From Wikipedia, the free encyclopedia
ಸುವಿಖ್ಯಾತನಾದ ಎರಡನೇ ಚಂದ್ರಗುಪ್ತನು (ಇವನನ್ನು ವಿಕ್ರಮಾದಿತ್ಯ ಅಥವಾ ಚಂದ್ರಗುಪ್ತ ವಿಕ್ರಮಾದಿತ್ಯ ಎಂದು ಕರೆಯುತ್ತಾರೆ) ಗುಪ್ತ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಚಕ್ರವರ್ತಿ ಗಳಲ್ಲಿ ಒಬ್ಬನು . ಇವನು ಕ್ರಿಶ್ತಶಕ ೩೭೫ ರಿಂದ ೪೧೩ ಅಥವಾ ೪೧೫ ರವರೆಗೆ ರಾಜ್ಯಭಾರ ಮಾಡಿದನು. ಈ ಅವಧಿಯಲ್ಲಿ ಗುಪ್ತ ಸಾಮ್ರಾಜ್ಯದ ವೈಭವವು ಅತ್ಯಂತ ಎತ್ತರದ ಮಟ್ಟ ಮುಟ್ಟಿತ್ತು. ಈ ಅವಧಿಯನ್ನು ಭಾರತದ ಸುವರ್ಣಯುಗ ಎಂದು ಕರೆಯುತ್ತಾರೆ. ಇವನು ಇವನಿಗಿಂತ ಮೊದಲು ರಾಜ್ಯವಾಳಿದ ಸಮುದ್ರಗುಪ್ತನ ಮಗನು. ಇವನು ಆಕ್ರಮಣ ಕಾರಿ ರಾಜ್ಯವಿಸ್ತರಣಾ ನೀತಿ ಮತ್ತು ಅನುಕೂಲಕರ ವಿವಾಹ ಸಂಬಂಧಗಳನ್ನು ಬೆಳೆಸುವ ಮೂಲಕ ಯಶಸ್ಸನ್ನು ಸಾಧಿಸಿದನು. ಇದರಲ್ಲಿ ಇವನಿಗೆ ತಂದೆ ಮತ್ತು ಅಜ್ಜ ಮಾದರಿ ಯಾಗಿದ್ದರು.
ಈತನ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚು ತಿಳಿದಿಲ್ಲ. ತಾಯಿ ದತ್ತದೇವಿ ಸಮುದ್ರಗುಪ್ತನ ಪಟ್ಟದ ರಾಣಿಯಾಗಿದ್ದಳು. ಸಮುದ್ರಗುಪ್ತನ ಮರಣದ ಬಳಿಕ ,ಚಂದ್ರಗುಪ್ತನ ಸೋದರ ರಾಮ ಗುಪ್ತನು ಸಿಂಹಾಸನವನ್ನೇರಿ ಚಂದ್ರಗುಪನ ವಧು ಧ್ರುವಸ್ವಾಮಿನಿಯನ್ನು ಬಲವಂತದಿಂದ ಮದುವೆಯಾದನು. ವಿಶಾಖದತ್ತನ ನಾಟಕ ದೇವಿ-ಚಂದ್ರಗುಪ್ತಂ ಆಧರಿಸಿ ಈ ಬಗೆ ಗಿನ ವಿವರಗಳನ್ನು ಬಹುತೇಕ ಒಪ್ಪಲಾಗಿದೆ. ಈ ನಾಟಕವು ಕಳೆದು ಹೋಗಿದ್ದು ಕೆಲವು ಭಾಗಗಳು ಬೇರೆ ಕೃತಿಗಳಲ್ಲಿ ಲಭ್ಯವಾಗಿವೆ.
ಇದೇ ತರಹದ ಕಥೆಯನ್ನು ವಿಕ್ರಮಾದಿತ್ಯ ಶಬ್ದದ ಅಪಭ್ರಂಶವನ್ನು ರಾಜನ ಹೆಸರಾಗಿ ಉಳ್ಳ ಅರೇಬಿಕ್ ಕೃತಿಯೂ ಒಂದಿದೆ. ವಿಕ್ರಮಾದಿತ್ಯನ ಹೆಸರು ಭಾರತದಲ್ಲಿ ದಂತಕಥೆ ಆಗಿದೆ. ಇಲ್ಲಿಯ ಜನಪ್ರಿಯ ಪಂಚಾಂಗವು ಚಾಂದ್ರಮಾನ ಪಂಚಾಂಗವಾಗಿದ್ದು ಈ ವಿಕ್ರಮನ ಹೆಸರಲ್ಲಿ ಇದೆ. ಭಾರತದ ಶ್ರೇಷ್ಠ ಕವಿ ಕಾಳಿದಾಸನು ಇವನ ಆಸ್ಥಾನದಲ್ಲಿ ಇದ್ದನು ಎಂದು ನಂಬಲಾಗಿದೆ.
