ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರ ಪಟ್ಟಿ
rabindranath tagore / From Wikipedia, the free encyclopedia
ನೊಬೆಲ್ ಪ್ರಶಸ್ತಿ ಎನ್ನುವುದು, ಆಲ್ಫ್ರೆಡ್ ನೊಬೆಲ್ ಅವರ ಕೊನೆಯ ಇಚ್ಛೆಯಂತೆ ಸ್ಥಾಪಿಸಲಾದ, "ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ವಿಜ್ಞಾನ ಕ್ಷೇತ್ರಗಳಲ್ಲಿ "ಮಾನವಕುಲಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದವರಿಗೆ" ನೀಡಲಾಗುವ ವಾರ್ಷಿಕ ಅಂತರರಾಷ್ಟ್ರೀಯ ಪ್ರಶಸ್ತಿಗಳ" ಒಂದು ಗುಂಪಾಗಿದೆ. ಪ್ರತಿಯೊಂದು ಪ್ರಶಸ್ತಿ ವಿಜೇತರಿಗೆ ಚಿನ್ನದ ಪದಕ, ಒಂದು ಡಿಪ್ಲೊಮಾ ಮತ್ತು ಹಣದ ಮೊತ್ತವನ್ನು ನೀಡಲಾಗುತ್ತದೆ. ಇದನ್ನು ನೊಬೆಲ್ ಪ್ರತಿಷ್ಠಾನವು ವಾರ್ಷಿಕವಾಗಿ ನಿರ್ಧರಿಸುತ್ತದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಮತ್ತು ಆಲ್ಫ್ರೆಡ್ ನೊಬೆಲ್ ಅವರ ಸ್ಮರಣೆಯಲ್ಲಿ ಆರ್ಥಿಕ ವಿಜ್ಞಾನದಲ್ಲಿ ಸ್ವೆರಿಜಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ; ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ನಲ್ಲಿನ ನೊಬೆಲ್ ಅಸೆಂಬ್ಲಿ ಶರೀರಶಾಸ್ತ್ರ ದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡುತ್ತದೆ; ಸ್ವೀಡಿಷ್ ಅಕಾಡೆಮಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ನೀಡುತ್ತದೆ; ಮತ್ತು ನಾರ್ವೇಜಿಯನ್ ನೊಬೆಲ್ ಸಮಿತಿಯು ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡುತ್ತದೆ.
೧೯೦೧ ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ೧೯೦೧ ರಿಂದ ೨೦೧೮ ರ ವರೆಗೆ ಒಟ್ಟು ೯೦೪ ವ್ಯಕ್ತಿಗಳಿಗೆ (೮೫೨ ಪುರುಷರು ಮತ್ತು ೫೨ ಮಹಿಳೆಯರು) ಮತ್ತು ೨೪ ಸಂಸ್ಥೆಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.ಪ್ರಶಸ್ತಿ ಪುರಸ್ಕೃತರಲ್ಲಿ ಒಟ್ಟು ೧೨ ಭಾರತೀಯರಾಗಿದ್ದಾರೆ (ಐದು ಭಾರತೀಯ ನಾಗರಿಕರು ಮತ್ತು ಏಳು ಭಾರತೀಯ ಮೂಲದವರಾಗಿದ್ದಾರೆ). ರವೀಂದ್ರನಾಥ ಟ್ಯಾಗೋರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಪ್ರಜೆಯಾಗಿದ್ದಾರೆ. ೧೯೧೩ ರಲ್ಲಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಯಿತು.ಮದರ್ ತೆರೇಸಾರವರು ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ. ವಿಶೇಷವೆಂದರೆ, ಭಾರತೀಯ ಕವಿ, ದಾರ್ಶನಿಕ, ರಾಷ್ಟ್ರೀಯವಾದಿ ಮತ್ತು ಅವಿಭಾಜ್ಯ ಯೋಗದ ಅಭಿವರ್ಧಕರಾದ ಶ್ರೀ ಅರಬಿಂದೋ ಅವರನ್ನು ೧೯೪೩ ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿ ಮತ್ತು ೧೯೫೦ ರಲ್ಲಿ ಶಾಂತಿ ನೊಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಗಿತ್ತು ಮತ್ತು ಎರಡೂ ಬಾರಿ ಪ್ರಶಸ್ತಿ ಪಡೆಯಲು ಅವರು ವಿಫಲರಾದರು.
ಡಿಸೆಂಬರ್ ೧, ೧೯೯೯ ರಂದು, ಮಹಾತ್ಮ ಗಾಂಧೀಜಿಯವರನ್ನು ಇದುವರೆಗೆ ಐದು ಬಾರಿ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ನಾರ್ವೇಯನ್ ನೊಬೆಲ್ ಸಮಿತಿ ದೃಢಪಡಿಸಿತು (೧೯೩೭ ರಿಂದ ೧೯೩೯ ರವರೆಗೆ, ೧೮೪೭ ರಲ್ಲಿ ಮತ್ತು ೧೯೪೮ ರ ಜನವರಿಯಲ್ಲಿ ಅವರನ್ನು ಹತ್ಯೆ ಮಾಡುವ ಕೆಲವು ದಿನಗಳ ಮೊದಲು). ೨೦೦೬ ರಲ್ಲಿ, ನಾರ್ವೇಯನ್ ನೊಬೆಲ್ ಸಮಿತಿಯ ಕಾರ್ಯದರ್ಶಿ ಗೀರ್ ಲುಂಡೆಸ್ಟಾಡ್ ಇದನ್ನು "ನಮ್ಮ ೧೦೬ ವರ್ಷಗಳ ಇತಿಹಾಸದಲ್ಲಿ ಅತ್ಯಂತ ದೊಡ್ಡ ಲೋಪ" ಎಂದು ಉಲ್ಲೇಖಿಸಿದ್ದಾರೆ.