ಎಸ್. ಎಲ್. ಭೈರಪ್ಪನವರ ಕಾದಂಬರಿ From Wikipedia, the free encyclopedia
Quick Facts ಲೇಖಕರು, ದೇಶ ...
ಆವರಣ
ಆವರಣ
ಲೇಖಕರು
ಎಸ್.ಎಲ್. ಭೈರಪ್ಪ
ದೇಶ
ಭಾರತ
ಭಾಷೆ
ಕನ್ನಡ
ಸರಣಿ
"ಇತಿಹಾಸ ಅರಿಯದಿದ್ದಲ್ಲಿ, ಇತಿಹಾಸ ಮರುಕಳಿಸುವುದು"
ವಿಷಯ
-ಎಸ್.ಎಲ್.ಭೈರಪ್ಪ.
ಪ್ರಕಾರ
ಐತಿಹಾಸಿಕ ಕಾಂದಬರಿ
ಪ್ರಕಟವಾದದ್ದು
ಸಾಹಿತ್ಯ ಭಂಡಾರ
ಮಾಧ್ಯಮಪ್ರಕಾರ
ಮುದ್ರಿತ
ಪುಟಗಳು
೨೭೫
ಮುಂಚಿನ
ಮಂದ್ರ
ನಂತರದ
ಕವಲು
Close
ಆವರಣ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ 'ಸಾಹಿತ್ಯ ಭಂಡಾರ' ಈ ಕಾದಂಬರಿಯನ್ನೂ ಹೊರ ತಂದಿದೆ. ಬೆಲೆ ಭಾರತದಲ್ಲಿ ೧೭೫ ರೂಪಾಯಿಗಳು, ಅಮೇರಿಕಾದಲ್ಲಿ ೧೩ ಡಾಲರ್. ಕಾದಂಬರಿಯ ವಸ್ತು ಇತಿಹಾಸ ಮತ್ತು ಇತಿಹಾಸದ ಹೆಸರಿನಲ್ಲಿ ಚಲಾವಣೆಗೆ ಬರುವ ಸುಳ್ಳುಗಳು. ಕನ್ನಡ ಸಾಹಿತ್ಯದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದ ಭೈರಪ್ಪನವರ ಕೃತಿಯಾದ ಆವರಣವು ಬಿಡುಗಡೆಗೆ ಮುನ್ನವೇ ಎಲ್ಲಾ ಮುದ್ರಿತ ಪ್ರತಿಗಳೂ ಮಾರಾಟಾವಾದ ಕೃತಿ. ಹಲವಾರು ಹೆಸರಾಂತ ಲೇಖಕರಿಂದ ಟೀಕೆಗೆ ಒಳಗಾದರೂ ಸಹ ಇತಿಹಾಸದ ಸತ್ಯವನ್ನು ತಿಳಿಸುವ ಉದ್ದೇಶದಿಂದ ಹೊರಬಂದ ಕನ್ನಡದ ಅತ್ತ್ಯುತ್ತಮ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹತ್ತು ಬಾರಿ ಮರುಪ್ರಕಟಿತವಾಗಿ ಭಾರತದ ಸಾಹಿತ್ಯದಲ್ಲಿ ಇತಿಹಾಸ ಸೃಷ್ಟಿಸಿದೆ.
ಕಾದಂಬರಿಯ ಮುಖ್ಯ ಪಾತ್ರಗಳು ರಜಿಯಾ ಉರ್ಫ್ ಲಕ್ಷ್ಮೀ, ಆಕೆಯ ಗಂಡ ಅಮೀರ್ ಮತ್ತು ರಜಿಯಾಳ ಬೀಗರಾದ ಪ್ರೊಫೆಸರ್ ಶಾಸ್ತ್ರೀ.
