಹಲವಾರು ಸೈನಿಕರು ರಣರಂಗದಿಂದ ಓಡಿಹೋದರು ಮತ್ತು ಕಡೆಗೆ ಪದಾತಿ ದಳಗಳನ್ನು ಹಿಂದಕ್ಕೆ ಕರೆದುಕೊಂಡು ಅಕ್ಟೋಬರ್ ೧೯೧೫ರಲ್ಲಿ ಈಜಿಪ್ಟ್ ಗೆ ಕಳುಹಿಸಲಾಯಿತು ಹಾಗೂ ಅವರ ಜಾಗದಲ್ಲಿ ಕಿಚನರ್ಸ್ ಆರ್ಮಿಯ ನೂತನ ಬ್ರಿಟಿಷ್ ವಿಭಾಗಗಳನ್ನು ನಿಯಮಿಸಲಾಯಿತು.[33][34]
ಪದಾತಿ ದಳಗಳನ್ನು ಹಿಂತೆಗೆದುಕೊಂಡನಂತರ, ವಾಯುವ್ಯದ ಗಡಿಯಲ್ಲಿ ಉಳಿದ ಭಾರತದ ಸೇನಾ ಘಟಕಗಳು ಕೇವಲ ಎರಡು ಅಶ್ವದಳಗಳಾಗಿದ್ದವು. ನವೆಂಬರ್ ೧೯೧೬ರಲ್ಲಿ, ಈ ಎರಡು ಭಾರತೀಯ ಅಶ್ವದಳ ವಿಭಾಗಗಳಿಗೆ ಮರುಸಂಖ್ಯೆ ನೀಡಿ ೧ನೆಯ ಮತ್ತು ೨ನೆಯ ಸಂಖ್ಯೆಯ ವಿಭಾಗಗಳನ್ನು ೪ನೆಯ ಮತ್ತು ೫ನೆಯ ಅಶ್ವದಳ ವಿಭಾಗಗಳೆಂದು ಕರೆದರು.[35] ಬ್ರಿಟಿಷ್ ಅಶ್ವದಳಗಳ ಜೊತೆಜೊತೆಯೇ ಸೇವೆ ಸಲ್ಲಿಸುತ್ತಿದ್ದ ಈ ವಿಭಾಗಗಳನ್ನು ಮುಂದಿನ ಸಾಲಿನ ಕೊಂಚ ಹಿಂಭಾಗದಲ್ಲೇ ಇರಿಸಿಕೊಂಡು ದೊರೆಯಬಹುದೆಂದು ಆಶಾಭಾವ ಹೊಂದಿದ್ದ ಮುನ್ನಡೆಗಾಗಿ ಕಾಯುತ್ತಿದ್ದರು. ಯುದ್ಧದ ವೇಳೆಯಲ್ಲಿ ಕೆಲವೊಮ್ಮೆ ಈ ದಳದವರು ಕಂದಕಗಳಲ್ಲಿ ಪದಾತಿಗಳಂತೆ ಸೇವೆ ಸಲ್ಲಿಸಿದರು, ಪ್ರತಿ ಅಶ್ವದಳವೂ ಸವಾರಿಯಿಂದ ಕೆಳಗಿಳಿದಾಗ ಸವಾರಿರಹಿತ ದಳವಾಗಿ ಮಾರ್ಪಟ್ಟಿತು. ಇಂತಹ ಪರಿಸ್ಥಿತಿಯಲ್ಲಿ, ಈ ತುಕಡಿಗಳು ಮುಂದಿನ ಸಾಲಿಗೆ ಹೋದಾಗ ಅವು ಕೇವಲ ಸೇನಾಪ್ರದೇಶವನ್ನಷ್ಟೇ ಆಕ್ರಮಿಸಲು ಸಾಧ್ಯವಾಗುತ್ತಿತ್ತು.[36] ಮಾರ್ಚ್ ೧೯೧೮ರಲ್ಲಿ ಈ ದಳವನ್ನೇ ಹಿಂದಕ್ಕೆ ಕರೆದು ಈಜಿಪ್ಟ್ ಗೆ ಕಳುಹಿಸುವ ಮುನ್ನ, ಈ ದಳವು ಸೊಮ್ಮೆಗಳ ಕದನ, ಬಾಝೆಂಟಿನ್ ಸಮರ, ಫ್ಲೆರ್ಸ್-ಕೌರ್ಸೆಲೆಟ್ಟೆ ಕದನ, ಹಿಂಡೆನ್ ಬರ್ಗ್ ರೇಖೆಯತ್ತ ಮುನ್ನಡೆ ಹಾಗೂ ಕಡೆಯದಾಗಿ ಕ್ಯಾಂಬ್ರಾಯ್ ಕದನಗಳಲ್ಲಿ ಪಾಲ್ಗೊಂಡಿತು.[33]
ಫ್ರ್ಯಾನ್ಸ್ ಮತ್ತು ಬೆಲ್ಜಿಯಂಗಳಲ್ಲಿ ಸೇವೆ ಸಲ್ಲಿಸಿದ ೧೩೦,೦೦೦ ಭಾರತೀಯ ಸೈನಿಕರ ಪೈಕಿ ಸುಮಾರು ೯,೦೦೦ ಜನರು ಸಾವನ್ನಪ್ಪಿದರು.[14]
೧೯೧೪ರಲ್ಲಿ ಬ್ರಿಟಿಷ್ ಪೂರ್ವ ಆಫ್ರಿಕಾದ ರಾಜ್ಯಪಾಲರು ಜರ್ಮನಿಯ ಸೇನೆಯೊಡನೆ ಜರ್ಮನ್ ಪೂರ್ವ ಆಫ್ರಿಕಾದಲ್ಲಿ ಹೋರಾಡಲು ಸಹಾಯವನ್ನು ಕೋರಿದರು ಹಾಗೂ ಈ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಭಾರತ ಕಚೇರಿಗೆ ರವಾನಿಸಲಾಯಿತು; ಭಾರತವು ಎರಡು ತುಕಡಿಗಳನ್ನು ಜೋಡಣೆ ಮಾಡಿ ಹಡಗಿನ ಮೂಲಕ ಅವರಿಗೆ ಸಹಾಯ ಮಾಡಲು ಕಳುಹಿಸಿಕೊಟ್ಟಿತು.[37] ಭಾರತೀಯ ದಂಡಯಾತ್ರಾ ಪಡೆ B ಯಲ್ಲಿ ೯ನೆಯ (ಸಿಕಂದರಾಬಾದ್) ವಿಭಾಗದಿಂದ ಆಯ್ದ ೨೭ನೆಯ (ಬೆಂಗಳೂರು) ಸೇನಾದಳ ಮತ್ತು ಒಂದು ಸಾಮ್ರಾಜ್ಯ ಸೇವಾ ಪದಾತಿ ದಳ, ಸೇನೆಗೆ ರಸ್ತೆ, ಸೇತುವೆ. ಇತ್ಯಾದಿಗಳನ್ನು ನಿರ್ಮಿಸಿಕೊಡುವ ಒಂದು ಸಹಾಯಕ ದಳ, ಗಿರಿ ಫಿರಂಗಿದಳದ ಒಂದು ತುಕಡಿ ಮತ್ತು ಎಂಜಿನಿಯರ್ ಗಳಿದ್ದು, ಈ ಪಡೆಯನ್ನು ಜರ್ಮನ್ ಪೂರ್ವ ಆಫ್ರಿಕಾದ ಮೇಲೆ ಆಕ್ರಮಣ ನಡೆಸುವ ಸಲುವಾಗಿ ಟಾಂಗನ್ಯಿಕಾಗೆ ಕಳುಹಿಸಲಾಯಿತು.