ನಾಟ್ಯದರ್ಪಣದ ಒಂದು ಭಾಗವು ಚಂದ್ರಗುಪ್ತನ ಅಣ್ಣ ರಾಮಗುಪ್ತನು ಧ್ರುವಸ್ವಾಮಿನಿಯನ್ನು ಶಕ ರಾಜ ಮೂರನೇ ರುದ್ರಸಿಂಹನಿಂದ ಸೋತು ಅವನಿಗೆ ಒಪ್ಪಿಸಿದ್ದನ್ನು ಉಲ್ಲೇಖಿಸುತ್ತದೆ. ಕಳಂಕವನ್ನು ತೊಡೆದುಹಾಕಲು ಗುಪ್ತರು ಮಾಧವಸೇನ ಎಂಬ ಚಂದ್ರಗುಪ್ತನ ಆಪ್ತ ಹಾಗೂ ಆಸ್ಥಾನಿಕನನ್ನು ರಾಣಿಯ ವೇಷದಲ್ಲಿ ಕಳಿಸಲು ತೀರ್ಮಾನಿಸಿದರು. ಚಂದ್ರಗುಪ್ತನು ಯೋಜನೆಯನ್ನು ಬದಲಿಸಿ ತಾನೇ ರಾಣಿಯ ವೇಷದಲ್ಲಿ ಶಕರಾಜ ರುದ್ರಸಿಂಹನ ಬಳಿಗೆ ಹೋಗಿ ಅವನನ್ನು, ನಂತರ ಸೋದರ ರಾಮಗುಪ್ತನನ್ನು ಕೊಂದನು. ಧ್ರುವ ಸ್ವಾಮಿನಿಯು ನಂತರ ಚಂದ್ರಗುಪ್ತನನ್ನು ಮದುವೆಯಾದಳು.
ಈ ಘಟನೆಗಳನ್ನು ಚಿತ್ರಿಸುವಾಗ ವಿಶಾಖದತ್ತನು ಎಷ್ಟು ಸ್ವಾತಂತ್ರ್ಯ ವಹಿಸಿದನು ಎಂಬುದು ನಮಗೆ ಗೊತ್ತಿಲ್ಲ. ಆದರೆ ಧ್ರುವಸ್ವಾಮಿನಿ ರಾಜನ ಪಟ್ಟ ಮಹಿಷಿ ಇದ್ದ ಬಗ್ಗೆ ಮತ್ತು , ಮಹಾದೇವಿ ಧ್ರುವದೇವಿ ಎಂಬ ಉಲ್ಲೇಖಗಳು ಶಾಸನಗಳಲ್ಲಿ , ಮುದ್ರೆಗಳಲ್ಲಿ ನಮಗೆ ಸಿಕ್ಕಿವೆ. ರಾಮಗುಪ್ತನ ಹೆಸರೂ ಕೆಲವು ಶಾಸನಗಳಲ್ಲಿ ಮತ್ತು ನಾಣ್ಯಗಳಲ್ಲಿ ಇವೆ.
ಕುಬೇರನಾಗ ಎಂಬ ನಾಗಕುಲದ ರಾಜಕುಮಾರಿಯೊಂದಿಗೆ ಎರಡನೇ ಚಂದ್ರಗುಪ್ತನ ಮದುವೆ ಆದ ಬಗ್ಗೆ ಅಲಹಾಬಾದ್ ನಲ್ಲಿರುವ ಕಂಬದಲ್ಲಿ ಬರೆಯಲಾಗಿದೆ. ಇವನ ಬಗ್ಗೆ ಮಥುರಾ ದಲ್ಲಿರುವ ಕಂಬವೊಂದನ್ನು ಕ್ರಿ.ಶ.೩೨೮ ರದ್ದು ಎಂದು ತೀರ್ಮಾನಿಸಲಾಗಿದೆ. ಕುಬೇರನಾಗ ಮತ್ತು ಚಂದ್ರಗುಪ್ತರ ಮಗಳು ಪ್ರಭಾವತಿ ವಾಕಾಟಕದ ಬಲಿಷ್ಠ ರಾಜ ಎರಡನೇ ರುದ್ರಸೇನನನ್ನು ಮದುವೆ ಆದಳು.