ಪೂರ್ಣ ಇಸ್ಲಾಮಿ ಚೌಕಟ್ಟಿನಲ್ಲಿ ರಚಿಸಲ್ಪಟ್ಟಿರುವ ಈ ಕೃತಿಯ ಕಥಾನಾಯಕಿ ರಝಿಯಾ ಉರುಫ್ ಲಕ್ಷ್ಮಿ, ಕಥಾನಾಯಕ ಅವಳ ಶೌಹರ್ ಅಮೀರ, ಚಿತ್ರರಂಗದಲ್ಲಿ ಕೆಲಸ ಮಾಡುವ ದಂಪತಿಗಳು. ಮೂಲ ಹಿಂದೂ ಧರ್ಮದವಳಾದ ಲಕ್ಷ್ಮಿ, ಆಮೀರನಿಗಾಗಿ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಧರ್ಮದಲ್ಲಿ, ಅದರ ಆಚರಣೆಗಳಲ್ಲಿ ನಂಬಿಕೆ ಇಲ್ಲವೆಂದು, ಕೇವಲ ತೋರ್ಪಡಿಕೆಗಾಗಿ ಧರ್ಮ ಬದಲಾವಣೆಯೆಂದು ಅಮೀರ ಹೇಳಿದರೂ ಸಹ, ಕಥೆ ಮುಂದುವರೆದಂತೆ, ತಾನು ತನ್ನ ಧರ್ಮದಲ್ಲಿ ತನಗಿರುವ ವಿಶೇಷ ಅಧಿಕಾರಗಳನ್ನು ಚಲಾಯಿಸುವುದನ್ನು ಕಾಣುತ್ತೇವೆ.
ಇತಿಹಾಸದ ಸತ್ಯವನ್ನು ತಿಳಿಯುವ ಹಾಗು ತಿಳಿಸುವ ಕೆಲಸವನ್ನು ಲೇಖಕರು ಕಥಾನಾಯಕಿಯ ಮೂಲಕ ಮಾಡಿಸುತ್ತಾರೆ. ಕಾದಂಬರಿಯೊಳಗೆ ಮತ್ತೊಂದು ಕಥೆಯನ್ನು ಸೃಷ್ಟಿಸಿ, ಅದರ ಮುಖಾಂತರ ಭಾರತದಲ್ಲಿ ಮುಘಲರ ಆಳ್ವಿಕೆಯ ರೀತಿಯನ್ನು ಹೇಳುತ್ತದೆ. ಭೂತಕಾಲದಲ್ಲಿ ನಡೆದಂತೆ ಹೇಳುವ ಬದಲು, ಸೆರೆಸಿಕ್ಕ ಓರ್ವ ರಾಜಪೂತ ಯುವರಾಜ ಕಂಡಂತೆ, ಅನುಭವಿಸಿದಂತೆ, ಆತನ ದೃಷ್ಟಿಯಿಂದ ಹೇಳಲಾಗಿದೆ. ಇದು ಕಥಾನಾಯಕಿಯು ರಚಿಸುವ ಕಾದಂಬರಿಯಾದರೂ, ಇತಿಹಾಸದ ಸತ್ಯದ ಮೇಲೆ ರಚಿಸಿರುವ ಕೃತಿಯಾಗಿದೆ. ಇದಕ್ಕೆ ಪೂರಕವಾಗಿ, ಹಲವಾರು ಉಲ್ಲೇಖನಗಳನ್ನು ಟಿಪ್ಪಣಿ ಮಾಡಲಾಗಿದೆ.