[38] ಮೇಜರ್ ಜನರಲ್ ಆರ್ಥರ್ ಐಟ್ಕೆನ್ ರ ನೇತೃತ್ವದಲ್ಲಿ ಈ ಪಡೆಯು ಟಾಂಗವನ್ನು ೧೯೧೪ರ ನವೆಂಬರ್ ೨-೩ರಂದು ತಲುಪಿತು. ನಂತರ ಜರುಗಿದ ಟಾಂಗ ಯುದ್ಧದಲ್ಲಿ, ಐಟ್ಕೆನ್ ರ ೮,೦೦೦ ಜನರುಳ್ಳ ಸೇನೆಯನ್ನು ೧,೦೦೦ ಜನರುಳ್ಳ, ಜರ್ಮನ್ ಕಮ್ಯಾಂಡರ್ ಪಾಲ್ ಎಮಿಲ್ ವಾನ್ ಲೆಟ್ಟೋ-ವೋರ್ಬೆಕ್ ರ ಅಧೀನದ ಪಡೆಯು ಹೀನಾಯವಾಗಿ ಸೋಲಿಸಿತು.[39] ೮೧೭ ಸಾವುಗಳು, ನೂರಾರು ಬಂದೂಕುಗಳು, ೧೬ ಮೆಷೀನ್ ಗನ್ ಗಳು ಮತ್ತು ೬೦೦,೦೦೦ ಸುತ್ತಿಗಳಿಗಾಗುವಷ್ಟು ಮದ್ದುಗುಂಡುಗಳನ್ನು ಕಳೆದುಕೊಂಡ ಈ ಸೇನೆಯು ೧೯೧೪ರ ನವೆಂಬರ್ ೫ರಂದು ಹಿಂದಿರುಗಲು ಮತ್ತೆ ಹಡಗೇರಿತು.[39]
ಭಾರತೀಯ ದಂಡಯಾತ್ರಾ ಪಡೆ C ೧೯೧೪ರಲ್ಲಿ ಬ್ರಿಟಿಷ್ ಪೂರ್ವ ಆಫ್ರಿಕಾದಲ್ಲಿ ಸೇವೆ ಸಲ್ಲಿಸಲೆಂದು ಒಂದುಗೂಡಿಸಿದ ಎರಡನೆಯ ಪಡೆ; ಈ ಪಡೆಗಾಗಿ ಒಂದುಗೂಡಿದ ದಂಡುಗಳೆಂದರೆ ಐದು ಪದಾತಿ ಸೇನಾಂಗಗಳುಳ್ಳ ಸಾಮ್ರಾಜ್ಯ ಸೇವಾ ಪದಾತಿ ದಳ, ಭಾರತೀಯ ಸೇನೆಯ೨೯ನೆಯ ಪಂಜಾಬಿಗಳು, ರಾಜರುಗಳಾಳುತ್ತಿದ್ದ ರಾಜ್ಯಗಳಾದ ಜಿಂದ್, ಭರತ್ ಪುರ್, ಕಪೂರ್ ತಾಲಾ ಮತ್ತುರಾಂಪುರ್ ಗಳ ಸೇನೆಗಳು, ಒಂದು ಸ್ವಯಂಸೇವಕ ೧೫ ಪೌಂಡರ್ ಫಿರಂಗಿದಳ, ೨೨ನೆಯ (ದೇರಾಜಾತ್) ಬೆಟ್ಟಗುಡ್ಡಗಳ ಫಿರಂಗಿ ದಳ (ಗಡಿನಾಡ ಪಡೆ), ಒಂದು ಸ್ವಯಂಸೇವಕ ಮ್ಯಾಕ್ಸಿಮ್ ಗನ್ ಫಿರಂಗಿದಳ ಮತ್ತು ಒಂದು ರಣಾಂಗಂ ತುರ್ತುಚಿಕಿತ್ಸಾವಾಹನ. ಈ ಪಡೆಯ ಪ್ರಧಾನ ಕಾರ್ಯವು ಉಗಾಂಡಾದ ರೈಲುಮಾರ್ಗದ ಪಹರೆ ಹಾಗೂ ಕಿಂಗ್ಸ್ ಆಫ್ರಿಕನ್ ರೈಫಲ್ಸ್ ಗಳನ್ನು ಕಾಯುವಂತಹುದಾಗಿದ್ದು ಸಂಪರ್ಕ ರಕ್ಷಣಾ ಚಟುವಟಿಕೆಗಳಿಗಾಗಿ ಈ ಪಡೆಯನ್ನು ಬಳಸಿಕೊಳ್ಳುವುದೆಂದು ಹಂಚಿಕೆ ಹೂಡಲಾಗಿತ್ತು. ಮೊಂಬಾಸಾ ತಲುಪಿದ ನಂತರ, ಪಡೆ C ವಿದಳಗೊಳಿಸಲಾಯಿತು ಮತ್ತು ಅದರ ಘಟಕಗಳನ್ನು ಕ್ರಮೇಣ ಬೇರೆಬೇರೆಯಾಗಿಯೇ ಬಳಸಿಕೊಳ್ಳಲಾಯಿತು.[29] ಈ ಪಡೆಯು ಭಾಗವಹಿಸಿದ್ದ ಒಂದು ಕ್ರಿಯಾತ್ಮಕ ಕಾರ್ಯವೆಂದರೆ ಅಕ್ಟೋಬರ್ ೧೯೧೪ರಲ್ಲಿ ಕಿಲಿಮಾಂಜೆರೋ ಕದನದಲ್ಲಿ ಹೋರಾಡಿದುದು. ೪,೦೦೦ ಜನಗಳುಳ್ಳ ಪಡೆ C ಬ್ರಿಟಿಷ್ ಮತ್ತು ಜರ್ಮನ್ ಪೂರ್ವ ಆಫ್ರಿಕಾಗಳ ಗಡಿಯ ಬಳಿ, ಬ್ರಿಗೇಡಿಯಲ್ ಜನರಲ್ ಜೆ.ಎಂ. ಸ್ಟುವರ್ಟ್ ರ ನೇತೃತ್ವದಲ್ಲಿ, ಜಮಾಯಿಸಿತು. ಆ ಪ್ರದೇಶದಲ್ಲಿನ ಜರ್ಮನ್ ಸೇನೆಯ ಸಂಖ್ಯೆಯು ೨೦೦ ಎಂಬ ಬೇಹುಗಾರರ ವರದಿಯು ತಪ್ಪು ವರದಿಯೆಂದು ನಂತರ ತಿಳಿದುಬಂದಿತು;ಆ ಪ್ರಾಂತ್ಯದಲ್ಲಿ ೬೦೦ ಆಸ್ಕಾರಿಗಳು ಮೂರು ಕಂಪನಿಗಳಲ್ಲಿ ಇದ್ದರಲ್ಲದೆ ವಸಾಹತು ಸ್ವಯಂಸೇವಕರು, ೮೬ ಯುವ ಜರ್ಮನ್ ರಾವುತರು ಇದ್ದರು.