ಕೊಂಕಣ
ಭಾರತದ ಒಂದು ಪ್ರದೇಶ / From Wikipedia, the free encyclopedia
ಕೊಂಕಣ ವನ್ನು ಕೊಂಕಣ ಕರಾವಳಿ ಅಥವಾ ಕರಾವಳಿ ಎಂದೂ ಸಹ ಕರೆಯಲಾಗುತ್ತದೆ, ಇದು ರಾಯಗಡದಿಂದ ಮಂಗಳೂರಿನವರೆಗೂ ಇರುವ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಲ್ಲುಬಂಡೆಗಳಿಂದ ಕೂಡಿದ ಭಾಗವಾಗಿದೆ.ಭಾರತದ ಪಶ್ಚಿಮತೀರದಲ್ಲಿ, ಮಹಾರಾಷ್ಟ್ರದ ಠಾಣೆ (ಥಾನಾ) ಕೊಲಾಬಾ ಮತ್ತು ರತ್ನಾಗಿರಿ ಜಿಲ್ಲೆಗಳನ್ನೂ ಗೋವವನ್ನೂ ಒಳಗೊಂಡ ಪ್ರದೇಶವನ್ನು ಸ್ಥೂಲವಾಗಿ ಕೊಂಕಣ ಎಂದು ಕರೆಯುವುದಿದೆ. ಪಶ್ಚಿಮಘಟ್ಟಗಳ ಪಶ್ಚಿಮಕ್ಕಿರುವ ಈ ತಗ್ಗುನೆಲವೆಲ್ಲ ಮೈದಾನವಲ್ಲ. ೩೦-೫೦ ಮೈ. ಅಗಲ ಮತ್ತು ೩೫೦ ಮೈ. ಉದ್ದ ಇರುವ ಈ ಪ್ರದೇಶದಲ್ಲಿ ನಡುನಡುವೆ ಬೆಟ್ಟಗಳು ಹಬ್ಬಿವೆ. ಉತ್ತರದಲ್ಲಿ ಕಡಲಕರೆಯ ಉದ್ದಕ್ಕೂ ಸಮತಲದ ಮೆಕ್ಕಲುಮಣ್ಣಿನ ಪಟ್ಟಿಯೊಂದುಂಟು. ಇದರ ಅಗಲ ೪-೮ ಮೈ. ಇದರ ಬದಿಯಲ್ಲಿ ಸಮಾಂತರವಾಗಿ ಹಬ್ಬಿರುವ ಅನೇಕ ಬೆಟ್ಟಗಳಿವೆ. ಇವುಗಳಲ್ಲಿ ಕೆಲವು ಶ್ರೇಣಿಗಳ ಎತ್ತರ ೧೫೦೦-೨೦೦೦. ಮುಂಬಯಿಗೆ ಉತ್ತರದಲ್ಲಿರುವ ಪ್ರದೇಶದ ನದಿಗಳಲ್ಲಿ ವೈತರಣಾ, ಉಲ್ಹಾಸ್ ಮತ್ತು ಅಂಬಾ ಮುಖ್ಯವಾದವು. ಇವು ಬೆಟ್ಟದಿಂದ ಮೈದಾನಕ್ಕೆ ಇಳಿದ ಮೇಲೆ ಸ್ವಲ್ಪ ದೂರ ಕಡಲಕರೆಗೆ ಹೆಚ್ಚುಕಡಿಮೆ ಸಮಾಂತರವಾಗಿ ಸಾಗಿ ಕೊನೆಗೆ ಓರೆಯಾಗಿ ಸಮುದ್ರ ಸೇರುತ್ತದೆ. ಉಲ್ಹಾಸ್ ಮತ್ತು ಅದರ ಉಪನದಿಗಳು ಅರ್ಧವೃತ್ತಾಕಾರವಾದ ಒಂದು ವಿಶಾಲ ಜಲರೇಖೆಯನ್ನೇ ಸೃಷ್ಟಿಸಿವೆ. ಮುಂಬಯಿಗೆ ದಕ್ಷಿಣದಲ್ಲಿರುವ ನದಿಗಳು ಸಾಮಾನ್ಯವಾಗಿ ಉತ್ತರದ ನದಿಗಳಿಗಿಂತ ಉದ್ದದಲ್ಲಿ ಕಡಿಮೆ. ಸಾವಿತ್ರಿ ಮತ್ತು ವಾಶಿಷ್ಟಿ ನದಿಗಳೂ ಉಲ್ಹಾಸ್ ನದಿಯ ಹಾಗೆ ಅರ್ಧವೃತ್ತಗಳನ್ನು ರಚಿಸಿವೆ. ಇಲ್ಲಿಯ ನದಿಗಳ ತಲೆಗಳ ಭಾಗದ ಪ್ರದೇಶ ಕ್ರಮವಾಗಿ ನಗ್ನೀಕೃತವಾಗುತ್ತಿದೆಯೆಂಬುದು ಸ್ಪಷ್ಟ. ಕೊಯ್ನಾ ನದಿಯ ಮೇಲ್ದಂಡೆಯ ಪ್ರದೇಶ ಇದಕ್ಕೆ ಒಂದು ನಿದರ್ಶನ. ದಕ್ಷಿಣ ರತ್ನಾಗಿರಿ ಪ್ರದೇಶದಲ್ಲೂ ಮೇಲ್ಮಣ್ಣಿನ ಮುಸುಕು ಕಳೆದುಕೊಂಡ ಲ್ಯಾಟೆರೈಟ್ ಶಿಲಾಟೊಪ್ಪಿಗೆಯ ಪ್ರದೇಶಗಳನ್ನು ಕಾಣಬಹುದು.[1] ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾದಂತೆ ಸಪ್ತ -ಕೊಂಕಣ ವು ಸ್ವಲ್ಪ ಮಟ್ಟಿಗೆ ದೊಡ್ಡ ಪ್ರದೇಶವಾಗಿದೆ. ಕೊಂಕಣ ವಿಭಾಗವು, ಮಹಾರಾಷ್ಟ್ರ ರಾಜ್ಯದ ಆರು ಆಡಳಿತಾತ್ಮಕ ಉಪವಿಭಾಗಗಳಲ್ಲಿ ಒಂದಾಗಿರುವುದರ ಜೊತೆಗೆ ಅದರ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿದೆ. ಕೊಂಕಣದ ನಿವಾಸಿಗಳು ಹಾಗು ಅವರ ಸಂತತಿಯವರನ್ನು ಕೊಂಕಣಿಗಳು ಎಂದು ಕರೆಯಲಾಗುತ್ತದೆ. ಈ ಹೆಸರು ನಿರ್ದಿಷ್ಟವಾಗಿ ಕೊಂಕಣಿ ಜನರಿಗೂ ಸಹ ಸೂಚಿತವಾಗಬಹುದು, ಇವರು ಈ ಪ್ರದೇಶದ ಜನಾಂಗೀಯ ಗುಂಪು; ಇವರಲ್ಲಿ ಬಹುತೇಕರು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಕೊಂಕಣಿಗರಲ್ಲದೆ ಈ ಪ್ರದೇಶದಲ್ಲಿರುವ ಇತರ ಪ್ರಮುಖ ಜನಾಂಗೀಯ ಗುಂಪೆಂದರೆ ತುಳುವರು, ಇವರು ಬಹುತೇಕವಾಗಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಾರೆ.[2]