ಇತಿಹಾಸವನ್ನು ತಿಳಿದ, ವಿದ್ಯಾವಂತನಾದ ಅಮೀರನು ತನ್ನ ಧರ್ಮದ ಸರಿ-ತಪ್ಪು ಎಂಬ ವಾದ ಬಂದಾಗ, ತನ್ನ ಧರ್ಮದ ಆಯಕಟ್ಟಿನಲ್ಲೇ ನಿಂತು ಯೋಚಿಸುವ ವಿಪರ್ಯಾಸವನ್ನು ಕಾಣುತ್ತೇವೆ. ಸಮಾಜದಲ್ಲಿ ಸಮಾನತೆಯನ್ನು, ಪರಧರ್ಮ ಸಹಿಷ್ಣುತೆಯನ್ನು ಸೃಷ್ಟಿಸಲು ಕಾರ್ಯ ನಿರ್ವಹಿಸುತ್ತಾ, ಅವರ ಅರಿವಿಲ್ಲದಂತೆ, ಒಂದು ಧರ್ಮವನ್ನು ಮೇಲೆತ್ತುವ ಹುರುಪಿನಲ್ಲಿ, ಮತ್ತೊಂದು ಧರ್ಮದ ಆಚರಣೆಗಳನ್ನು ಖಂಡಿಸುವ ಸಮಾಜದ ಭಾಗವನ್ನು ಲೇಖಕರು ಪ್ರೊಫೆಸರ್ ಶಾಸ್ತ್ರಿಗಳ ರೂಪದಲ್ಲಿ ಚಿತ್ರಿಸಿದ್ದಾರೆ. ಸಮಾನತೆಯನ್ನು ತರಬಯಸುವ ಶಾಸ್ತ್ರಿಗಳೂ ಸಹ ಇತಿಹಾಸದ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಮಾನವ ಸಂಬಂಧಗಳಿಗೆ ಧರ್ಮದ ಚೌಕಟ್ಟಿಲ್ಲವೆಂದು ಬಲ್ಲವರಾಗಿಯೂ, ತನ್ನ ಮಗಳು ಧರ್ಮಾಂತರವಾಗುವ ವಿಚಾರದಲ್ಲಿ ಕ್ಷಣಕಾಲ ತಳಮಳಗೊಳ್ಳುತ್ತಾರೆ.
ಸತ್ಯವನ್ನು ಒಪ್ಪಲು ನಿರಾಕರಿಸುವ ಸಮಾಜವು, ಸರ್ಕಾರವು, ರಝಿಯಾಳ ಕಾದಂಬರಿಯನ್ನು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಲೇಖನಗಳೆಂದು ನಿರ್ಧರಿಸಿ, ಆಕೆಯನ್ನು ಬಂಧಿಸಲು ಆದೇಶಿಸುತ್ತಾರೆ. ಇದರ ಮುಖಾಂತರ ಲೇಖಕರು ಸಮಾಜದಲ್ಲಿ ಸತ್ಯವನ್ನು ಹೊರತರುವಲ್ಲಿ ಇರುವ ತೊಡಕುಗಳನ್ನು ಬಿಚ್ಚಿಡುತ್ತಾರೆ.