[40] ನವೆಂಬರ್ ೩, ೧೯೧೪ರಂದು ಬ್ರಿಟಿಷ್ ಪಡೆಗೆ ಸೇರಿದಂತಹ ಸುಮಾರು ೧,೫೦೦ ಪಂಜಾಬಿಗಳು ಲಾಂಗಿಡೋ ಬಳಿ ಬೆಟ್ಟವನ್ನು ಏರಿ ಮನ್ನಡೆದರು; ಆದರೆ ಪ್ರಬಲವಾದ ಜರ್ಮನಿಯ ಸೈನಿಕರ ಪಡೆಯು ಸುರಕ್ಷಿತ ಸ್ಥಳಗಳಿಂದ ಎರಡೂ ಕಡೆಗಳಿಂದ ನಡೆಸಿದ ಗುಂಡಿನ ದಾಳಿಗೆ, ಮುಂಜಾನೆಯ ಮಂಜಿನಲ್ಲಿ ಮುಂದಡಿಯಿಡುತ್ತುದ್ದ ಇವರು ಸಿಲುಕಿದರು. ಭಾರತದ ಬೃಹತ್ ಪದಾತಿ ದಳವು ಎದುರಾಳಿಗಳ ದಾಳಿಯನ್ನು ಪರಿಣಾಮಕಾರಿಯಾಗಿ ಪ್ರತಿರೋಧಿಸಿತು, ಆದರೆ, ಹಗಲಿನಲ್ಲಿ ಬ್ರಿಟಿಷ್ ಆಕ್ರಮಣಕಾರರು ಮುಂದಡಿಯಿಡುವಲ್ಲಿ ವಿಫಲರಾದುದಲ್ಲದೆ ಅಪಾರ ಸಾವುನೋವುಗಳನ್ನು ಅನುಭವಿಸಿದರು. ಬೆಳಗಿನ ಅರ್ಧ ಸಮಯ ಕಳೆಯುವುದರೊಳಗೆ ಜರ್ಮನ್ನರ ವಾಹನ, ಕುದುರೆಗಳನ್ನೇರಿದ ರಾವುತರ ಪಡೆಯೊಂದು ಶಸ್ತ್ರಾಸ್ತ್ರಗಳೊಡನೆ ಸಜ್ಜಾಗಿ ಬಂದು ಸೈನಿಕರಿಗೆ ಅವಶ್ಯವಾದ ವಸ್ತುಗಳ ಸರಬರಾಜನ್ನು ಹೊತ್ತು ತರುತ್ತಿದ್ದ ಸುಮಾರು ನೂರು ಹೇಸರಕತ್ತೆಗಳ ಹಿಂಡಿನ ಮೇಲೆ ಆಕ್ರಮಣ ಮಾಡಿ ಆ ಹಿಂಡನ್ನು ನಜ್ಜುಗುಜ್ಜಾಗಿಸಿ ದಿಕ್ಕಾಪಾಲಾಗಿಸಿತು. ಹೀಗೆ ಚೆಲ್ಲಾಪಿಲ್ಲಿಯಾದ ಸೇನಾಪಡೆಯನ್ನು ಹೊಂದಿದ್ದ ಬ್ರಿಟಿಷ್ ಅಧಿಕಾರಿಗಳು ಕತ್ತಲಾಗುವವರೆಗೆ ಕಾದು, ತಾವು ಇನ್ನು ಅಲ್ಲಿರುವುದು ಕ್ಷೇಮವಲ್ಲವೆಂದು ಮನಗಂಡು, ಬೆಟ್ಟದಿಂದ ಕೆಳಗಿಳಿದು, ಬ್ರಿಟಿಷ್ ಪೂರ್ವ ಆಫ್ರಿಕಾದತ್ತ 'ಬಂದ ದಾರಿಗೆ ಸುಂಕವಿಲ್ಲ' ಯಾವುದೇ ವಿಧವಾದ ಸಾಧನೆಯೂ ಇಲ್ಲದೆ, ಮರಳಿದರು.[41][42]
ಹೊರದೇಶದಲ್ಲಿ ಸೇವೆ ಸಲ್ಲಿಸಿದ ಭಾರತೀಯ ಸೇನೆಯ ಅತಿ ದೊಡ್ಡ ಪಡೆಯೇ ಭಾರತೀಯ ದಂಡಯಾತ್ರಾ ಪಡೆ ದ; ಇದು ಮೆಸೊಪೊಟೋಮಿಯಾದಲ್ಲಿ, ಲೆಫ್ಟಿನೆಂಟ್ ಕರ್ನಲ್ ಸರ್ ಜಾನ್ ನಿಕ್ಸನ್ ರ ಮುಖಂಡತ್ವದಲ್ಲಿ ಸೇವೆ ಸಲ್ಲಿಸಿತು.[33] ನವೆಂಬರ್ ೧೯೧೪ರಲ್ಲಿ ಮೊದಲು ಕಳುಹಿಸಲ್ಪಟ್ಟ ಘಟಕ ೬ನೆಯ (ಪೂನಾ) ವಿಭಾಗವಾಗಿದ್ದು ಬಾರ್ಸಾದಲ್ಲಿ ಹಾಗೂ ಅದರ ಸುತ್ತಮುತ್ತ ಇದ್ದ ಬ್ರಿಟಿಷ್ ಸ್ಥಾಪಿತ ತೈಲಕೇಂದ್ರಗಳನ್ನು ರಕ್ಷಿಸುವ ಕೆಲಸವನ್ನು ಇದಕ್ಕೆ ವಿಧಿಸಲಾಗಿತ್ತು .[29] ಮೆಸಪೊಟೋಮಿಯನ್ ಚಳುವಳಿಯ ಅಂಗವಾಗಿ ಈ ಸೇನಾಂಗದವರು ಮೇಜರ್ ಜನರಲ್ ಬ್ಯಾರೆಟ್ ರ ಮೇಲ್ವಿಚಾರಣೆಯಲ್ಲಿ ಹಾಗೂ ನಂತರ ಮೇಜರ್ ಜನರಲ್ ಟೌನ್ ಷೆಂಡ್ ರ ಕೈಕೆಳಗೆ ಸೇವೆ ಸಲ್ಲಿಸಿದರು. ಮೊದಮೊದಲು ಸತತವಾದ ಜಯಗಳು ಲಭಿಸಿದ ನಂತರ, ಈ ಚಳುವಳಿಗೆ ಬಲು ದೊಡ್ಡದಾದ ಹಿನ್ನಡೆಯು ಸಿಟೆಸೈಫಾನ್ ಕದನದಲ್ಲಿ ಸಂಭವಿಸಿತು; ನವೆಂಬರ್ ೧೯೧೫ರಲ್ಲಿ ಸಂಭವಿಸಿದ ಈ ಆಘಾತಕ್ಕೆ ಸೇನಾ ಸಂಚಾಲನಾ ನಿರ್ಬಂಧಗಳು ಕಾರಣವಾದವು.[29] ಈ ಕಾರ್ಯಾಚರಣೆಯ ನಂತರ, ಪೂನಾ ವಿಭಾಗವು ಕಟ್ ಗೆ ಹಿಂದಿರುಗಿತು; ಅಲ್ಲಿ ಟೌನ್ ಷೆಂಡ್ ನಗರಕ್ಕೆ ಶತ್ರುಸೇನೆ ಹಾಕಿದ್ದ ಮುತ್ತಿಗೆಯನ್ನು ಮೆಟ್ಟಿಹಾಕಿ ವಶಪಡಿಸಿಕೊಳ್ಳಲು ನಿರ್ಧರಿಸಿದರು, ಹೀಗಾಗಿ ಕಟ್ ನ ಮುತ್ತಿಗೆಯು ಆರಂಭವಾಯಿತು.