ಗುಜರಾತ್ ನಲ್ಲಿನ ರಾಜ ಶಕ-ಕ್ಷತ್ರಪ ವಂಶದ ಮೂರನೇ ರುದ್ರಸೇನ ನನ್ನು ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡದ್ದು ಇವನ ಮಹತ್ವದ ಸಾಧನೆ ಯಾಗಿದೆ. ಅವನ ಅಳಿಯ ಎರಡನೇ ರುದ್ರಸೇನ ಆಕಸ್ಮಿಕವಾಗಿ ಸತ್ತು ಪ್ರಭಾವತಿಗುಪ್ತನು ತನ್ನ ಎರಡು ಮಕ್ಕಳ ಪರವಾಗಿ ರಾಜ್ಯ ಆಳಿದನು. ಈ ಇಪ್ಪತ್ತೆರಡು ವರ್ಷದ ಆಳಿಕೆಯಲ್ಲಿ ವಾಕಾಟಕವು ಬಹುಮಟ್ಟಿಗೆ ಗುಪ್ತ ಸಾಮ್ರಾಜ್ಯದ ಭಾಗವಾಗಿತ್ತು.
ವಾಕಾಟಕದ ಭೌಗೋಳಿಕ ಸ್ಥಾನವನ್ನು ಬಳಸಿಕೊಂಡು ಪಶ್ಚಿಮದ ಕ್ಷತ್ರಪರನ್ನು ಶಾಸ್ವತವಾಗಿ ಸೋಲಿಸಿದನು. ಅನೇಕ ಇತಿಹಾಸಕಾರರು ಈ ಅವಧಿಯನ್ನು ವಾಕಾಟಕ-ಗುಪ್ತ ಯುಗ ಎಂದು ಕರೆಯುತ್ತಾರೆ. ಗಂಗಾ ನದೀಮುಖದಿಂದ ಸಿಂಧೂ ನದೀಮುಖದವರೆಗೆ ಮತ್ತು ಇವತ್ತಿನ ಉತ್ತರ ಪಾಕಿಸ್ತಾನದಿಂದ ನರ್ಮದಾ ನದಿಯವರೆಗಿನ ವಿಶಾಲವಾದ ಭೂಭಾಗವನ್ನು ಚಂದ್ರಗುಪ್ತನು ತನ್ನ ಹಿಡಿತದಲ್ಲಿರಿಸಿಕೊಂಡಿದ್ದನು.
ಪಾಟಲೀಪುತ್ರವು ಅವನ ಸಾಮ್ರಾಜ್ಯದ ರಾಜಧಾನಿಯಾಗಿ ಮುಂದುವರೆಯಿತು. ಉಜ್ಜಯಿನಿ ಎರಡನೇ ರಾಜಧಾನಿಯಂತಿತ್ತು. ಗುಪ್ತ ವಂಶದ ಸುಂದರ ಬಂಗಾರದ ನಾಣ್ಯಗಳ ಬಾಹುಳ್ಯವು ಆ ಯುಗದ ವೈಭವಕ್ಕೆ ಸಾಕ್ಷಿಯಾಗಿದೆ. ಎರಡನೇ ಚಂದ್ರಗುಪ್ತನು ಶಕಪದ್ಧತಿಯಂತೆ ಬೆಳ್ಳಿಯ ನಾಣ್ಯಗಳನ್ನು ಹೊರತರಲು ಆರಂಭಿಸಿ ದನು.
ಫಾಹಿಯಾನ್ ನು ಭಾರತವನ್ನು ಕ್ರಿ.ಶ. ಐದನೇ ಮತ್ತು ಏಳನೇ ಶತಮಾನಗಳ ನಡುವೆ ಜ್ಞಾನವನ್ನರಸಿ ಭಾರತಕ್ಕೆ ಭೇಟಿ ನೀಡಿದ ಮೂವರು ಯಾತ್ರಿಗಳಲ್ಲಿ ಒಬ್ಬನು. ಅವನು ಭಾರತಕ್ಕೆ ಬಂದಾಗ ಎರಡನೇ ಚಂದ್ರಗುಪ್ತನು ಉತ್ತರ ಭಾರತವನ್ನು ಆಳುತ್ತಿದ್ದನು. ಮರಣದಂಡನೆಯ ಶಿಕ್ಷೆ , ಭೂಕಂದಾಯ ಇಲ್ಲದೆ ಇರುವುದರ ಬಗ್ಗೆ ಮತ್ತು ಇನ್ನೂ ಕೆಲ ವಿಷಯಗಳ ಬಗ್ಗೆ ಅವನು ವರದಿ ಮಾಡಿದ್ದಾನೆ. ಬಹುತೇಕ ನಾಗರಿಕರು ಈರುಳ್ಳಿ(ಉಳ್ಳಾಗಡ್ಡಿ), ಬೆಳ್ಳುಳ್ಳಿ , ಮದ್ಯ ಮಾಂಸ ಸೇವಿಸುತ್ತಿರಲಿಲ್ಲ .
