ಅಲಾವುದ್ದೀನ್ ಖಿಲ್ಜಿ
From Wikipedia, the free encyclopedia
ಅಲಾವುದ್ದೀನ್ ಖಿಲ್ಜಿ (1296-1316). ಜಲಾಲುದ್ದೀನ್ ಖಿಲ್ಜಿಯ ಅಳಿಯ, ಮತ್ತು ಆತನ ಉತ್ತರಾಧಿಕಾರಿ. ಈತ ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಬಲಿಷ್ಠ. ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ. ದಕ್ಷಿಣದ ಹಿಂದು ರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದ. ಜಲಾಲುದ್ದೀನನ ಆಳ್ವಿಕೆಯ ಕೊನೆಗಾಲದಲ್ಲಿ ಖಾರ ಮತ್ತು ಮಾಳವ ರಾಜ್ಯಗಳ ಪ್ರಾಂತ್ಯಾಧಿಕಾರಿಯಾಗಿದ್ದ, ಸುಖವಿಹೀನ ಗೃಹಜೀವನದಿಂದುದ್ದೀಪಿತನಾದ ಅಲಾವುದ್ದೀನ್ 1294 ರಲ್ಲಿ 8000 ಅಶ್ವಬಲ ಸಮೇತನಾಗಿ ವಿಂಧ್ಯಪರ್ವತವನ್ನು ದಾಟಿ, ದೇವಗಿರಿಯನ್ನು ಮುತ್ತಿ ಅಲ್ಲಿನ ರಾಜನಾದ ಯಾದವ ರಾಮಚಂದ್ರನನ್ನೂ ಆತನ ಮಗ ಶಂಕರದೇವನನ್ನೂ ಸೋಲಿಸಿ ಚಿನ್ನ, ಬೆಳ್ಳಿ, ರತ್ನ ಮೊದಲಾದ ಅಪಾರ ಸಂಪತ್ತಿನ ಕೊಳ್ಳೆಯೊಡನೆ ಹಿಂದಿರುಗಿದ. ವಿಜಯಿ ಅಲಾವುದ್ದೀನನನ್ನು ಸುಲ್ತಾನ್ ಜಲಾಲುದ್ದೀನನು ಗಂಗಾತೀರದಲ್ಲಿ ಸ್ವಾಗತಿಸುವಂತೆ ನಿಷ್ಕರ್ಷೆಯಾಯಿತು. ಗುಪ್ತವಾಗಿ ಮೊದಲೇ ನಿರ್ಧರಿಸಿದ್ದಂತೆ ಸಂದರ್ಶನದ ವೇಳೆಯಲ್ಲಿ ಅಲಾವುದ್ದೀನ್ ಕುತಂತ್ರದಿಂದ ಮಾವನನ್ನು ಕೊಲೆಮಾಡಿಸಿ ದಕ್ಷಿಣದಿಂದ ದೋಚಿ ತಂದಿದ್ದ ಐಶ್ವರ್ಯವನ್ನು ತನಗೆ ಬೇಕಾದವರಿಗೆ ಹಂಚಿ, 1296ರಲ್ಲಿ ದೆಹಲಿ ಸಿಂಹಾಸನವನ್ನಾಕ್ರಮಿಸಿ, ತನ್ನ ವಿರೋಧಿಗಳನ್ನು ಕ್ರೌರ್ಯದಿಂದ ನಿರ್ನಾಮ ಮಾಡಿದ. ಇವನ 20 ವರ್ಷಗಳ ಆಳ್ವಿಕೆ ಭಯೋತ್ಪಾದನೆಯ ರಕ್ತಪಾತದ ಕಾಲವಾಗಿತ್ತು.
ಸುಲ್ತಾನ್ ಅಲಾವುದ್ದೀನ್ ಖಿಲ್ಜಿ | |
---|---|
Sultan of India | |
![]() ಸುಲ್ತಾನ್ ಅಲಾವುದ್ದೀನ್ ಖಿಲ್ಜಿ | |
ರಾಜ್ಯಭಾರ | 1290–1316 |
ಪಟ್ಟಾಭಿಷೇಕ | 1296, ದೆಹಲಿ |
ಜನ್ಮ ಸ್ಥಳ | Qalat, Zabul Province, present day Afghanistan |
ಮರಣ ಸ್ಥಳ | ದೆಹಲಿ,ಭಾರತ |
ಸಮಾಧಿ ಸ್ಥಳ | Delhi, India |
ಪೂರ್ವಾಧಿಕಾರಿ | ಜಲಾಲುದ್ದೀನ್ ಫಿರೋಜ್ ಖಿಲ್ಜಿ |
ಉತ್ತರಾಧಿಕಾರಿ | ಕುತ್ಬುದ್ದೀನ್ ಮುಬಾರಕ್ ಷಾ |
ಅರಮನೆ | ಖಿಲ್ಜಿ ವಂಶ |