೧೯೧೬ರ ಜನವರಿಯಿಂದ ಮಾರ್ಚ್ ವರೆಗೆ ಟೌನ್ ಷೆಂಡ್ ಶತ್ರುಗಳ ಮುತ್ತಿಗೆಯನ್ನು ಹಿಮ್ಮೆಟ್ಟಿಸಲು ಹಲವಾರು ದಾಳಿಗಳನ್ನು ನಡೆಸಿದರು. ಅನುಕ್ರಮವಾಗಿ, ಆ ದಾಳಿಗಳು ಷೇಕ್ ಸಾದ್ ನ ಸಮರ,ವಾಡಿಯ ಸಮರ , {2ಹನ್ನಾದ ಸಮರ{/2}, ಮತ್ತು ದುಜಾಯ್ಲಾ ರಿಡೌಟ್ ಸಮರಗಳಲ್ಲಿ ಸಂಭವಿಸಿದವು.[43]
ಆದರೆ ಶತ್ರುವ್ಯೂಹವನ್ನು ಛೇದಿಸಿ ಮುನ್ನುಗ್ಗುವ ಎಲ್ಲಾ ಯತ್ನಗಳು ವಿಫಲವಾದವು ಮತ್ತು ಎರಡೂ ಬಣಗಳು ಬಹಳ ಸಾವುನೋವುಗಳನ್ನು ಅನುಭವಿಸಿ ಎರಡೂ ಕಡೆಗಳಿಗೆ ಈ ಮುತ್ತಿಗೆ ಬಹಳ ದುಬಾರಿಯಾಯಿತು. ಫೆಬ್ರವರಿಯ ವೇಳೆಗೆ ಕಟ್-ಆಲ್-ಅಮಾರಾದಲ್ಲಿದ್ದ ಟೌನ್ ಷೆಂಡ್ ರ ಬಳಿಯಿದ್ದ ಆಹಾರ ಹಾಗೂ ಗೆಲ್ಲುವ ಭರವಸೆಗಳೆರಡೂ ಕ್ಷೀಣಿಸಲಾರಂಭಿಸಿದವು. ರೋಗಗಳು ಬಹಳ ಬೇಗ ಹರಡಲಾರಂಭಿಸಿ, ಅವನ್ನು ತಡೆಯುವವುದಾಗಲೀ, ಗುಣ ಪಡಿಸುವುದಾಗಲೀ ಆಗದ ಮಾತಾಯಿತು; ಏಪ್ರಿಲ್ ೧೯೧೬ರಲ್ಲಿ ಟೌನ್ ಷೆಂಡ್ ಶರಣಾದರು.[29] ಡಿಸೆಂಬರ್ ೧೯೧೬ರಲ್ಲಿ ೩ನೆಯ ಮತ್ತು ೭ನೆಯ ವಿಭಾಗಗಳು ಪಶ್ಚಿಮದ ಗಡಿಪ್ರದೇಶದಿಂದ ಬಂದು ಸೇರಿದವು.[44]
೧೯೧೭ರಲ್ಲಿ III ಸೇನಾಂಗ(ಭಾರತ)[29] ದಲ್ಲಿನ ಭಾರತೀಯ ಸೇನೆಯ ಒಂದು ಅಶ್ವದಳ ಮತ್ತು ಏಳು ಪದಾತಿ ದಳಗಳನ್ನು ಹೊಂದಿದ್ದ,ಫ್ರೆಡೆರಿಕ್ ಸ್ಟಾನ್ಲೀ ಮಾಡ್ ರ ನೇತೃತ್ವದ ಬ್ರಿಟಿಷ್ ಪಡೆಯು ಬಾಗ್ದಾದ್ ನತ್ತ ಮುಂದುವರಿಯಿತು ಹಾಗೂ ಮಾರ್ಚ್ ನಲ್ಲಿ ಬಾಗ್ದಾದನ್ನು ವಶಪಡಿಸಿಕೊಂಡಿತು.[clarification needed] ಈ ಮುನ್ನಡೆಯು ೧೯೧೮ರಲ್ಲೂ ಮುಂದುವರಿಯುತು ಮತ್ತು ಅಕ್ಟೋಬರ್ ನಲ್ಲಿ ಶರ್ಗಾತ್ ಕದನದ ನಂತರ, ಟರ್ಕಿಯ ಸೇನೆಗಳ ಶರಣಾದವು ಮತ್ತು ಮುಡ್ರೋಸ್ ಕದನವಿರಾಮದ ಒಪ್ಪಂದಕ್ಕೆ ಸಹಿ ಹಾಕಲಾಯಿತು.[45] ಮೆಸೊಪೊಟೋಮಿಯಾದ ಚಳುವಳಿಯು ಸರಿಸುಮಾರು ಭಾರತೀಯ ಸೇನೆಯ ಚಳುವಳಿಯೇ ಆಗಿತ್ತೆನ್ನಬಹುದು; ಏಕೆಂದರೆ, ಇದರಲ್ಲಿ ತೊಡಗಿದ್ದ ಬ್ರಿಟಿಷ್ ದಳಗಳೆಂದರೆ ೧೩ನೆಯ (ಪಶ್ಚಿಮದ) ವಿಭಾಗ ಮತ್ತು ಭಾರತೀಯ ದಳಗಳಿಗೆ ನೇಮಕಗೊಂಡಿದ್ದ ಬ್ರಿಟಿಷ್ ತುಕಡಿಗಳಷ್ಟೆ.[43] ಈ ಚಳುವಳಿಯಲ್ಲಿ ೧೧,೦೧೨ ಮಡಿದರು, ೩,೯೮೫ ಜನರು ಗಾಯದಿಂದ ಸತ್ತರು, ೧೨,೬೭೮ ಜನರು ರೋಗದಿಂದ ಸತ್ತರು, ೧೩,೪೯೨ ಜನರು ಕಾಣೆಯಾದರು ಅಥವಾ ಸೆರೆಹಿಡಿಯಲ್ಪಟ್ಟರು (ಕಟ್ ನ ೯,೦೦೦ ಸೆರೆಯಾಳುಗಳೂ ಸೇರಿದಂತೆ), ಹಾಗೂ ೫೧,೮೩೬ ಜನರು ಗಾಯಗೊಂಡರು.[46]
ಭಾರತೀಯ ದಂಡಯಾತ್ರಾ ಪಡೆ Eಯಲ್ಲಿ ೧೯೧೮ರಲ್ಲಿ ಫ್ರ್ಯಾನ್ಸ್ ನಿಂದ ವರ್ಗವಾದ ಎರಡು ಭಾರತೀಯ ಅಶ್ವಪಡೆಯ ವಿಭಾಗಗಳು (೪ನೆಯ ಅಶ್ವಪಡೆಯ ವಿಭಾಗ ಮತ್ತು ೫ನೆಯ ಅಶ್ವಪಡೆಯ ವಿಭಾಗ)ಇದ್ದವು ಹಾಗೂ ಈ ಪಡೆಯನ್ನು ಪ್ಯಾಲೆಸ್ಟೈನ್ ನಲ್ಲಿ ಸೇವೆಗಾಗಿ ಬಳಸಿಕೊಳ್ಳಲಾಯಿತು. ಈ ಪಡೆಯೊಂದಿಗೆ ಸಾಮ್ರಾಜ್ಯ ಸೇವಾ ಪದಾತಿ ದಳವೂ ಸೇರಿತು; ಈ ದಳವು ಮೂರು ರಾಜರಾಳ್ವಿಕೆಯಲ್ಲಿದ್ದ ರಾಜ್ಯಗಳಾದ ಮೈಸೂರು, ಹೈದರಾಬಾದ್ ಮತ್ತು ಜೋಧ್ ಪುರ್ ಗಳ ಲ್ಯಾನ್ಸರ್ ರೆಜಿಮೆಂಟುಗಳಿಂದ ಕೂಡಿದುದಾಗಿತ್ತು .[29] ೩ನೆಯ (ಲಾಹೋರ್) ವಿಭಾಗ, ಮತ್ತು ೭ನೆಯ (ಮೀರತ್) ವಿಭಾಗಗಳನ್ನು ಮೆಸೊಪೊಟೋಮಿಯಾಗೆ ವರ್ಗಾಯಿಸಲಾಯಿತು.[47] ಅದೇ ವೇಳೆಗೆ ೩೬ ಭಾರತೀಯ ಸೇನಾ ತುಕಡಿಗಳನ್ನು ಬ್ರಿಟಿಷ್ ಸೇನೆಯ ಬಲವರ್ಧನೆಗಾಗಿ ಈ ವಿಭಾಗಗಳಿಗೆ ಕಳುಹಿಸಲಾಯಿತು: ೧೦ನೆಯ (ಐರಿಷ್) ವಿಭಾಗ, ೫೩ನೆಯ ವಿಭಾಗ, ೬೦ನೆಯ ವಿಭಾಗ ಮತ್ತು ೭೫ನೆಯ ವಿಭಾಗಗಳು; ಈ ಎಲ್ಲಾ ವಿಭಾಗಗಳು ಭಾರತೀಯ ವಿಭಾಗೀಯ ಮಾದರಿಯಲ್ಲೇ ರಚಿಸಲಾಗಿದ್ದು ಒಬ್ಬ ಬ್ರಿಟಿಷ್ ಮತ್ತು ಮೂವರು ಭಾರತೀಯ ತುಕಡಿಗಳು ಪ್ರತಿ ದಂಡಿನಲ್ಲಿದ್ದವು.[47]