ಸಾಂಸ್ಕೃತಿಕವಾಗಿ ಎರಡನೇ ಚಂದ್ರಗುಪ್ತನ ಆಳಿಕೆಯ ಕಾಲವು ಸುವರ್ಣಯುಗವಾಗಿತ್ತು. ಅವನ ಆಸ್ಥಾನದಲ್ಲಿ ನವರತ್ನಗಳು ಎಂದು ಹೆಸರಾದ ಒಂಬತ್ತು ಜನರು ಇದ್ದರು ಎಂದು ಹೇಳಲಾಗಿದೆ. ಅವರಲ್ಲಿ ಕಾಳಿದಾಸನು ಅವರಲ್ಲಿ ಶ್ರೇಷ್ಠನಾದವನು. 'ಅಭಿಜ್ಞಾನ ಶಾಕುಂತಲ' ಸೇರಿದಂತೆ ಅನೇಕ ಅಮರ ಕೃತಿಗಳನ್ನು ಅವನು ರಚಿಸಿ ದ್ದಾನೆ. ಸುಪ್ರಸಿದ್ಧ ಖಗೋಲಶಾಸ್ತ್ರಜ್ಞ ಮತ್ತು ಗಣಿತಜ್ಞನಾದ ವರಾಹಮಿಹಿರನು ನವರತ್ನಗಳಲ್ಲಿ ಇನ್ನೊಬ್ಬನು.
ದೀಪಾವಳಿಯ ಮರುದಿನವಾದ ಪ್ರತಿಪದೆಯ ದಿನ ವಿಕ್ರಮಾದಿತ್ಯನು ಪಟ್ಟಕ್ಕೆ ಏರಿದನು. ಆ ದಿನವನ್ನು ವರ್ಷಪ್ರತಿಪದೆ ಎಂದೂ ಕರೆಯುತ್ತಾರೆ. ವಿಕ್ರಮಶಕೆಯು ಈ ದಿನ ಆರಂಭವಾಯಿತು. ಈ ದಿನವನ್ನು ಹೊಸವರ್ಷದ ಆರಂಭ ಎಂದು ಕೆಲವು ಕಡೆ ಆಚರಿಸುವರು.
ದೆಹಲಿಯ ಕುತುಬ್ ಮಿನಾರ್ ನ ಹತ್ತಿರವೇ ನಾಲ್ಕನೇ ಶತಮಾನದ ಒಂದು ಸ್ತಂಭವಿದೆ. ವಿಷ್ಣು ದೇವರ ಗೌರವಾರ್ಥ ಮತ್ತು ಎರಡನೇ ಚಂದ್ರಗುಪ್ತನ ನೆನಪಿ ನಲ್ಲಿ ಈ ಸ್ತಂಭವನ್ನು ನಿಲ್ಲಿಸಿದುದಾಗಿ ಅದರ ಮೇಲೆ ಬರೆದಿದೆ. ಲೋಹಶಾಸ್ತ್ರದಲ್ಲಿ ಪುರಾತನ ಭಾರತದ ಸಾಧನೆಯನ್ನು ಇದು ಮೆರೆಯಿಸುತ್ತದೆ. ಉಕ್ಕಿನ ಈ ಕಂಭವು ೧೬೦೦ ವರ್ಷಗಳಾದರೂ ತುಕ್ಕು ಹಿಡಿಯದೆ ಹಾಳಾಗದೆ ನಿಂತಿದೆ. ಇದು ಉತ್ತರಭಾರತದಲ್ಲಿ ಹಲವೆಡೆ ಕಾಣಸಿಗುವ ಅಶೋಕಸ್ತಂಭಗಳ ಹಾಗೆ ಇದೆ.
ವಿಕ್ರಮಾದಿತ್ಯ ರಾಜನ ಬಗ್ಗೆ ಅನೇಕ ಕುತೂಹಲಕರ ಕತೆಗಳು ಭಾರತದಲ್ಲಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.