ಇತಿಹಾಸಕ್ಕೆ ಯಾವ ಧ್ಯೇಯವಿಲ್ಲ, ಇರಕೂಡದು ಅದು ಕೇವಲ ಸತ್ಯಾನ್ವೇಷಣೆಯ ಹಾದಿಯಾಗಿರಬೇಕು. ಒಂದು ಧರ್ಮದ ಇತಿಹಾಸದಿಂದ ಆ ಧರ್ಮದ ಪ್ರಸ್ತುತ ಸ್ಥಾನಮಾನ ನಿರ್ಧಾರವಾಗುವುದಿಲ್ಲ. ಇತಿಹಾಸದ ಸತ್ಯವನ್ನು ತಿಳಿದು, ತಪ್ಪುಗಳನ್ನು ಅರಿತು, ತಿದ್ದಿ, ಮರುಕಳಿಸದಂತೆ ಸಾಗಬೇಕು ಎಂದು ರಝಿಯಾ ಪಾತ್ರದ ಮೂಲಕ ಲೇಖಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಭೈರಪ್ಪನವರ ಹಲವು ಕೃತಿಗಳಂತೆ 'ಆವರಣ' ಬಹಳಷ್ಟು ಚರ್ಚೆಗೊಳಗಾದ ಕೃತಿ. ಬಿಡುಗಡೆಯ ನಂತರ ಹೆಸರಾಂತ ವ್ಯಕ್ತಿಗಳು ಈ ಕೃತಿಯು ಸಮಾಜಕ್ಕೆ 'ಅಪಾಯಕಾರಿ' ಎಂದು ಟೀಕಿಸಿದ್ದಾರೆ. ಇತಿಹಾಸದ ನಂಬಿಕೆಗಳ ತಿರುಳನ್ನು ತಿರುಚಿ, ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆಗೊಳಿಸುವುದಕ್ಕೆ ಪೂರಕವಗುವಂತಹ ಸಂಗತಿಗಳನ್ನು ಒಳಗೊಂಡಿದೆ ಎಂಬುದು ಇನ್ನಷ್ಟು ಜನರ ದೂರು. ಲೇಖಕರು ಸಮಾಜವನ್ನು ಇತಿಹಾಸದ ಆಧಾರದ ಮೇಲೆ ಒಡೆಯುವ ಹಿಂದೂಸಮಾಜವಾದಿ ಎಂಬ ವಾದಗಳು ಕೇಳಿಬಂದಿವೆ. ಕಾದಂಬರಿಯಲ್ಲಿ ಲೇಖಕರು ಹೇಳಬಯಸುವ ಮೂಲ ವಿಷಯವು ಇದೇ ಸಂಗತಿಯನ್ನು ಖಂಡಿಸುವಂತದ್ದಾಗಿದೆ.
ಬಹಳ ಚರ್ಚೆಗೊಳಗಾದ ಹೇಳಿಕೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಯವರದು -"ಭೈರಪ್ಪನವರಿಗೆ ಹಿಂದೂ ಧರ್ಮವೇನೆಂದು ಅರಿಯದು ಮತ್ತು ಕಾದಂಬರಿಯನ್ನು ರಚಿಸುವ ಕಲೆಯೂ ಇವರಿಗಿಲ್ಲ. ಕಥೆಗಿಂತ ಹೆಚ್ಚಾಗಿ 'ಆವರಣ'ವನ್ನು ಚರ್ಚೆಯಾಗಿ ಪ್ರದರ್ಶಿಸಲಾಗಿದೆ."ಎಂದಿದ್ದಾರೆ.[1] ಹಾಗೆ ಹೇಳಿದ್ದರಷ್ಟೇ ಅಲ್ಲದೆ ತನ್ನೊಬ್ಬ ಶಿಷ್ಯನಿಂದ 'ಆವರಣದ ಅನಾವರಣ' ಎಂಬ ಕೃತಿಯನ್ನು ರಚಿಸಿ ಪ್ರಕಟಿಸಿದ್ದಾರೆ.