ಭಾರತೀಯ ದಂಡಯಾತ್ರಾ ಪಡೆ F ೧೦ನೆಯ ಭಾರತೀಯ ವಿಭಾಗ ಮತ್ತು ೧೧ನೆಯ ಭಾರತೀಯ ವಿಭಾಗಗಳನ್ನು ಹೊಂದಿದ್ದು, ಈ ಎರಡೂ ವಿಭಾಗಗಳು ಈಜಿಪ್ಟ್ ನಲ್ಲಿ ೧೯೧೪ರಲ್ಲಿ ರಚಿತವಾಗಿದ್ದು, ಸೂಯಝ್ ಕಾಲುವೆಯನ್ನು ಕಾಯುವುದಕ್ಕಾಗಿ ಇವನ್ನು ನಿಯಮಿಸಲಾಗಿತ್ತು. ಈ ಪಡೆಗೆ ಸೇರಿದ ಇತರ ತುಕಡಿಗಳೆಂದರೆ ನಿಯಮಿತವಾದ ೮ನೆಯ ಲಕ್ನೋ ವಿಭಾಗದಿಂದ ಬ್ರಿಟಿಷ್ ದಂಡುಗಳ ರಹಿತವಾದ ೨೨ನೆಯ ಲಕ್ನೋ ಪದಾತಿ ದಳ ಮತ್ತು ಒಂದು ಸಾಮ್ರಾಜ್ಯ ಸೇವಾ ಅಶ್ವಪಡೆಯ ದಳ.[48]
೧೯೧೬ರಲ್ಲಿ ೧೦ನೆಯ ವಿಭಾಗವನ್ನು ವಿದಳಗೊಳಿಸಲಾಯಿತು ಮತ್ತು ಅದರ ತುಕಡಿಗಳನ್ನು ಬೇರೆ ಸೇನಾಂಗಗಳಿಗೆ ಸೇರಿಸಲಾಯಿತು.[29] ೨೮ನೆಯ ಸೇನಾದಳವನ್ನು ೭ನೆಯ (ಮೀರತ್) ವಿಭಾಗಕ್ಕೆ ೧೯೧೫ರಲ್ಲಿ ನಿಯಮಿಸಲಾಯಿತು, the ೨೯ನೆಯ ಸೇನಾದಳವು ಗಲ್ಲಿಪೊಲಿ ಚಳುವಳಿಯಲ್ಲಿ ಸ್ವತಂತ್ರವಾಗಿ ಸೇವೆ ಸಲ್ಲಿಸಿತು ಹಾಗೂ ಜೂನ್ ೧೯೧೭ರಲ್ಲಿ ವಿದಳಗಳಿಸಲಾಯಿತು. ೩೦ನೆಯ ಸೇನಾದಳವನ್ನು ಮೊದಲಿಗೆ ೧೨ನೆಯ ಭಾರತೀಯ ವಿಭಾಗಕ್ಕೆ ಏಪ್ರಿಲ್ ೧೯೧೫ರಲ್ಲಿ ಸೇರಿಸಲಾಯಿತು, ನಂತರ ಅದನ್ನು ೬ನೆಯ (ಪೂನಾ) ವಿಭಾಗಕ್ಕೆ ಸೆಪ್ಟೆಂಬರ್ ೧೯೧೫ರಲ್ಲಿ ವರ್ಗಾಯಿಸಲಾಯಿತು.[49]
೧೧ನೆಯ ವಿಭಾಗವನ್ನು ೧೯೧೫ರಲ್ಲಿಯೇ, ಈ ಮುನ್ನವೇ, ವಿದಳಗೊಳಿಸಲಾಗಿತ್ತು, ಆದರೆ ಅದರ ಸೇನಾಂಗಗಳು ಹೆಚ್ಚು ದಿನ ಸೇವೆ ಸಲ್ಲಿಸಲಿಲ್ಲ.[29] ೩೧st ದಳವು ಜನವರಿ ೧೯೧೬ರಲ್ಲಿ ೧೦ನೆಯ ವಿಭಾಗಕ್ಕೆ ಸೇರ್ಪಡೆಯಾಯಿತು, ಆದರೆ ಒಂದು ತಿಂಗಳ ನಂತರ ವಿಚ್ಛಿನ್ನಗೊಳಿಸಲಾಯಿತು. ೩೨ನೆಯ ದಳವನ್ನು ಜನವರಿ ೧೯೧೬ರಲ್ಲಿ ವಿದಳಗೊಳಿಸಲಾಯಿತು. ೩೩ನೆಯ ದಳವನ್ನು ೧೯೧೫ರ ಆಗಸ್ಟ್ ನಲ್ಲಿ ಪರ್ಷಿಯಾದ ಬುಷೈರ್ ಗೆ ಕಳುಹಿಸಲಾಯಿತು ಹಾಗೂ ನಂತರ ೧೯೧೫ರ ಡಿಸೆಂಬರ್ ನಲ್ಲಿ ವಿಚ್ಛಿನ್ನಗೊಳಿಸಲಾಯಿತು.[49]
ಏಪ್ರಿಲ್ ೧೯೧೫ರಲ್ಲಿ ಭಾರತೀಯ ದಂಡಯಾತ್ರಾ ಪಡೆ G ಯನ್ನು ಗಲ್ಲಿಪೊಲಿ ಚಳುವಳಿಯನ್ನು ಸಬಲಗೊಳಿಸಲು ಕಳುಹಿಸಲಾಯಿತು.[14] ಅದು ತನ್ನ ಜನಕವಿಭಾಗವಾದ ೧೦ನೆಯ ಭಾರತೀಯ ವಿಭಾಗದಿಂದ ದೂರದಲ್ಲಿ ಸೇವೆ ಸಲ್ಲಿಸಿದ ೨೯ನೆಯ ವಿಭಾಗವನ್ನು ಅದರ ಅಂಗವಾಗಿ ಹೊಂದಿತ್ತು.[29] ಗೂರ್ಖಾಗಳ ಮೂರು ತುಕಡಿಗಳು ಮತ್ತು ಒಂದು ಸಿಖ್ಖರ ತುಕಡಿಯನ್ನು ಹೊಂದಿದ್ದು,[50] ಈ ದಳವನ್ನು ಈಜಿಪ್ಟ್ ನಿಂದ ಕಳುಹಿಸಲಾಯಿತು ಮತ್ತು ಹಿಂದಿನ ಸಮರಗಳಲ್ಲಿ ನಶಿಸಿಹೋಗಿದ್ದ ಬ್ರಿಟಿಷ್ ೨೯ನೆಯ ವಿಭಾಗಕ್ಕೆ ಸೇರಿಸಲಾಯಿತು.[51] ಎರಡನೆಯ ಕ್ರಿಥಿಯ ಯುದ್ಧದ ಸಂದರ್ಭದಲ್ಲಿ ಕಾವಲುಪಡೆಯಾಗಿ ಇರಿಸಲ್ಪಟ್ಟಿದ್ದ ಈ ದಳವು ಮೂರನೆಯ ಕ್ರಿಥಿಯ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಎಡಭಾಗದಲ್ಲಿ ಮುನ್ನಡೆ ಸಾಧಿಸುತ್ತಿದ್ದ ಈ ದಳವನ್ನು ಬಹಳ ಬೇಗ ತಡೆಹಿಡಿಯಲಾಯಿತು; ಏಜಿಯನ್ ತೀರ ದಲ್ಲಿ ಮಾತ್ರ ೧/೬ನೆಯ ಗೂರ್ಖಾ ರೈಫಲ್ಸ್ ಪಡೆ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಗಲ್ಲಿ ಕಂದಕದ ನೆಲದ ಮೇಲೆ ಮುಂದಕ್ಕೆ ಸಾಗುತ್ತಿದ್ದ ೧೪ನೆಯ ಫೆರೋಝ್ ಪುರ್ ಸಿಖ್ಖರ ದಂಡು ಸರಿಸುಮಾರು ನಾಶವೇ ಆಗಿಹೋಯಿತು; ೫೧೪ ಸೈನಿಕರ ಪೈಕಿ ೩೮೦ ಜನ ಮರಣ ಹೊಂದಿದರು ಹಾಗೂ ಆ ದಳದ ೮೦% ಅಧಿಕಾರಿಗಳು ಹತರಾದರು. ಈ ದಳವು ನಂತರ ಗಲ್ಲಿ ಕಂದಕ ಸಮರದಲ್ಲಿ ಪಾಲ್ಗೊಂಡಿತು ಹಾಗೂ ಇಲ್ಲಿ ೨/೧೦ನೆಯ ಗೂರ್ಖಾ ರೈಫಲ್ಸ್ ಪಡೆಯು ಅರ್ಧ ಮೈಲಿಯಷ್ಟು ಮುನ್ನಡೆ ಸಾಧಿಸಲು ಸಾಧ್ಯವಾಯಿತು. ತದನಂತರ ಈ ಪಡೆಯು ಸಾರಿ ಬಾಯ್ರ್ ಸಮರದಲ್ಲಿ ಭಾಗವಹಿಸಿತು; ನೌಕಾಪಡೆಯ ಬಾಂಬ್ ಧಾಳಿಯ ರಕ್ಷೆಯಲ್ಲಿ, ೧/೬ನೆಯ ಗೂರ್ಖಾ ರೈಫಲ್ಸ್ ದಳವು ಆ ಬೆಟ್ಟವನ್ನು ಆಕ್ರಮಿಸಿ, ವಶಪಡಿಸಿಕೊಂಡಿತು; ತದನಂತರ ಆ ಬೆಟ್ಟದ ಮೇಲೆ ರಾಯಲ್ ನೌಕಾಪಡೆಯು ಷೆಲ್ ದಾಳಿ ನಡೆಸಿತು. ಅವರ ಸಾವುನೋವುಗಳು ಹೆಚ್ಚಿ, ದಳದ ನೇತೃತ್ವವನ್ನು ಸೇನಾಂಗದ ವೈದ್ಯಕೀಯ ಅಧಿಕಾರಿಗಳು ವಹಿಸಿಕೊಳ್ಳಬೇಕಾದ ಸಂದರ್ಭ ಬಂದೊದಗಿದಾಗ ದಳವು ಹೊರಟ ಜಾಗಕ್ಕೇ ಹಿಂದಿರುಗುವುದು ಅನಿವಾರ್ಯವಾಯಿತು.[52] ಸಾರಿ ಬಾಯ್ರ್ ನ ಆಕ್ರಮಣವು ವಿಫಲವಾದನಂತರ ಈ ದಳವನ್ನು ಈಜಿಪ್ಟ್ ಗೆ ವಾಪಸ್ ಕರೆದುಕೊಳ್ಳಲಾಯಿತು. ಈ ಸಮರದ ಅವಧಿಯಲ್ಲಿ ೨೯ನೆಯ ದಳದ ೧,೩೫೮ ಸೈನಿಕರು ಮಡಿದರು ಮತ್ತು ೩,೪೨೧ ಜನರು ಗಾಯಗೊಂಡರು.[53]
ಚೀನಾದ ಟಿಯಾಂಜಿನ್ ಶಹರದ ಕಾವಲುಸೇನೆಯ ಅಂಗವಾಗಿದ್ದ ಒಂದು ಭಾರತೀಯ ಸೇನೆಯ ಅಂಗವಾದ ೩೬ನೆಯ ಸಿಖ್ಖರ ದಳವು ತ್ಸಿಂಗ್ ತಾವ್ ನ ಮುತ್ತಿಗೆಯಲ್ಲಿ ಪಾಲ್ಗೊಂಡಿತು. ತ್ಸಿಂಗ್ ತಾವ್ ಜರ್ಮನ್ನರ ಹತೋಟಿಯಲ್ಲಿದ್ದ ಚೀನಾದ ಬಂದರಾಗಿತ್ತು.[54] ಬ್ರಿಟಿಷ್ ಸರ್ಕಾರ ಮತ್ತು ಇತರ ಸಹ ಯೂರೋಪಿಯನ್ ದೇಶಗಳು ಈ ಪ್ರದೇಶದ ಬಗ್ಗೆ ಜಪಾನೀಯರಿಗಿದ್ದ ಗುರಿ ಮತ್ತು ಉದ್ದೇಶಗಳ ಬಗ್ಗೆ ಆತಂಕಗೊಂಡಿದ್ದವು; ಆದ್ದರಿಂ ಒಂದು ಚಿಕ್ಕ ಲಾಂಛನಾತ್ಮಕವಾದ ಬ್ರಿಟಿಷ್ ಸೇನೆಯನ್ನು ಟಿಯಾಂಜಿನ್ ನಿಂದ ಅಲ್ಲಿಗೆ ಕಳುಹಿಸುವುದರ ಮೂಲಕ ತಮ್ಮ ಆತಂಕವನ್ನು ಹೋಗಲಾಡಿಸಿಕೊಳ್ಳಲು ತೀರ್ಮಾನಿಸಲಾಯಿತು. ೧,೫೦೦ ಸೈನಿಕರಿದ್ದ ಈ ತುಕಡಿಯನ್ನು ಬ್ರಿಗೇಡಿಯರ್-ಜನರಲ್ ನಥಾನಿಯಲ್ ವಾಲ್ಟರ್ ಬರ್ನಾರ್ಡಿಸ್ಟನ್ ರ ನೇತೃತ್ವದಲ್ಲಿ ನಡೆಸಲಾಗಿದ್ದು, ಅದರಲ್ಲಿ ೧,೦೦೦ ೨ನೆಯ ಸೌತ್ ವೇಲ್ಸ್ ಬಾರ್ಡರರ್ಸ್ ಸೇನಾದಳಕ್ಕೆ ಸೇರಿದ ಸೈನಿಕರು ಇದ್ದರು ಮತ್ತು ನಂತರದಲ್ಲಿ ಇವರನ್ನು ೩೬ನೆಯ ಸಿಖ್ ದಳಸ ೫೦೦ ಸೈನಿಕರು ಜೊತೆಗೂಡಿದರು.[54] ಜಪಾನೀ ನೇತೃತ್ವದ ಪಡೆಯು ಬಂದರಿಗೆ ೧೯೧೪ರ ಅಕ್ಟೋಬರ್ ೩೧ರಿಂದ ನವೆಂಬರ್ ೭ರವರೆಗೆ ಮುತ್ತಿಗೆ ಹಾಕಿತು.[14][54] ಮುತ್ತಿಗೆ ಕೊನೆಗೊಂಡಾಗ ಜಪಾನೀ ಸೇನೆಯ ೨೩೬ ಸೈನಿಕರು ಹತರಾಗಿ ೧,೨೮೨ ಸೈನಿಕರು ಗಾಯಗೊಂಡಿದ್ದರು; ಬ್ರಿಟಿಷ್/ಭಾರತೀಯ ಸೇನೆಯ ೧೨ ಸೈನಿಕರು ಹತರಾಗಿ ೫೩ ಸೈನಿಕರು ಗಾಯಗೊಂಡಿದ್ದರು. ಜರ್ಮನ್ ಸೇನೆಯ ೧೯೯ ಸೈನಿಕರು ಹತರಾಗಿ ೫೦೪ ಸೈನಿಕರು ಗಾಯಗೊಂಡಿದ್ದರುd.[55]
೧೯೧೫ರ ಸಿಂಗಪುರ ದಂಗೆಯು ೫ನೆಯ ಹಗುರ ಪದಾತಿ ದಳದ ೮೫೦ ಸಿಪಾಯಿಗಳು ಸಿಂಗಪುರದಲ್ಲಿ ಯುದ್ಧಕಾಲದಲ್ಲಿ ಬ್ರಿಟಿಷರ ವಿರುದ್ಧ ಹೂಡಿದ್ದ ದಂಗೆಯಾಗಿದ್ದು, ಇದು ೧೯೧೫ರ ಗದ್ದರ್ ಪಿತೂರಿಯ ಒಂದು ಅಂಗವಾಗಿತ್ತು. ೫ನೆಯ ಹಗುರ ಪದಾತಿ ದಳವು ಸಿಂಗಪುಕ್ಕೆ ಮದ್ರಾಸ್ ನಿಂದ ಅಕ್ಟೋಬರ್ ೧೯೧೪ರಲ್ಲಿ ಬಂದು ಸೇರಿದ್ದಿತು. ಈ ಸಿಪಾಯಿಗಳನ್ನು ಫ್ರ್ಯಾನ್ಸ್ ಗೆ ಕಳುಹಿಸಲ್ಪಟ್ಟ ಯಾರ್ಕ್ ಷೈರ್ ಹಗುರ ಪದಾತಿದಳದ ಸ್ಥಾನವನ್ನು ತುಂಬಲು ಕಳುಹಿಸಲಾಗಿತ್ತು.[56] ೫ನೆಯ ಹಗುರ ಪದಾತಿದಳವು ಪ್ರಮುಖವಾಗಿ ಪಂಜಾಬಿ ಮುಸ್ಲಿಮ್ಮರನ್ನೇ ತನ್ನ ದಳಕ್ಕೆ ಆಯ್ದುಕೊಳ್ಳುತ್ತಿತ್ತು. ಕಳಪೆ ಸಂವಹನ, ಅಶಿಸ್ತು ಮತ್ತು ದುರ್ಬಲ ನಾಯಕತ್ವಗಳ ಕಾರಣಗಳಿಂದ ಅವರ ಉತ್ಸಾಹವು ಯಾವಾಗಲೂ ತಗ್ಗಿಯೇ ಇರುತ್ತಿದ್ದಿತು.[57] ಈ ರೆಜಿಮೆಂಟನ್ನು ಜರ್ಮನ್ ಹಡಗಾದ SMS ಎಂಡೆನ್ ನ ಸೆರೆಯಾಳುಗಳನ್ನು ಕಾಯಲು ನಿಯಮಿಸಲಾಗಿತ್ತು.[57] ಅವರು ಫೆಬ್ರವರಿ ೧೬, ೧೯೧೫ರ ವೇಳೆಗೆ ಹಾಂಗ್ ಕಾಂಗ್ ಗೆ ತೆರಳುವ ನಿರೀಕ್ಷೆ ಹೊಂದಿದ್ದರು; ಆದರೆ ಅವರು ಆಟೋಮಾನ್ ಸಾಮ್ರಾಜ್ಯದ ಸಹ ಮುಸ್ಲಿಮರ ವಿರುದ್ಧ ಯುದ್ಧ ಮಾಡಲು ಹೊರಡಬೇಕಾಗುತ್ತದೆ ಎಂಬ ವದಂತಿಗಳು ಹರಡಲಾರಂಭಿಸಿದವು.[57] ಜರ್ಮನ್ ಸೆರೆಯಾಳು ಒಬರ್ಲೆಫ್ಟಿನೆಂಟ್ ಲಾಟರ್ ಬಾಷ್ ಈ ವದಂತಿಗಳಿಗೆ ಮತ್ತಷ್ಟು ಬಣ್ಣ ಹಚ್ಚಿ, ಅವನ್ನು ಹರಡತೊಡಗಿದರು ಮತ್ತು ಸೇನೆಯು ಬ್ರಿಟಿಷ್ ಕಮ್ಯಾಂಡರ್ ಗಳ ವಿರುದ್ಧ ದಂಗೆ ಏಳುವುದಕ್ಕೆ ಪ್ರೋತ್ಸಾಹಿಸಿದರು.[57] ಸಿಪಾಯಿ ಇಸ್ಮೈಲ್ ಖಾನ್ ಓಂದು ಗುಂಡನ್ನು ಹಾರಿಸುವುದರ ಮೂಲಕ ದಂಗೆಯ ಆರಂಭವನ್ನು ಸೂಚಿಸಿದರು. ತಾಂಗ್ಲಿನ್ ಸೇನಾಗೃಹಗಳಲ್ಲಿದ್ದ ಅಧಿಕಾರಿಗಳನ್ನು ಕೊಚ್ಚಿಹಾಕಲಾಯಿತು ಹಾಗೂ ಸುಮಾರು ೮೦೦ ದಂಗೆಕೋರರು ರಸ್ತೆಗಿಳಿದು ಸಿಕ್ಕ ಸಿಕ್ಕ ಯೂರೋಪಿಯನ್ನರನ್ನು ಕೊಚ್ಚಿಹಾಕಿದರು. ಈ ದಂಗೆಯು ಹತ್ತು ದಿನಗಳ ಕಾಲ ನಡೆಯಿತು ಹಾಗೂ ಇದನ್ನು ಹತ್ತಿಕ್ಕಬೇಕಾದರೆ ಸಿಂಗಪುರ ಸ್ವಯಂಸೇವಕರ ಫಿರಂಗಿದಳದ ಸೈನಿಕರು, ಹೆಚ್ಚುವರಿ ಬ್ರಿಟಿಷ್ ಘಟಕಗಳು, ಜೊಹೋರ್ ನ ಸುಲ್ತಾನರ ಸಹಾಯ ಹಾಗೂ ಇತರ ಮಿತ್ರಸೇನೆಗಳ ಸಹಾಯ ಪಡೆಯಬೇಕಾಯಿತು.[57] ನಂತರದ ದಿನಗಳಲ್ಲಿ ಒಟ್ಟಾರೆ ೩೬ ದಂಗೆಕೋರರನ್ನು ಹತ್ಯೆ ಮಾಡಲಾಯಿತು ಮತ್ತು ೭೭ ಅಧಿಕಾರಿಗಳನ್ನು ಗಡೀಪಾರು ಮಾಡಲಾಯಿತು ಹಾಗೂ ೧೨ ದಂಗೆಕೋರರನ್ನು ಸೆರೆಮನೆಗೆ ತಳ್ಳಲಾಯಿತು.[57]
೧೯೧೧ರವರೆಗೆ ಭಾರತೀಯ ಸೈನಿಕರು ವಿಕ್ಟೋರಿಯಾ ಕ್ರಾಸ್ ಪದಕವನ್ನು ಪಡೆಯಲು ಅನರ್ಹರೆಂದು ಪರಿಗಣಿಸಲಾಗಿತ್ತು; ಬದಲಾಗಿ ಅವರು ಇಂಡಿಯನ್ ಆರ್ಡರ್ ಮೆರಿಟ್ ಎಂಬ ಹಳೆಯ ಗೌರವರೀತಿಯನ್ನು ಪಡೆಯುತ್ತಿದ್ದು. ಈ ಗೌರವವನ್ನು ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆ ಆರಂಭಿಸಿದ ಮೊದಲ ದಿನಗಳಲ್ಲಿ ಸ್ಫಾಪಿಸಲ್ಪಟ್ಟಿತ್ತು. ಯಾವುದೇ ಸಮರದಲ್ಲಿ ವಿಕ್ಟೋರಿಯಾ ಕ್ರಾಸ್(VC) ಪಡೆಯುವ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕನ್ನಾಟ್ ನ ಓನ್ ಬಲೂಚೀಗಳ ೧೨೯ನೆಯ ಡ್ಯೂಕ್ ಆದ ಖುದಾದಾದ್ ಖಾನ್ ಭಾಜನರಾದರು .[58] ೩೧ನೆಯ ಅಕ್ಟೋಬರ್ ೧೯೧೪ರಂದು ಬೆಲ್ಜಿಯಂನ ಹೊಲ್ಲೆಬೆಕೆಯಲ್ಲಿ ಆ ತುಕಡಿಯ ಮುಖಂಡತ್ವ ವಹಿಸಿದ್ದ ಬ್ರಿಟಿಷ್ ಅಧಿಕಾರಿಯು ಗಾಯಗೊಂಡಾಗ ಹಾಗೂ ಮತ್ತೊಂದು ಗನ್ ತುಪಾಕಿಯ ಹೊಡೆತಕ್ಕೆ ಸಿಕ್ಕಿ ನಿಷ್ಕ್ರಿಯಗೊಂಡಾಗ, ಸಿಪಾಯಿ ಖುದಾದಾದ್, ಸ್ವಯಂ ಗಾಯಗೊಂಡಿದ್ದರೂ ಆ ಗನ್ ತುಕಡಿಯಲ್ಲಿದ್ದ ಇನ್ನೂ ಐವರು ಹತರಾಗುವವರೆಗೆ ತಮ್ಮ ಗನ್ ನಿಂದ ಗುಂಡು ಹಾರಿಸುತ್ತಲೇ ಇದ್ದರು.[59]