ಅರವಿಂದ ಅಡಿಗನವರು ಕೂಡ ಭೈರಪ್ಪನವರು ಇತಿಹಾಸವನ್ನು ತಿರುಚಿದ್ದಾರೆಂಬ ಆರೋಪ ಹೊರಿಸಿದ್ದಾರೆ.[2]ಕಾದಂಬರಿಯ ಮೊದಲ ಪ್ರತಿಯು ಹೊರಬರುವ ಮೊದಲೇ ಇದರ ಪರಿಣಾಮಗಳೇನಾಗಬಹುದೆಂಬ ಅಂದಾಜಿದ್ದ ಲೇಖಕರು, ಕಾದಂಬರಿಯಲ್ಲಿ ಈ ವಿಚಾರವು ಎದ್ದು ತೋರುವಂತೆ ಪ್ರದರ್ಶಿಸಿದ್ದಾರೆ. ಭೈರಪ್ಪ ತನ್ನ ಕಾದಂಬರಿಯನ್ನ ಸಿನೆಮಾದಂತೆ ಪ್ರಮೋಷನ್ ಮಾಡಿದ್ದರು. 'ಇದಕ್ಕೆ ಆರ್ ಎಸ್ ಎಸ್ ಮತ್ತು ಸಂಘಪರಿವಾರದ ಪತ್ರಕರ್ತರಾದ ವಿಶ್ವೇಶ್ವರ ಭಟ್ ಹಾಗೂ ಪ್ರತಾಪ್ ಸಿಂಹನಂತವರಿಂದ, ವಿಜಯ ಸಂಕೇಶ್ವರನ ವಿಜಯ ಕರ್ನಾಟಕ ಪತ್ರಿಕೆ ಮೂಲಕ ಹೊಗಳಿಸಿಕೊಂಡಿದ್ದರು. ಇಂತಹ ಕುತಂತ್ರಗಳ ಮೂಲಕ ಅರೆಬೆಂದ ಮನಸ್ಥಿತಿಯ ಯುವಕರನ್ನ, ಬ್ರಾಹ್ಮಣ ಓದುಗ ವರ್ಗ ಸೃಷ್ಟಿಸಿಕೊಂಡರು. ಅಲ್ಲದೇ ಅವರಿಂದ ಬೈರಪ್ಪ ದೊಡ್ಡ ಮೇಧಾವಿ ಎಂಬ ಜನಾಭಿಪ್ರಾಯ ಮೂಡಿಸಿದರು,' ಎಂದು ದೂರಿದ್ದಾರೆ.
ಭೈರಪ್ಪನವರು ಇವುಗಳಿಗೆ ಪ್ರತಿಯಾಗಿ "ನಾನು ನೂರಾರು ಪುಸ್ತಕಗಳನ್ನು ಓದಿ, ಕಾದಂಬರಿಯಲ್ಲಿರುವ ವಿವಾದಾತ್ಮಕ ವಿಷಯಗಳ ಮೇಲೆ ಬಹಳಷ್ಟು ಸಂಶೋಧನೆ ಮಾಡಿದ ಬಳಿಕವೆ ಬರೆದಿರುವ ಕೃತಿ ಆವರಣ, ಯಾರೊಬ್ಬರಿಗಾದರೂ ಇದರಲ್ಲಿ ಅನುಮಾನವಿದ್ದಲ್ಲಿ ಕಾದಂಬರಿಯ ಹಿಂಬದಿಯಲ್ಲಿ ಪತ್ತಿಮಾಡಿರುವ ಪುಸ್ತಕಗಳನ್ನು ಓದಿ ಪರಿಶೀಲಿಸಿಕೊಳ್ಳಬಹುದು. ನನ್ನಿಚ್ಛಾನುಸಾರವಗಿ ಇತಿಹಾಸವನ್ನು ಓದಿದ್ದೇನೆ, ನಾನರಿತ ವಿಷಯಗಳನ್ನು ಕಲಾತ್ಮಕವಾಗಿ ವ್ಯಕ್ತಪಡಿಸಲು ಬಯಸಿ, ಅದರ ಫಲವಾಗಿ ಹೊರಬಂದ ಕೃತಿಯೇ 'ಆವರಣ'. ಕಾದಂಬರಿ ಬಿಡುಗಡೆಯಾದ ದಿನದಿಂದಲೂ ನಡೆಯುತ್ತಿರುವ ಸಾವಿರಾರು ವಿವಾದ, ಚರ್ಚೆಗಳಿಂದ ಬೇಸತ್ತಿದ್ದೇನೆ, ಈಗಲಾದರು ಬೇರೊಂದು ವಿಷಯದ ಕುರಿತು ಆಲೋಚಿಸಲು ಅವಕಾಶ ಮಾಡಿಕೊಡಿ." ಎಂದು ಕೋರಿದರು.[3]