ಮೊದಲನೆಯ ಮಹಾಯುದ್ಧ ದಲ್ಲಿ ವಿಕ್ಟೋರಿಯಾ ಕ್ರಾಸ್ ಅನ್ನು ಪಡೆದ ಭಾರತೀಯ ಸೇನೆಯ ಇತರ ಸದಸ್ಯರೆಂದರೆ:
೧೯೧೯ರಲ್ಲಿ ಭಾರತೀಯ ಸೇನೆಯು ೪೯೧,೦೦೦ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅವಕಾಶವಿತ್ತು, ಆದರೆ ಸೇನೆಯಲ್ಲಿ ಅನುಭವಿ ಅಧಿಕಾರಿಗಳ ಕೊರತೆ ಇತ್ತು, ಬಹುತೇಕ ಅಧಿಕಾರಿಗಳು ಯುದ್ಧದಲ್ಲಿ ಮಡಿದಿದ್ದರು ಅಥವಾ ಗಾಯಗೊಂಡಿದ್ದರು.[72] ೧೯೨೧ರಲ್ಲಿ ಭಾರತ ಸರ್ಕಾರವು ವಾಯುವ್ಯ ಗಡಿ ಪ್ರಾಂತ್ಯದ ರಕ್ಷಣೆ ಮತ್ತು ಆಂತರಿಕ ಭದ್ರತೆಗಳನ್ನು ಪ್ರಧಾನ ಗುರಿಯಾಗಿರಿಸಿಕೊಂಡು ತನ್ನ ಸೇನಾ ಅವಶ್ಯಕತೆಗಳನ್ನು ಪರಿಶೀಲಿಸಿಸಲಾರಂಭಿಸಿತು.[73] ೧೯೨೫ರ ಹೊತ್ತಿಗೆ ಭಾರತದ ಸೇನೆಯು ಸಂಖ್ಯೆಯು ಬಹಳವೇ ತಗ್ಗಿ ಕೇವಲ ೧೯೭,೦೦೦ ದಳಗಳಷ್ಟಿದ್ದು, ಅದರಲ್ಲಿ ೧೪೦,೦೦೦ ಜನ ಭಾರತೀಯರಿದ್ದರು.[74] ಆಗ ಕಾಲ್ದಳಗಳಿಗೆ ಮೂರು ಕಾರ್ಯಗಳಲ್ಲಿ ಒಂದನ್ನು ವಿಧಿಸಲಾಯಿತು: ಭೂಸೇನೆಯಲ್ಲಿ ನಾಲ್ಕು ಪದಾತಿ ವಿಧಾಗಗಳು ಮತ್ತು ಐದು ಅಶ್ವಪಡೆಯ ಸೇನಾದಳಗಳು; ರಕ್ಷಣಾ ಸೇನಾಪಡೆಯಲ್ಲಿ ಹನ್ನೆರಡು ಪದಾತಿ ದಳಗಳು ಮತ್ತು ಮುತ್ತಿಗೆಗೆ ಒಳಗಾದ ಸಂದರ್ಭದಲ್ಲಿ ಬೆಂಬಲಿಸುವ ಅಂಗವಾಗಿ ಒಂದು ಬೆಂಬಲ ಪಡೆ ಹಾಗೂ ಅದಕ್ಕೆ ಬೇಕಾದ ಶಸ್ತ್ರಗಳು; ಹಾಗೂ ಕಡೆಯದಾಗಿ ಆಂತರಿಕ ಭದ್ರತಾ ಪಡೆಗಳು, ೪೩ ಪದಾತಿ ದಳಗಳು ನಾಗರಿಕ ದಳದ ಪುಷ್ಟೀಕರಣಕ್ಕೆ ಹಾಗೂ ಅಗತ್ಯ ಬಿದ್ದಾಗ ಭೂಸೇನೆಗೆ ಬೆಂಬಲ ನೀಡಲು.[75] ಅಶ್ವದಳದ ಸಂಖ್ಯೆಯನ್ನು ೩೯ರಿಂದ ೨೧ಕ್ಕೆ ಇಳಿಸಲಾಯಿತು. ಪದಾತಿ ದಳಗಳನ್ನು ೨೦ ಬೃಹತ್ ದಳಗಳಾಗಿ ಪರಿವರ್ತಿಸಿ ಪ್ರತಿ ದಂಡಿನಲ್ಲೂ ನಾಲ್ಕು ಅಥವಾ ಐದು ತುಕಡಿಗಳು ಹಾಗೂ ಒಂದು ಹೆಚ್ಚುವರಿ ತರಬೇತಿ ತುಕಡಿ ಇರುವಂತೆ ವಿಂಗಡಿ, ಯಾವಾಗಲೂ ಹತ್ತನೆಯ ಸಂಖ್ಯೆಯಿಂದಲೇ ಗುರುತಿಸಿ, ಇದರೊಡನೆ ಹತ್ತು ಗೂರ್ಖಾ ಪಡೆಗಳನ್ನೂ ಸೇರಿಸಿಕೊಂಡಿತ್ತು.[76] ೧೯೨೨ರ ವೇಳೆಗೆ ಒಂಬತ್ತು ಒಂಟಿ ದಂಡಿನ ದಳಗಳನ್ನು ವಿದಳಗೊಳಿಸಲಾಯಿತು.[76] ಬೃಹತ್ ದಳಗಳ ಪೈಕಿ ಎರಡು ದಳಗಳನ್ನು ನಂತರ ವಿದಳಗೊಳಿಸಲಾಯಿತು, ೩ನೆಯ ಮದ್ರಾಸ್ ದಳವನ್ನು ವಿತ್ತಸಂಬಂಧಿತ ಕಾರಣಗಳಿಂದ, ಮತ್ತು ೨೦ನೆಯ ಬರ್ಮಾ ರೈಫಲ್ಸ್ ಅನ್ನು ಬರ್ಮಾ ಭಾರತ ಸರ್ಕಾರದ ಆಡಳಿತದಿಂದ ಹೊರತಾದ ದಿನದಿಂದ.[76]
ಮೊದಲನೆಯ ಮಹಾಯುದ್ಧ ಮುಗಿದರೂ ಭಾರತೀಯ ಸೇನೆಯು ಕಾದಾಡುವುದು ಮುಗಿಯಲಿಲ್ಲ; ಸೇನೆಯು ೧೯೧೯ರ ಮೂರನೆಯ ಆಫ್ಘನ್ ಯುದ್ಧದಲ್ಲಿ ಪಾತ್ರವಹಿಸಿ,[77] ನಂತರ ೧೯೧೯ರಿಂದ ೧೯೨೦ರವರೆಗೆ ಹಾಗೂ ಮತ್ತೆ ೧೯೨೦ರಿಂದ ೧೯೨೪ರವರೆಗೆ ವಝೀರಿಸ್ತಾನ್ ಚಳುವಳಿಯಲ್ಲಿ ಕಾದಾಡಿತು.[78] ೧೯೩೦–೧೯೩೧ರಲ್ಲಿ ಅಫ್ರೀಡೀಗಳ ವಿರುದ್ಧ ಕಾರ್ಯಾಚರಣೆ, ೧೯೩೩ರಲ್ಲಿ ಹಾಗೂ ಮತ್ತೆ ೧೯೩೫ರಲ್ಲಿ ಮಹಮಂದರ ವಿರುದ್ಧ ಹಾಗೂ ಕಡೆಯದಾಗಿ ಎರಡನೆಯ ಮಹಾಯುದ್ಧವು ಆರಂಭವಾಗುವುದಕ್ಕೆ ಕೊಂಚ ಮುನ್ನ ಮಗದೊಮ್ಮೆ ೧೯೩೬–೧೯೩೯ರಲ್ಲಿ ವಝೀರಿಸ್ತಾನ್ ನಲ್ಲಿ ಭಾರತೀಯ ಸೇನೆಯು ಕಾರ್ಯಾಚರಣೆಯಲ್ಲಿ ನಿರತವಾಗಿತ್ತು.[79]
೧೯೩೧ರಲ್ಲಿ ಮೊದಲನೆಯ ಮಹಾಯುದ್ಧ ದಲ್ಲಿ ಕಾದು ಮಡಿದ ಸ್ಮರಣಾರ್ಥವಾಗಿ ನವದೆಹಲಿಯಲ್ಲಿ ಇಂಡಿಯಾ ಗೇಟ್ಅನ್ನು ನಿರ್ಮಾಣ ಮಾಡಲಾಯಿತು.[80]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.