ಪ್ರಕಟಗೊಳ್ಳುತ್ತಲೇ ಬಹಳ ಜನರ ಗಮನವನ್ನು ಸೆಳೆದ ಕಾದಂಬರಿ 'ಆವರಣ'. ಭೈರಪ್ಪನವರ ಜನಪ್ರಿಯತೆ ಇನ್ನೂ ಜೀವಂತ ಎನ್ನುವುದಕ್ಕೆ ಸಾಕ್ಷಿ ಈ ಕಾದಂಬರಿಯ ಪ್ರತಿಗಳ ಮಾರಾಟ ಮತ್ತು ಪತ್ರಿಕೆಗಳಲ್ಲಿ ಅದಕ್ಕೆ ಸಿಕ್ಕ ಪ್ರಾಮುಖ್ಯತೆ. ಕಾದಂಬರಿಯ ವಸ್ತು ಮತ್ತು ವಸ್ತು ನಿರ್ವಹಣೆ ಎರಡೂ ಅಸಾಮಾನ್ಯವಾದುದರಿಂದ ಸಹಜವಾಗಿಯೇ ಕಾದಂಬರಿಯ ಸುತ್ತ ವಿವಾದದ ಕೋಟೆ ನಿರ್ಮಿತವಾಗಿದೆ. 'ಆವರಣ'ದ ಬಗ್ಗೆ ಖ್ಯಾತ ಸಾಹಿತಿ ಅನಂತಮೂರ್ತಿಯವರು ಮಾಡಿದ ಭಾಷಣದ ಸಂಗ್ರಹಿತ ರೂಪವನ್ನು ಸಂಪದ ಬ್ಲಾಗ್ನಲ್ಲಿ ಕಾಣಬಹುದು [4]
'ಆವರಣ'ದ ಮೂಲ ತಕರಾರು ಇತಿಹಾಸಕ್ಕೆ ಸಂಬಂಧಪಟ್ಟಿದ್ದು. ಭಾರತದ ಇತಿಹಾಸವನ್ನು ನಿರ್ಮಿಸಿರುವ ಪರಿಕಲ್ಪನೆಗಳನ್ನು ನಮ್ಮ ವಸಾಹಾತು ಅನುಭವದ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಅಂತಹ ಒಂದು ವಿಶ್ಲೇಷಣೆಯನ್ನು ಎಸ್. ಎನ್. ಬಾಲಗಂಗಾಧರ ಲೇಖನದಲ್ಲಿ ಓದಬಹುದು.[5]. ಆವರಣದ ಪರ ವಿರೋಧವಾಗಿ ಗಟ್ಟಿ ಧ್ವನಿಯಲ್ಲಿ ಚರ್ಚೆಯಾಗುತ್ತಿದ್ದಾಗ ತಣ್ಣನೆಯ ಧ್ವನಿಯಲ್ಲಿ ಬಂದ ಒಂದು ಅನನ್ಯ ವಿಡಂಬನಾತ್ಮಕ ವಿಮರ್ಶೆ. 'ಆಭರಣ' ಎಂದು ಅಚ್ಚಾಗಬೇಕಿದ್ದ ಕಾದಂಬರಿಯ ಹೆಸರು ಕಣ್ಣುತಪ್ಪಿನಿಂದ ಆವರಣವಾಗಿದೆ- ಕಥೆ ಆಭರಣದ ಬೆನ್ನು ಹತ್ತಿದ ಲಕ್ಷ್ಮಿಯ ಕಥೆ ಎಂಬುದು ಒಬ್ಬ ವಿಮರ್ಶಕರ ವಾದ. ಅವರು "ಆಭರಣ"ವನ್ನು: ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ'ಎಂದು ತೀರ್ಮಾನ ಕೊಟ್ಟಿದ್ದಾರೆ. [6]. ಗ್ರಂಥದ ಜನಪ್ರಿಯತೆಯ ಸಾಗರದಲ್ಲಿ ವಿವಾದ ಮುಳುಗಿಹೋಗಿದೆ.